Advertisement

ನಮ್ಮ ಶಕ್ತಿ ಕುಂದಿಸಲು ಕೈ-ಕಮಲ ಮಧ್ಯೆ ಒಳಒಪ್ಪಂದ: 120 ಸ್ಥಾನ ಗೆಲ್ಲುವುದೊಂದೇ ಟಾರ್ಗೆಟ್‌

11:55 PM Mar 20, 2023 | Team Udayavani |

ಬೆಂಗಳೂರು: ಈ ಚುನಾವಣೆಯಲ್ಲಿ ಜೆಡಿಎಸ್‌ ಶಕ್ತಿ ಕುಂದಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಅಡ್ಜೆಸ್ಟ್‌ಮೆಂಟ್‌ ರಾಜಕಾರಣ ಮಾಡಿಕೊಂಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಗೆ ನೀಡಿದ “ನೇರಾ-ನೇರ ಸಂದರ್ಶನದಲ್ಲಿ ಈ ಎರಡೂ ಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ…

Advertisement

ಜೆಡಿಎಸ್‌ನಿಂದ ಶಾಸಕರು ಪಕ್ಷ ಬಿಟ್ಟು ಓಡುತ್ತಿದ್ದಾರಂತೆ ಹೌದಾ?
ಚುನಾವಣೆ ಫ‌ಲಿತಾಂಶ ಬರಲಿ. ಯಾರ್ಯಾರು ಎಲ್ಲೆಲ್ಲಿಗೆ ಓಡಲಿದ್ದಾರೆ ಗೊತ್ತಾಗುತ್ತದೆ. ಪಾಪ ಅಶೋಕ್‌ ಅವರು ಅಹಂಕಾರದಿಂದ ಭ್ರಮಾ ಲೋಕದಲ್ಲಿ ತೇಲಾಡುತ್ತಿದ್ದಾರೆ. ಎಲೆಕ್ಷನ್‌ ಬಳಿಕ ವಾಸ್ತವ ಗೊತ್ತಾಗಲಿದೆ. ಸದ್ಯಕ್ಕೆ ಅವರು ಗಿಣಿ ಭವಿಷ್ಯ ಹೇಳಿಕೊಂಡು ಕೂರಲಿ.

ಈಗಾಗಲೇ ನಿಮ್ಮಿಂದ ನಾಲ್ವರು ಶಾಸಕರು ಬೇರೆ ಪಕ್ಷಕ್ಕೆ ಹೋಗಿದ್ದಾರಲ್ಲಾ?
ನಮ್ಮಿಂದ ಯಾರೆಲ್ಲಾ ಹೋಗಿದ್ದಾರೋ ಆ ಕ್ಷೇತ್ರಗಳಲ್ಲೆಲ್ಲಾ ಮತ್ತೆ ಜೆಡಿಎಸ್‌ ಗೆಲ್ಲಲಿದೆ. ಕೋಲಾರದಿಂದ ಹಿಡಿದು ಅರಕಲಗೂಡು, ಗುಬ್ಬಿ, ಅರಸೀಕೆರೆವರೆಗೆ ಜೆಡಿಎಸ್‌ ಅಭ್ಯರ್ಥಿಗಳದೇ ಗೆಲುವು ಖಚಿತ.

ಜೆಡಿಎಸ್‌ಗೆ ಅಭ್ಯರ್ಥಿಗಳ ಕೊರತೆಯಿದೆ. ಹೀಗಾಗಿ, ಕಾಂಗ್ರೆಸ್‌-ಬಿಜೆಪಿ ಪಟ್ಟಿಗೆ ಕಾಯಲಾಗುತ್ತಿದೆಯಂತೆ?
ನಮಗೆ ಅಭ್ಯರ್ಥಿಗಳ ಕೊರತೆ ಇದ್ದಿದ್ದರೆ ಎಲ್ಲರಿಗಿಂತ ಮೊದಲು 90ಕ್ಕೂ ಹೆಚ್ಚು ಕ್ಷೇತ್ರಗಳ ಪಟ್ಟಿ ರಿಲೀಸ್‌ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಪಟ್ಟಿಗೂ ನಮಗೂ ಸಂಬಂಧವಿಲ್ಲ. 40 ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧವಾಗಿದೆ. ರೌಡಿ ಶೀಟರ್‌ಗಳು, ಜೂಜು ಕೇಂದ್ರ ನಡೆಸುವವರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿರುವವರು ಯಾರು? ಇವರ ಬಂಡವಾಳ ಗೊತ್ತಿಲ್ಲದೇ ಇರೋದಾ.

ಜೆಡಿಎಸ್‌ ಮೇಲೆ ಇರುವ ಮೊದಲ ಆರೋಪವೇ- ಕುಟುಂಬ ರಾಜಕಾರಣ…
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ನಿಯಮ ಇದೆಯಾ? ಬಿಜೆಪಿಯಲ್ಲಿ ಅಪ್ಪ-ಮಕ್ಕಳಿಗೆ ಟಿಕೆಟ್‌ ಕೊಟ್ಟಿಲ್ಲವಾ? ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಯಾವ ಪಕ್ಷದವರಿಗೂ ಇಲ್ಲ.

Advertisement

ಹಾಸನ ಟಿಕೆಟ್‌ ಬಗೆಹರಿಸಲಾರದಷ್ಟು ಜಟಿಲವಾ?
ಅದೇನೂ ದೊಡ್ಡ ವಿಚಾರವಲ್ಲ, ಎಲ್ಲ ಸರಿ ಹೋಗಲಿದೆ. ಆ ಒಂದು ಕ್ಷೇತ್ರದ ಬಗ್ಗೆ ದೊಡ್ಡದು ಮಾಡಿ ಬಿಂಬಿಸಲಾಯಿತು.ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಪಟ್ಟಿ ಆಚೆ ಬಂದರೆ ಯಾವ ರೀತಿ ಸ್ಫೋಟ ಆಗುತ್ತೆ ನೋಡ್ತಾ ಇರಿ. ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆಯೇ ತೀರ್ಮಾನವಾಗಲಿದೆ.

ನಂಜೇಗೌಡ-ಉರಿಗೌಡ ವಿಚಾರಕ್ಕೆ ನೀವ್ಯಾಕೆ ಸಿಟ್ಟಾಗಿದ್ದೀರಿ?
ಸಿಟ್ಟಿನ ಪ್ರಶ್ನೆಯಲ್ಲ. ಬಿಜೆಪಿಯವರು ಜೀವಂತ ಇರೋರ ಬಗ್ಗೆ ಬಿಟ್ಟು ಕಾಲ್ಪನಿಕ ವ್ಯಕ್ತಿಗಳ ಹೆಸರು ಮುಂದಿಟ್ಟು ಒಂದು ಕೋಮಿನ ವಿರುದ್ಧ ಮತ್ತೂಂದು ಕೋಮು ಎತ್ತಿಕಟ್ಟುವ ಹೀನ ಮಟ್ಟಕ್ಕೆ ಇಳಿದಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡುತ್ತಿ ದ್ದರೂ ನೋಡಿಕೊಂಡು ಸುಮ್ಮನಿರಬೇಕಾ ಬಿಜೆಪಿಯವರು ಏನೆಂದುಕೊಂಡಿದ್ದಾರೆ. ಇವರ ಆಟ ನನ್ನ ಬಳಿ ನಡೆಯಲ್ಲ.

ರಾಜ್ಯದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಬಂದರೆ ಜೆಡಿಎಸ್‌ ನಿಲುವು ಏನು?
ಈ ಪ್ರಶ್ನೆ ಪದೇ ಪದೇ ಕೇಳಲಾಗುತ್ತಿದೆ. ನಾವು ಎರಡೂ ಪಕ್ಷಗಳಿಂದ ದೂರ. ನನ್ನಷ್ಟು ಡೆಪ್ತ್ ಆಗಿ ರಾಜ್ಯದಲ್ಲಿ ಸ್ಟಡಿ ಮಾಡಿರುವವರು ಯಾರೂ ಇಲ್ಲ. ಜನರ ಪಲ್ಸ್‌ ಗೊತ್ತಿದೆ. ಅತಂತ್ರ ಪರಿಸ್ಥಿತಿ ಬರುವುದಿಲ್ಲ, ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ. ಜೆಡಿಎಸ್‌ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಟೀಕಿಸುವ ಎರಡೂ ಪಕ್ಷಗಳ ನಾಯಕರು ಜೆಡಿಎಸ್‌ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದರೆ ಅವರಿಗಿರುವ ಭಯ ಗೊತ್ತಾಗು ತ್ತದೆ. ಹೀಗಾಗಿ ಟಾರ್ಗೆಟ್‌ ಮಾಡುತ್ತಿವೆ. ಎರಡೂ ಪಕ್ಷಗಳು ಅಡೆj ಸ್ಟ್‌ ಮೆಂಟ್‌ ಮಾಡಿಕೊಂಡು ಜೆಡಿಎಸ್‌ ಶಕ್ತಿ ಕುಂದಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಗೆದ್ದೇ ಬಿಟ್ಟೆವು ಎಂದು ಹೇಳುವವರು ಕುಕ್ಕರ್‌, ಸೀರೆ ಹಂಚಿಕೊಂಡು ಹೋಗುತ್ತಿದ್ದಾರೆ. ಇದು ಇವರ ಸ್ಥಿತಿ.

ಡಬಲ್‌ ಎಂಜಿನ್‌ ಸರಕಾರ ಇದ್ದರೆ ಅಭಿವೃದ್ಧಿ ಅಂತಾ ಬಿಜೆಪಿ ನಾಯಕರು ಹೇಳುತ್ತಾರಲ್ಲಾ?
ಡಬಲ್‌ ಎಂಜಿನ್‌ ಸರಕಾರದಿಂದ ಲೂಟಿ ಬಿಟ್ಟರೆ ಬೇರೇನೂ ಆಗಿಲ್ಲ. ಈ ಸರಕಾರದ ಹಗರಣ, ಭ್ರಷ್ಟಾಚಾರ ಒಂದಾ, ಎರಡಾ? ಕೇಂದ್ರದ ಬಿಜೆಪಿ ನಾಯಕರಿಗೂ ನಾವು ಎಷ್ಟು ಬಾರಿ ಟೂರ್‌ ಹೊಡೆದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಗೊತ್ತಿದೆ. ಆದರೂ ರಾಜ್ಯದ ನಾಯಕರ ಮುಂದಿಟ್ಟು ಕೊಂಡು ಹೋದರೆ ಮತ್ತೂ ಹೀನಾಯ ಪರಿಸ್ಥಿತಿ ಉಂಟಾಗಬ ಹುದು ಎಂದು ಮುಖ ಉಳಿಸಿಕೊಳ್ಳಲು ಬರುತ್ತಿದ್ದಾರೆ ಅಷ್ಟೇ.

ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ನೇರ ಸ್ಪರ್ಧಿಯೋ, ಬಿಜೆಪಿಯೋ?
ನಮಗೆ ರಾಜಕೀಯವಾಗಿ ಎರಡೂ ಪಕ್ಷಗಳು ಎದುರಾಗಳಿಗಳೇ. ಕೆಲವು ಕಡೆ ಕಾಂಗ್ರೆಸ್‌ ಹಾಗೂ ಮತ್ತೆ ಕೆಲವು ಕಡೆ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದ 78 ಕ್ಷೇತ್ರಗಳಲ್ಲಿ 40, ಬಿಜೆಪಿ ಗೆದ್ದಿದ್ದ 104 ಕ್ಷೇತ್ರಗಳಲ್ಲಿ 25 ಕಡೆ ಜೆಡಿಎಸ್‌ ಈ ಬಾರಿ ಗೆಲ್ಲಲಿದೆ ನೋಡ್ತಾ ಇರಿ. ಒಟ್ಟಾರೆ ನಾವು 120 ಸ್ಥಾನ ಗೆಲ್ಲುವ ಭರವಸೆ ಇದೆ. ಸುಮ್ಮನೆ ಹೇಳುತ್ತಿಲ್ಲ, ಜನರ ನಾಡಿಮಿಡಿತ ಅರಿತಿದ್ದೇನೆ, ಪಂಚರತ್ನ ಯೋಜನೆ ಜನರ ಮುಂದಿಟ್ಟಿದ್ದೇನೆ. ಭ್ರಷ್ಟ ಬಿಜೆಪಿ ಸರಕಾರದ ಮೇಲೆ ಸಿಟ್ಟಿದೆ. ಅವರು 60 ಸೀಟು ದಾಟಲ್ಲ. ಐದು ವರ್ಷ ಸರಕಾರ ನಡೆಸಿ ಕಾಂಗ್ರೆಸಿನವರು 130 ಸ್ಥಾನ ಇದ್ದವರು 79 ಕ್ಕೆ ಇಳಿದರು. ಇದೀಗ 150 ಗೆಲ್ಲುತ್ತೇವೆ ಅಂತಾರೆ, ಅದು ಸಾಧ್ಯವೇ. ಸತ್ಯ ಏನೂ ಎಂದು ಅವರಿಗೂ ಗೊತ್ತಿದೆ.

ಪಂಚರತ್ನ ಹಾಸನದಲ್ಲೇ ಪಂಚರ್‌ ಆಗಿದೆ ಎಂದು ಕಟೀಲ್‌ ಹೇಳಿದ್ದಾರಲ್ಲಾ?
ಅವರು ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಲು ಅನರ್ಹ. ಪಂಚರತ್ನ ಯಾತ್ರೆಗೆ ಜನಸ್ಪಂದನೆ ನೋಡಿ ಅವರ ತಲೆಕೆಟ್ಟಿದೆ. ಇವರು ನರೇಂದ್ರ ಮೋದಿ – ಅಮಿತ್‌ ಶಾ ಸಮಾವೇಶಕ್ಕೆ ದುಡ್ಡು ಕೊಟ್ಟು ಜನ ಕರೆದುಕೊಂಡು ಬರುತ್ತಿದ್ದಾರೆ. ಇವರ ವಿಜಯಸಂಕಲ್ಪ ಯಾತ್ರೆ ರಥದ ಚಕ್ರ ಎಲ್ಲೆಲ್ಲಿ ಕಳಚಿ ಬಿದ್ದಿದೆ ಗೊತ್ತಿದೆ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next