Advertisement

ಮಕ್ಕಳಿಗೂ ಹೆತ್ತವರಿಗೂ ವರದಾನವಾಗಿರುವ ಉನ್ನತ ಶಿಕ್ಷಣ ಸಾಲ

10:30 AM Dec 03, 2018 | Team Udayavani |

ಮಕ್ಕಳ ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಕೂಡ ಸಾಲದು ಎನ್ನುವ ಸನ್ನಿವೇಶದಲ್ಲಿ ನಾವಿದ್ದೇವೆ. ಶಿಕ್ಷಣ ರಂಗದ ವ್ಯಾಪಾರೀಕರಣವಾಗಿರುವುದೇ ಇದಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. 

Advertisement

ಉನ್ನತ ಶಿಕ್ಷಣ, ವಿದೇಶ ಶಿಕ್ಷಣದ ಮಾತು ಹಾಗಿರಲಿ; ಮಕ್ಕಳನ್ನು ಇಂದು ಎಲ್‌ಕೆಜಿ , ಯುಕೆಜಿ ಗೆ ಸೇರಿಸುವುದಕ್ಕೇ ಲಕ್ಷ ರೂಪಾಯಿ ಬೇಕಿರುವುದು ಸುಳ್ಳಲ್ಲ. ತಮ್ಮ  ಮಗು ಎಲ್‌ಕೆಜಿ ಯಿಂದ ಹಿಡಿದು ಹನ್ನೆರಡನೇ ತರಗತಿಯ ವರೆಗೆ ಉತ್ತಮ ಗುಣಮಟ್ಟದ ಶಾಲೆಯಲ್ಲಿ ಕಲಿಯ ಬೇಕೆಂದು ಹೆತ್ತವರು ಬಯಸುವುದು  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಸರಿಯೇ ಆಗಿದೆ. 

ಆದರೆ ಅದಕ್ಕೆ ಎಲ್‌ಕೆಜಿ ಯಿಂದಲೇ ಸುರಿಯಬೇಕಾಗಿರುವ ಲಕ್ಷ ಲಕ್ಷ ಹಣವನ್ನು ಅವರು ಎಲ್ಲಿಂದ ತರಬೇಕು ? ಎಲ್‌ಕೆಜಿ ಯಿಂದ 12ನೇ ತರಗತಿ ವರೆಗಿನ ಶಿಕ್ಷಣವೇ ಇಂದು ಮಕ್ಕಳ ಭವಿಷ್ಯಕ್ಕೆ  ಅತ್ಯಂತ ನಿರ್ಣಾಯಕವಾಗುತ್ತದೆ. ಅನಂತರದ ಉನ್ನತ ವೃತ್ತಿ ಪರ ಕೋರ್ಸುಗಳ ಶಿಕ್ಷಣಕ್ಕೆ ದೊಡ್ಡ ಮೊತ್ತದ ಸಾಲ ನೀಡುವ ಬ್ಯಾಂಕ್‌ ಯೋಜನೆಗಳಿವೆ. ಹಾಗಿದ್ದರೂ ಎಲ್‌ಕೆಜಿ ಯಿಂದ 12ನೇ ತರಗತಿ ವರೆಗಿನ ಶಿಕ್ಷಣಕ್ಕಾಗಿ ಕೂಡ ಹೆತ್ತವರು ಮಗು ಹುಟ್ಟಿದಾಗಿನಿಂದಲೇ ಸೂಕ್ತ ಯೋಜನೆಗಳಲ್ಲಿ ಹಣ ಹೂಡಲು ತೊಡಗುವುದು ಅತೀ ಅಗತ್ಯ ಮತ್ತು ಅಪೇಕ್ಷಣೀಯ ಕೂಡ.

ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಮಗು ಹುಟ್ಟಿದಾಗಿನಿಂದಲೇ ಹಣ ತೊಡಗಿಸುವ ಹೆತ್ತವರ ಸಂಖ್ಯೆ ಅತ್ಯಲ್ಪ ಎನ್ನುವ ಕಳವಳಕಾರಿ ಅಂಶ ಎಚ್‌ಎಸ್‌ಬಿಸಿ ಹಣಕಾಸು ಸಂಸ್ಥೆ ನಡೆಸಿರುವ ಸಮೀಕ್ಷೆಯಿಂದ ಬಹಿರಂಗವಾಗಿದೆ.

Advertisement

ಈ ಸಮೀಕ್ಷೆಯ ಪ್ರಕಾರ ಗೊತ್ತಾಗಿರುವ ಇನ್ನೊಂದು ಅತ್ಯಂತ ಕಳವಳಕಾರಿ ಸಂಗತಿ ಎಂದರೆ ನಮ್ಮ ದೇಶದಲ್ಲಿ ಶೇ. 31ರಷ್ಟು ಪ್ರಮಾಣದ ಹೆತ್ತವರು ಮಕ್ಕಳ ಶಿಕ್ಷಣಕ್ಕೆ ಕಿರು ಅವಧಿಯ ಸಾಲವನ್ನು ಪಡೆಯುತ್ತಾರೆ; ಶೇ.26 ಮಂದಿ ಹೆತ್ತವರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕುಟುಂಬಿಕರಿಂದ, ಸ್ನೇಹಿತರು, ಬಂಧು-ಮಿತ್ರರಿಂದ ಕೈ ಸಾಲ ಪಡೆಯುತ್ತಾರೆ.

ಮಕ್ಕಳ ಒಟ್ಟು 16 – 17 ವರ್ಷದ ಶಿಕ್ಷಣಕ್ಕೆಂದು ಮಗು ಹುಟ್ಟಿದಾಗಿನಿಂದಲೇ ಉತ್ತಮ, ಆಕರ್ಷಕ ಯೋಜನೆಗಳಲ್ಲಿ ಹಣ ಹೂಡಲು ತೊಡಗುವ ಹೆತ್ತವರ ಸಂಖ್ಯೆ ನಗಣ್ಯವಾಗಿದೆ ಎನ್ನುತ್ತದೆ ಎಚ್‌ಎಸ್‌ಬಿಸಿ ಸಮೀಕ್ಷೆ. ಅಂದ ಹಾಗೆ ಈ ಸಮೀಕ್ಷೆ ಮಕ್ಕಳ ಭವಿಷ್ಯಕ್ಕೆ  ಹಿಡಿಯಲಾಗಿರುವ ಕನ್ನಡಿಯೇ ಆಗಿದೆ ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ. 

ಹೆತ್ತವರು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಅತ್ಯಂತ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಹಣ ಕೂಡಿಡುವುದೇ ಅವರ ಚಿಂತೆಗೆ ಮುಖ್ಯ ಕಾರಣವಾಗಿದೆ. ಮಕ್ಕಳಿಗಾಗಿ ನಿರ್ದಿಷ್ಟ ಯೋಜನೆಗಳಲ್ಲಿ, ನಿರ್ದಿಷ್ಟ ಅವಧಿಗೆ ತೊಡಗಿಸಲಾಗುವ ಹಣ ಉದ್ದೇಶಿತ ಗುರಿ ಸಾಧಿಸಲು ಯಾವ ಪ್ರಮಾಣದಲ್ಲಿ ಬೆಳೆಯಬೇಕು ಎಂಬ ಕಲ್ಪನೆ ಬಹುಮಂದಿಯಲ್ಲಿ ಇಲ್ಲದಿರುವುದು ಕೂಡ ಕಳವಳದ ಸಂಗತಿಯಾಗಿದೆ.

ಅದೇನಿದ್ದರೂ ನಾವಿಲ್ಲಿ  ಮಕ್ಕಳ ಉನ್ನತ ಶಿಕ್ಷಣದ ಗುರಿಯನ್ನು ಸಾಧಿಸಲು ಉಪಲಬ್ಧವಿರುವ ಶೈಕ್ಷಣಿಕ ಸಾಲದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಲೇಸು : 

1. ಅರ್ಹತೆ : ಶೈಕ್ಷಣಿಕ ಸಾಲ ಪಡೆಯಲು ಮಗುವಿಗೆ ಇರಬೇಕಾದ ಮೂಲ ಅರ್ಹತೆ ಎಂದರೆ ಅದು ಭಾರತೀಯ ಪ್ರಜೆಯಾಗಿರಬೇಕು; 16ರಿಂದ 35ರ ವಯೋಮಿತಿಯ ಒಳಗೆ ಇರುವಂತಿರಬೇಕು.

2. ಬಡ್ಡಿ ದರ : ಬ್ಯಾಂಕುಗಳು ಸಾಮಾನ್ಯವಾಗಿ ಒಂದ ವರ್ಷದ ಎಂಸಿಎಲ್‌ಆರ್‌ (ಮಾರ್ಜಿನಲ್‌ ಕಾಸ್ಟ್‌ ಆಫ್ ಫ‌ಂಡ್ಸ್‌ ಬೇಸ್‌ಡ್‌ ಆನ್‌ ಲೆಂಡಿಂಗ್‌ ರೇಟ್‌) ಬಳಸುತ್ತವೆ ಮತ್ತು ಹೆಚ್ಚುವರಿಯಾಗಿ ಇದು ಶೇ.1.3 ರಿಂದ ಶೇ.3ರ ವರೆಗೆ ಇರುತ್ತದೆ. ಅಂದರೆ ಶೈಕ್ಷಣಿಕ ಸಾಲಗಳ ಮೇಲಿನ ಬಡ್ಡಿ ದರ ವಾರ್ಷಿಕ ಶೇ.8ರಿಂದ ಶೇ.15ರ ವರೆಗೆ ಇರುತ್ತದೆ. 

3. ಮಾರೇಟೋರಿಯಂ : ಅಂದರೆ ಸಾಲ ಮರುಪಾವತಿ ಆರಂಭಿಸುವುದಕ್ಕೆ ಇರುವ ಬಿಡುವಿನ ಅವಧಿ : ಉನ್ನತ ಶಿಕ್ಷಣ ಕೋರ್ಸು (ವೈದ್ಯಕೀಯ, ತಾಂತ್ರಿಕ, ಇತ್ಯಾದಿ) ಮುಗಿದ ದಿನದಿಂದ ಒಂದು ವರ್ಷದ ತನಕದ ಏಕಪ್ರಕಾರದ ಬಿಡುವಿನ ಅವಧಿಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ.

4. ಗ್ಯಾರಂಟರ್‌/ಕೊಲ್ಯಾಟರಲ್‌ : ನಾಲ್ಕು ಲಕ್ಷ ರೂ. ವರೆಗಿನ ಶಿಕ್ಷಣ ಸಾಲಕ್ಕೆ ಯಾವುದೇ ಹೆಚ್ಚುವರಿ ಭದ್ರತೆ ಅಥವಾ ಥರ್ಡ್‌ ಪಾರ್ಟಿ ಗ್ಯಾರಂಟಿ ಅಗತ್ಯವಿರುವುದಿಲ್ಲ. 

4ರಿಂದ 7.5 ಲಕ್ಷ ರೂ. ವರೆಗಿನ ಶಿಕ್ಷಣ ಸಾಲಕ್ಕೆ ಥರ್ಡ್‌ ಪಾರ್ಟಿ ಗ್ಯಾರಂಟಿ ಬೇಕಾಗುತ್ತದೆ. 7.5 ಲಕ್ಷ ಮೀರುವ ಮೊತ್ತದ ಶಿಕ್ಷಣ ಸಾಲಕ್ಕೆ ಕೊಲ್ಯಾಟರಲ್‌ (ಹೆಚ್ಚುವರಿ ಭದ್ರತೆ) ಬೇಕಾಗುತ್ತದೆ. 

5. ತೆರಿಗೆ ಲಾಭಗಳು : 1961ರ ಆದಾಯ ತೆರಿಗೆ ಕಾಯಿದೆಯ ಸೆ.80ಇ ಅಡಿ ಶಿಕ್ಷಣ ಸಾಲದ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆ ರಿಯಾಯಿತಿ ಇದೆ. ಇದು ಸಾಲ ಮರುಪಾವತಿ ಆರಂಭಿಸಲಾದ ವರ್ಷದಿಂದ ಆರಂಭವಾಗುತ್ತದೆ ಮತ್ತು ಈ ಸೌಕರ್ಯ 8 ವರ್ಷದ ವರೆಗೆ ಅಥವಾ ಪೂರ್ತಿ ಬಡ್ಡಿ ಪಾವತಿಯ ತನಕ, ಯಾವುದು ಮೊದಲೋ ಅದು, ಸಾಲ ಮರುಪಾವತಿದಾರನಿಗೆ ಇರುತ್ತದೆ. 

ಹೆತ್ತವರು ತಮ್ಮ ನಿವೃತ್ತಿಗೆಂದು ಕೂಡಿಡುವ ನಿಧಿಯನ್ನು ಅಂತೆಯೇ ಉಳಿಸಿಕೊಳ್ಳುವ ದೃಷ್ಟಿಯಿಂದ ಹೇಳುವುದಾದರೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಕ್ಷಣ ಸಾಲವನ್ನೇ ಆಯ್ಕೆ ಮಾಡುವುದು ಒಳ್ಳೆಯ ಉಪಾಯವಾದೀತು. ಮಾತ್ರವಲ್ಲ ಮನೆ ನಡೆಸುವ ತಿಂಗಳ ಖರ್ಚಿನ ಮೇಲೆ ಯಾವುದೇ ಒತ್ತಡ ಉಂಟಾಗುವುದಿಲ್ಲ. ಹಣದುಬ್ಬರದ ದೃಷ್ಟಿಯಿಂದ ಹೇಳುವುದಾದರೆ ತಿಂಗಳು ತಿಂಗಳೂ ಏರುತ್ತಲೇ ಹೋಗುವ ಮನೆ ನಿರ್ವಹಣೆ ಖರ್ಚು, ನಿರಂತರವಾಗಿ ಕೊರೆದು ಹೋಗುತ್ತಿರುವ ರೂಪಾಯಿಯ ಖರೀದಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. 

ಮೇಲಾಗಿ ಬ್ಯಾಂಕ್‌ ಸಾಲ ಪಡೆದು ಶಿಕ್ಷಣ ಕೈಗೊಳ್ಳುವ ಮಕ್ಕಳಿಗೆ ಅತ್ಯಧಿಕ ಹಣಕಾಸು ನಿರ್ವಹಣೆಯ ಶಿಸ್ತು ಮತ್ತು ಜವಾಬ್ದಾರಿ ತನ್ನಿಂತಾನೇ ಬಂದಿರುತ್ತದೆ. ಮಕ್ಕಳು ಬೆಳೆದು ಉದ್ಯೋಗಕ್ಕೆ ತೊಡಗುವ ವರೆಗೂ ಶಿಕ್ಷಣ ಸಹಿತ ಅವರ ಎಲ್ಲ ಖರ್ಚು ವೆಚ್ಚಗಳನ್ನು ಹೆತ್ತವರು ನಿಭಾಯಿಸುವ ಪದ್ಧತಿ ಭಾರತದ ವಿಶಿಷ್ಟತೆ ಎನ್ನಬಹುದು. ಮುಂದುವರಿದ ದೇಶಗಳಲ್ಲಾದರೆ ಹೆತ್ತವರಿಗೆ ಅವರ ಮಕ್ಕಳ ಜವಾಬ್ದಾರಿ ಅವರು ಪ್ರೌಢ ವಯಸ್ಕರಾಗುವ ತನಕ ಮಾತ್ರ ಇರುತ್ತದೆ. ಅನಂತರ ಅವರವರ ಜೀವನೋಪಾಯವನ್ನು ಅವರವರೇ ನೋಡಿಕೊಳ್ಳಬೇಕು ! 

ನಮ್ಮ ದೇಶದಲ್ಲೀಗ ಬ್ಯಾಂಕುಗಳು ಭಾರತೀಯ ಮತ್ತು ವಿದೇಶೀ ಉನ್ನತ ಶಿಕ್ಷಣಕ್ಕೆ ಸುಲಭದಲ್ಲಿ, ಪರ್ಯಾಪ್ತ ಸಾಲ ನೀಡುತ್ತವೆ. ಇವುಗಳ ಮೇಲಿನ ಬಡ್ಡಿ ದರ ಶೇ.8 ಇರುತ್ತದೆ. ಉನ್ನತ ಶಿಕ್ಷಣ ಮುಗಿದು ಉದ್ಯೋಗಾವಕಾಶ ಅರಸುವ ಒಂದು ವರ್ಷ ವರೆಗಿನ ಅವಧಿಗೆ ಸಾಲ ಮರುಪಾವತಿ ರಜೆ ಇರುತ್ತದೆ. ಈ ಎಲ್ಲ ಸೌಕರ್ಯಗಳು ಹೆತ್ತವರಿಗೆ ಮತ್ತು ಅವರ ಮಕ್ಕಳಿಗೆ ವರದಾನವೇ ಆಗಿರುತ್ತದೆ ಎನ್ನಲು ಅಡ್ಡಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next