Advertisement

ಅರಸೀಕೆರೆ ಗ್ರಾಪಂ ಮೇಲ್ದರ್ಜೆಗೇರಿಸಲು ಸಿದ್ಧತೆ

05:08 PM Jun 06, 2020 | Naveen |

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿ ಪಟ್ಟಣ ಪಂಚಾಯ್ತಿ ಮಾಡಲು ಸಿದ್ಧತೆ ನಡೆದಿದ್ದು, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಉಪ ಕಾರ್ಯದರ್ಶಿ ಅವರು ಜಿ.ಪಂ ಸಿಇಒ ಅವರಿಗೆ ಪತ್ರ ಬರೆದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

Advertisement

ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 4ರಡಿಯಲ್ಲಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಸಿಇಒ ಅವರಿಗೆ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ. ಅರಸೀಕೆರೆ ಗ್ರಾಪಂ ಒಂದು ಹೋಬಳಿ ಗ್ರಾಮವಾಗಿದ್ದು, ಸುಮಾರು 22 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿದೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಯು ಕಾಲೇಜ್‌, ಪದವಿ ಕಾಲೇಜು, ಪ್ರೌಢ ಶಾಲೆಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಐಟಿಐ ಕಾಲೇಜುಗಳಿವೆ. ಇದಲ್ಲದೇ ಸಮುದಾಯ ಆರೋಗ್ಯ ಕೇಂದ್ರ, ನಾಡ ಕಚೇರಿ, ಆರಕ್ಷಕ ಠಾಣೆ, ಉಪ ತಹಶೀಲ್ದಾರ್‌ ಕಚೇರಿ, ಪೋಸ್ಟ್‌ ಆಫೀಸ್‌, ಕೃಷಿ ಕಚೇರಿ, ಕೆಇಬಿ ಆಫೀಸ್‌, ಪಶು ಚಿಕಿತ್ಸಾ ಕೇಂದ್ರ, ಕರ್ನಾಟಕ ಗ್ರಾಮೀಣ ಬ್ಯಾಂಕ್‌, ಕೃಷಿ ಪತ್ತಿನ ಸಹಕಾರ ಸಂಘ, ಬಿಡಿಸಿಸಿ ಬ್ಯಾಂಕ್‌ ಹೊಂದಿದೆ.

ಪಂಚಗಣಾಧೀಶರಲ್ಲೊಬ್ಬರಾದ ಶ್ರೀ ಕೋಲುಶಾಂತೇಶ್ವರ ಮಠ ಹಾಗೂ ಗ್ರಾಮಕ್ಕೆ ಸುಸಜ್ಜಿತವಾದ ಸಾರಿಗೆ ಸಂಪರ್ಕವಿದ್ದು, ಅತ್ಯಂತ ದೊಡ್ಡ ಗ್ರಾಮವಾಗಿದೆ. ಈಗಾಗಲೇ ಗ್ರಾಮ ಪಂಚಾಯಿತಿನಲ್ಲಿ 16 ಗ್ರಾಪಂ ಸದಸ್ಯರುಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಅರಸೀಕೆರೆ ಗ್ರಾಮ ಪಂಚಾಯ್ತಿಯನ್ನು ಉನ್ನತೀಕರಿಸಿ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next