Advertisement

ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್‌ ಚಾಳಿ!

10:35 PM Oct 21, 2020 | mahesh |

ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದು ಜಾತಿ ರಾಜಕಾರಣ, ವಿಶ್ವಾಸದ್ರೋಹ, ಒಳ ಒಪ್ಪಂದದ ಆರೋಪ-ಪ್ರತ್ಯಾರೋಪಗಳ ವಾಕ್ಸಮರ ಜೋರಾಗಿಯೇ ನಡೆದಿದೆ. ಈ ನಡುವೆ ಮೈತ್ರಿ ಸರಕಾರ ಪತನ ಎಂಬ ಮುಗಿದು ಹೋದ ಅಧ್ಯಾಯದ ಅಸ್ತ್ರ’ ಬಿಟ್ಟು ರಾಜಕೀಯ ಲಾಭದ ತಂತ್ರಗಾರಿಕೆಯೂ ನಡೆಯುತ್ತಿದೆ. ಎಲ್ಲ ವಿದ್ಯಮಾನಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರೊಂದಿಗೆ ನೇರಾ-ನೇರಾ ಮಾತು.

Advertisement

 ಒಂದೆಡೆ ನೀವು ಬಿಜೆಪಿಯನ್ನು ಹೆಚ್ಚು ಟೀಕಿಸುತ್ತಿಲ್ಲ; ಇನ್ನೊಂದೆಡೆ ಬಿಜೆಪಿ ನಾಯಕರು ನಿಮ್ಮ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಏನಿದರ ಮರ್ಮ? ಇದೇನಾ ಒಳ ಒಪ್ಪಂದ?
ಒಳ ಒಪ್ಪಂದ ಆರೋಪ ಕಾಂಗ್ರೆಸ್‌ನ ಕುತಂತ್ರ. ಮತ ವಿಭಜನೆಗಾಗಿ ಇಂತಹ ಸುಳ್ಳು ಹಬ್ಬಿಸಲಾಗುತ್ತಿದೆ. ಜೆಡಿಎಸ್‌ ಪಕ್ಷವನ್ನು ಯಾರಿಗೂ ಅಡ ಇಟ್ಟಿಲ್ಲ. ನಾವೂ ಉಪ ಚುನಾವಣೆಯನ್ನು ತುಂಬಾ ಸೀರಿಯಸ್ಸಾಗಿಯೇ ತೆಗೆದು ಕೊಂಡಿದ್ದೇವೆ. ನಾನು ಬಿಜೆಪಿ ಪರ ಸಾಫ್ಟ್ ಇಲ್ಲ. ನನಗೆ ಯಾರ ಸಿಂಪಥಿಯೂ ಅಗತ್ಯವಿಲ್ಲ. ಇಬ್ಬರನ್ನೂ ನೋಡಿದ್ದೇನೆ.

 ಯಡಿಯೂರಪ್ಪ ಹಾಗೂ ನಿಮ್ಮ ನಡುವೆ ಗುಪ್ತ್ ಗುಪ್ತ್ ಸಂಬಂಧ ಇದೆ… ಏನಂತೀರಿ?
ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ. ನನ್ನ ಕ್ಷೇತ್ರ ಹಾಗೂ ನನ್ನ ಪಕ್ಷದ ಶಾಸಕರ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಅವರನ್ನು ಭೇಟಿಯಾಗಿದ್ದೇನೆ. ಅದಕ್ಕೆ ಅಪಾರ್ಥ ಬೇಕಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಅವರ ಬಗ್ಗೆ ಸಾಫ್ಟ್ ಆಗಿಲ್ಲ, ಅದರಿಂದ ನನಗೆ ಆಗಬೇಕಾಗಿದ್ದು ಏನೂ ಇಲ್ಲ.

 ಯಡಿಯೂರಪ್ಪ ಸರಕಾರಕ್ಕೆ ಆಪತ್ತು ಎದುರಾದ್ರೆ ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ಲುತ್ತಾರಾ?
ನನ್ನ ಪ್ರಕಾರ ಅಂತಹ ಪರಿಸ್ಥಿತಿ ಇಲ್ಲ, ಉದ್ಭ ವಿಸುವುದೂ ಇಲ್ಲ. ಒಂದೊಮ್ಮೆ ರಾಜಕೀಯ ಅಸ್ಥಿರತೆ ಎದುರಾದರೆ ಆಗ ನೋಡೋಣ…

 ಮತ್ತೆ ಯಾಕೆ ನಿಮಗೆ ಬಿಜೆಪಿಗಿಂತ ಕಾಂಗ್ರೆಸ್‌ ಮೇಲೆ ಹೆಚ್ಚು ಕೋಪ?
ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್‌ನ ಚಾಳಿ. ಸೆಕ್ಯುಲರ್‌ ಪೋರ್ಸ್‌ ಎನ್ನುವುದು ದೇವೇಗೌಡರ ವೀಕ್‌ನೆಸ್‌. ಅದನ್ನು ದುರ್ಬಳಕೆ ಮಾಡಿಕೊಂಡಿದ್ದು ಕಾಂಗ್ರೆಸ್‌. 2004ರಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಮಾಡಿದೆವು. ಆಗ, ಸಿದ್ದರಾಮಯ್ಯ ಅವರಿಗೆ ಮೈಂಡ್‌ ವಾಷ್‌ ಮಾಡಿ ನಾವು ನಿಮ್ಮನ್ನು ಮುಖ್ಯ ಮಂತ್ರಿಯಾಗಿ ಮಾಡಲು ಸಿದ್ದರಿದ್ದೆವು, ಜೆಡಿಎಸ್‌ ಒಪ್ಪಲಿಲ್ಲ ಎಂದು ಹೇಳಿ ಪಕ್ಷ ಮುಗಿಸಲು ಹೊರಟಿದ್ದೇ ಕಾಂಗ್ರೆಸ್‌. 2018 ರಲ್ಲಿಯೂ ನಾವು ಬೇಡ ಎಂದರೂ ಸಿಎಂ ಸ್ಥಾನ ಕೊಟ್ಟು ಹಂತ ಹಂತವಾಗಿ ಪಕ್ಷ ಮುಗಿ ಸಲು ಯತ್ನಿಸಿ ಸರಕಾರವನ್ನೂ ಪತನ ಗೊಳಿಸಿತು.

Advertisement

 ಸರಿ, ಮೈತ್ರಿ ಸರ್ಕಾರ ಪತನವಾಗಿ ವರ್ಷವೇ ಆಯಿತು. ಮತ್ತೆ ಈಗೇಕೆ ಆ ಮಾತು?
ಕಾರ ಪತನಕ್ಕೆ ಕಾಂಗ್ರೆಸ್‌ ನಾಯಕರು ಕಾರಣ ಎಂದು ನಾನೇ ಹೇಳಿದ್ದೆ. ಇದೀಗ ಬಿಜೆಪಿ ನಾಯ ಕರು ಹೇಳುತ್ತಿದ್ದಾರೆ. ಒಂದು ವೇಳೆ, ಬಿಜೆಪಿ ಹಾಗೆ ಹೇಳಿ ನನ್ನ ಪರ ಸಿಂಪಥಿ ತೋರಿಸಿ ಒಕ್ಕಲಿಗ ಮತ ಪಡೆಯುವ ತಂತ್ರ ಹೂಡಿದರೆ ಅದು ಅಸಾಧ್ಯ. ಸಮು ದಾಯಕ್ಕೆ ಕುಮಾರ ಸ್ವಾಮಿ ಎಂದ ರೇನು? ಡಿಕೆಶಿ ಎಂದ ರೇನು? ಅಶ್ವತ್ಥ ನಾರಾಯಣ್‌ ಎಂದರೇನು ಎಂಬುದು ಗೊತ್ತಿದೆ.

 ಡಿ ಕೆ ಶಿವಕುಮಾರ್‌ ಬಗ್ಗೆ ಮೀರ್‌ ಸಾದಿಕ್‌ ಪದ ಬಳಕೆ ಆಗುತ್ತಿದ್ದರೂ ನೀವೇಕೆ ಮೌನ?
ನನ್ನ ಸರಕಾರದ ಪತನದ ಕೌಂಟ್‌ ಡೌನ್‌ ಶುರು ವಾಗಿದ್ದೇ ಬೆಳಗಾವಿಯಿಂದ. ರಮೇಶ್‌ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್‌ ನಡುವಿನ ಸಮಸ್ಯೆ ಪ್ರಾರಂಭದಲ್ಲೇ ಸರಿಪಡಿಸಿದ್ದರೆ ಮೈತ್ರಿ ಸರಕಾರ ಪತನವಾಗುತ್ತಿರಲಿಲ್ಲ. ರಮೇಶ್‌ ಜಾರಕಿಹೊಳಿ ಅವರನ್ನು ಎತ್ತಿ ಕಟ್ಟಿದ್ದು ಯಾರು? ಆತ ಎರಡು ಮೂರು ಜನ ಇಟ್ಟುಕೊಂಡು ಸರಕಾರ ಬೀಳಿಸ್ತೀನಿ ಅಂತ ಡೆಲ್ಲಿ ಪಲ್ಲಿ ಸುತ್ತುತ್ತಿದ್ದರು. ಸರಿ ಪಡಿಸಬೇಕಾದವರು ಸುಮ್ಮನಿದ್ದರು…

 ಯಾರು ಸರಿಪಡಿಸಬೇಕಿತ್ತು?
ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ. ಆಗ ಅವರು ತುಟಿಪಿಟಿಕ್‌ ಅನ್ನಲಿಲ್ಲ. ಒಂದೆಡೆ ಎಸ್‌.ಟಿ.ಸೋಮಶೇಖರ್‌, ಸಿದ್ದರಾಮಯ್ಯ ಅವರೇ ನಮಗೆ ಮುಖ್ಯಮಂತ್ರಿ ಅಂದರು. ಮತ್ತೂಂದೆಡೆ ಡಾ| ಸುಧಾಕರ್‌, ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾವು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುವುದಿಲ್ಲ ಎಂದರು.

 ನೀವು ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಮೀಕ್ಷೆ ಬಿಡುಗಡೆಗೆ ಅಡ್ಡಿ ಪಡಿಸಿದ್ದರಂತೆ?
ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡ ದಿದ್ದರೆ ಅವರಿಗೆ ತಿಂದ ಅನ್ನ ಅರಗಲ್ಲ. ನಾನು ಅಡ್ಡಿಪಡಿಸಿದೆ ಅಂತ ಎದೆ ಮುಟ್ಟಿ ಹೇಳಲಿ. ಸುಮ್ಮನೆ ನನ್ನನ್ನು ಕೆಣಕುತ್ತಾರೆ. ಆದರೆ, ನಾನು ಎತ್ತಿದ ಪ್ರಶ್ನೆಗೆ ಉತ್ತರಿಸದೆ ಪಲಾಯನ ಮಾಡುತ್ತಾರೆ. ಅದೇನೋ ಕುಣಿಯಲಾರದವರು ಎಂದು ಹೇಳಿದ್ದಾರೆ. ನಾನು ಹೆಸರಿಗೆ ಮುಖ್ಯಮಂತ್ರಿಯಾಗಿ ಕಾಲ ಕಳೆದವನಲ್ಲ. ಸಿದ್ದರಾಮಯ್ಯ ಐದು ವರ್ಷದಲ್ಲಿ ಮಾಡಲಾಗದ್ದು ನಾನು ಹದಿನಾಲ್ಕು ತಿಂಗಳಲ್ಲಿ ಮಾಡಿದ್ದೇನೆ.

 ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ನಿಮಗೆ ನೆಲೆಯೇ ಇಲ್ವಂತೆ…
ಬಿಜೆಪಿಯ ಸಚಿವರೇ ಅಲ್ಲಿ ನಮಗೂ ಜೆಡಿಎಸ್‌ಗೆ ಹೋರಾಟ ಎನ್ನುತ್ತಿದ್ದಾರೆ. ಅಲ್ಲಿನ ಕಾಂಗ್ರೆಸ್‌ ನಾಯಕರು ಬಿಜೆಪಿ ಅಭ್ಯರ್ಥಿ ಹಿಂದೆ ಟೂರಿಂಗ್‌ ಟಾಕೀಸ್‌ನಂತೆ ಹೋಗಿಬಿಟ್ಟಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನವರು ಜೆಡಿಎಸ್‌ನವರ ಮನೆ ಬಾಗಿಲು ಕಾಯುತ್ತಾ ಕೈ ಕಾಲು ಹಿಡಿದು ಬನ್ನಿ ಬನ್ನಿ ಅಂತಿದ್ದಾರೆ. ನಮ್ಮ ಪಕ್ಷ ಕಳೆದ ಚುನಾವಣೆಯಲ್ಲಿ 60,000 ಮತಗಳನ್ನು ಪಡೆದಿತ್ತು. ಶಿರಾದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಹೋರಾಟ ಇದೆ.

 ರಾಜರಾಜೇಶ್ವರಿ ನಗರದಲ್ಲಿ ನಿರ್ಮಾಪಕರು ಸ್ಪರ್ಧಿಸಿದ್ದಾರೆ ಎನ್ನುವ ಕಾರಣಕ್ಕಾಗಿ ನಿಖೀಲ್‌ ಕುಮಾರಸ್ವಾಮಿ ಪ್ರಚಾರ ಮಾಡ್ತಿಲ್ವಾ?
ಈಗಷ್ಟೇ ಪ್ರಚಾರ ಆರಂಭವಾಗಿದೆ. ನಿಖೀಲ್‌ ಅವರು ಎರಡು ಮೂರು ದಿನ ರಾಜರಾಜೇಶ್ವರಿ ನಗರದಲ್ಲಿ ಖಂಡಿತವಾಗಿಯೂ ಪ್ರಚಾರ ಮಾಡಲಿ ದ್ದಾರೆ. ಸಿನಿಮಾ ಸ್ನೇಹ ಬೇರೆ ರಾಜಕಾರಣ ಬೇರೆ. ನನಗೂ ನಿಖೀಲ್‌ಗ‌ೂ ನಮ್ಮ ಪಕ್ಷ ಮುಖ್ಯ.

 ಶಿರಾದಲ್ಲೂ ಕೆ.ಆರ್‌.ಪೇಟೆ ಫ‌ಲಿತಾಂಶ ಮರುಕಳಿಸುತ್ತಾ?
ಕೆ.ಆರ್‌.ಪೇಟೆಯಲ್ಲಿ ನಾನು ಸ್ವಲ್ಪ ಮೈ ಮರೆತಿದ್ದರಿಂದ ವ್ಯತ್ಯಾಸವಾಯಿತು. ಶಿರಾದಲ್ಲಿ ಅದೇ ರೀತಿ ಗೆಲೆ¤àವೆ ಎಂದು ವಿಜೇಂದ್ರ ಎಂದುಕೊಂಡಿದ್ದರೆ ಕನಸು. ಅವರ ಆಟ ಅಲ್ಲಿ ನಡೆಯೊಲ್ಲ.

 ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜೆಡಿಎಸ್‌ ಬಹಿರಂಗವಾಗಿ ವಿರೋಧಿಸಿತು. ಆದರೆ, ವಿಧಾನಸಭೆ ಯಲ್ಲಿ ನೀವು ಮೌನ ವಹಿಸಿದ್ದು ಯಾಕೆ?
ನಾನು ಕಾಂಗ್ರೆಸ್‌ನಂತೆ ದ್ವಿಮುಖ ನೀತಿ ಅನುಸರಿಸಲಿಲ್ಲ. ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳೂ ಇವೆ. ನೋಡೋಣ ಸರ್ಕಾರದ ಕ್ರಮದಿಂದ ಜನರಿಗೆ ಎಷ್ಟು ಉಪಯೋಗವಾಗುತ್ತೋ. ಸಾಧಕ-ಬಾಧಕ ನೋಡಿ ತೊಂದರೆಯಾದರೆ ನಾನೇ ಸದನದಲ್ಲಿ ಹೋರಾಟ ಮಾಡ್ತೇನೆ.

ಜೆೆಡಿಎಸ್‌ಗೆ ಎಲ್ರೂ ಟೋಪಿ ಹಾಕಿ ಹೋಗ್ತಾರೆ ಅಂತೀರಲ್ಲ.. ಏನರ್ಥ?
ಅದೊಂದು ರೀತಿ ನಮ್ಮ ಪಕ್ಷಕ್ಕೆ ಶಾಪ. ಬರೀ ಕೈಲಿ ಬರ್ತಾರೆ, ನಮ್ಮ ಕಾರ್ಯಕರ್ತರ ದುಡಿಮೆಯಿಂದ ಶಕ್ತಿ ತುಂಬಿಸಿಕೊಳ್ತಾರೆ. ಆಮೇಲೆ ನಮಗೆ ಟೋಪಿ ಹಾಕಿ ಹೋಗ್ತಾರೆ. ನಾವೇ ಸಾಕಿದ ಗಿಳಿಗಳು ಹದ್ದುಗಳಾಗಿ ನಮ್ಮನ್ನೇ ಕುಕ್ಕುತ್ತಿವೆ. ಇದರಲ್ಲಿ ನಮ್ಮದೂ ತಪ್ಪು ಇದೆ. ಯಾಕೆಂದರೆ ನಾವು ಬ್ಲೆ„ಂಡ್‌ ಆಗಿ ಎಲ್ಲರನ್ನೂ ನಂಬುತ್ತೇವೆ.

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next