Advertisement

ಎಚ್‌.ವಿಶ್ವನಾಥ್‌ ಪುತ್ರ ಸ್ಪರ್ಧೆಗೆ ಸಮ್ಮತಿ ಇಲ್ಲ

09:16 PM Nov 11, 2019 | Team Udayavani |

ಹುಣಸೂರು: ಹುಣಸೂರು ಉಪ ಚುನಾವಣೆಯಲ್ಲಿ ವಿಶ್ವನಾಥ್‌ ಅಥವಾ ತಾವು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದು, ವಿಶ್ವನಾಥ್‌ ಪುತ್ರ ಸೇರಿದಂತೆ ಹೊರಗಿನವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್‌.ಯೋಗಾನಂದಕುಮಾರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ‌ ಬರಲು ಕಾರಣರಾದ ಎಚ್‌.ವಿಶ್ವನಾಥ್‌ ಅಭ್ಯರ್ಥಿಯಾದರೆ ಮಾತ್ರ ತಾಲೂಕು ಬಿಜೆಪಿ ಘಟಕ ಸ್ವಾಗತಿಸುತ್ತದೆ. ಅವರ ಸ್ಪರ್ಧೆ ಇಲ್ಲದಿದ್ದಲ್ಲಿ ಸ್ಥಳೀಯರೇ ಅಭ್ಯರ್ಥಿಯಾಗಬೇಕೆಂದು ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿ ಭೇಟಿಯಾಗಿದ್ದ ವೇಳೆ ನಮ್ಮೆಲ್ಲರ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಸಮ್ಮತಿ ಸೂಚಿಸಿದ್ದರು ಎಂದರು.

ಕ್ಷೇತ್ರದ ಜನರಲ್ಲೂ ಸ್ಥಳೀಯರೇ ಅಭ್ಯರ್ಥಿಯಾಗಬೇಕೆಂಬ ಮಹದಾಸೆ ಇದೆ. ಈ ಹಿಂದೆ ವಸಂತಕುಮಾರ್‌ಗೌಡ ತಾವೇ ಅಭ್ಯರ್ಥಿ ಎಂದು ಕಳೆದ ಚುನಾವಣೆ ಸಂದರ್ಭದಲ್ಲೂ ಕಾಣಿಸಿಕೊಂಡು ಟಿಕೆಟ್‌ ಇಲ್ಲವೆಂದ ಕೂಡಲೇ ಹುಣಸೂರಿನಿಂದ ಕಾಲ್ಕಿತ್ತರು ಎಂದು ಸ್ಮರಿಸಿದ ಯೋಗಾನಂದ್‌, ಯಾವುದೇ ಕಾರಣಕ್ಕೂ ವಲಸಿಗರಿಗೆ ಮಣೆ ಹಾಕಬಾರದು ಎಂದು ಆಗ್ರಹಿಸಿದರು.

ಆಮಿಷಕ್ಕೆ ಬಲಿಯಾಗಬೇಡಿ: ಕೆಲವರು ಯೋಗೇಶ್ವರ ಆಸೆ ಆಮಿಷಕ್ಕೆ ಬಲಿಯಾಗಿ ಕ್ಷೇತ್ರದಲ್ಲಿ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಹೈಕಮಾಂಡ್‌ ಹಾಗೂ ತಾಲೂಕು ಘಟಕವಾಗಲಿ ಯೋಗೇಶ್ವರ್‌ ಸ್ಪರ್ಧೆಗೆ ಒಲವು ತೋರಿಲ್ಲ, ತಾಲೂಕಿನ ಯಾವುದೇ ಪದಾಧಿಕಾರಿ, ಮುಖಂಡರು, ಕಾರ್ಯಕರ್ತರನ್ನು ಸಂಪರ್ಕಿಸಿಲ್ಲ, ಅವರು ಏಕಾಏಕಿ ಗೊಂದಲ ಮೂಡಿಸುತ್ತಿರುವುದು ತರವಲ್ಲ.

ಇನ್ನು ಕ್ಷೇತ್ರದ ಜನರು, ಕಾರ್ಯಕರ್ತರು ಆಮಿಷಕ್ಕೆ ಬಲಿಯಾಗದಂತೆ ಮನವಿ ಮಾಡಿದರು. ಕ್ಷೇತ್ರದಲ್ಲಿ ಅವಕಾಶವಾದಿಗಳಿಗೆ, ವಲಸೆಗಾರರಿಗೆ ಅವಕಾಶವಿಲ್ಲ. 2017ರಲ್ಲಿ ನಡೆದ ಹನುಮಂತೋತ್ಸವ ಸಂದರ್ಭದಲ್ಲಿ ನಗರದಲ್ಲಿ ಗಲಾಟೆ ನಡೆಯುತ್ತಿದೆ ಎಂಬ ವಿಷಯ ತಿಳಿದು ಬಿಳಿಕೆರೆಯಿಂದಲೇ ವಾಪಸ್‌ ಹೋದ ಯೋಗೇಶ್ವರ್‌ರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ತಾಲೂಕಿನಲ್ಲಿ ಪಕ್ಷ ಸದೃಢವಾಗಿದ್ದು, ತಾವು ಪ್ರಬಲ ಆಕಾಂಕ್ಷಿಯಾಗಿದ್ದೇನೆ.

Advertisement

ತಾಲೂಕಿನ ಎಲ್ಲ ಕಾರ್ಯಕರ್ತರು ತಮ್ಮ ಪರವಾಗಿದ್ದಾರೆ. ಇದನ್ನು ವರಿಷ್ಠರಿಗೆ ಮತ್ತೂಮ್ಮೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅತಿ ಕಡಿಮೆ ಮತ ಗಳಿಸಿದ್ದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಹೈಕಮಾಂಡ್‌ ಹಂತದಲ್ಲೇ ತೀರ್ಮಾನವಾಗಿದ್ದಂತೆ ಮ್ಯಾಚ್‌ ಫಿಕ್ಸಿಂಗ್‌ ಆಗಿತ್ತು. ಈ ಬಾರಿ ಆ ರೀತಿ ನಡೆಯುವುದಿಲ್ಲ ಎಂದರು.

ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಕೆ.ಟಿ.ಗೋಪಾಲ್‌ ಮಾತನಾಡಿ, ತಾಲೂಕು ಘಟಕದಿಂದ ಯೋಗಾನಂದಕುಮಾರ್‌ ಹೆಸರು ಮಾತ್ರ ಸೂಚಿಸಲಾಗಿದೆ. ವಿಶ್ವನಾಥರನ್ನು ಹೊರತು ಪಡಿಸಿ, ಅವರ ಪುತ್ರ ಸೇರಿದಂತೆ ಯಾರಿಗೆ ಟಿಕೆಟ್‌ ನೀಡುವುದನ್ನು ಒಪ್ಪುವುದಿಲ್ಲ ಎಂದರು. ಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ನಾರಾಯಣ್‌, ತಂಬಾಕು ಮಂಡಳಿ ಮಾಜಿ ಸದಸ್ಯ ಕಿರಣ್‌ಕುಮಾರ್‌, ಮುಖಂಡ ಸುಬ್ಬರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next