Advertisement

ಪರಿಹಾರ ವಂಚಿತರ ವಿವರ ಸಂಗ್ರಹ

11:47 AM Mar 02, 2020 | |

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದವರಿಗೆ ಬೆಳೆ ಹಾಗೂ ಮನೆ ಹಾನಿ ಪರಿಹಾರ ವಿತರಣೆಯಲ್ಲಿ ಲೋಪ ಎಸಗಿದ ಅ ಧಿಕಾರಿಗಳ ಗುರುತಿಸಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ. ಪರಿಹಾರದಿಂದ ವಂಚಿತರಾದವರ ವಿವರವನ್ನು ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅತಿವೃಷ್ಟಿ ಹಾಗೂ ನೆರೆಪರಿಹಾರ ಸಂತ್ರಸ್ತರಿಗೆ ಬೆಳೆ ಹಾಗೂ ಮನೆ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪ ಕುರಿತಂತೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಕ್ಷೇತ್ರವಾರು ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಅನ್ಯಾಯ ಕುರಿತಂತೆ ಸಭೆಯ ಗಮನ ಸೆಳೆದರು.

ರಾಣಿಬೆನ್ನೂರ ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ, ಮನೆ ಪರಿಹಾರ ವಿತರಣೆಯಲ್ಲಿ ಬಡವರಿಗೆ ತೀವ್ರ ಅನ್ಯಾಯವಾಗಿದೆ. ಪೂರ್ಣ ಮನೆಬಿದ್ದರೂ ಸಿ ವರ್ಗಕ್ಕೆ ಸೇರ್ಪಡೆ ಮಾಡಿ ಅಲ್ಪ ಪರಿಹಾರ ನೀಡಲಾಗಿದೆ. ಎ, ಬಿ ಹಾಗೂ ಸಿ ಎಂದು ವರ್ಗೀಕರಿಸುವ ಕ್ರಮದಲ್ಲೇ ಲೋಪವಾಗಿದೆ.

ಅಸಹಾಯಕರು, ಬಡವರ ಮನೆಗಳು ಪೂರ್ಣವಾಗಿ ಬಿದ್ದರೂ ಆ ಫಲಾನುಭವಿಗಳ ಮನೆಗಳನ್ನು ಸಿ ವರ್ಗಕ್ಕೆ ಸೇರ್ಪಡೆಗೊಳಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು. ಇಂತಹ ಲೋಪಗಳನ್ನು ಕೂಡಲೇ ಸರಿಪಡಿಸಬೇಕು. ಈ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು. ಪೂರ್ಣವಾಗಿ ಮನೆ ಕುಸಿತಗೊಂಡರೂ ಅಧಿ ಕಾರಿಗಳ ತಪ್ಪಿನಿಂದ ಸಿ ವರ್ಗಕ್ಕೆ ಸೇರಿಸಿ ಪರಿಹಾರ ವಂಚಿಸಿದವರ ಪಟ್ಟಿ ಮಾಡಿ. ಇಂತಹವರಿಗೆ ಐದು ಲಕ್ಷ ರೂ. ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷರಾದ ಎಸ್‌.ಕೆ. ಕರಿಯಣ್ಣನವರ, ಕೊಟ್ರೇಶಪ್ಪ ಬಸೇಗಣ್ಣಿ, ಸದಸ್ಯರಾದ ಶಿವರಾಜ ಹರಿಜನ, ವಿರುಪಾಕ್ಷಪ್ಪ ಕಡ್ಲಿ, ಸಿದ್ಧರಾಜ ಕಲಕೋಟಿ, ಶಿವರಾಜ, ಮಹಾಂತೇಶ, ರಮೇಶ ದುಗ್ಗತ್ತಿ, ಸರ್ವಮಂಗಳಾ, ಮಾಲತೇಶ ಸೊಪ್ಪಿನ ಸೇರಿದಂತೆ ವಿವಿಧ ಸದಸ್ಯರು ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪ ಹಾಗೂ ತಹಶೀಲ್ದಾರಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯ ವೈಖರಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ. ಆದರೆ, ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಪರಿಹಾರ ವಿತರಣೆಗೆ ಸೂಕ್ತ ಕ್ರಮವಹಿಸಿ ಎಂದು ಆಗ್ರಹಿಸಿದರು.

Advertisement

ನೆರೆ ಪರಿಹಾರ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅಪರ ಜಿಲ್ಲಾ ಧಿಕಾರಿ ಯೋಗೇಶ್ವರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾಗೂ ಮನೆ ಹಾನಿ ಪರಿಹಾರ ಒದಗಿಸಲು ಸರ್ಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳ ತಂಡ ರಚಿಸಿ ಸರ್ವೇ ಮಾಡಿಸಲಾಗಿದೆ. ದೃಢೀಕರಣದೊಂದಿಗೆ ಸಂತ್ರಸ್ತರ ವಿವರವನ್ನು ಸಾಫ್ಟವೇರ್‌ ಮೂಲಕ ಅಪ್‌ಲೋಡ್‌ ಮಾಡಲು ಸೂಚನೆ ನೀಡಲಾಗಿತ್ತು. ಇದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು, ಕೃಷಿ, ತೋಟಗಾರಿಕೆ ಅ ಧಿಕಾರಿಗಳು, ತಹಶೀಲ್ದಾರ್‌ ಒಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಮಾಹಿತಿ ಗಣಕೀರಣಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರಗಳಿಗೆ ಲಾಗಿನ್‌ ಪಾಸ್‌ವರ್ಡ್‌ಗಳನ್ನು ನೀಡಲಾಗಿತ್ತು. ಬೆಳೆಹಾನಿ ಫಲಾನುಭವಿಗಳ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಹಾಗೂ ಬೆಳೆ ಪಹಣಿ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿ ಜಿಲ್ಲಾ ಧಿಕಾರಿಗಳ ಅನುಮೋದನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಹಂತದಲ್ಲಿ ಒಂದು ಆಧಾರ್‌ ಕಾರ್ಡಗೆ ಕೇವಲ 4.38 ಎಕರೆ ಜಮೀನಿಗೆ ಪರಿಹಾರ ಪಡೆಯಲು ಅವಕಾಶವಿತ್ತು. ಆದರೆ, ಕೆಲ ರೈತರದು 10-15 ಎಕರೆಗೂ ಹೆಚ್ಚು ಹಾನಿಯಾದ ಕಾರಣ ಸಾಫ್ಟವೇರ್‌ನಲ್ಲಿ ನಾಲ್ಕಕ್ಕಿಂತ ಹೆಚ್ಚು ಎಕರೆ ಒಬ್ಬ ಫಲಾನುಭವಿಗಳ ಹೆಸರಿಗೆ ಸ್ವೀಕರಿಸಿಲ್ಲ. ಇದನ್ನೇ ಬಳಸಿಕೊಂಡು ಬೇರೆ ಬೇರೆ ಆಧಾರ್‌ ಕಾರ್ಡ್‌ಗಳ ಹೆಸರಿಗೆ ನೋಂದಾಯಿಸಿ ಕೆಲವರು ತಪ್ಪು ಎಸಗಿದ್ದಾರೆ ಎಂದರು.

18 ಪ್ರಕರಣ ಪತ್ತೆ: ಲೋಪವೆಸಗಿದ 18 ಪ್ರಕರಣಗಳನ್ನು ಪತ್ತೆ ಹಚ್ಚಿ ಸಂಬಂ ಸಿದ ನೌಕರರನ್ನು ಅಮಾನತ್‌ ಮಾಡಲಾಗಿದೆ. ಪ್ರತಿ ಖಾತೆಯ ಪರಿಶೀಲನೆ ನಡೆಯುತ್ತಿದೆ. ಪರಿಹಾರ ವಿತರಣೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡುಬಂದ ಪ್ರಕರಣಗಳ ತನಿಖೆಗೆ ಪೊಲೀಸ್‌ ಇಲಾಖೆಗೆ ನೀಡಲಾಗಿದೆ. ತಪ್ಪುಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಪ್ರಕರಣಗಳನ್ನು ಹೂಡಲಾಗಿದೆ. ತನಿಖೆಯಿಂದ ತಪ್ಪು ಮಾಡಿದವರು ಯಾರೆಂದು ತಿಳಿಯುತ್ತದೆ. ಅಂಥವರ ಮೇಲೆ ಕಾನೂನು ಅಡಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ದುಗ್ಗತ್ತಿ, ಮಾರುತಿ ರಾಠೊಡ ಹಾಗೂ ನೀಲವ್ವ ಚವ್ಹಾಣ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next