Advertisement

ಅಂಗನವಾಡಿಗಳಿಗೆ ಹೈಟೆಕ್‌ ಸ್ಪರ್ಶ: ಸಚಿವೆ ಶಶಿಕಲಾ ಜೊಲ್ಲೆ

01:08 AM Jan 10, 2020 | mahesh |

ಉಡುಪಿ: ಅಂಗನವಾಡಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸುವುದಕ್ಕಾಗಿ ಈಗಿರುವ ಸರಕಾರಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಹೈಟೆಕ್‌ ಆಗಿಸಲು ಚಿಂತನೆ ನಡೆಸಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಕಾರವಾರದಲ್ಲಿ ಆರಂಭಿಸಲಾಗುತ್ತಿದ್ದು, ಬಳಿಕ ಉಡುಪಿ ಜಿಲ್ಲೆಗೆ ವಿಸ್ತರಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಉಡುಪಿ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಇಲಾಖಾ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಪತ್ರಕರ್ತರ ಜತೆ ಅವರು ಮಾತ ನಾಡಿದರು. ಹಳೆಯ ಕಟ್ಟಡ ಹೊಂದಿರುವ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು, ಮೂಲ ಸೌಕರ್ಯ, ಆಧುನಿಕ ಸಲಕರಣೆಗಳನ್ನು ಪೂರೈಸ ಲಾಗುವುದು. ಈ ಸಂಬಂಧ ಸರ್ವೇ ನಡೆಸಿ ಮಾಹಿತಿ ನೀಡುವಂತೆ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದರು.

ಇಲಾಖೆಯಲ್ಲಿ ಖಾಲಿಯಿದ್ದ ಹುದ್ದೆಗಳನ್ನು ಭಡ್ತಿ, ನೇಮಕಾತಿ ಮೂಲಕ ತುಂಬಲಾಗಿದ್ದು, ಶೇ. 60ರಷ್ಟು ಹುದ್ದೆಗಳು ಭರ್ತಿಗೊಂಡಿವೆ. ಮಹಿಳೆಯರ, ಮಕ್ಕಳ ಹಿರಿಯ ನಾಗರಿಕರ, ಅಶಕ್ತರ ಕಲ್ಯಾಣಕ್ಕೆ ಯೋಜನೆಗಳನ್ನು ಜಾರಿಗೆ ತರಲಾಗು ತ್ತಿದೆ. 7 ತರಹದ ವಿಕಲಚೇತನರೆಂದು ಈ ಹಿಂದೆ ಸರಕಾರ ಗುರುತಿಸಿತ್ತು. ಪ್ರಧಾನಿ ಈ ಪಟ್ಟಿಗೆ ಇನ್ನಷ್ಟು ವೈಕಲ್ಯ ಗಳನ್ನು ಸೇರಿಸಿ ವಿಸ್ತರಿಸಿ 27 ತರಹದ ಅಂಗವಿಕಲರೆಂದು ಮಾರ್ಪಾಟು ಗೊಳಿಸಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಸೌಕರ್ಯಗಳನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಹಿರಿಯ ನಾಗರಿಕರಿಗೆ ವಾಕಿಂಗ್‌ ಸ್ಟಿಕ್‌, ಹಲ್ಲು ಸೆಟ್‌ ಇತ್ಯಾದಿ ಸಲಕರಣೆ ವಿತರಿಸಿ ಅವರು ಗೌರವದಿಂದ ಬದುಕು ಸಾಗಿಸಲು ಅನುಕೂಲ ಮಾಡಿ ಕೊಡಲಾಗುತ್ತಿದೆ. ಎಲ್ಲ ವರ್ಗದವರಿಗೆ ಮಹಿಳಾ ಅಭಿವೃದ್ಧಿಗೆ ಇಲಾಖೆ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫ‌ಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಶಾಸಕ ರಘುಪತಿ ಭಟ್‌, ಎಡಿಸಿ ಸದಾಶಿವ ಪ್ರಭು, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಿಇಒ ಪ್ರೀತಿ ಗೆಹಲೋಟ್ ಉಪಸ್ಥಿತರಿದ್ದರು.

Advertisement

ಇಲಾಖಾ ಪ್ರಗತಿ ಪರಿಶೀಲನೆ
ಪತ್ರಿಕಾಗೋಷ್ಠಿಗೆ ಮುನ್ನ ಇಲಾಖಾ ಪ್ರಗತಿ ಪರಿಶೀಲನ ಸಭೆ ನಡೆಸಿದ ಸಚಿವೆ, ಪಡಿತರ ಚೀಟಿದಾರರಿಗೆ ಇ-ಕೆವೈಸಿ ನೀಡಲು ಅನುಕೂಲವಾಗುವಂತೆ ನೋಂದಣಿ ಅವಧಿಯನ್ನು ಮಾ. 31ರ ವರೆಗೆ ವಿಸ್ತರಿಸಲಾಗಿದೆ ಎಂದರು.

ಎಲ್ಲ ಜಿಲ್ಲೆಗಳಿಗೆ ತೆರಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಗುರಿಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವೆ ಮಾಹಿತಿ ನೀಡಿದರು.

98 ಮಕ್ಕಳು ಅಪೌಷ್ಟಿಕ
ಉಡುಪಿ ಜಿಲ್ಲೆಯಲ್ಲಿ 98 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕು. ಸ್ವಾಧಾರ್‌ ಯೋಜನೆ ಮತ್ತು ಸಖೀ ವನ್‌ ಸ್ಟಾಪ್‌ ಸೆಂಟರ್‌ ಯೋಜನೆಗೆ ಅನುದಾನ ಬಿಡುಗಡೆ ಕುರಿತು ಪ್ರಸ್ತಾವನೆ ಸಲ್ಲಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 1,291 ಕಾರ್ಡ್‌ಗಳನ್ನು ಸ್ವಯಂ ಪ್ರೇರಣೆ ಯಿಂದ ಫ‌ಲಾನುಭವಿಗಳು ಹಿಂದಿರುಗಿಸಿದ್ದು, ನಾಲ್ಕು ಚಕ್ರದ ವಾಹನ ಹೊಂದಿರುವವರಿಂದ 760 ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿಯವರೆಗೆ ಒಟ್ಟು 2,051 ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಕುಚ್ಚಿಗೆ (ಕೆಂಪು ) ಅಕ್ಕಿ ನೀಡುವಂತೆ ಶಾಸಕ ರಘುಪತಿ ಭಟ್‌ ಕೋರಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್, ಆಹಾರ ಇಲಾಖೆ ಉಪ ನಿರ್ದೇಶಕ ಕುಸುಮಾಧರ್‌ ಮತ್ತು ಇಲಾಖೆಯ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮಾತೃಪೂರ್ಣ: ಸಿಎಂ ಜತೆ ಚರ್ಚೆ
ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಪೂರೈಸುವ “ಮಾತೃಪೂರ್ಣ’ ಅವೈಜ್ಞಾನಿಕ ಎಂಬುದು ಸರಕಾರಕ್ಕೆ ಮನದಟ್ಟಾಗಿದೆ. ಗರ್ಭಿಣಿಯರು ಮಧ್ಯಾಹ್ನದ ಹೊತ್ತು ಅಂಗನವಾಡಿಗಳಿಗೆ ಬರುವುದನ್ನು ತಪ್ಪಿಸಲು ಅವರ ಮನೆಗೆ ತೆರಳಿ ಪೌಷ್ಟಿಕ ಹಾಲು, ಪೌಡರ್‌ ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದು ಸೂಕ್ತ¤. ಇದರ ಜಾರಿ ವಿಧಾನದ ಕುರಿತು ಸಿಎಂ ಜತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಅಂಗನವಾಡಿ ಸಿಬಂದಿಗೆ ಗೌರವಧನ ಹೆಚ್ಚಳ ಮತ್ತು ತಿಂಗಳ 10ರೊಳಗೆ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಯ ಪ್ರಗತಿ ಸಮಾಧಾನಕರ
“ವನ್‌ ನೇಶನ್‌, ವನ್‌ ರೇಶನ್‌’ ವ್ಯವಸ್ಥೆಯಡಿ ಪಡಿತರ ಚೀಟಿಯ ಸದಸ್ಯರನ್ನು ಗುರುತಿಸುವ ಇ-ಕೆವೈಸಿಗೆ ಸರ್ವರ್‌ ಸಮಸ್ಯೆಯಿಂದ ಆರಂಭದಲ್ಲಿ ಹಿನ್ನಡೆಯಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಮನಗಂಡು ಪ್ರಕ್ರಿಯೆಯನ್ನು ಮಾ. 31ರ ತನಕ ವಿಸ್ತರಿಸಲಾಗಿದೆ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಇಲ್ಲಿನ ಅಧಿಕಾರಿಗಳ ಕಾರ್ಯನಿರ್ವಹಣೆ ಸಮಾಧಾನಕರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next