Advertisement

ಭದ್ರತೆಯೊಂದಿಗೆ ಇಂದು ಶಾಲೆ ಆರಂಭ; ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ

12:25 AM Feb 14, 2022 | Team Udayavani |

ಬೆಂಗಳೂರು: ಹಿಜಾಬ್‌-ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಫೆ.9ರಿಂದ ಮುಚ್ಚಿದ್ದ 9 ಮತ್ತು 10ನೇ ತರಗತಿಗಳು ಸೋಮವಾರದಿಂದ ರಾಜ್ಯಾದ್ಯಂತ ಪುನರಾರಂಭವಾಗಲಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರಕಾರ ಮುಂಜಾಗ್ರತ ಕ್ರಮ ಕೈಗೊಂಡಿದೆ. ದ.ಕ., ಉಡುಪಿ, ದಾವಣಗೆರೆ, ಶಿವಮೊಗ್ಗ ಮಂಡ್ಯ ಸಹಿತ  ಹಲವು ಜಿಲ್ಲೆಗಳಲ್ಲಿ ಶಾಲೆಗಳ ಸುತ್ತಮುತ್ತ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಯಾಗಿದೆ. ಸೂಕ್ಷ್ಮ ಪ್ರದೇಶದಲ್ಲಿರುವ ಶಾಲೆಗಳು ಪೊಲೀಸ್‌ ಭದ್ರತೆಯೊಂದಿಗೆ ಆರಂಭವಾಗಲಿವೆ.

Advertisement

ಪ್ರೌಢಶಾಲೆಗಳಿಗೆ ಭದ್ರತೆ ಕಲ್ಪಿಸುವಂತೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವಸ್ತುಸ್ಥಿತಿ ತಿಳಿದುಕೊಳ್ಳುವಂತೆ  ಡಿ.ಸಿ.ಗಳು ಹಾಗೂ ಎಸ್‌ಪಿ ಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಶಾಂತಿ ಸಭೆ ನಡೆಸುವಂತೆಯೂ ನಿರ್ದೇಶನ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರವಿವಾರ ಮಾತನಾಡಿದ ಸಿಎಂ, ಸೌಹಾರ್ದಯುತವಾಗಿ ಶಾಲೆ-ಕಾಲೇಜುಗಳನ್ನು ಆರಂಭಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ. ಶಾಲೆಗಳು ಆರಂಭವಾದ ಬಳಿಕದ ಪರಿಸ್ಥಿತಿ ನೋಡಿಕೊಂಡು ಕಾಲೇಜುಗಳನ್ನು ಆರಂಭಿಸಲಾಗುತ್ತದೆ ಎಂದರು.

ಶಾಂತಿ ಕದಡುವವರ ಮೇಲೆ ನಿಗಾ
ಹಿಜಾಬ್‌ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸಿದವರ ಬಗ್ಗೆ ನಿಗಾ ವಹಿಸಲಾಗುತ್ತದೆ. ಸಾಮಾಜಿಕ ತಾಣಗಳಲ್ಲಿ ಪ್ರಚೋದನೆ ನೀಡುವವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅಂಥವರ ವಿರುದ್ಧ  ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಶಾಲೆಗಳಿಗೆ ಹಿಜಾಬ್‌, ಕೇಸರಿ ಶಾಲು ಹಾಕಿಕೊಂಡು ಬರಬಾರದು ಎಂದು ಹೈಕೋರ್ಟ್‌  ಸ್ಪಷ್ಟವಾಗಿ ತಿಳಿಸಿದೆ. ಅದಕ್ಕೆ ಸರಕಾರವೂ ಬದ್ಧವಾಗಿದೆ. ಹೈಕೋರ್ಟ್‌ ಆದೇಶದಂತೆ ಫೆ. 14ರಂದು 9-10ನೇ ತರಗತಿ ಆರಂಭವಾಗುತ್ತವೆ ಎಂದರು. ಗಲಾಟೆ ಆಗದಂತೆ  ಪೊಲೀಸ್‌ ಇಲಾಖೆ ನಿಗಾ ವಹಿಸಿದೆ. ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಪಥಸಂಚನ ನಡೆಸಿದ್ದಾರೆ.

Advertisement

ಇಂದು ವಿಚಾರಣೆ
ಹಿಜಾಬ್‌ ವಿವಾದ ಕುರಿತು ಹೈಕೋರ್ಟ್‌ನ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ  ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಸೋಮವಾರ  ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ.

ಪಿಯು, ಪದವಿ ಆರಂಭ ಕುರಿತು ಇಂದು ಸಭೆ
ಪ್ರೌಢಶಾಲೆ ಆರಂಭವಾದ ಬಳಿಕದ  ಪರಿಸ್ಥಿತಿ ಬಗ್ಗೆ ಸೋಮವಾರ ಸಂಜೆ  ಮುಖ್ಯಮಂತ್ರಿಗಳು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ  ಸಭೆ ನಡೆಸಲಿದ್ದಾರೆ. ಇದರಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜುಗಳನ್ನು ತೆರೆಯುವ ಮನಃಸ್ಥಿತಿ ಸರಕಾರದ್ದಾಗಿದೆ ಎಂದು ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ದ.ಕ., ಉಡುಪಿಯಲ್ಲೂ ನಿಷೇಧಾಜ್ಞೆ
ಮಂಗಳೂರು/ ಉಡುಪಿ:  ರಾಜ್ಯ ಸರಕಾರದ ಸೂಚನೆಯಂತೆ  ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲೂ ಸೋಮವಾರ 9 ಮತ್ತು 10ನೇ ತರಗತಿಗಳು ಆರಂಭವಾಗಲಿದ್ದು, ಗರಿಷ್ಠ ಬಂದೋಬಸ್ತ್ ಮಾಡಲಾಗಿದೆ.   ದಕ್ಷಿಣ ಕನ್ನಡ ಜಿಲ್ಲಾದ್ಯಂತ ಫೆ. 14ರ ಬೆಳಗ್ಗಿನ 6ರಿಂದ ಫೆ. 19ರ ಸಂಜೆ 6ರ ತನಕ ಎಲ್ಲ ಶಾಲಾ ಕಾಲೇಜುಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆ. 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಫೆ. 14ರಿಂದ 19ರ ವರೆಗೆ  ಎಲ್ಲ ಪ್ರೌಢಶಾಲೆಗಳ 200 ಮೀ. ಸುತ್ತಮುತ್ತ 144 ಸೆಕ್ಷನ್‌ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ತಿಳಿಸಿದ್ದಾರೆ.

ಶಾಲೆಗಳು ಸೋಮವಾರ ಪುನಃ ಆರಂಭವಾಗಲಿವೆ. ಜಿಲ್ಲಾಧಿಕಾರಿಗಳು, ಡಿಡಿಪಿಐ ಹಾಗೂ ಶಾಲಾ ಆಡಳಿತ ಮಂಡಳಿ ಗಳು ಶಾಂತಿ ಸಭೆ ನಡೆಸುವಂತೆ ಈಗಾಗಲೇ ಸೂಚಿಸಿದ್ದೇನೆ. ಶಾಲೆಗಳು ಆರಂಭವಾದ ಬಳಿಕದ ಪರಿಸ್ಥಿತಿ ಯನ್ನು ಗಮನಿಸಿ ಕಾಲೇಜುಗಳನ್ನು ಆರಂಭಿಸಲಾಗುವುದು.
– ಬಸವರಾಜ ಬೊಮ್ಮಾಯಿ,
ಮುಖ್ಯಮಂತ್ರಿ

ಹಿಜಾಬ್‌ ವಿವಾದದಲ್ಲಿ ಮುಚ್ಚಿರುವ ಶಾಲೆ ಕಾಲೇಜುಗಳನ್ನು ತೆರೆಯುವ ಮುನ್ನ ಮಕ್ಕಳ ಹಿತೃಷ್ಟಿಯಿಂದ ಸರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಹಿತಕರ ಘಟನೆ ಗಳಿಗೆ ಅವಕಾಶ ನೀಡಬಾರದು. ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿ ಸರಕಾರ ಸೂಕ್ತ ಹಾಗೂ ಬಿಗಿಕ್ರಮ ಕೈಗೊಳ್ಳಲಿ.
-ಎಚ್‌.ಡಿ. ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next