Advertisement

ಮೈತ್ರಿಯಾದರೂ ಎಚ್‌ಡಿಡಿ ಕುಟುಂಬಕ್ಕೆ ಬೆಂಬಲ ಇಲ್ಲ: ಎ.ಮಂಜು

06:50 AM Oct 23, 2018 | Team Udayavani |

ಹಾಸನ: “ನಾನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕುಟುಂಬದ ರಾಜಕೀಯ ವಿರೋಧಿ. ಮುಂದೆಯೂ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ಮುಂದುವರಿಸುವೆ’ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎ.ಮಂಜು ಸ್ಪಷ್ಟಪಡಿಸಿದರು.

Advertisement

ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ ಬೆನ್ನ ಹಿಂದೆಯೇ ಅರಕಲಗೂಡು ತಾಲೂಕು ಹನ್ಯಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರ ಕುಟುಂಬದವರ ವಿರುದ್ಧ ಹರಿಹಾಯ್ದರು.

ದೇವೇಗೌಡರ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾದರೂ ದೇವೇಗೌಡರ ಕುಟುಂಬಕ್ಕೆ ನನ್ನ ಬೆಂಬಲ ಇರುವುದಿಲ್ಲ. ದೇವೇಗೌಡರಾದರೂ ಸ್ಪರ್ಧಿಸಲಿ, ಪ್ರಜ್ವಲ್‌ ರೇವಣ್ಣ ಅವರಾದರೂ ಸ್ಪರ್ಧಿಸಲಿ. ದೇವೇಗೌಡರ ಕುಟುಂಬಕ್ಕೆ ನನ್ನ ಬೆಂಬಲ ಇರುವುದಿಲ್ಲ ಎಂದರು.

ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಉಳಿಸಬೇಕು. ನನ್ನ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ದೇವೇಗೌಡರ ಕುಟುಂಬದ ರಾಜಕಾರಣದ ವಿರುದ್ಧ ಹೋರಾಟ ಮಾಡುವೆ ಎಂದು ಹೇಳಿದರು.

ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಸುಳ್ಳು ಹೇಳಿಕೊಂಡು ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಂತಹವರನ್ನು ಜನರು ಕ್ಷೇತ್ರದಿಂದಲ್ಲ. ಜಿಲ್ಲೆಯಿಂದಲೇ ಹೊರಕ್ಕೆ ಕಳುಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಮ್ಮ ಕುಟುಂಬದ ಬಗ್ಗೆ  ಎ.ಮಂಜು ಏನು ಮಾತನಾಡಿದರೂ ನಮಗೆ ಒಳ್ಳೆಯದಾಗುತ್ತೆ. ಅವರ ಆರೋಪ, ಟೀಕೆಗಳೆಲ್ಲಾ ನಮಗೆ ಆಶೀರ್ವಾದ ಎಂದು ಭಾವಿಸುವೆ.
– ಎಚ್‌.ಡಿ.ರೇವಣ್ಣ , ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next