Advertisement

ರಾಜ್ಯದಲ್ಲಿ 40 ಡಿಗ್ರಿ ಸೆ. ದಾಟಿದ ಉಷ್ಣತೆ

02:30 AM Mar 27, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಪಮಾನ 40 ಡಿ.ಸೆ. ದಾಟಿದೆ. ರವಿವಾರ ಕಲಬುರಗಿಯಲ್ಲಿ 40.7 ಡಿ.ಸೆ. ಉಷ್ಣತೆ ದಾಖಲಾಗಿದ್ದು, ಇದು ರಾಜ್ಯದಲ್ಲಿಯೇ ಗರಿಷ್ಠವಾಗಿದೆ. ಶನಿವಾರ ಇಲ್ಲಿ 40.3 ಡಿ.ಸೆ. ದಾಖಲಾಗಿತ್ತು. ತಾಪಮಾನ ಇನ್ನೂ ಕೆಲವು ದಿನ ಏರುಗತಿಯಲ್ಲಿಯೇ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಬೆಂಗಳೂರು ಹಾಗೂ ಹಾಸನದಲ್ಲಿ ಕ್ರಮವಾಗಿ 37.2 ಡಿಗ್ರಿ ಸೆಲ್ಸಿಯಸ್‌ ಹಾಗೂ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಇದು ಕಳೆದೆರಡು ದಶಕಗಳಲ್ಲಿ ಮಾರ್ಚ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ. ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ ಮತ್ತು ಹಾಸನದಲ್ಲಿ 4 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಉಷ್ಣಾಂಶ ದಾಖಲಾಗಿದೆ. 1996ರ ಮಾ. 29 ಹಾಗೂ 30ರಂದು ಬೆಂಗಳೂರಿನಲ್ಲಿ 37.3 ಡಿಗ್ರಿ ಸೆಲ್ಸಿಯಸ್‌ ಹಾಗೂ ಹಾಸನದಲ್ಲಿ 37.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಇದು ಮಾರ್ಚ್‌ ತಿಂಗಳ ಸಾರ್ವಕಾಲಿಕ ದಾಖಲೆಯಾಗಿದೆ. ತಿಂಗಳಾಂತ್ಯಕ್ಕೆ ಇನ್ನೂ ಐದು ದಿನಗಳು ಬಾಕಿ ಇದ್ದು, ಬಿಸಿಲೂ ಏರುಗತಿಯಲ್ಲಿ ಸಾಗಿದ್ದರಿಂದ ಈ ದಾಖಲೆ ಸರಿಗಟ್ಟುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ, ಕಾರ್ಖಾನೆಗಳು ಉಗುಳುವ ಹೊಗೆ, ಕಾಂಕ್ರೀಟ್‌ ಕಾಡು ಮತ್ತಿತರ ಕಾರಣಗಳು ಹಾಗೂ ಮಳೆ ಬಿದ್ದ ಅವಧಿಯಲ್ಲಿ ಸಾಕಷ್ಟು ಅಂತರ ಇವೆಲ್ಲದರಿಂದ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದ ಉಷ್ಣಾಂಶ ಕಂಡುಬರುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರದ ಕಡೆಯಿಂದ ಗಾಳಿ ಬೀಸಬೇಕಿತ್ತು. ಆದರೆ, ಗಾಳಿ ಬರುತ್ತಿಲ್ಲ. ಬಂದರೂ ನಗರದ ಒಳಗೆ ಬರಲು ಕಟ್ಟಡಗಳು, ಹೊಗೆ ತಡೆಯೊಡ್ಡುತ್ತಿವೆ. ಈ ಮಧ್ಯೆ ಬೇಸಗೆ ಕಾಲವಾಗಿದ್ದರಿಂದ ಬಿಸಿಲಿನ ಧಗೆ ಹೆಚ್ಚುತ್ತಿದೆ. ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚು – ಕಡಿಮೆ ಇದ್ದರೆ ಅಷ್ಟೇನೂ ಸಮಸ್ಯಾತ್ಮಕವಲ್ಲ. ಆದರೆ, ಬೆಂಗಳೂರು ಸಹಿತ ರಾಜ್ಯದಲ್ಲಿ ಉಷ್ಣಾಂಶ ವಿಪರೀತಕ್ಕೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್‌.ಎಂ. ಮೆಟ್ರಿ ಹೇಳುತ್ತಾರೆ. ಉಷ್ಣಾಂಶ ಹೆಚ್ಚು ದಾಖಲಾಗುವುದಕ್ಕೆ ಬರೀ ಬಿಸಿಲು ಮಾತ್ರ ಪರಿಗಣನೆಗೆ ಬರುವುದಿಲ್ಲ. ಯಾವ ಭಾಗದಲ್ಲಿ ಮೋಡಗಳಿವೆ? ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ? ವಾತಾವರಣದಲ್ಲಿ ತೇವಾಂಶ ಇಲ್ಲದಿರುವುದೂ ಮುಖ್ಯವಾಗುತ್ತದೆ. ಸಮುದ್ರದ ಕಡೆಯಿಂದ ಗಾಳಿ ಬೀಸಿದರೆ, ವಾತಾವರಣದಲ್ಲಿ ತೇವಾಂಶ ಇರುತ್ತದೆ. ಆದರೆ, ಆ ಸೂಚನೆಗಳು ಕಾಣಿಸುತ್ತಿಲ್ಲ ಎಂದು ಹವಾಮಾನ ಇಲಾಖೆಯ ನಿವೃತ್ತ ನಿರ್ದೇಶಕ ಪುಟ್ಟಣ್ಣ ಅಭಿಪ್ರಾಯಪಡುತ್ತಾರೆ.

ಕರಾವಳಿಯಲ್ಲಿಯೂ ಏರುತ್ತಿದೆ ತಾಪಮಾನ
ರಾಜ್ಯದ ಇತರೆಡೆಯಂತೆ ಕರಾವಳಿಯಲ್ಲಿಯೂ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಗಾಳಿ ಕಡಿಮೆ ಇರುವುದರಿಂದ ವಿಪರೀತ ಸೆಕೆ ಇದೆ. ರಾತ್ರಿ ವೇಳೆ ಮೋಡ ಕಾಣಿಸಿಕೊಂಡರೂ ಉಷ್ಣತೆಯಲ್ಲಿ ಹೆಚ್ಚು ಇಳಿಕೆಯಾಗುತ್ತಿಲ್ಲ. ರವಿವಾರ ಮಂಗಳೂರಿನಲ್ಲಿ 35.9 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3 ಡಿ.ಸೆ. ಹೆಚ್ಚಾಗಿದೆ. ಕನಿಷ್ಠ ತಾಪಮಾನ 25.2 ಡಿ.ಸೆ. ದಾಖಲಾಗಿದ್ದು, ಇದೂ ಸಾಮಾನ್ಯಕ್ಕಿಂತ 2 ಡಿ.ಸೆ. ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next