Advertisement

ಹೆಸ್ಕಾಂಗೆ ಸ್ಥಳೀಯ ಆಡಳಿತಗಳ ಶಾಕ್‌ ;21 ಗ್ರಾಪಂನಿಂದ 14.51 ಕೋಟಿ ಬಾಕಿ

04:40 PM Nov 06, 2022 | Team Udayavani |

ಬಾಗಲಕೋಟೆ: ಇದು ಕರೆಂಟ್‌ಗೆ ಶಾಕ್‌ ಕೊಡುವ ಸುದ್ದಿ. ಸರ್ಕಾರದಿಂದಲೇ ವಿದ್ಯುತ್‌ ಪೂರೈಸುವ ಕಂಪನಿಗೆ ಕೋಟಿ ಕೋಟಿ ಬಾಕಿ ಉಳಿಸಿದೆ ಎಂದರೆ ನಂಬಲೇಬೇಕು.

Advertisement

ಹೌದು, ಆಯಾ ಗ್ರಾಮಕ್ಕೆ ಸ್ಥಳೀಯ ಸರ್ಕಾರ ಅಂದ್ರೇನೇ, ಗ್ರಾಮ ಪಂಚಾಯಿತಿಗಳು. ಆಯಾ ಗ್ರಾಮಕ್ಕೆ ಬೇಕಾದ ಪ್ರತಿಯೊಂದು ಅಗತ್ಯ ಮೂಲಭೂತ ಸೌಲಭ್ಯಗಳ ಪೂರೈಕೆಯ ಹೊಣೆ ಗ್ರಾ.ಪಂ. ಹೊತ್ತುಕೊಂಡಿವೆ. ಇದಕ್ಕಾಗಿ ಸರ್ಕಾರ, ಅನುದಾನದ ರೂಪದಲ್ಲಿ ನೆರವು ಕೊಡುತ್ತದೆ. ಹಳ್ಳಿಗಳ ಜನರಿಗೆ ಸಧ್ಯದ ಪರಿಸ್ಥಿತಿಯಲ್ಲಿ ಒಂದು ಇಲ್ಲವೆಂದರೂ, ಇನ್ನೊಂದನ್ನು ಪಡೆದು ಬದುಕಬಹುದು.

ಆದರೆ, ನೀರು ಮತ್ತು ವಿದ್ಯುತ್‌ ಇಲ್ಲದಿದ್ದರೆ ಬದುಕೇ ದುಸ್ಥರ ಎಂಬ ಪರಿಸ್ಥಿತಿ ಎಲ್ಲೆಡೆ ಇದೆ. ಆದರೆ, ಈ ನೀರು ಮತ್ತು ವಿದ್ಯುತ್‌ ಪೂರೈಸಲು ಅಗತ್ಯವಾಗಿ ಬೇಕಾಗಿರುವುದು ವಿದ್ಯುತ್‌. ಆ ವಿದ್ಯುತ್‌ ಪೂರೈಸುವ ಹೊಣೆಗಾರಿಕೆ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವಹಿಸಿಕೊಂಡಿದೆ. ಈ ಹೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳಿವೆ.

ಕೋಟಿ ಕೋಟಿ ಬಾಕಿ: ಖಾಸಗಿ ವ್ಯಕ್ತಿಗಳು ಬಹುತೇಕ ವಿದ್ಯುತ್‌ ಬಿಲ್‌ ಪಾವತಿಸುತ್ತಾರೆ. ಗೃಹ ಬಳಕೆಗೆ ಪಡೆಯುವ ವಿದ್ಯುತ್‌ ಬಿಲ್‌ ಪಾವತಿಸದಿದ್ದರೆ ಹೆಸ್ಕಾಂ, ಅಂತಹ ಮನೆಗಳಿಗೆ ವಿದ್ಯುತ್‌ ಬಿಲ್‌ ಕಡಿತಗೊಳಿಸುತ್ತದೆ. ಅಷ್ಟೊಂದು ಕಟ್ಟುನಿಟ್ಟಿನ ಕ್ರಮ ಹೆಸ್ಕಾಂ ಮಾಡುತ್ತಿದೆ. ಆದರೆ, ಸಧ್ಯ ಹೆಸ್ಕಾಂಗೆ ದೊಡ್ಡ ತಲೆನೋವಾಗಿರೋದು, ಸರ್ಕಾರಿ ಕಚೇರಿಗಳು, ಕುಡಿಯುವ ನೀರು ಪೂರೈಕೆ ಯೋಜನೆಗಳು, ಏತ ನೀರಾವರಿ ಯೋಜನೆಗಳು, ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಿದ್ಯುತ್‌ ಬಿಲ್‌ ಕೋಟಿ ಕೋಟಿ ಲೆಕ್ಕದಲ್ಲಿದೆ ಎಂದರೆ ನಂಬಲೇಬೇಕು.

ಹೀಗೆ ಕೋಟಿ ಕೋಟಿ ಲೆಕ್ಕದಲ್ಲಿ ಬಾಕಿ ಉಳಿಸಿಕೊಂಡ ವಿದ್ಯುತ್‌ ಬಿಲ್‌ನಿಂದ ಹೆಸ್ಕಾಂ ಕಂಪನಿ ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಜನರಿಗೆ ಸಕಾಲಕ್ಕೆ ವಿದ್ಯುತ್‌ ಪೂರೈಸುವ ನಿಟ್ಟಿನಲ್ಲಿ ಅದೂ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಹೀಗಾಗಿ ವಿದ್ಯುತ್‌ ಬಿಲ್‌ ಕೊಡದ, ಅದರಲ್ಲೂ 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾ.ಪಂ. ಕಚೇರಿ ವ್ಯಾಪ್ತಿಯ ಬೀದಿದೀಪ ಮತ್ತು ಕುಡಿಯುವ ನೀರು ಪೂರೈಕೆಗೆ ನೀಡಿದ ವಿದ್ಯುತ್‌ ಕಡಿತಗೊಳಿಸಲು ಸ್ವತಃ ಸರ್ಕಾರದ ಆದೇಶವೂ ಇದೆ. ಅದನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೆಸ್ಕಾಂ ಇದೀಗ ಮುಂದಾಗಿದೆ. ಬಾಕಿ ಕೊಡದ ಗ್ರಾಮಗಳಲ್ಲಿ ಇದೇ ನವ್ಹೆಂಬರ್‌ 16ರಿಂದ ಬಹುತೇಕ ವಿದ್ಯುತ್‌ ಕಡಿತಗೊಳ್ಳಲಿದೆ.

Advertisement

ಮುರನಾಳ ಗ್ರಾ.ಪಂ. ಅಧಿಕ: ಬಾಗಲಕೋಟೆ ತಾಲೂಕಿನಲ್ಲಿ 29 ಗ್ರಾ.ಪಂ.ಗಳಿದ್ದು, ಅದರಲ್ಲಿ ಬರೋಬ್ಬರಿ 21 ಗ್ರಾ.ಪಂ.ಗಳು ತಲಾ 10 ಲಕ್ಷಕ್ಕೂ ಮೇಲ್ಪಟ್ಟು ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ. ಅದರಲ್ಲೂ ಮುರನಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 840 ವಿದ್ಯುತ್‌ ಸ್ಥಾವರ (ಮೀಟರ್‌) ಗಳಿದ್ದು, ಅವುಗಳಿಂದ 178.45 ಲಕ್ಷ (1.78 ಕೋಟಿ) ಬಾಕಿ ಪಾವತಿಸಬೇಕಿದೆ. ಅಷ್ಟೂ ಗ್ರಾ.ಪಂ. ಗಳಲ್ಲಿ ಅತಿಹೆಚ್ಚು ವಿದ್ಯುತ್‌ ಬಾಕಿ ಉಳಿಸಿಕೊಂಡ ಗ್ರಾ.ಪಂ.ನಲ್ಲಿ ಮುರನಾಳಕ್ಕೆ ಪ್ರಥಮ ಸ್ಥಾನವಿದೆ. ಇನ್ನು ತಾಲೂಕಿನ ಕದಾಂಪುರ ಗ್ರಾ.ಪಂ. 12.12 ಲಕ್ಷ ಬಾಕಿ ಪಾವತಿಸಬೇಕಿದ್ದು, ಬಾಗಲಕೋಟೆ ತಾಲೂಕಿನ ಬಾಕಿ ಉಳಿಸಿಕೊಂಡ ಗ್ರಾ.ಪಂ.ಗಳಲ್ಲೇ ಅತಿ ಕಡಿಮೆ (10 ಲಕ್ಷ ಮೇಲ್ಪಟ್ಟ ಗ್ರಾ.ಪಂ.ಗಳಲ್ಲಿ) ಬಾಕಿ ಉಳಿಸಿಕೊಂಡ ಪಟ್ಟಿಯಲ್ಲಿದೆ.

ಪ್ರತಿ ತಿಂಗಳು ನೋಟಿಸ್‌

ಜಿಲ್ಲೆಯ ಗ್ರಾ.ಪಂ.ಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್‌ ಬಾಕಿ ಕುರಿತು ಪ್ರತಿಯೊಂದು ಪಂಚಾಯಿತಿಯ ಬಾಕಿ ಪಟ್ಟಿಯೊಂದಿಗೆ ಪಾವತಿಸಲು ಆಯಾ ಗ್ರಾಪಂಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಬಾಕಿ ಪಾವತಿಸದ ಗ್ರಾ.ಪಂ.ಗಳ ಕುಡಿಯುವ ನೀರು ಮತ್ತು ಬೀದಿದೀಪಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಆಗ ಆಯಾ ಊರಿನ ಹಿರಿಯರು, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ಕರೆ ಮಾಡುವ ಸಂಪ್ರದಾಯವಿದ್ದು, ಆ ಜನಪ್ರತಿನಿಧಿಗಳು ಹೆಸ್ಕಾಂ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹಾಕಿ ವಿದ್ಯುತ್‌ ಸಂಪರ್ಕ ಕೊಡಿಸುತ್ತಾರೆ. ಆದರೆ, ಹೆಸ್ಕಾಂಗೆ ಬರಬೇಕಾದ ವಿದ್ಯುತ್‌ ಬಾಕಿಯೇ ಬರುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ನೀಡಿದ ನಿರ್ದೇಶನ ಹಾಗೂ ಆದೇಶದ ಪ್ರಕಾರ, ಈ ತಿಂಗಳ 16ರಿಂದ ಕಡ್ಡಾಯವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕಡಿತಗೊಳಿಸಲು ಹೆಸ್ಕಾಂ ನಿರ್ಧರಿಸಿದೆ.

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next