Advertisement

ಮನಸ್ಸು ಎಲ್ಲವನ್ನೂ ಒಪ್ಪಬಹುದು ; ದೇಹವಲ್ಲ !

01:27 AM May 16, 2021 | Team Udayavani |

ಆಹಾರವೇ ಆರೋಗ್ಯದ ಗುಟ್ಟೆಂಬ ಮಾತಿದೆ. ಇದು ಬರಿಯ ಮಾತಲ್ಲ ; ಅನುಭವದ ವಾಕ್ಯ. ನಮ್ಮ ಹಿರಿಯರೆಲ್ಲಾ ಪಾಲಿಸಿದ್ದು ಇದನ್ನೇ. ಹಾಗಾಗಿಯೇ ಗುಂಡುಕಲ್ಲಿನಂತೆ ಬದುಕಿದರು. ಸಾಂಪ್ರದಾಯಿಕ ಆಹಾರ ಶೈಲಿ ಎಂದು ಮೂಗು ಮುರಿಯುವವರೆಲ್ಲಾ ಒಮ್ಮೆ ಅದರೊಳಗಿನ ಅಮೃತ ಸತ್ವವನ್ನು ಅರಿಯಬೇಕು. ಅದೇ ಮುಖ್ಯ.

Advertisement

ಮನಸ್ಸು ಏನು ಬೇಕಾದರೂ ಕೇಳಬಹುದು. ಆದರೆ ದೇಹವಲ್ಲ. ಅದಕ್ಕೆ ಎಷ್ಟು ಬೇಕೋ ಅಷ್ಟನ್ನು, ಯಾವುದು ಬೇಕೋ ಅದನ್ನೇ ಕೊಡಬೇಕು. ಆಗಲೇ ದೇಹ ಮತ್ತು ಮನಸ್ಸು ಆರೋಗ್ಯದಿಂದ ಇರಲು ಸಾಧ್ಯ. ನಗರ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಮಗೆ ಆಹಾರ ತಯಾರಿಸಲು ಮಾತ್ರವಲ್ಲ ಸೇವಿಸಲೂ ಸಮಯವಿಲ್ಲ. ಗಡಿಬಿಡಿಯಲ್ಲಿ ಏನೋ ಮಾಡುತ್ತೇವೆ, ಏನೇನೋ ತಿನ್ನುತ್ತೇವೆ. ಇದರ ಪರಿಣಾಮವೇ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗಿದೆ.

ಹಳ್ಳಿಗಳಲ್ಲಿ ಬಹುಪಾಲು ಕುಟುಂಬಗಳಲ್ಲಿ ಸೂಕ್ತ ಆಹಾರ ಕ್ರಮಗಳನ್ನು ಪಾಲಿಸಲಾಗುತ್ತದೆ. ನಗರದವರಲ್ಲಿ ಈ ಕೊರತೆ ಇದೆ. ಅವರ ಊಟದ ತಟ್ಟೆಯಲ್ಲಿ ಸಿದ್ಧ ಆಹಾರ, ಜಂಕ್‌ ಪುಡ್‌ಗಳ ಪಾಲೇ ಹೆಚ್ಚು. ಅದಕ್ಕೆ ಕಾರಣವೆಂದರೆ ಒತ್ತಡದ ಜೀವನ ಶೈಲಿಯನ್ನು ನಿರ್ವಹಿಸಲು ಸುಲಭ ದಾರಿಯನ್ನು ಅನುಸರಿಸಿರುವುದು. ಆಹಾರದ ಕಡೆಗೆ ನಿರ್ಲಕ್ಷ್ಯ ತಾಳಿದಷ್ಟೂ ಆರೋಗ್ಯ ಹದಗೆ ಡುತ್ತದೆ. ಇಂದು ವಿಶ್ವವ್ಯಾಪಿ ಕೊರೊನಾ ತಾಂಡವಕ್ಕೆ ಇದೇ ಮುಖ್ಯ ಕಾರಣ.

ಮನೆಯೂಟ ಜತೆಗಿರಲಿ
ಜಂಕ್‌ಫ‌ುಡ್‌, ರೇಡಿಮೆಡ್‌ ಫ‌ುಡ್‌ಗಳನ್ನು ತ್ಯಜಿಸುವುದು ಸೂಕ್ತ. ಬದಲಾಗಿ ಒಂದು ಹೊತ್ತಾದರೂ ಮನೆಯಲ್ಲೇ ತಯಾರಿಸಿದ ಬಿಸಿಯಾದ ಆಹಾರವನ್ನು ಸೇವಿಸಬೇಕು. ಸೇವಿಸುವ ಆಹಾರೂ ಸುಲಭ ವಾಗಿ ಜೀರ್ಣ ವಾಗುವಂತಿರಬೇಕು. ಅದಕ್ಕಿಂತ ಉತ್ತಮ ವಾದುದು ಬೇರೆ ಯಾವುದೂ ಇಲ್ಲ.

ಏನು, ಯಾವಾಗ?
ಹಸಿವೆಗೆ ತಕ್ಕಂತೆ ಆಹಾರ ಸೇವನೆ ಮಾಡುವುದು ಅತೀ ಅಗತ್ಯ. ಸಮಯವಿಲ್ಲ ಎಂದುಕೊಂಡು ಬೇಗ ಅಥವಾ ತಡವಾಗಿ ಊಟ ಮಾಡುವುದು ಎರಡೂ ಸರಿಯಾದ ಕ್ರಮವಲ್ಲ. ಏನು ತಿನ್ನುತ್ತೀರಿ ಎನ್ನುವುದಕ್ಕಿಂತ ಮೊದಲು ಯಾವಾಗ ತಿನ್ನುತ್ತೀರಿ ಎನ್ನುವುದೂ ಮುಖ್ಯ.ಯಾಕೆಂದರೆ ಊಟದ ಸಮಯಕ್ಕಿಂತ ಮೊದಲು ಅಥವಾ ತಡವಾಗಿ ತಿನ್ನುವುದರಿಂದ ದೇಹಕ್ಕೆ ಬಹಳ ಪ್ರಯೋಜನವಾಗದು. ಹಸಿವೆಯಾದಾಗಲೇ ತಿನ್ನುವುದರಿಂದ ಜೀರ್ಣಶಕ್ತಿ ಸರಿಯಾಗಿರಲು ಸಾಧ್ಯ. ಹಸಿವೆಯಿಲ್ಲದೇ ಇದ್ದಾಗ ಸುಲಭವಾಗಿ ಜೀರ್ಣವಾಗುವಂಥ ಆಹಾರವನ್ನು ತಿಂದರೂ ಪ್ರಯೋಜನ ಸಿಗದು.

Advertisement

ತರಕಾರಿ ಮನೆಯಲ್ಲೇ ಬೆಳೆಯಿರಿ
ಮನೆಗೆ ಬೇಕಾದ ತರಕಾರಿ, ಹಣ್ಣುಗಳನ್ನು ಸಾಧ್ಯವಾದಷ್ಟು ಮನೆಯಲ್ಲೇ ಬೆಳೆಯುವುದು ಉತ್ತಮ. ಇದನ್ನು ಇಷ್ಟಪಟ್ಟು ಮಾಡಬೇಕೇ ಹೊರತು ಕಷ್ಟಪಟ್ಟಲ್ಲ. ಸಣ್ಣ ಕೈ ತೋಟ ಮಾಡುವುದರಿಂದ ದೇಹಕ್ಕೆ ವ್ಯಾಯಾಮವಷ್ಟೇ ಸಿಗುವುದಿಲ್ಲ. ಸತ್ವಯುತವಾದ ಆರೋಗ್ಯಕರ ಸೊಪ್ಪು, ತರಕಾರಿಗಳೂ ಪಡೆಯಬಹುದು. ಇದರಿಂದ ಮಾನಸಿಕ ಒತ್ತಡದ ನಿಯಂತ್ರಣವೂ ಸಾಧ್ಯ. ಇದು ಇಂದಿನ ಜೀವನ ಶೈಲಿಗೆ ಅತೀ ಅಗತ್ಯ.

ಆಹಾರ ಸೇವನೆ ಕ್ರಮ
ಟೇಬಲ್‌ ಮೇಲೆ ಕುಳಿತು ಉಣ್ಣುವು ದನ್ನು ತ್ಯಜಿಸುವುದು ಸೂಕ್ತ. ನೆಲದ ಮೇಲೆ ಕುಳಿತು ಊಟ ಮಾಡುವುದೇ ಉತ್ತಮ. ಜತೆಗೆ ಆಹಾರ ಕಡೆ ನಮ್ಮ ಗಮನವಿರಬೇಕು. ಊಟ ಮಾಡುವ ತಟ್ಟೆ ಯಾವತ್ತೂ ನಮ್ಮ ಕಾಲು ಗಂಟಿನ ಕೆಳಗೆ ಇರಬೇಕು. ಇದರಿಂದ ನಾವು ಪದೇಪದೇ ಬಗ್ಗಿ ಊಟ ಮಾಡಬೇಕಾಗುತ್ತದೆ. ತೇಗು ಬರುವುದೆಂದರೆ ಹೊಟ್ಟೆ ತುಂಬಿತು ಎನ್ನುವುದರ ಸೂಚನೆ. ಹಾಗಾಗಿ ಆ ಸೂಚನೆ ಬರುವವರೆಗೆ ಊಟ ಮಾಡಿದರೆ ಸಾಕು. ಇನ್ನು ವೇಗವಾಗಿ ತಿನ್ನುವುದು ಮಾತ್ರವಲ್ಲ, ಬಹಳ ನಿಧಾನವಾಗಿ ಊಟ ಮಾಡುವುದೂ ಸರಿಯಲ್ಲ. ಈ ಎರಡೂ ಕ್ರಮ ಜೀರ್ಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸಿಹಿ, ಖಾರ, ಕರಿದ ತಿಂಡಿಗಳನ್ನು ಹೆಚ್ಚು ತಿನ್ನುವ ಅಭ್ಯಾಸ ಉಳ್ಳವರು ಹಂತಹಂತವಾಗಿ ನಿಯಂತ್ರಿಸಿದರೆ ದೇಹ ಮತ್ತು ಮನಸ್ಸಿನ ಮಾತು ಕೇಳಿದಂತಾಗುತ್ತದೆ.

ಮನಸಿನ ಮಾತು ಕೇಳಿ
ದೇಹದ ತೂಕ ಹೆಚ್ಚಾದರೆ ಮೈ ಭಾರ ಎನಿಸುವ ಅನುಭವ ಮೊದಲು ನಮ್ಮ ಮನಸ್ಸಿಗಾಗಬೇಕು. ಇನ್ನೊಬ್ಬರು ಹೇಳುತ್ತಾರೆ ಎಂದುಕೊಂಡು ಆಹಾರದಲ್ಲಿ ವ್ಯತ್ಯಯ ಮಾಡಿಕೊಳ್ಳಬೇಡಿ. ದೇಹ ತೂಕ ನೂರು ಕೆ.ಜಿ. ಇದ್ದೂ ನಾವು ಲವಲವಿಕೆಯಿಂದ ಇದ್ದರೆ ನಾವು ಆರೋಗ್ಯವಾಗಿದ್ದೇವೆ, ನಮ್ಮ ಆಹಾರ ಕ್ರಮ ಸರಿಯಾಗಿ ಇದೆ ಎಂದೇ ಭಾವಿಸಬೇಕು. ಹೀಗಾಗಿ ಆಹಾರದಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ.

– ಡಾ| ಶ್ರೀನಿಧಿ ಧನ್ಯ ಬಿ.ಎಸ್‌.
ಸಹಾಯಕ ಪ್ರಾಧ್ಯಾಪಕರು, ಸ್ವಸ್ತವೃತ್ತ ವಿಭಾಗ, ಎಸ್‌ಡಿಎಂ ಆಯುರ್ವೇದಿಕ್‌ ಕಾಲೇಜು, ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next