Advertisement

ಹರ್ಯಾಣಕ್ಕೆ ಮೊದಲ ಜಯ

03:32 PM Aug 09, 2017 | |

ನಾಗ್ಪುರ: ಪ್ರೊ ಕಬಡ್ಡಿಯ ನೂತನ ತಂಡವಾದ ಹರ್ಯಾಣ ಸ್ಟೀಲರ್ನ ಅದೃಷ್ಟ ಖುಲಾಯಿಸಿದೆ. ಮಂಗಳವಾರದ ಪಂದ್ಯದಲ್ಲಿ ಅದು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ 32-20 ಅಂತರದ ಜಯ ಸಾಧಿಸಿತು. ಇದು ಹರ್ಯಾಣಕ್ಕೆ ಒಲಿದ ಮೊದಲ ಜಯವೆಂಬುದು ಉಲ್ಲೇಖನೀಯ.

Advertisement

ಅತ್ಯಂತ ರೋಚಕವಾಗಿ ನಡೆದ ಬೆಂಗಳೂರು ಬುಲ್ಸ್‌-ತೆಲುಗು ಟೈಟಾನ್ಸ್‌ ನಡುವಿನ ದಿನದ ದ್ವಿತೀಯ ಪಂದ್ಯ 21-21 ಅಂಕಗಳಿಂದ ಟೈ ಆಯಿತು. ಇದರೊಂದಿಗೆ ಎರಡೂ ತಂಡಗಳು ಸೋಲಿನ ಸರಪಳಿ ಯನ್ನು ಕಡಿದುಕೊಂಡವು. ಇದು ಈ ಪಂದ್ಯಾವಳಿಯ 2ನೇ ಟೈ ಪಂದ್ಯ.
ಹೈದರಾಬಾದ್‌ನಲ್ಲಿ ನಡೆದ ಹರ್ಯಾಣ- ಗುಜರಾತ್‌ ನಡುವಿನ ಮೊದಲ ಪಂದ್ಯ ಟೈ ಆಗಿತ್ತು (27-27). ಆದರೆ ಮಂಗಳವಾರದ ಮುಖಾಮುಖೀಯಲ್ಲಿ ಅಂಥ ರೋಚಕತೆ ಸೃಷ್ಟಿಯಾಗಲಿಲ್ಲ. ಬಹುತೇಕ ಏಕಪಕ್ಷೀಯ ವಾಗಿಯೇ ಸಾಗಿತು ಮತ್ತು ಹರ್ಯಾಣ ತನ್ನ ಪ್ರಾಬಲ್ಯ ತೋರ್ಪಡಿಸಿತು.

ಮೊದಲಾರ್ಧದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕಿಳಿದವು. ಅರ್ಧ ಅವಧಿ ಮುಗಿದಾಗ ಹರ್ಯಾಣ 13-9ರ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಹರ್ಯಾಣ ಆಕ್ರಮಣಕಾರಿ ಆಟಕ್ಕಿಳಿಯಿತು. ಅಮೋಘ ರೈಡ್ಸ್‌ ಮತ್ತು ಟ್ಯಾಕಲ್ಸ್‌ನಲ್ಲಿ ಹರ್ಯಾಣ ಸ್ಪಷ್ಟ ಮೇಲುಗೈ ಸಾಧಿಸಿತು; ಗುಜರಾತನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತು. ಈ ಹಿಡಿತದಿಂದ ಪಾರಾಗಲು ಗುಜರಾತ್‌ಗೆ ಸಾಧ್ಯವಾಗಲೇ ಇಲ್ಲ. ಗುಜರಾತ್‌ ತಂಡದ ಸುಕೇಶ್‌ ಹೆಗ್ಡೆ ಮೊದಲಾರ್ಧದಲ್ಲಿ ಸ್ವಲ್ಪ ವೇಳೆಯಷ್ಟೇ ಕಣದಲ್ಲಿ ಕಾಣಿಸಿಕೊಂಡರು. 

ವಿಜೇತ ಹರ್ಯಾಣ ತಂಡದ ಮೋಹಿತ್‌ ಚಿಲ್ಲಾರ್‌ ಪಂದ್ಯದ ಆಟಗಾರ, ವಿಕಾಸ್‌ ಖಂಡೋಲ ಪರಿಪೂರ್ಣ ರೈಡರ್‌ ಗೌರವಕ್ಕೆ ಪಾತ್ರರಾದರು. ಮೋಹಿತ್‌ ಕ್ಯಾಚಿಂಗ್‌ ಮೂಲಕ 7 ಅಂಕ ಸಂಪಾದಿಸಿದರೆ, ಖಂಡೋಲ ರೈಡಿಂಗ್‌ನಲ್ಲಿ 6 ಅಂಕ ಕಲೆಹಾಕಿದರು.

ಕರ್ನಾಟಕ ಮೂಲದ ಸುಕೇಶ್‌ ಹೆಗ್ಡೆ ನಾಯಕತ್ವದ ಗುಜರಾತ್‌ ಪರ ಸಚಿನ್‌ 8, ಮಹೇಂದ್ರ ರಜಪೂತ್‌ 5 ಅಂಕ ಗಳಿಸಿದರಾದರೂ ತಂಡದ ಗೆಲುವಿಗೆ ಇದು ನೆರವಾಗಲಿಲ್ಲ. 35ನೇ ನಿಮಿಷದಲ್ಲಿ ಹರ್ಯಾಣ ತಂಡವನ್ನು ಆಲೌಟ್‌ ಮಾಡುವ ಅವಕಾಶವನ್ನು ಗುಜರಾತ್‌ ಕೈಚೆಲ್ಲಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next