Advertisement

ಕೈಕೊಟ್ಟ ಮಳೆ: ವಾಣಿಜ್ಯ ಬೆಳೆ ಬಿತ್ತನೆ ಕುಂಠಿತ

02:41 PM Sep 02, 2017 | |

ಚಿತ್ರದುರ್ಗ: ಬಿಟ್ಟೂ ಬಿಡದಂತೆ ಜಿಲ್ಲೆಯನ್ನು ಕಾಡುತ್ತಿರುವ ಬರ ಪ್ರಸಕ್ತ ಸಾಲಿನಲ್ಲೂ ಮುಂದುವರೆದಿದ್ದು, ಮುಂಗಾರು ಮಳೆ ಈ ವರ್ಷವೂ ಕೈಕೊಟ್ಟಿದೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡುವ ಪ್ರಮುಖ ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳದ ಬಿತ್ತನೆ ಕುಂಠಿತಗೊಂಡಿದೆ.

Advertisement

ಮುಂಗಾರು ಹಂಗಾಮಿನಲ್ಲಿ ಏಕದಳ, ದ್ವಿದಳ, ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳು ಸೇರಿದಂತೆ ಒಟ್ಟು 3,58,340 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಇದುವರೆಗೆ 2,24,859 ಹೆಕ್ಟೇರ್‌ ಬಿತ್ತನೆ ಮಾಡುವ ಮೂಲಕ ಶೇ. 62.8ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಮಾಡಲಾದ ಬೆಳೆಗಳು ಮಳೆ ಕೊರತೆಯಿಂದಾಗಿ ಒಣಗುತ್ತಿವೆ.

ಶೇಂಗಾ ಸೇರಿ ಎಲ್ಲ ಬೆಳೆಗಳ ಬಿತ್ತನೆಯೂ ಕಡಿಮೆ:  ಮಳೆಯಾಶ್ರಿತದಲ್ಲಿ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಹೆಚ್ಚು ಶೇಂಗಾ ಬಿತ್ತನೆ ಮಾಡಲಾಗುತ್ತಿತ್ತು. 1,42,620 ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಗೆ ಕೇವಲ 83,790 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು 85,000 ಹೆಕ್ಟೇರ್‌ ಬಿತ್ತನೆ ಮಾಡುತ್ತಿದ್ದ ಚಳ್ಳಕೆರೆ ತಾಲೂಕಿನಲ್ಲಿ ಕೇವಲ 52,875 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಎರಡನೇ ಅತಿ ಹೆಚ್ಚು 26,500 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿರುವ ಮೊಳಕಾಲ್ಮೂರು ತಾಲೂಕಿನಲ್ಲಿ ಕೇವಲ 14,703 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಮೂರನೇ ಅತಿ ಹೆಚ್ಚು 20,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಿದ್ದ ಹಿರಿಯೂರು ತಾಲೂಕಿನಲ್ಲಿ 13,080 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಚಿತ್ರದುರ್ಗ ತಾಲೂಕಿನಲ್ಲಿ 8 ಸಾವಿರ ಹೆಕ್ಟೇರ್‌ ಬಿತ್ತನೆ ಪೈಕಿ ಕೇವಲ 1109 ಹೆಕ್ಟೇರ್‌, ಹೊಳಲ್ಕೆರೆ ತಾಲೂಕಿನಲ್ಲಿ 1 ಸಾವಿರ ಹೆಕ್ಟೇರ್‌ಗೆ 182 ಹೆಕ್ಟೇರ್‌, ಹೊಸದುರ್ಗ ತಾಲೂಕಿನ 2120 ಹೆಕ್ಟೇರ್‌ನಲ್ಲಿ 1841 ಹೆಕ್ಟೇರ್‌ ಮಾಡಿದ್ದು, ಒಟ್ಟಾರೆ 83,790 ಹೆಕ್ಟೇರ್‌ ಶೇಂಗಾ ಬಿತ್ತನೆ
ಮಾಡಲಾಗಿದೆ. ಬಿತ್ತನೆ ಮಾಡಿರುವ ಶೇಂಗಾ ಬೆಳೆಗಳು ಒಣಗಿಹೋಗುತ್ತಿವೆ.

ಮೆಕ್ಕೆಜೋಳ ಸ್ಪಲ್ಪ ವಾಸಿ: ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ ಮೆಕ್ಕೆಜೋಳವನ್ನು ವಾಣಿಜ್ಯ ಬೆಳೆಯಾಗಿ ಮತ್ತು ಜಾನುವಾರುಗಳ ಮೇವಿಗಾಗಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 88,300 ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆಗೆ ಇದುವರೆಗೆ 74,738 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇದ್ದಿದ್ದರಲ್ಲಿ ಮೆಕ್ಕೆಜೋಳದ ಬಿತ್ತನೆ ಸ್ಪಲ್ಪ ವಾಸಿ. ಜಾನುವಾರುಗಳ ಮೇವಿಗಾಗಿ 52,100 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದುವರೆಗೆ ಕೇವಲ 27,321 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಹೊಸದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ
29,450 ಹೆಕ್ಟೇರ್‌ ಬಿತ್ತನೆ ಗುರಿಗೆ 1370 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಹಿರಿಯೂರಲ್ಲಿ 8 ಸಾವಿರ ಹೆಕ್ಟೇರ್‌ ಪೈಕಿ 65 ಹೆಕ್ಟೇರ್‌, ಹೊಳಲ್ಕೆರೆಯಲ್ಲಿ 8 ಸಾವಿರ ಹೆಕ್ಟೇರ್‌ನಲ್ಲಿ 870 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ಶೇಂಗಾ, ಸೂರ್ಯಕಾಂತಿ ಮತ್ತಿತರ ಮಳೆಯಾಶ್ರಿತ ಬೆಳಗಳಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ 23,900 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದ ತೊಗರಿ ಬಿತ್ತನೆ ಗುರಿಯಲ್ಲಿ ಕೇವಲ 9345 ಹೆಕ್ಟೇರ್‌ ಬಿತ್ತನೆಯಾಗಿದೆ. 7485 ಹೆಕ್ಟೇರ್‌ ಸೂರ್ಯಕಾಂತಿ ಬಿತ್ತನೆಯಾಗಬೇಕಿದ್ದು, 977 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಏಕದಳ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಸಾವೆ ಸೇರಿ ಒಟ್ಟು 1,56,495 ಹೆಕ್ಟೇರ್‌ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 1,15,129 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು,
ಅಲಸಂದೆ, ಅವರೆ ಸೇರಿದಂತೆ ಬೇಳೆಕಾಳುಗಳು ಸೇರಿ 34,660 ಹೆಕ್ಟೇರ್‌ ಗುರಿ ಹೊಂದಲಾಗಿದ್ದು, ಕೇವಲ 16,016 ಹೆಕ್ಟೇರ್‌ ಬಿತ್ತನೆಯಾಗಿದೆ.

Advertisement

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು ಮತ್ತು ಎಣ್ಣೆ ಕಾಳುಗಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸುವೆ, ಸೋಯಾಬಿನ್‌ ಸೇರಿ 1,53,915 ಹೆಕ್ಟೇರ್‌ ಬಿತ್ತನೆ ಗುರಿಗೆ 85,081 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು 13,270 ಹೆಕ್ಟೇರ್‌ ಬಿತ್ತನೆಯಾಗಬೇಕಿತ್ತು. 8633 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಕೈ ಕೊಟ್ಟ ವಾಡಿಕೆ ಮಳೆ: ಜಿಲ್ಲೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಮಳೆ ಕೈಕೊಟ್ಟಿದೆ. ಆಗಸ್ಟ್‌ ವರೆಗೆ 266 ಮಿಮೀ ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ 221 ಮಿಮೀ ಮಳೆಯಾಗಿದ್ದು 17 ಮಿಮೀ ಕೊರತೆಯಾಗಿದೆ. ಮಳೆ ವೈಫಲ್ಯ ಹಾಗೂ ಬೆಳೆ ಒಣಗುತ್ತಿರುವುದರಿಂದ ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿದಿದ್ದು, ಪರ್ಯಾಯ ಬೆಳೆಯಾಗಿ ರಾಗಿ ಬಿತ್ತನೆ ಮಾಡಬಹುದಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಬಿತ್ತನೆ ಗುರಿ ಸಾಧಿಸಲು ಆಗುತ್ತಿಲ್ಲ. ಬಿತ್ತನೆ ಮಾಡಲಾದ ಬೆಳೆಗಳಿಗೆ ಮಳೆಯ ಅಗತ್ಯವಿದೆ.
ಲಕ್ಷ್ಮಣ ಕಳ್ಳೇನವರ, ಜಂಟಿ ಕೃಷಿ ನಿರ್ದೇಶಕರು.

ಕೂನಿಕೆರೆ ಹೋಬಳಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆಯೇ ಆಗಿಲ್ಲ. ಹೀಗಾಗಿ ಬಿತ್ತನೆ ಮಾಡಲು ಆಗಿಲ್ಲ. ಬಿತ್ತನೆ ಮಾಡದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. 
ಹನುಮಂತಪ್ಪ, ರೈತ, ಮಾಯಸಂದ್ರ.

Advertisement

Udayavani is now on Telegram. Click here to join our channel and stay updated with the latest news.

Next