Advertisement

ತೆಲಂಗಾಣದಲ್ಲಿ ಹಿಂದೂ ಮತಗಳ ಕ್ರೋಡೀಕರಣ

08:34 PM May 24, 2019 | Lakshmi GovindaRaj |

ಬಿಜೆಪಿಯನ್ನು ತೆಲಂಗಾಣದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಈವರೆಗೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೇ ಬಿಜೆಪಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನು ಗೆದ್ದಿರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಯ ಪಾತ್ರ ನಗಣ್ಯವಾಗಿತ್ತು. ಪ್ರತಿ ಬಾರಿಯೂ ಇಲ್ಲಿ ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನಡುವೆ ನೇರ ಜಿದ್ದಾಜಿದ್ದಿ ಏರ್ಪಡುತ್ತಿತ್ತು.

Advertisement

ಆದರೆ, ಈ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿಯ ಸಾಧನೆ ಕೇವಲ ಟಿಆರ್‌ಎಸ್‌-ಕಾಂಗ್ರೆಸ್‌ ಅನ್ನು ಮಾತ್ರವಲ್ಲ, ರಾಜಕೀಯ ವಿಶ್ಲೇಷಕರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತು. 17 ಲೋಕಸಭಾ ಸೀಟುಗಳ ಪೈಕಿ ಕೇವಲ 9ರಲ್ಲಷ್ಟೇ ಜಯ ಗಳಿಸುವಲ್ಲಿ ಸಿಎಂ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಟಿಆರ್‌ಎಸ್‌ ಯಶಸ್ವಿಯಾಯಿತು.

ಅಚ್ಚರಿಯ ರೀತಿಯಲ್ಲಿ ಬಿಜೆಪಿ ಈ ರಾಜ್ಯದಲ್ಲಿ ನಾಲ್ಕು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಕಾಂಗ್ರೆಸ್‌ 3 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಳೆದ ಡಿಸೆಂಬರ್‌ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದು ಸರ್ಕಾರ ರಚಿಸಿದ್ದ ಕೆಸಿಆರ್‌, ಲೋಕಸಭೆ ಚುನಾವಣೆಯಲ್ಲಿ ಇಷ್ಟೊಂದು ಹಿನ್ನಡೆಯಾಗುತ್ತದೆ ಎಂದು ಊಹಿಸಿಯೇ ಇರಲಿಲ್ಲ.

ಅವರ ಪುತ್ರಿ ಕವಿತಾ ಕವಲಕುಂಟ್ಲ ಅವರೇ ನಿಜಾಮಾಬಾದ್‌ ಕ್ಷೇತ್ರದಲ್ಲಿ ಸೋಲಿನ ರುಚಿ ಉಣಬೇಕಾಯಿತು. ವಿಶೇಷವೆಂದರೆ, ಕವಿತಾರನ್ನು ಸೋಲಿಸಿದ್ದು ಕಾಂಗ್ರೆಸ್‌ನ ಮಾಜಿ ಸಂಸದ ಮಧು ಯಷ್ಕಿ ಗೌಡ್‌ ಅವರಲ್ಲ. ಬದಲಿಗೆ ಬಿಜೆಪಿ ಅಭ್ಯರ್ಥಿ ಅರವಿಂದ ಧರ್ಮಪುರಿ.

ಹಾಗಿದ್ದರೆ ಬಿಜೆಪಿಯ ದಿಢೀರ್‌ ಬೆಳವಣಿಗೆಗೆ ಕಾರಣವೇನು?: ಜಾತ್ಯತೀತ ಮತಗಳು ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಮಧ್ಯೆ ವಿಭಜನೆಗೊಂಡ ಕಾರಣ, ಹಿಂದೂ ಮತಗಳತ್ತ ಬಿಜೆಪಿ ಗಮನ ಹರಿಸಿತು. ಹಿಂದೂ ಮತಗಳನ್ನು ಕ್ರೋಡೀಕರಿಸುವ ಕೆಲಸಕ್ಕೆ ಕೇಸರಿ ಪಕ್ಷ ಕೈಹಾಕಿತು. ಜತೆಗೆ, ಜನತೆಗೆ ರಾಜ್ಯದಲ್ಲಿ ಟಿಆರ್‌ಎಸ್‌ ಅಗತ್ಯವಿದ್ದರೂ, ಕೇಂದ್ರದಲ್ಲಿ ಸ್ಥಿರ ಸರ್ಕಾರ ಬೇಕೆಂಬ ಹಂಬಲ ಇದ್ದ ಕಾರಣ, ಅದನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಂಡಿತು.

Advertisement

ಹಿಂದೂ ಮತಗಳ ಕ್ರೋಡೀಕರಣವು ಬಿಜೆಪಿ ಪಾಲಿಗೆ ಬಲಿಷ್ಠ ಅಡಿಪಾಯವನ್ನು ಹಾಕಿಕೊಟ್ಟಿತು. ಕಾಂಗ್ರೆಸ್‌ನ ಮತಗಳು ಹಾಗೂ ಟಿಆರ್‌ಎಸ್‌ ವಿರೋಧಿ ಮತಗಳು ಬಿಜೆಪಿಯತ್ತ ವಾಲಿದವು. ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವಂಥ ಕರೀಂನಗರ, ನಿಜಾಮಾಬಾದ್‌, ಸಿಕಂದರಾಬಾದ್‌ ಮತ್ತು ಅದಿಲಾಬಾದ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇಲ್ಲಿ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌-ಟಿಆರ್‌ಎಸ್‌ಗೆ ಹಂಚಿಕೆಯಾಗಿದ್ದರೆ, ಹಿಂದೂಗಳ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಸಫ‌ಲವಾಗಿದೆ.

ಗಮನಾರ್ಹ ಸಂಗತಿಯೆಂದರೆ, ಮುಸ್ಲಿಂ ಬಾಹುಳ್ಯದ ಹೈದರಾಬಾದ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ಅಸಾದುದ್ದೀನ್‌ ಒವೈಸಿ ಅವರೂ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಎಣಿಕೆಯ ವೇಳೆ ಒಂದು ಹಂತದಲ್ಲಿ ಒವೈಸಿ ಹಿನ್ನಡೆಯನ್ನೂ ಅನುಭವಿಸಿದ್ದರು. ಇಲ್ಲೂ ಒವೈಸಿಗೆ ಪ್ರಬಲ ಪೈಪೋಟಿ ನೀಡಿದ್ದು ಬಿಜೆಪಿಯೇ ವಿನಾ ಕಾಂಗ್ರೆಸ್‌ ಅಲ್ಲ.

ಬಿಜೆಪಿಯ ಈ ಸಾಧನೆಯು ಕಾಂಗ್ರೆಸ್‌ಗೂ ಅತಿದೊಡ್ಡ ಆಘಾತ ನೀಡಿದೆ. ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಗಮನಿಸಿದರೆ, ಮುಂದಿನ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪ್ರತಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ಮೂಡಿದೆ. ತಾವೇ ರಚಿಸಿರುವಂಥ ರಾಜ್ಯದಲ್ಲಿ ತಳವೂರಲು ಕಾಂಗ್ರೆಸ್‌ ಹರಸಾಹರ ಪಡಬೇಕಾಗಿರುವುದು ವಿಪರ್ಯಾಸ.

ಅಲ್ಲದೆ, ಇಲ್ಲಿ ಕಾಂಗ್ರೆಸ್‌ಗೆ ಪ್ರಬಲ ನಾಯಕತ್ವದ ಕೊರತೆಯೂ ಇದೆ. ಇದಕ್ಕಿಂತ ಹೆಚ್ಚಾಗಿ ಟಿಡಿಪಿ ಜತೆಗೆ ಮಾಡಿಕೊಂಡ ಮೈತ್ರಿಯೂ ಕಾಂಗ್ರೆಸ್‌ಗೆ ಮುಳುವಾಗಿದ್ದು ಸುಳ್ಳಲ್ಲ. ಆಂಧ್ರಪ್ರದೇಶದ ವಿಭಜನೆಗೆ ಪ್ರಬಲವಾಗಿ ವಿರೋಧಿಸಿದ್ದ ಟಿಡಿಪಿಯನ್ನು ತೆಲಂಗಾಣದ ಜನತೆ ಒಪ್ಪಲು ಸಾಧ್ಯವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next