Advertisement

ಉಡುಪಿಯಲ್ಲಿ ನಿರ್ಮಾಣವಾಗಲಿದೆ  ಹೈಟೆಕ್‌ ಬಸ್‌ ನಿಲ್ದಾಣ

08:10 AM Aug 08, 2017 | Team Udayavani |

ಉಡುಪಿ: ಉಡುಪಿ ಜಿಲ್ಲೆಯಾಗಿ 20 ವರ್ಷಗಳಾಗುತ್ತಿರುವ ಸುಸಂದರ್ಭದಲ್ಲಿಯೇ ಜಿಲ್ಲಾ ಕೇಂದ್ರದಲ್ಲಿ ರಾಜ್ಯದ ಎಲ್ಲ ಕಡೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬನ್ನಂಜೆಯಲ್ಲಿ 35 ಕೋ. ರೂ. ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್‌ ಬಸ್‌ ಕೆಎಸ್‌ಆರ್‌ಟಿಸಿ ನಿಲ್ದಾಣ ನಿರ್ಮಾಣವಾಗಲಿದೆ. 

Advertisement

ಉಡುಪಿಯ ಕೇಂದ್ರಭಾಗದಿಂದ ಕೇವಲ 1 ಕಿ. ಮೀ. ದೂರದಲ್ಲಿರುವ ಎಸ್‌ಪಿ ಕಚೇರಿಯ ಬಳಿಯ ಪಿಡಬ್ಲೂéಡಿ ಇಲಾಖೆಯ 3.37 ಎಕರೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಿಸಲು ಮಂಜೂರು ಮಾಡಿದ್ದಾರೆ. 35 ಕೋ. ರೂ. ವೆಚ್ಚದಲ್ಲಿ ಆಧುನಿಕ ಮಾದರಿಯ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. ಮುಂದಿನ ತಿಂಗಳು ಗುದ್ದಲಿ ಪೂಜೆ ನಡೆಯಲಿದೆ. ಈ ನಿಲ್ದಾಣದ ಅರ್ಧ ಹಣವನ್ನು ಕೆಎಸ್‌ಆರ್‌ಟಿಸಿ ಹಾಗೂ ಉಳಿದರ್ಧ ಹಣವನ್ನು ರಾಜ್ಯ ಸರಕಾರ ಭರಿಸಲಿದೆ.

ಹೇಗಿರಲಿದೆ ವಿನ್ಯಾಸ?
ಉಡುಪಿಯ ಜನರ ಬಹುದಿನಗಳ ಬೇಡಿಕೆಯೆಂದರೆ ಎಲ್ಲ ಸೌಕರ್ಯವಿರುವ ಉತ್ತಮ ಬಸ್‌ ನಿಲ್ದಾಣ. ಉಡುಪಿಯಿಂದ ಎಲ್ಲ ಕಡೆಗೆ ಸಂಪರ್ಕಿಸುವ ಜನರಿದ್ದರೂ, ಈಗಲೂ ಉಡುಪಿಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಗರಸಭೆಯ ಅಧೀನದಲ್ಲಿದೆ. ಈ ನಿಟ್ಟಿನಲ್ಲಿ ಇನ್ನು ಒಂದೂವರೆ ವರ್ಷದೊಳಗೆ ಈ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಯಿದೆ. ನವೀನ ಮಾದರಿಯ ವಿನ್ಯಾಸದೊಂದಿಗೆ ನಿರ್ಮಾಣವಾಗುವ ಬಸ್‌ ನಿಲ್ದಾಣದಲ್ಲಿ ಕೆಳಗಿನ ಫ್ಲೋರ್‌ನಲ್ಲಿ ಬಸ್‌ಗಳ ನಿಲ್ದಾಣ, ಅಂಡರ್‌ಗ್ರೌಂಡ್‌ನ‌ಲ್ಲಿ ಇತರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ, ಮೇಲೆ 2 ಮಹಡಿ ನಿರ್ಮಾಣವಾಗಲಿದ್ದು, 3 ಮಲ್ಟಿಫ್ಲೆಕ್ಸ್‌, ಶಾಪಿಂಗ್‌ ಮಾಲ್‌, ಫ‌ುಡ್‌ಕೋರ್ಟ್‌ ಇರಲಿದೆ. 

4.5 ಕೋ. ರೂ. ವೆಚ್ಚದಲ್ಲಿ ನರ್ಮ್ ನಿಲ್ದಾಣ
ಜಿಲ್ಲಾ ಬಸ್‌ ನಿಲ್ದಾಣ ಮಾತ್ರವಲ್ಲದೆ ಉಡುಪಿ ನಗರಸಭಾ ವ್ಯಾಪ್ತಿಯ ಇತರ 4 ಕಡೆಗಳಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. 5 ಕೋ.ರೂ. ವೆಚ್ಚದಲ್ಲಿ ಈಗಿರುವ ಸಿಟಿ ಬಸ್‌ ನಿಲ್ದಾಣದ ನವೀಕರಣ, ಹಳೆಯ ಡಿಡಿಪಿಐ ಕಚೇರಿ ಬಳಿ 4.5 ಕೋ.ರೂ. ವೆಚ್ಚದಲ್ಲಿ ನರ್ಮ್ ಬಸ್‌ ನಿಲ್ದಾಣ, ಮಲ್ಪೆಯಲ್ಲಿ 3 ಕೋ.ರೂ. ಹೊಸ ಬಸ್‌ ನಿಲ್ದಾಣ ಹಾಗೂ ಮಣಿಪಾಲದಲ್ಲಿ ಈಗ ಬಸ್‌ಗಳು ನಿಲ್ಲುವ ಜಾಗದಲ್ಲಿ  2.5 ಕೋ.ರೂ. ವೆಚ್ಚದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. ನರ್ಮ್ ಬಸ್‌ ನಿಲ್ದಾಣದ ಟೆಂಡರ್‌ ಪ್ರಕ್ರಿಯೆ ಆಗಿದ್ದು, ಮುಂದಿನ ತಿಂಗಳಿನಿಂದ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.

ಶೀಘ್ರ ಕಾಮಗಾರಿ ಆರಂಭ
ಖಾಸಗಿ ಲಾಬಿಯಿದ್ದಾಗಿಯೂ ಜಿಲ್ಲೆಗೆ ಜೆ- ನರ್ಮ್ ಬಸ್‌ಗಳನ್ನು ಜನರ ಸೇವೆಗೋಸ್ಕರ ತರಿಸಲಾಗಿದ್ದು, ಈಗ ಸಿಎಂ ಸಿದ್ದರಾಮಯ್ಯ ಅವರೇ ಬನ್ನಂಜೆಯ ಪಿಡಬ್ಲೂéಡಿ ಇಲಾಖೆಯ 3 ಎಕರೆ ಜಾಗವನ್ನು ಕೆಎಸ್‌ಆರ್‌ಟಿಸಿಗೆ ನೀಡಿದ್ದು, ಎಲ್ಲ ಸೌಕರ್ಯಗಳಿರುವ ಆಧುನಿಕ ಬಸ್‌ ನಿಲ್ದಾಣ ಹಾಗೂ ನರ್ಮ್ ಬಸ್‌ ನಿಲ್ದಾಣದ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ. ರಾಜ್ಯದ ಬೇರೆ- ಬೇರೆ ಭಾಗಗಳಿಗೆ ತೆರಳುವವರಿಗೆ ಇದರಿಂದ ಅನುಕೂಲವಾಗಲಿದೆ. ಜಿಲ್ಲೆಗೆ ಇನ್ನಷ್ಟು ಸರಕಾರಿ ಬಸ್‌ಗಳನ್ನು ತರಲಾಗುವುದು. 
– ಪ್ರಮೋದ್‌ ಮಧ್ವರಾಜ್‌, ಜಿಲ್ಲಾ ಉಸ್ತುವಾರಿ ಸಚಿವರು

Advertisement

ಈ ಹೈಟೆಕ್‌ ನಿಲ್ದಾಣದಲ್ಲಿ ಏಕಕಾಲಕ್ಕೆ 27 ಬಸ್‌ಗಳು ನಿಲ್ಲುವ ಬಸ್‌ ಬೇ ಇರಲಿದೆ. ಗಂಟೆಗೆ 100 ಬಸ್‌ಗಳು ಬಂದು- ಹೋಗುವ ವ್ಯವಸ್ಥೆ ಇರಲಿದೆ. ಕನಿಷ್ಠ 10 ಗಂಟೆಗೆ 1,000 ಸಾವಿರ ಬಸ್‌ಗಳು ಸಂಚರಿಸುವ ಸೌಲಭ್ಯವನ್ನು ಕಲ್ಪಿಸಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸುತ್ತಿದೆ. ಸದ್ಯ 295 ಬಸ್‌ಗಳು ಉಡುಪಿ ನಿಲ್ದಾಣವಾಗಿ ಸಂಚರಿಸುತ್ತಿದ್ದು, ಹೊಸ ಬಸ್‌ ನಿಲ್ದಾಣವಾದ ಬಳಿಕ ಮತ್ತೆ 120 ಹೊಸ ಬಸ್‌ಗಳು ಸೇರ್ಪಡೆಗೊಳ್ಳಲಿದೆ. ಇಲ್ಲಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ
– ಎಸ್‌. ಆರ್‌. ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

ಕುಂದಾಪುರದಲ್ಲಿ ಡಿಪೋ
ಆಧುನಿಕ ತಂತ್ರಜ್ಞಾನದಲ್ಲಿ ಹೊಸ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿ ಲಾಭದ ಉದ್ದೇಶದಿಂದ ಮಾಡುತ್ತಿಲ್ಲ. ಜನರಿಗೆ ಉತ್ತಮ ಸೇವೆ ನೀಡುವ ಸುದ್ದೇಶದಿಂದ ಬಸ್‌ ನಿಲ್ದಾಣ, ಹಳ್ಳಿ- ಹಳ್ಳಿಗಳಿಗೆ ಬಸ್‌ಗಳ ಸಂಚಾರ ಆರಂಭಿಸುತ್ತಿದ್ದೇವೆ. ಕುಂದಾಪುರದ ಹಟ್ಟಿಯಂಗಡಿಯಲ್ಲಿ 5 ಎಕರೆ ಜಾಗ ನಿಗದಿಗೊಳಿಸಿದ್ದು, ಬಸ್‌ಗಳ ನಿರ್ವಹಣಾ ಘಟಕ (ಡಿಪೋ) ಆರಂಭಿಸುವ ಯೋಜನೆಯಿದೆ. ಜತೆಗೆ ಕುಂದಾಪುರದಿಂದ ಶೃಂಗೇರಿ, ಆಗುಂಬೆ ಬಸ್‌ ಸೇವೆ ಕಲ್ಪಿಸಲಾಗುವುದು.
– ಗೋಪಾಲ ಪೂಜಾರಿ,  ಅಧ್ಯಕ್ಷರು, ಕೆಎಸ್‌ಆರ್‌ಟಿಸಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next