Advertisement

Monsoon Session ಇಂದಿನಿಂದ ಸದನ ಕದನ: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದು ಆರಂಭ

01:19 AM Jul 15, 2024 | Team Udayavani |

ಬೆಂಗಳೂರು: ಸೋಮವಾರ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಜಂಟಿ ಸಮರಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳು ಸಿದ್ಧವಾಗಿವೆ.

Advertisement

ಈಗಾಗಲೇ ಸರಕಾರದ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ಪಟ್ಟಿಯನ್ನು ಇರಿಸಿಕೊಂಡು ಚಾರ್ಜ್‌ ಶೀಟ್‌ ಹಾಕಲು ಸರ್ವ ತಯಾರಿಯನ್ನೂ ಮಾಡಿ ಕೊಂಡಿರುವ ವಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿರುವ ಎಲ್ಲ ರಣ ತಂತ್ರಗಳನ್ನು ಹೆಣೆದಿವೆ. ಇದಕ್ಕೆ ತಿರುಗೇಟು ನೀಡುವುದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ತಾಲೀಮು ನಡೆಸಿದ್ದು, ವಿಪಕ್ಷಗಳಿಂದ ತೂರಿ ಬರಬಹುದಾದ ಅಸ್ತ್ರಗಳೇನು, ಅದಕ್ಕೆ ಯಾವ ಪ್ರತ್ಯಸ್ತ್ರವನ್ನು ಯಾರು ಹೂಡಬೇಕು, ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಸಚಿವರ ತಂಡವನ್ನು ಸಿದ್ಧಪಡಿಸಿದ್ದಾರೆ.

ಸರಕಾರದ ವಿರುದ್ಧ 6 ಪ್ರಮುಖ ಅಸ್ತ್ರಗಳನ್ನು ಪ್ರಯೋಗ ಮಾಡುವುದಕ್ಕೆ ಮಿತ್ರಪಕ್ಷಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಮುಡಾ ಅಕ್ರಮ ನಿವೇಶನ ಹಂಚಿಕೆ ವಿವಾದ ಸಿಎಂ ಸಿದ್ದರಾಮಯ್ಯ ಅವರ ಸುತ್ತಲೇ ತಿರುಗುತ್ತಿರುವುದರಿಂದ ಸದನದಲ್ಲಿ ಭಾರೀ ಗದ್ದಲ ನಡೆಯುವ ಸಾಧ್ಯತೆ ಇದೆ. ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವ ಹಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಬಿಜೆಪಿಗೆ ಮತ್ತೂಂದು ಅಸ್ತ್ರವನ್ನು ನೀಡಿದೆ. ಅಧಿ ವೇಶನದ ಮೊದಲ ದಿನದಿಂದಲೇ ಸಮರ ಪ್ರಾರಂಭಿಸುವುದಕ್ಕೆ ವಿಪಕ್ಷಗಳು ಮುಂದಾ ಗಿರುವುದು ಸರಕಾರಕ್ಕೆ ತಲೆಬಿಸಿ ಸೃಷ್ಟಿಸಿದೆ.

ನೇಹಾ ಹತ್ಯೆ ಪ್ರಕರಣದಿಂದ ಹಿಡಿದು ಕಾನೂನು ಸುವ್ಯವಸ್ಥೆ ವೈಫ‌ಲ್ಯ, ಗ್ಯಾರಂಟಿ ಯೋಜನೆಗಳ ಹಣ ತಲುಪದೆ ಇರುವುದು, ಅಭಿವೃದ್ಧಿಗೆ ಹಿನ್ನಡೆ ಆಗಿರುವುದರ ಸಹಿತ ಹತ್ತಾರು ವಿಷಯಗಳನ್ನು ವಿಪಕ್ಷಗಳು ಕೈಯಲ್ಲಿಟ್ಟುಕೊಂಡಿವೆ.

ಶಾಸಕರ ಪಡೆ: ಸರಕಾರದ ವಿರುದ್ಧ ಜಂಟಿ ಸಮರಕ್ಕಾಗಿ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಶಾಸಕರ ತಂಡವನ್ನು ರಚಿಸಲಾಗಿದ್ದು, ಸರಕಾರದ ವಿರುದ್ಧ ಮುಗಿ ಬೀಳುವುದಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿದೆ.

Advertisement

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌, ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಬೈರತಿ ಬಸವರಾಜ್‌, ಉಪನಾಯಕ ಅರವಿಂದ ಬೆಲ್ಲದ್‌, ಸಚೇತಕ ದೊಡ್ಡನಗೌಡ ಎಚ್‌. ಪಾಟೀಲ್‌, ಶಾಸಕ ವೇದವ್ಯಾಸ್‌ ಕಾಮತ್‌, ವಿಧಾನ ಪರಿಷತ್ತಿನಲ್ಲಿ ಎನ್‌. ರವಿಕುಮಾರ್‌, ಭಾರತಿ ಶೆಟ್ಟಿ, ಛಲವಾದಿ ನಾರಾಯಣಸ್ವಾಮಿ, ಡಿ.ಎಸ್‌. ಅರುಣ್‌, ಶಶಿಲ್‌ ನಮೋಶಿ, ಎಸ್‌.ವಿ. ಸಂಕನೂರು, ಕೆ.ಎಸ್‌.ನವೀನ್‌ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ಸಚಿವರ ತಂಡ: ಈ ಹಿನ್ನೆಲೆಯಲ್ಲಿ ಅಧಿವೇಶನ ಪ್ರಾರಂಭಕ್ಕೆ ಮುಂಚಿತವಾ ಗಿಯೇ ಟಿವಿ ಸಂದರ್ಶನಗಳ ಮೂಲಕ ಸಿಎಂ ಸಿದ್ದರಾಮಯ್ಯ ಮುಡಾ ಬಗ್ಗೆ ಸ್ಪಷ್ಟನೆ ನೀಡಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಹಿರಿಯ ಸಚಿವರಾದ ಎಚ್‌.ಕೆ. ಪಾಟೀಲ್‌, ಡಾ| ಜಿ. ಪರಮೇಶ್ವರ್‌, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ ಸಹಿತ ಸಚಿವರ ತಂಡವನ್ನು ಸಿಎಂ ರಚಿಸಿದ್ದಾರೆ. ವಿಪಕ್ಷಗಳ ಯಾವುದೇ ಪ್ರಶ್ನೆಗೂ ಸರಕಾರ ಉತ್ತರ ಕೊಟ್ಟಿಲ್ಲ ಎಂದಾಗಬಾರದು ಎಂದು ಸೂಚಿಸಿ ಸೂಕ್ತ ಹಾಗೂ ಸ್ಪಷ್ಟ ಉತ್ತರ ಸಿದ್ಧಪಡಿಸಿಕೊಳ್ಳಲು ಸೂಚಿಸಿದ್ದಾರೆ. ಅದೇ ರೀತಿ ಸರಕಾರದ ವಿರುದ್ಧ ವಿಷಯಾಧಾರಿತ ಆರೋಪಗಳನ್ನು ಮಾಡಿದಾಗ ಅದು ರಾಜಕೀಯವಾಗಿದ್ದರೆ, ಅದಕ್ಕೂ ತಕ್ಕ ತಿರುಗೇಟು ನೀಡಲು ಸಿದ್ಧರಿರುವಂತೆಯೂ ನಿರ್ದೇಶನ ನೀಡಿದ್ದಾರೆ.

ವಿಪಕ್ಷಗಳ ಅಸ್ತ್ರ
-ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ.
-ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆಪಾದನೆಯನ್ನು ಇಟ್ಟುಕೊಂಡು ಸರಕಾರಕ್ಕೆ ಚಾಟಿ
-ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ದುರ್ಬಳಕೆ, ಸೆಕ್ಷನ್‌ 7 (ಡಿ) ಬಗ್ಗೆ ಚರ್ಚೆ
-ಫ‌ಲಾನುಭವಿಗಳಿಗೆ ತಲುಪದ ಗ್ಯಾರಂಟಿ ಹಣ, ರಾಜ್ಯದ ಅಭಿವೃದ್ಧಿಗೆ ಹಿನ್ನಡೆ
-ನೇಹಾ ಹತ್ಯೆ ಸಹಿತ ಕಾನೂನು ಸುವ್ಯವಸ್ಥೆ ಕುಸಿತ, ಕೈಗಾರಿಕೆಗಳ ಪಲಾಯನ
-ಹಾಲಿನ ದರ ಏರಿಕೆ, ಪೆಟ್ರೋಲ್‌ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸೇರಿ ಒಟ್ಟಾರೆ ಬೆಲೆ ಏರಿಕೆ
-ಮಳೆ ಅವಾಂತರ, ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗ ಹರಡುವಿಕೆ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ

ಸರಕಾರದ ಪ್ರತ್ಯಸ್ತ್ರ
-ನಿವೇಶನ ಹಂಚಿಕೆ ಕಾನೂನಾತ್ಮಕವಾಗಿಯೇಆಗಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಬದಲಿ ನಿವೇಶನ ಹಂಚಿಕೆ ಬಗ್ಗೆ ಬಿಎಸ್‌ವೈ ಮಾಡಿದ್ದ ಆರೋಪ ಪ್ರಸ್ತಾವಿಸಲು ತಯಾರಿ.
-ಲೋಕಸಭೆ ಚುನಾವಣ ನೀತಿ ಸಂಹಿತೆ
ಇದ್ದದ್ದರಿಂದ ಸರಕಾರದ ಪಾತ್ರ ಇಲ್ಲ. ಅಧಿಕಾರಿಗಳಿಂದ ಆಗಿರುವ ಪ್ರಮಾದ. ತನಿಖೆ ನಡೆಯುತ್ತಿದೆ ಎಂದುವಾದ ಮಂಡಿಸಲು ಸಿದ್ಧತೆ
-ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಗ್ಯಾರಂಟಿಯೋಜನೆ ಮೂಲಕ ಆ ವರ್ಗಕ್ಕೇ ಬಳಕೆ
-ಗ್ಯಾರಂಟಿಯ ಪ್ರಯೋಜನಗಳನ್ನು ಎಳೆಯಾಗಿ ಬಿಚ್ಚಿಡಲು ಅಂಕಿ-ಅಂಶ ಸಿದ್ಧ. ಕೇಂದ್ರ ಸರಕಾರದ ಅನುದಾನ ವಂಚನೆಯೇ ಗುರಾಣಿ. ಅಭಿವೃದ್ಧಿಗೂ ಬಜೆಟ್‌ನಲ್ಲಿ ಹಣ ಇಟ್ಟ ಬಗ್ಗೆ ಸಮರ್ಥನೆ
-ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರಿಂದ ಉತ್ತರ. ಕೈಗಾರಿಕೆಗಳ ಕುರಿತು ಕೈಗಾರಿಕಾ ಸಚಿವರಿಂದಲೇ ಸ್ಪಷ್ಟನೆ
-ಹೆಚ್ಚುವರಿ ಹಾಲಿಗೆ ಹೆಚ್ಚುವರಿ ಹಣ, ಕೇಂದ್ರ ಸರಕಾರ ದಿಂದ ಸೂಕ್ತ ಸಹಕಾರ ಇಲ್ಲದಿದ್ದರಿಂದ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆ ಹೆಚ್ಚಳ. ಅಬಕಾರಿ ಸುಂಕ ಕಡಿಮೆ ಮಾಡಲು ಕೇಂದ್ರದೆಡೆ ಬೊಟ್ಟು
-ಕೈಗೊಂಡ ಕ್ರಮಗಳ ಬಗ್ಗೆ ಸರಕಾರದ ಸಮರ್ಥನೆ

ಇಂದು ಬಿಜೆಪಿ ಪ್ರತಿಭಟನೆ
ಮುಡಾ ನಿವೇಶನ ಹಂಚಿಕೆ ವಿಷಯವಾಗಿ ಸೋಮವಾರ ಕಲಾಪ ಆರಂಭಕ್ಕೆ ಮುನ್ನ ವಿಧಾನಸೌಧಕ್ಕೆ ಮೆರವಣಿಗೆಯಲ್ಲಿ ಸಾಗಿ ಸಾಂಕೇತಿಕವಾಗಿ ಪ್ರತಿಭಟಿಸಲು ಬಿಜೆಪಿ ನಿರ್ಧರಿಸಿದೆ.

ಮುಡಾ ಹಗರಣ: ಏಕ ಸದಸ್ಯ ಆಯೋಗ ರಚನೆ
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ನಿವೃತ್ತ ನ್ಯಾ| ಪಿ.ಎನ್‌. ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣ ಆಯೋಗವನ್ನು ರಚಿಸಿ ರಾಜ್ಯ ಸರಕಾರ ಆದೇಶಿಸಿದೆ. ತನಿಖೆ ನಡೆಸಿ ವರದಿ ಸಲ್ಲಿಸಲು 6 ತಿಂಗಳ ಕಾಲಾವಕಾಶ ನೀಡಲಾಗಿದೆ. ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮುನ್ನಾದಿನ ಈ ಆದೇಶವನ್ನು ಹೊರಡಿಸಲಾಗಿದೆ.

ಇಂದು ಬಿಜೆಪಿ ಶಾಸಕಾಂಗ ಸಭೆ
ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

“ಶಸ್ತ್ರಸಜ್ಜಿತ’ರಾಗಿ ಅಧಿವೇಶನಕ್ಕೆ ಬನ್ನಿ
ಬೆಂಗಳೂರು: ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಬೇಕು. ಜತೆಗೆ ಅಧಿವೇಶನದಲ್ಲಿ ಖುದ್ದು ಹಾಜರಿದ್ದು ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

9 ದಿನ ಮಾತ್ರ ಕಲಾಪ: ರಾಜ್ಯ ವಿಧಾನಮಂಡಲ ಅಧಿವೇಶನವು ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಇತ್ತೀಚೆಗೆ ಅಗಲಿದ ಗಣ್ಯರಿಗೆ ಮೊದಲ ದಿನದ ಕಲಾಪದಲ್ಲಿ ಸಂತಾಪ ಸೂಚಿಸಲಾಗುತ್ತದೆ. ಜು. 15ರಿಂದ 26ರ ವರೆಗೆ ಒಟ್ಟು 9 ದಿನಗಳ ಕಾಲ ಕಲಾಪ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next