Advertisement

Haveri: ಬಿಸಿಲ ಝಳಕ್ಕೆ ಬಾಡಿದ ಪೈರು: ರೈತ ಕಂಗಾಲು

05:42 PM Dec 29, 2023 | Team Udayavani |

ಹಾವೇರಿ: ಮುಂಗಾರು ಮಳೆ ವೈಫಲ್ಯದಿಂದ ಕಂಗೆಟ್ಟಿರುವ ಅನ್ನದಾತರಿಗೆ ಹಿಂಗಾರು ಮಳೆಯೂ ಕೈಕೊಟ್ಟಿದೆ. ಹಿಂಗಾರು ಮಳೆಯ ಹಿನ್ನಡೆಯಿಂದಾಗಿ ಬಿತ್ತನೆಗೆ ಹೊಡೆತ ಬಿದ್ದಿದೆ. ಈವರೆಗೆ ಕೇವಲ ಶೇ.58ರಷ್ಟು ಬಿತ್ತನೆಯಾಗಿದ್ದು, ಮಳೆ ಮಾಯವಾದ ಪರಿಣಾಮ ಬೆಳೆಯುತ್ತಿರುವ ಪೈರು ಬಿಸಿಲಿಗೆ ಬಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ನವೆಂಬರ್‌ ಮೊದಲ ವಾರ ಆಗಾಗ ಸುರಿದ ಮಳೆಗೆ ಕೆಲ ರೈತರು ತಕ್ಕಮಟ್ಟಿಗೆ ಜೋಳ, ಮೆಕ್ಕೆಜೋಳ, ಹುರುಳಿ, ಅಲಸಂದಿ ಸೇರಿದಂತೆ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದರು. ಮೊಳಕೆಯೊಡೆದು ಬೆಳೆಯುತ್ತಿದ್ದ ಪೈರಿಗೆ ಮಳೆ ಅವಶ್ಯಕವಾಗಿದೆ. ಈಗ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಬಾಡುತ್ತಿದ್ದು, ಹಿಂಗಾರಿನಲ್ಲಿ ಬಿತ್ತನೆ ಮಾಡಿರುವ ಬೀಜಗಳು ಮಣ್ಣು ಪಾಲಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಶೇ.58 ಬಿತ್ತನೆ: ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 1.11 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 64,809 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಕೇವಲ 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದರ ಜೊತೆಗೆ 16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. 2691 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ, 1844 ಹೆಕ್ಟೇರ್‌ ಪ್ರದೇಶದಲ್ಲಿ ಅಲಸಂದಿ, 368 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, 371 ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದೆ ಕೈಕೊಟ್ಟಿದ್ದರಿಂದ ಬಿತ್ತನೆ ಪ್ರಮಾಣ ಕುಂಟಿತಗೊಂಡಿದೆ. ಅಲ್ಲದೇ, ಬಿತ್ತನೆ ಮಾಡಿದ ಬಹುತೇಕ ಬೆಳೆಗಳು ಸಹ ನಾಶಗೊಳ್ಳುತ್ತಿವೆ.

ಮುಂಗಾರು ಹಂಗಾಮಿನಲ್ಲಿ ಎದುರಾಗಿದ್ದ ಸ್ಥಿತಿಯೇ ಹಿಂಗಾರು ಹಂಗಾಮಿನಲ್ಲೂ ಎದುರಾಗಿದ್ದು ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದನ್ನು ನೋಡಿ ರೈತರು ಕಣ್ಣೀರಿಡುತ್ತಿದ್ದಾರೆ.

ಬಿಸಿಲಿಗೆ ಬಾಡುತ್ತಿದೆ ಬೆಳೆ:ನವೆಂಬರ್‌ನಲ್ಲಿ ಸುರಿದ ಮಳೆಗೆ ಬಿತ್ತನೆ ಮಾಡಿದ್ದ ಜೋಳ, ಹುರುಳಿ, ಕಡಲೆ ಸೇರಿದಂತೆ ಇತರೆ ಬೀಜಗಳು ಮೊಳಕೆಯೊಡೆದು ಗೇಣೇತ್ತರಕ್ಕೆ ಬೆಳೆದು ನಿಂತಿವೆ.

Advertisement

ಮಳೆ ಬಾರದ್ದರಿಂದ ತೇವಾಂಶ ಕೊರತೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಚಳಿ ಬೀಳದ ಕಾರಣ ಬಿಸಿಲಿಗೆ ಬಾಡುತ್ತಿವೆ. ಇದರಿಂದ ಇಳುವರಿ ಬರುವುದಿರಲಿ ಜಾನುವಾರುಗಳಿಗೆ ಮೇವು ಸಹ  ಆಗುತ್ತಿಲ್ಲ ಎಂಬ ನೋವು ಅನ್ನದಾತರದ್ದಾಗಿದೆ. ಮಳೆ ಸಮರ್ಪಕವಾಗಿದ್ದರೆ ಜೋಳದ ಮೇವು, ಶೇಂಗಾ, ಕಡಲೆ, ಹುರುಳಿ, ಗೋಧಿ ಹೊಟ್ಟನ್ನು ಸಂಗ್ರಹಿಸಿ ರೈತರು ವರ್ಷಪೂರ್ತಿ ದನಕರುಗಳಿಗೆ ಆಹಾರದ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮೇವಿನ ಕೊರತೆ ಎದುರಾಗಲಿದೆ ಎನ್ನುತ್ತಾರೆ ರೈತ ಕಿರಣಕುಮಾರ ಗಡಿಗೋಳ.

ನೀರಾವರಿ ಪ್ರದೇಶದಲ್ಲೂ ಬಿತ್ತನೆ ಕುಂಟಿತ: ನೀರಾವರಿ ಸೌಲಭ್ಯ ಹೊಂದಿರುವ ರೈತರು ಹಿಂಗಾರಿನಲ್ಲಿ ಅಷ್ಟಾಗಿ ಬಿತ್ತನೆ ಮಾಡಲು ಮನಸ್ಸು ಮಾಡುತ್ತಿಲ್ಲ. ಒಂದೆಡೆ ವಿದ್ಯುತ್‌ ಕಣ್ಣಾಮುಚ್ಚಾಲೆ ಶುರುವಾಗಿದ್ದರೆ, ಮತ್ತೂಂದೆಡೆ ಕೊಳವೆಬಾವಿಗಳಲ್ಲಿ ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲ ಬೋರ್‌ವೆಲ್‌ಗ‌ಳು ಈಗಾಗಲೇ ಬತ್ತಿ ಹೋಗಿದ್ದರೆ, ಕೆಲ ಬೋರ್‌ವೆಲ್‌ಗ‌ಳಲ್ಲಿ ಸಣ್ಣಗೆ ನೀರು ಬರುತ್ತಿವೆ. ಹೀಗಾಗಿ, ನೀರಾವರಿ ಸೌಲಭ್ಯ ಇರುವ ರೈತರು ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆ
ಕೊರತೆಯಿಂದಾಗಿ ಈವರೆಗೆ ಶೇ.58ರಷ್ಟು ಬಿತ್ತನೆಯಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಬಿತ್ತನೆ ಕಾರ್ಯ
ನಡೆಸುತ್ತಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಗೆ ಅಗತ್ಯ ಬೀಜ ದಾಸ್ತಾನಿದೆ.
*ಮಂಜುನಾಥ ಅಂತರವಳ್ಳಿ
ಜಂಟಿ ಕೃಷಿ ನಿರ್ದೇಶಕರು, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next