Advertisement

Haveri: ಪ್ರವಾಸಿ ತಾಣವಾಗಲಿ ತುಂಗಭದ್ರಾ-ಕುಮದ್ವತಿ ಸಂಗಮ

03:24 PM May 17, 2023 | Team Udayavani |

ರಾಣಿಬೆನ್ನೂರ: ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕಿನ ಹೊಳೆಆನವೇರಿ ಗ್ರಾಮ ತುಂಗಭದ್ರಾ ಮತ್ತು ಕುಮದ್ವತಿ ನದಿಗಳ ಸಂಗಮ ಸ್ಥಾನವಾಗಿದ್ದು, ಈ ಪುಟ್ಟ ಗ್ರಾಮದಲ್ಲಿ ಕ್ರಿ.ಶ.11ನೇ ಶತಮಾನದಷ್ಟು ಪ್ರಾಚೀನ ಶಿಲ್ಪಕಲೆಯ ಶ್ರೀ ಸಂಗಮೇಶ್ವರ ದೇವಸ್ಥಾನವಿದೆ. ಪ್ರವಾಸಿ ತಾಣಕ್ಕೆ ಸೂಕ್ತವಾಗಿರುವ ಈ ಗ್ರಾಮದ ಕಡೆ ಪ್ರವಾಸೋದ್ಯಮ ಇಲಾಖೆ ಗಮನ ಹರಿಸಬೇಕೆಂಬುದು ಸ್ಥಳೀಯರ ಒತ್ತಾಸೆಯಾಗಿದೆ.

Advertisement

ಸಾಮಾನ್ಯವಾಗಿ ಎರಡು ನದಿಗಳು ಕೂಡುವ ಸ್ಥಳಗಳನ್ನು ಸಂಗಮ ವೆಂತಲೂ ಕರೆಯಲ್ಪಡುತ್ತವೆ. ತುಂಗಾ ಮತ್ತು ಭದ್ರಾ ನದಿಗಳು ಕೂಡುವ ಜಾಗೆ ಕೂಡಲ ಎಂಬುದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿದೆ. ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸೇರಿದ ಜಾಗೆ ಕೂಡಲ ಸಂಗಮ ಎಂದು ಪ್ರಸಿದ್ಧಿ ಪಡೆದಿದೆ.

ಅಲ್ಲಿ ಸಂಗಮೇಶ್ವರ ದೇವಾಲಯವೂ ಇದೆ. ಜಗಜ್ಯೋತಿ ಬಸವಣ್ಣನವರು ತಮ್ಮ ವಚನಾಂಕಿತವಾಗಿ ಬಳಸಿಕೊಂಡದ್ದು
ಕೂಡಲಸಂಗಮದೇವ ಎಂಬುದಾಗಿದೆ. ಅದರಂತೆ, ಸಂಗಮೇಶ್ವರನ ನೆಲೆಯಾಗಿರುವ ತುಂಗಭದ್ರಾ ಮತ್ತು ಕುಮದ್ವತಿ ನದಿಗಳ
ಸಂಗಮ ಸ್ಥಾನ ಹೊಳೆಆನವೇರಿಯೂ ಕೂಡ ಗಮನಿಸಬೇಕಾದ ಸ್ಥಳವಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ಈ ಪುಟ್ಟ ಗ್ರಾಮಕ್ಕೆ ಕ್ರಿ.ಶ. 11ನೇ ಶತಮಾನದಷ್ಟು ಪ್ರಾಚೀನತೆ ಇದೆ. ರಾಣಿಬೆನ್ನೂರಿನಿಂದ ದಕ್ಷಿಣಕ್ಕೆ 16 ಕಿ.ಮೀ. ಸಾಗಿದರೆ ಈ ಊರು ಸಿಗುತ್ತದೆ.

ಜಾನುವಾರು ಜಾತ್ರೆ: ಅಖಂಡ ಧಾರವಾಡ ಜಿಲ್ಲೆಯಲ್ಲಿ ಪ್ರಸಿದ್ಧ ಜಾನು ವಾರು ಜಾತ್ರೆ ಇಲ್ಲಿ ನಡೆಯುತ್ತಿತ್ತು. ಯುಗಾದಿ ಸಮಯ ದಲ್ಲಿ ತಿಂಗಳ ಪೂರ್ತಿ ಜೋರಾಗಿ ನಡೆಯುತ್ತಿದ್ದ ಈ ಜಾತ್ರೆ ಸುತ್ತಲಿನ ಊರುಗಳ ಆರ್ಥಿಕ ಸಬಲತೆಗೆ ಪೂರಕವಾಗಿತ್ತು. ಉತ್ತಮ ವಾಯುಗುಣ, ಕುಡಿವ ನೀರು, ಮೇವು ಎಲ್ಲಾ ಅನುಕೂಲವಿತ್ತು. ಜೊತೆಗೆ ಗ್ರಾಮಸ್ಥರ ದಾಸೋಹ ಗುಣದಿಂದಾಗಿ ಉಚಿತ ಅನ್ನಪ್ರಸಾದ ವ್ಯವಸ್ಥೆ ಕೂಡಾ ಇತ್ತು.

ದನಗಳ ಪರಸಿ ಸೇರಲು ಪೂರಕವಾಗಿತ್ತು ಎಂಬುದು ಹಿರಿಯರ ಅಭಿಪ್ರಾಯ. ದನಗಳ ಪರಸಿ ಎಂದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನೇಕ ಜನರಿಗೆ ಕೈಗೆ ಕೆಲಸ ಸಿಗುತ್ತಿತ್ತು. ಕಿರಾಣಿ, ಚಹ, ತಿಂಡಿ ಗೂಡಂಗಡಿಗಳು, ಬಳೆ ಅಂಗಡಿ, ಸ್ಟೇಶನರಿ,
ಮಕ್ಕಳ ಆಟಿಕೆಗಳ ಅಂಗಡಿಯವರೆಲ್ಲಾ ದುಡಿಮೆ ಮಾಡಿಕೊಳ್ಳುತ್ತಿದ್ದರು. ಮನೋರಂಜನೆಗಾಗಿ ನಾಟಕ ಕಂಪನಿಗಳೂ ಬೀಡುಬಿಡುತ್ತಿದ್ದವು. ವೃತ್ತಿ ರಂಗಭೂಮಿ ಕಲಾವಿದರಿಗೆ ಜನರ ಪ್ರೋತ್ಸಾಹ ನಿರಂತರವಾಗಿತ್ತು. ಇದೀಗ ಅದು ಕವಲು ತಾಣವಾಗಿದೆ. ಆ ಕಾಲದಲ್ಲಿ ಹಲಗೇರಿ ಜಟ್ಟೆಪ್ಪನವರಂಥ ನಾಟಕ ಕಂಪನಿ ಮಾಲಕರು ಇದ್ದರು ಎಂಬುದೇ ಹೆಮ್ಮೆಯ ಸಂಗತಿ. ವೃತ್ತಿ ರಂಗಭೂಮಿ ನಂಬಿ ದುಡಿಯುತ್ತಿದ್ದ ಕಲಾವಿದರ ಕೊಡುಗೆಯೂ ಅನನ್ಯವಾಗಿತ್ತು. ಕಲಾ ರಸಿಕರ ಪ್ರೋತ್ಸಾಹವೂ ಅಪಾರವಾಗಿತ್ತು.

Advertisement

ಮನೋರಂಜನಗೆ ವೃತ್ತಿ ರಂಗಭೂಮಿ ಕಲಾವಿದರಲ್ಲದೇ ಹವ್ಯಾಸಿ ರಂಗಭೂಮಿ ಕಲಾವಿದರೂ ಕಡಿಮೆಯಿರಲಿಲ್ಲ. ಅವೆಲ್ಲವೂ ಇಂದಿನ ಆಧುನಿಕ ತಾಂತ್ರಿಕತೆಯಲ್ಲಿ ನೆನಪು ಮಾತ್ರ. ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಅಂದಿನ ವೃತ್ತಿ ರಂಗಭೂಮಿಯ ನಟ-ನಟಿಯರನ್ನು ಬೆಳೆಸಿದ್ದು ಈಗ ಇತಿಹಾಸ.

ಲಿಂಗಾನುಷ್ಠಾನಗೈದ ಕುಮಾರೇಶ್ವರರು:
1930 ರಲ್ಲಿ ಯುಗಾದಿ ಮುನ್ನಾ 1 ತಿಂಗಳ ಪೂರ್ತಿ ಲಿಂಗಾನುಷ್ಠಾನ ಗೈದಿದ್ದ ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಈ
ಪರಿಸರದಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಸಂಚಾರ ಮಾಡುತ್ತಿದ್ದರು. ಗುರುಗಳ ಜನ್ಮಭೂಮಿ ಜೋಯಿಸರಹರಳಹಳ್ಳಿ, ಶ್ರೀಗಳ ತಾಯಿಯ ತವರೂರಾದ ಲಿಂಗದಹಳ್ಳಿ ಕೂಡಾ ಇದೇ ಸೀಮೆಯಲ್ಲಿದ್ದು, ಗುರುಗಳ ಎಡೆಬಿಡದ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಭಕ್ತಗಣದ ಕಾರ್ಯವೂ ಮೆಚ್ಚುವಂತಹದ್ದಾಗಿತ್ತು. ಶಿವಯೋಗಿಗಳವರು ನಡೆದಾಡಿದ ಈ ಭೂಮಿ ಪವಿತ್ರವಾಗಿದ್ದು, ನಮ್ಮ ಬದುಕು ಪಾವನವಾಯ್ತು ಎಂದು ಇಲ್ಲಿಯ ಹಿರಿಕರು ಭಾವಪರವಶರಾಗಿ ನೆನಪು ಮಾಡಿಕೊಳ್ಳುತ್ತಾರೆ.

ಆಗಬೇಕಿದೆ ಅಭಿವೃದ್ಧಿ
ಸಾಂಸ್ಕೃತಿಕವಾಗಿ ಉತ್ತಮ ಹಿನ್ನೆಲೆಯುಳ್ಳ ಹೊಳೆಆನವೇರಿ ಗ್ರಾಮಕ್ಕೆ ರಾಣಿಬೆನ್ನೂರು, ಹರಿಹರ ಹಾಗೂ ಹೊನ್ನಳ್ಳಿ ಕಡೆಯಿಂದ ರಸ್ತೆ ಮೂಲಕ ಬಂದು ಹೋಗಬಹುದಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ನದಿ ದಂಡೆ ಭದ್ರಪಡಿಸಿ ಮೆಟ್ಟಿಲು ಕಟ್ಟಿಸುವ ಕೆಲಸ
ಆಗಬೇಕಿದೆ. ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ಸ್ಥಾಪನೆ, ರಸ್ತೆ ಅಗಲೀಕರಣ, ಸೇತುವೆ ಅಭಿವೃದ್ಧಿ ಕಾಮಗಾರಿಗಳೆಲ್ಲ
ಆಗಬೇಕಿದೆ. ಸಂಗಮೇಶ್ವರ ದೇವಾಲಯದ ಜೀಣೊìàದ್ಧಾರ ಕಾಮಗಾರಿ ಮಾಡಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವಲ್ಲಿ
ಜನಪ್ರತಿನಿಧಿ ಗಳು ಸರಕಾರದ ಗಮನ ಸೆಳೆಯಬೇಕಿದೆ.

*ಮಂಜುನಾಥ ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next