Advertisement

ಹಾವೇರಿ; ಉಕ್ರೇನ್‌ ರಣರಂಗದ ಕಹಾನಿ ತೆರೆದಿಟ್ಟ ರಂಜಿತಾ-ಶಿವಾನಿ

05:35 PM Mar 04, 2022 | Team Udayavani |

ಹುಬ್ಬಳ್ಳಿ: “ಉಕ್ರೇನ್‌ ಮೇಲೆ ಬಾಂಬ್‌ ದಾಳಿ ಮಾಡಿರುವುದು ಗೊತ್ತಿರಲಿಲ್ಲ. ತಾಯಿ ಕರೆ ಮಾಡಿ ಹೇಳಿದಾಗಲೇ ಯುದ್ಧ ಆರಂಭವಾಗಿರುವುದು ಗೊತ್ತಾಯಿತು. ದಿನ ಕಳೆದಂತೆ ಭಾರತಕ್ಕೆ ಸುರಕ್ಷಿತವಾಗಿ ಹೋಗುತ್ತೇವಾ ಎನ್ನುವ ಅತಂಕ ಶುರುವಾಗಿತ್ತು. ಆದರೆ ಸ್ವ ನಿರ್ಧಾರ ಮಾಡಿ ಖಾರ್ಕಿವ್‌ ನಗರ ತೊರೆದ ಸಂಜೆಯೇ ನಾವು ತಂಗಿದ್ದ ಸ್ಥಳದಿಂದ ಕೂಗಳತೆ ದೂರದಲ್ಲಿ ಬಾಂಬ್‌ ದಾಳಿ ದಾಳಿಯಾಗಿದೆ’ ಇದು ಉಕ್ರೇನ್‌ನ ಖಾರ್ಕಿವ್‌ ನಗರದಿಂದ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತರೂರು ಗ್ರಾಮದ ರಂಜಿತಾ ಕಲಕಟ್ಟಿ ಹಾಗೂ ಹಾನಗಲ್ಲನ ಶಿವಾನಿ ಮಡಿವಾಳರ ಅವರ ನುಡಿಗಳು.

Advertisement

ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಯುದ್ಧಪೀಡಿತ ದೇಶದಲ್ಲಿ ಕಂಡ ಘಟನೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು. ವಿಮಾನ
ನಿಲ್ದಾಣಕ್ಕೆ ಆಗಮಿಸಿದ ತಮ್ಮ ಮಕ್ಕಳನ್ನು ಅಪ್ಪಿ ಮುದ್ದಾಡಿ ಪಾಲಕರು ಆನಂದಬಾಷ್ಪ ಸುರಿಸಿದರು. ಹಾವೇರಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಬರಮಾಡಿಕೊಂಡು ಯೋಗಕ್ಷೇಮ ವಿಚಾರಿಸಿದರು.

ಖಾರ್ಕಿವ್‌ ನ್ಯಾಶನಲ್‌ ವೈದ್ಯಕೀಯ ವಿವಿಯ ನಾಲ್ಕನೇ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಶಿವಾನಿ ಮಡಿವಾಳರ ಮಾತನಾಡಿ, ಅತ್ಯಂತ ಭಯಾನಕ ಪರಿಸ್ಥಿತಿ ಅದು. ಇಂತಹ ದೃಶ್ಯ ನೋಡುತ್ತೇವೆ ಅಂದುಕೊಂಡಿರಲಿಲ್ಲ. ಒಂದು ವಾರ ಜೀವ ಭಯದಲ್ಲೇ ಕಳೆದವು. ಕೊರೆಯುವ ಚಳಿ, ನೀರು, ಊಟದ ಸಮಸ್ಯೆ. ಆಗಾಗ ದೊರೆಯುವ ಒಂದಿಷ್ಟು ತಿಂಡಿ ತಿನಿಸುಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಬಾಂಬ್‌ ಬಿದ್ದಾಗ ಭೂಮಿಯ ಕಂಪನವಾದಾಗ ಜೀವದ ಹಂಗು ಬಿಟ್ಟಿದ್ದೆವು. ನೆಟ್‌ವರ್ಕ್‌ ಸಮಸ್ಯೆ, ವಿದ್ಯುತ್‌ ಇರುತ್ತಿರಲಿಲ್ಲ. ಸಹಪಾಠಿ ನವೀನನೊಂದಿಗೆ ಫೆ.28ರಂದು ಮಾತನಾಡಿದ್ದೆ.ಮಾರನೇ ದಿನ ಸಂಜೆ ಹೊರಡುವ ನಿರ್ಧಾರದ ಬಗ್ಗೆ ತಿಳಿಸಿದ್ದ. ಆದರೆ ಬೆಳಗ್ಗೆ ಅವನು ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದ ಎಂದು ಕಣ್ಣೀರಾದರು.

ಸ್ವಂತ ನಿರ್ಧಾರ ಜೀವ ಉಳಿಸಿತು: ಖಾರ್ಕಿವ್‌ ನಗರದಲ್ಲಿ ಉಳಿದರೆ ಜೀವಂತವಾಗಿರುವುದು ಕಷ್ಟ ಎಂದು ನಿರ್ಧರಿಸಿ ಅಲ್ಲಿಂದ ಹೊರಡಲು ಮುಂದಾದೆವು. ಮಾ. 1ರಂದು ಬೆಳಗ್ಗೆ 8 ಗಂಟೆಗೆ ಖಾರ್ಕಿವ್‌ ನಗರದಿಂದ 3 ಕಿಮೀ ದೂರಕ್ಕೆ 3000 ಸಾವಿರ ರೂ. ಟ್ಯಾಕ್ಸಿಗೆ ನೀಡಿ ಅಲ್ಲಿಂದ ಕೀವ್‌ಗೆ ರೈಲು ಮೂಲಕ ಪ್ರಯಾಣ ಮಾಡಿದೆವು. 17 ಗಂಟೆ ರೈಲಿನಲ್ಲಿ ನಿಂತುಕೊಂಡು ಪೋಲೆಂಡ್‌ ಗಡಿಗೆ ಪ್ರಯಾಣ ಮಾಡಿದೆವು. ಗಡಿಗೆ ಬರುತ್ತಿದ್ದಂತೆ ತುಂಬ ಖುಷಿಯಾಯ್ತು. ಅಲ್ಲಿಗೆ ಬಂದಾಗಲೇ ನಮ್ಮ ಜೀವ ಸುರಕ್ಷಿತ ಎನ್ನುವ ಭಾವನೆ ಮೂಡಿತು. ಹಾನಗಲ್ಲ ಶಾಸಕರಾದ ಶ್ರೀನಿವಾಸ ಮಾನೆ ಅವರು ನಿತ್ಯವೂ ಕರೆ ಮಾಡಿ ಧೈರ್ಯ ತುಂಬುತ್ತಿದ್ದರು ಎಂದು ಶಿವಾನಿ ಹೇಳಿದರು.

ಖಾರ್ಕಿವ್‌ ನ್ಯಾಶನಲ್‌ ವೈದ್ಯಕೀಯ ವಿವಿಯ ಮೂರನೇ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ರಂಜಿತಾ ಕಲಕಟ್ಟಿ ಮಾತನಾಡಿ, ಪೋಲೆಂಡ್‌ ಗಡಿಗೆ ಬರುತ್ತಿದ್ದಂತೆ ಊಟ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡಿದರು. ಅವರಿಗೆ ಧನ್ಯವಾದ ಅರ್ಪಿಸುತ್ತೇವೆ. ಯುದ್ಧದ ಸಮಯದಲ್ಲಿ ಕಳೆದ ಆ ದಿನಗಳು ನರಕದ ಅನುಭವ ನೀಡಿತು. ಬಾಂಬ್‌ ಸ್ಫೋಟ ತೀವ್ರಗೊಳ್ಳುತ್ತಿದ್ದಂತೆ ಮೆಟ್ರೋ ಬಂಕರ್‌ ಗೆ ತೆರಳಿ ರಕ್ಷಣೆ ಪಡೆದುಕೊಂಡೆವು. ಚಿಪ್ಸ್‌, ಚಪಾತಿ, ಬಿಸ್ಕತ್‌ನಲ್ಲಿ ದಿನ ಕಳೆದವು. ನನ್ನ ಹಿರಿಯ ವಿದ್ಯಾರ್ಥಿ ನವೀನಣ್ಣ ಹಾಗಾಗದಿದ್ದರೆ ಅವರು ಕೂಡ ನಮ್ಮಂತೆ ವಾಪಸ್‌ ಬರುತ್ತಿದ್ದರು ಎಂದರು.

Advertisement

ಯುದ್ಧದ ಕುರಿತು ವಿಶ್ವವಿದ್ಯಾಲಯ ಯಾವುದೇ ಸ್ಪಷ್ಟ ಸಂದೇಶ ನೀಡಲಿಲ್ಲ. ಆಫ್‌ಲೈನ್‌ ಕ್ಲಾಸ್‌ ಮಾಡಲಾಗುತ್ತದೆ. ಹೋಗುವವರು ನಿಮ್ಮ ಜವಾಬ್ದಾರಿ ಮೇಲೆ ಹೋಗಬಹುದು ಎನ್ನುವ ಸೂಚನೆ ನೀಡಿದರು. ಯುದ್ಧಕ್ಕೂ ಐದು ದಿನ ಮೊದಲು ಭಾರತ ಸರಕಾರದಿಂದ ದೇಶಕ್ಕೆ ಮರಳುವಂತೆ ಸೂಚನೆ ಬಂದಿತ್ತು. ಫೆ.22, 24, 26 ವಿಮಾನ ಟಿಕೆಟ್‌ ಲಭ್ಯವಿದ್ದವು. ಆದರೆ 22ರಂದು ಮಾತ್ರ ಒಂದು ವಿಮಾನ ಬಂದು ಹೋಗಿದೆ.
ಶಿವಾನಿ ಮಡಿವಾಳರ

ಬಹುತೇಕ ಸ್ನೇಹಿತರು ಖಾರ್ಕಿವ್‌ ನಗರವನ್ನು ತೊರೆದಿದ್ದಾರೆ. ಪೋಲೆಂಡ್‌ ಗಡಿಗೆ ಹತ್ತಿರಕ್ಕೆ ಬಂದಿದ್ದಾರೆ. ಅಲ್ಲಿಗೆ ಬಂದರೆ ಜೀವಕ್ಕೆ ಯಾವುದೇ ಭಯವಿಲ್ಲ. ಸಿಎಂ ಬೊಮ್ಮಾಯಿ ಅವರು ಕರೆ ಮಾಡಿ ಧೈರ್ಯ ತುಂಬಿದರು. ಅವರಿಗೆ ಧನ್ಯವಾದ ಹೇಳುತ್ತೇನೆ.
ರಂಜಿತಾ ಕಲಕಟ್ಟಿ

ಉಕ್ರೇನ್‌ನಲ್ಲಿ ಯುದ್ಧ ಆರಂಭವಾದಾಗಿನಿಂದ ಶಾಸಕ ಶ್ರೀನಿವಾಸ ಮಾನೆ ಅವರು ನಿತ್ಯ ನಾಲ್ಕೈದು ಬಾರಿ ನಮಗೆ ಹಾಗೂ ಮಗಳಿಗೆ ಕರೆ ಮಾತನಾಡಿ ಧೈರ್ಯ ತುಂಬಿದರು. ಬೆಂಗಳೂರಿಗೆ ಹೋಗುವುದು ಬೇಡ ಹುಬ್ಬಳ್ಳಿಗೆ ಕರೆದುಕೊಂಡು ಬರುತ್ತೇವೆ ಎಂದು ಅವರದ್ದೇ ವಾಹನ ನೀಡಿದ್ದಾರೆ. 17 ಗಂಟೆ ನಿಂತುಕೊಂಡು ಕಷ್ಟ ಪಟ್ಟು ಊರಿಗೆ ಬಂದು ತಲುಪಿದ್ದಾಳೆ. ಮಗಳು ಮತ್ತೂಮ್ಮೆ ಹುಟ್ಟಿ ಬಂದಿದ್ದಾಳೆ.
ಸುಮಿತ್ರಾ ಮಡಿವಾಳರ, ಶಿವಾನಿ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next