Advertisement

ಸಾವಯವ ಉತ್ಪನ್ನ ಮಾರಾಟಕ್ಕೆ ಹೊಸ ನಿಯಮ; ಇದು ಯಾರ ಲಾಭಕ್ಕಾಗಿ?

06:00 AM Aug 20, 2018 | |

ಪಾರಂಪರಿಕ ಕೃಷಿ ವಿಕಾಸ ಯೋಜನೆ ಹಲವು ರಾಜ್ಯಗಳಲ್ಲಿ ಇನ್ನೂ ಸರಿಯಾಗಿ ಶುರುವಾಗಿಲ್ಲ. ಪಂಜಾಬ್‌, ಹರಿಯಾಣ ಮತ್ತು ಉತ್ತರಪ್ರದೇಶ, ಈ ಮೂರು ರಾಜ್ಯಗಳನ್ನು ಒಟ್ಟಾಗಿ ನಮ್ಮ ದೇಶದ ಆಹಾರದ ಕಣಜ ಎನ್ನುತ್ತಾರೆ. ಆದರೆ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಅನುಕ್ರಮವಾಗಿ 131, 488 ಹಾಗೂ 38,781 ರೈತರು ಮಾತ್ರ ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 

Advertisement

ಪ್ರಾಮಾಣೀಕರಿಸದಿರುವ ಸಾವಯವ ಆಹಾರದ ಚಿಲ್ಲರೆ ಮಾರಾಟವನ್ನು ಸರಕಾರವು ನಿಷೇಧಿಸಿದೆ. ಜುಲೈ 1ರಿಂದ ಈ ನಿಯಮ ಜಾರಿಯಾಗಿದೆ.  ಭಾರತದ ಆಹಾರ ಸುರಕ್ಷತಾ ಮತ್ತು ಮಾನಕ (ಆಸುಮಾ) ಪ್ರಾಧಿಕಾರ ಜಾರಿ ಮಾಡಿರುವ ಈ ಹೊಸ ನಿಯಮದ ಪ್ರಕಾರ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಪ್ರಮಾಣೀಕರಿಸಲು ಎರಡು ವಿಧಾನಗಳಿವೆ. ಒಂದನೆಯ ವಿಧಾನ: ರಾಷ್ಟ್ರೀಯ ಸಾವಯವ ಉತ್ಪಾದನಾ ವಿಧಾನ (ಎನ್‌.ಪಿ.ಓ.ಪಿ.) ಇದರ ಅನುಸಾರ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ)ದ ಮಾನ್ಯತೆ ಪಡೆದಿರುವ 28 ಪ್ರಮಾಣೀಕರಿಸುವ ಏಜೆನ್ಸಿಗಳಿವೆ; ಇಂತಹ ಯಾವುದೇ ಏಜೆನ್ಸಿಯಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಪ್ರಮಾಣೀಕರಿಸಿ ಕೊಳ್ಳಬಹುದು. ಈ ಪ್ರಮಾಣೀಕರಣದ ಅವಧಿ ಒಂದು ವರ್ಷ ಮಾತ್ರ. ಇದನ್ನು ಪಡೆಯಲು ಪ್ರತಿಯೊಬ್ಬ ರೈತನಿಗೆ ತಗಲುವ ವೆಚ್ಚ ರೂ.15,000ದಿಂದ ರೂ.50,000. ಅದಲ್ಲದೆ, ವಾರ್ಷಿಕ ಬೆಳೆ ಬೆಳೆಯುವ ರೈತನು ಇದಕ್ಕಾಗಿ ದಾಖಲಾತಿ ಮಾಡಿದಾಗಿನಿಂದ ಒಂದು ವರ್ಷ ಕಾಯಬೇಕಾಗುತ್ತದೆ. ಬಹುವಾರ್ಷಿಕ ಬೆಳೆ ಬೆಳೆಯುವ ರೈತರು ಮೂರು ವರ್ಷ ಕಾಯಬೇಕು.

ತನ್ನ ಕೃಷಿ ಉತ್ಪನ್ನಗಳು ಸಾವಯವ ಎಂದು ಪ್ರಮಾಣೀಕರಿಸಲು ರೈತನಿಗೆ ಲಭ್ಯವಿರುವ 2ನೇ ವಿಧಾನ: ಸಹಭಾಗಿತ್ವದ ಸಾವಯವ ಖಾತ್ರಿ ಪದ್ಧತಿ (ಪಿಜಿಎಸ್‌). ಇದನ್ನು ಪಾರಂಪರಿಕ ಕೃಷಿ ವಿಕಾಸ ಯೋಜನೆ ಅನುಸಾರ 2015ರಲ್ಲಿ ಜಾರಿ ಮಾಡಲಾಗಿದೆ. ಇದರಲ್ಲಿ ಕನಿಷ್ಠ ಐದು ರೈತರು ಒಂದು ತಂಡ ರಚಿಸಿಕೊಂಡು, ಪರಸ್ಪರರ ಕೃಷಿ ಉತ್ಪನ್ನಗಳು ಸಾವಯವ ಎಂದು ಪ್ರಮಾಣೀಕರಿಸುತ್ತಾರೆ. ತಂಡದ ಪ್ರತಿಯೊಬ್ಬ ಸದಸ್ಯನೂ, ಇತರ ಸದಸ್ಯರ ಹೊಲ/ ತೋಟಗಳನ್ನು ಪ್ರತಿಯೊಂದು ಹಂಗಾಮಿನಲ್ಲಿ ಮೂರು ಸಲ ಪರಿಶೀಲಿಸಬೇಕು: ಬೀಜ ಬಿತ್ತುವಾಗ, ಫ‌ಸಲು ಕೊಯ್ಲು ಮಾಡುವಾಗ ಮತ್ತು ಇವೆರಡರ ನಡುವೆ ಒಮ್ಮೆ. ಈ ಪದ್ಧತಿಯಲ್ಲಿ ಯಾವುದೇ ಶುಲ್ಕವಿಲ್ಲ. ಆದರೆ, ಸಾವಯವ ಉತ್ಪನ್ನವೆಂದು ಮೂರು ಹಂತಗಳಲ್ಲಿ ಪ್ರಮಾಣೀಕೃತವಾಗಲು ಮೂರು ವರ್ಷ ತಗಲುತ್ತದೆ. (ರೈತನು ಈಗಾಗಲೇ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದರೂ ಈ ನಿಯಮ ಅನ್ವಯವಾಗುತ್ತದೆ).

ಈ ಹೊಸ ನಿಯಮ ಜಾರಿಯಾಗುವ ಮುಂಚೆ ಪರಿಸ್ಥಿತಿ ಹೇಗಿತ್ತು? ಆಗ, ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ಕೃಷಿಕರು ಮತ್ತು ಆಹಾರ ಸಂಸ್ಕರಣೆ ಮಾಡುವವರು ಮಾತ್ರ ಕಡ್ಡಾಯವಾಗಿ ಅವನ್ನು ಪ್ರಮಾಣೀಕರಿಸಿ ಕೊಳ್ಳಬೇಕಾಗಿತ್ತು. ನಮ್ಮ ದೇಶದÇÉೇ ಮಾರಾಟ ಮಾಡುವವರ ಉತ್ಪನ್ನಗಳಿಗೆ ಪ್ರಮಾಣೀಕರಣ ಕಡ್ಡಾಯವಾಗಿರಲಿಲ್ಲ. ಪ್ರಮಾಣೀಕರಣ ಎಂಬುದು ಸಾಚಾ ಸಾವಯವ ರೈತರ, ಸಂಸ್ಕರಣೆಕಾರರ ಮತ್ತು ಉತ್ಪಾದಕರ ಗುರುತು; ಇಲ್ಲಿಯವರೆಗೆ ಯಾರು ಬೇಕಾದರೂ ತಮ್ಮ ಉತ್ಪನ್ನ ಸಾವಯವ ಎನ್ನಬಹುದಾಗಿತ್ತು ಎಂದು ಹೇಳುತ್ತಾರೆ ಆಸುಮಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಪವನ್‌ ಕುಮಾರ್‌ ಅಗರ್ವಾಲ್. 

ಯಾವುದೇ ಉತ್ಪನ್ನಗಳ ಗುಣಮಟ್ಟದ ತನಿಖೆ ಮತ್ತು ನಿಯಂತ್ರಣ ಅಗತ್ಯ. ಆದರೆ ಈ ಹೊಸ ನಿಯಮದಿಂದ ನಮ್ಮ ದೇಶದ ಸಾವಯವ ಕೃಷಿ ಆಂದೋಲನಕ್ಕೆ ಹಿನ್ನಡೆ ಆದೀತು. ಈ ನಿಯಮವನ್ನು ಮಾರ್ಪಡಿಸಬೇಕು ಎಂಬುದು ಅದಿತಿ ಆಗ್ಯಾìನಿಕ್‌ ಸರ್ಟಿಫಿಕೇಷನ್‌ ಪ್ರೈ.ಲಿ. ಕಂಪೆನಿಯ ನಿರ್ದೇಶಕರಾದ ನಾರಾಯಣ ಉಪಾಧ್ಯಾಯರ ಅಭಿಪ್ರಾಯ. ಇದು 28 ಪ್ರಮಾಣೀಕರಿಸುವ ಖಾಸಗಿ ಏಜೆನ್ಸಿಗಳಲ್ಲೊಂದು; ಸಾವಯವ ರೈತರು, ಸಂಸ್ಕರಣಕಾರರು, ಉತ್ಪಾದಕರು ಮತ್ತು ಮಾರಾಟಗಾರರನ್ನು ಪರಿಶೀಲಿಸುವುದು ಈ ಏಜೆನ್ಸಿಗಳ ಜವಾಬ್ದಾರಿ. ಸಾವಯವ ಎಂದು ಪ್ರಮಾಣೀಕರಿಸ ಬೇಕಾದರೆ ರೈತರು ಸಾವಯವ ಬೀಜಗಳನ್ನೇ ಬಿತ್ತಿರಬೇಕು. ಆದರೆ, ಸಾವಯವ ಬೀಜಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಈ ವ್ಯವಸ್ಥೆಯ ಸಮಸ್ಯೆಯನ್ನು ವಿವರಿಸುತ್ತಾರೆ ಉಪಾಧ್ಯಾಯ.

Advertisement

ಪಾರಂಪರಿಕ ಕೃಷಿ ವಿಕಾಸ ಯೋಜನೆ ಹಲವು ರಾಜ್ಯಗಳಲ್ಲಿ ಇನ್ನೂ ಸರಿಯಾಗಿ ಶುರುವಾಗಿಲ್ಲ. ಪಂಜಾಬ್‌, ಹರಿಯಾಣ ಮತ್ತು ಉತ್ತರಪ್ರದೇಶ, ಈ ಮೂರು ರಾಜ್ಯಗಳನ್ನು ಒಟ್ಟಾಗಿ ನಮ್ಮ ದೇಶದ ಆಹಾರದ ಕಣಜ ಎನ್ನುತ್ತಾರೆ. ಆದರೆ ಪಂಜಾಬ…, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಅನುಕ್ರಮವಾಗಿ 131 ಮತ್ತು 488 ಹಾಗೂ 38,781 ರೈತರು ಮಾತ್ರ ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯ ಅನುಸಾರ 95,688 ರೈತರಿಗೆ ಸಾವಯವ ಸರ್ಟಿಫಿಕೇಟುಗಳನ್ನು ನೀಡಲಾಗಿದ್ದರೂ ಶೇ.18 ರೈತರು ಅವನ್ನು ನವೀಕರಿಸಿಲ್ಲ.

ಆತಂಕದ ವಿಷಯವೆಂದರೆ, ಈ ಹೊಸ ನಿಯಮವು ಸಾವಿರಾರು ಸಾವಯವ ರೈತರನ್ನು ಮಾರಾಟ ಜಾಲದಿಂದ ಹೊರಕ್ಕೆ ತಳ್ಳುತ್ತದೆ. ಮಹಾರಾಷ್ಟ್ರದ ಲಾಭರಹಿತ ಸಂಸ್ಥೆಯಾದ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜೊಯ್ ಡೇನಿಯಲ್ ಇದನ್ನು ಹೀಗೆ ವಿವರಿಸುತ್ತಾರೆ: ಈಶಾನ್ಯ ರಾಜ್ಯಗಳಲ್ಲಿ (ಅಸ್ಸಾಂನ ಹೊರತಾಗಿ) ಒಂದು ಕೋಟಿ ಹೆಕ್ಟೇರಿನಲ್ಲಿ ಸಾವಯವ ಕೃಷಿ ನಡೆಯುತ್ತಿದೆ. ಆದರೆ, ಇನ್ನು ಮುಂದೆ ಅವರು ತಮ್ಮ ಉತ್ಪನ್ನಗಳನ್ನು ಸಾವಯವದ ಹೆಸರಿನಲ್ಲಿ ಮಾರುವಂತಿಲ್ಲ. ನಮ್ಮ ದೇಶದ ಬುಡಕಟ್ಟು ರೈತರೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಅದೇ ರೀತಿಯಲ್ಲಿ, ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಸಿ, ಸಂಸ್ಕರಿಸಿ, ಲಾಭರಹಿತ ಸಂಸ್ಥೆಗಳು ನೀಡಿದ ಸರ್ಟಿಫಿಕೇಟುಗಳ ಆಧಾರದಿಂದ ಮಾರಾಟ ಮಾಡುವ ಸಾವಿರಾರು ರೈತರಿದ್ದಾರೆ. ಉದಾಹರಣೆಗೆ, 21 ನಾಗರಿಕ ಸಮಾಜ ಸಂಸ್ಥೆಗಳ ಜಾಲವಾದ ಸಹಭಾಗಿತ್ವದ ಸಾವಯವ ಖಾತ್ರಿ ಪದ್ಧತಿಯ ಸಾವಯವ ಕೌನ್ಸಿಲ್ 14 ರಾಜ್ಯಗಳ ಸುಮಾರು 10,000 ರೈತರಿಗೆ ಸಾವಯವ ಸರ್ಟಿಫಿಕೇಟುಗಳನ್ನು ನೀಡಿದೆ. ಹೊಸ ನಿಯಮದ ಅನುಸಾರ, ಈ ಎಲ್ಲ ರೈತರೂ ದುಬಾರಿ ಶುಲ್ಕ ತೆತ್ತು ಅಥವಾ ವರುಷಗಟ್ಟಲೆ ಕಾದು ಹೊಸತಾಗಿ ಸಾವಯವ ಸರ್ಟಿಫಿಕೇಟುಗಳನ್ನು ಪಡೆಯ ಬೇಕಾಗುತ್ತದೆ. 

ಆಶಾ (ಅಲಯನ್ಸ್‌ ಫಾರ್‌ ಸಸ್ಟೇನೇಬಲ್ ಅಂಡ್‌ ಹೋಲಿಸ್ಟಿಕ್‌ ಎಗ್ರಿಕಲ್ಚರ್‌) ಒಕ್ಕೂಟದ ಸದಸ್ಯೆ ಕವಿತಾ ಕರುಗಂಟಿ ಈ ಹೊಸ ನಿಯಮಕ್ಕೆ ನೀಡಿರುವ ಪ್ರತಿಕ್ರಿಯೆ ಗಮನಾರ್ಹ: ಸಾವಯವ ಕೃಷಿ ಪದ್ಧತಿ ಅನುಸರಿಸಲು ಇಚ್ಛಿಸುವ ರೈತನಿಗೆ ನೇರವಾಗಿ ತನ್ನ ಕೃಷಿ ಪದ್ಧತಿ ಬದಲಾಯಿಸಲು ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸಬೇಕಾಗಿದೆ. ಈ ವ್ಯವಸ್ಥೆ ಸರಳವಾಗಿರಬೇಕು ಮತ್ತು ಸಾವಯವ ಪ್ರಮಾಣೀಕರಣಕ್ಕೆ ಶುಲ್ಕ ವಿಧಿಸಬಾರದು. ಈಗ ಜಾರಿಯಾದ ನಿಯಮವು ಬೃಹತ್‌ ಸಾವಯವ ಬ್ರಾಂಡ್‌ (ಕಂಪೆನಿ/ ಘಟಕ)ಗಳು ಮಾತ್ರ ಸಾವಯವ ವ್ಯವಹಾರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದೆ ಎಂಬುದು ಅವರ ಆತಂಕ.

ಅಂತೂ, ವಿಷಮುಕ್ತ ಆಹಾರದ ಬೇಡಿಕೆಗಿಂತ ಪೂರೈಕೆ ಬಹಳ ಕಡಿಮೆಯಾಗಿರುವಾಗ, ಈ ಕಠಿಣ ನಿಯಮದಿಂದಾಗಿ, ಸಾವಿರಾರು ಸಾವಯವ ರೈತರು ತಮ್ಮ ವಿಷಮುಕ್ತ ಆಹಾರವನ್ನು ಗ್ರಾಹಕರಿಗೆ ಮಾರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ, ಸಾವಯವ ರೈತರು ಮಾತು ಸಾವಯವ ಉತ್ಪನ್ನಗಳ ಗ್ರಾಹಕರ ಹಿತಕ್ಕೆ ಧಕ್ಕೆಯಾಗಿದೆ, ಅಲ್ಲವೇ? 

ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next