Advertisement

Heavy Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ

02:59 AM Aug 01, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಮಂಗಳವಾರಕ್ಕೆ ಹೋಲಿಸಿದರೆ ಮಳೆಯ ಬಿರುಸು ತುಸು ಕಡಿಮೆಯಿತ್ತು. ಆದರೆ ಬುಧವಾರ ಸಂಜೆ ಬಳಿಕ ಮಳೆ ತೀವ್ರತೆ ಪಡೆದುಕೊಂಡಿದೆ.

Advertisement

ಶಾಲೆಗಳಿಗೆ ರಜೆ
ಈ ಹಿನ್ನೆಲೆಯಲ್ಲಿ ಗುರುವಾರ ಅಂಗನವಾಡಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಬಂಟ್ವಾಳ ತಾಲೂಕಿನಾದ್ಯಂತ ಸೃಷ್ಟಿಯಾಗಿದ್ದ ಕೃತಕ ನೆರೆ, ನದಿಯಲ್ಲಿ ನೀರಿನ ಮಟ್ಟವೂ ಇಳಿಕೆ ಕಂಡಿದೆ. ಉಪ್ಪಿನಂಗಡಿಯಲ್ಲೂ ನದಿಯಲ್ಲಿ ನೀರಿನ ಮಟ್ಟ ತುಸು ತಗ್ಗಿದೆ. ಮಂಗಳೂರು ನಗರದಲ್ಲಿ ಸಂಜೆ ಬಳಿಕ ಮಳೆ ಬಿರುಸು ಪಡೆದಿದೆ. ತೋಟಬೆಂಗ್ರೆಯ
ಗೋಪಾಲ ಸುವರ್ಣರ ಮನೆ ಸಂಪೂರ್ಣ ಹಾನಿಗೀಡಾಗಿದೆ. ಆ.1ರ ಬೆಳಗ್ಗೆ 8.30ರ ವರೆಗೆ ರೆಡ್‌ ಅಲರ್ಟ್‌ ಬಳಿಕ ಜು.2ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಹೊಳೆಯಲ್ಲಿ ಶವ ಪತ್ತೆ:
ಜುಲೈ 29ರಂದು ನಾಪತ್ತೆಯಾಗಿದ್ದ ವಿಟ್ಲದ ರಾಮಚಂದ್ರ ಭಟ್‌ (74) ಅವರ ಮೃತದೇಹವು ಬೆರಿಪದವು ಹೊಳೆಯಲ್ಲಿ ಜು. 31ರಂದು ಪತ್ತೆಯಾಗಿದೆ.

ಎಡಕುಮೇರಿಯಲ್ಲಿ ಮುಂದುವರಿದ ಕಾಮಗಾರಿ:
ಬೆಂಗಳೂರು ರೈಲು ಮಾರ್ಗದ ಮೇಲೆ ಮಣ್ಣು ಕುಸಿದಿರುವ ಎಡಕುಮೇರಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

Advertisement

ಆ.1ಕ್ಕೆ ದೋಣಿಗಳು ಕಡಲಿಗೆ ಇಳಿಯುವುದು ಅನುಮಾನ
ಮಂಗಳೂರು: ಮೀನುಗಾರಿಕೆಗೆ ಸರಕಾರ ವಿಧಿಸಿದ್ದ 61 ದಿನಗಳ ನಿಷೇಧ ಜು. 31ಕ್ಕೆ ಮುಕ್ತಾಯಗೊಂಡರೂ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆ.1ರಿಂದ ದೋಣಿಗಳು ಸಮುದ್ರಕ್ಕಿಳಿಯುವುದು ಅನುಮಾನವಾಗಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ.1ರಂದು ಬೆಳಗ್ಗಿನ ವರೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಭಸವಾಗಿ ಗಾಳಿ ಕೂಡ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ಬೋಟ್‌ಗಳು ಸಮುದ್ರಕ್ಕೆ ಇಳಿಯುವುದು ಅನುಮಾನ.

ಆದರೂ ಮೀನುಗಾರಿಕೆಗೆ ಸರ್ವ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಿದ್ದಾರೆೆ. ಐಸ್‌ಪ್ಲಾಂಟ್‌ಗಳು ಕಾರ್ಯಾರಂಭಿಸಿದೆ. ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ. ದೋಣಿಗಳ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ ರಾಜ್ಯಗಳಿಗೆ ಸೇರಿದ್ದು, ಮೀನುಗಾರಿಕೆಗೆಂದು ಊರಿನಿಂದ ಮರಳಿದ್ದಾರೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ನೆರೆ ನೀರು
ಬೈಕಂಪಾಡಿ: ಇಲ್ಲಿನ ಕೈಗಾರಿಕಾ ಪ್ರದೇಶದ ಮುಂಗಾರು, ಒಡಿಸಿ ರಸ್ತೆ ಸಹಿತ ವಿವಿಧೆಡೆ ಬುಧವಾರ ಸಂಜೆಯ ವೇಳೆ ದಿಢೀರ್‌ ನೆರೆ ನೀರು ಏರಿಕೆಯಾಗಿ ಕಂಪೆನಿಗಳಿಗೆ ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ.

ಇಲ್ಲಿನ ಕುಡುಂಬೂರು ಹೊಳೆ ಹಾಗೂ ವಿವಿಧೆಡೆಯ ರಾಜ ಕಾಲುವೆಗಳು ಮಣ್ಣು ತುಂಬಿ ಒತ್ತುವರಿ ಇಲ್ಲವೇ ಕಟ್ಟಡ ಮತ್ತಿತರ ತ್ಯಾಜ್ಯ ತುಂಬಿದ ಪರಿಣಾಮ ಮಳೆ ನೀರು ಸರಾಗ ಹರಿವಿಗೆ ತಡೆಯಾಗಿದೆ. ದ್ವಿಚಕ್ರ ವಾಹನ ಅರ್ಧ ಮುಳುಗುವಷ್ಟು ನೀರು ಏರಿಕೆಯಾಗಿದ್ದರಿಂದ ಕಾರ್ಮಿಕರು, ಜೋಕಟ್ಟೆ ಗ್ರಾಮಸ್ಥರು ಪರ್ಯಾಯ ರಸ್ತೆಯನ್ನು ಅವಲಂಬಿಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next