Advertisement

HDD ಮಗ, ಅಳಿಯ, ಮೊಮ್ಮಗ ಸೋಲು ಖಚಿತ : ಡಿ.ಕೆ.ಶಿವಕುಮಾರ್‌

01:01 AM Apr 21, 2024 | Team Udayavani |

ಕೆ.ಆರ್‌.ನಗರ: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಹಮ್ಮಿ ಕೊಳ್ಳದೆ, ಈಗ ಪುಕ್ಸಟ್ಟೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವಕಾಶವಾದಿ ರಾಜಕಾರಣಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಪರ ನಡೆದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. “ನೀನು ಅಧಿಕಾರದಲ್ಲಿದ್ದಾಗ ಜನರಿಗೆ ಮಾಡಿದ ಶಾಶ್ವತ ಕೆಲಸಗಳನ್ನು ತಿಳಿಸಬೇಕು. ಕೊಟ್ಟ ಕುದುರೆ ಏರಲು ಬಾರದವನು ವೀರನೂ ಅಲ್ಲ. ಶೂರನೂ ಅಲ್ಲ. ಇದು ಕುಮಾರಸ್ವಾಮಿ ಕಥೆ. ನನ್ನ ಜಮೀನಿನಲ್ಲಿ ಬಂಡೆಕಲ್ಲು ಒಡೆಯಲು ನಿನಗೆ ಅರ್ಜಿ ಹಾಕಿಕೊಳ್ಳಬೇಕಾ?’ ಎಂದು ಎಚ್‌.ಡಿ.ಕುಮಾರ ಸ್ವಾಮಿ ಅವರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದು ಕೊಂಡರು. “ಮಂಡ್ಯ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಗಳಾಗಿದ್ದ ಎಂ.ತಮ್ಮಣ್ಣ ಮತ್ತು ಸಿ.ಎಸ್‌.ಪುಟ್ಟರಾಜು ಅವರಿಗೆ ಚಾಕ ಲೇಟ್‌ ನೀಡಿರುವ ಕುಮಾರಸ್ವಾಮಿ, ತಾವೇ ಅಭ್ಯರ್ಥಿಯಾಗಿದ್ದು, ಅವರು ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಹಾಸನ ಮತ್ತು ರಾಮನಗರ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಮಂಡ್ಯ ಕ್ಷೇತ್ರಕ್ಕೆ ಏಕೆ ಬಂದಿದ್ದೀಯ?’ ಎಂದು ಜರಿದರು. “ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿಯವರು ಜೆಡಿಎಸ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದರಲ್ಲಿ ಅವರು ಸಫ‌ಲರಾಗುವುದಿಲ್ಲ’ ಎಂದರು.

ಅಧಿಕಾರ ಇರುವಾಗಲೇ ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಏನೂ ಮಾಡಲಿಲ್ಲ. ಈಗ ಬಂದು ನನ್ನನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಗ, ಅಳಿಯ, ಮೊಮ್ಮಗ (ಕುಮಾರಸ್ವಾಮಿ, ಮಂಜುನಾಥ್‌, ಪ್ರಜ್ವಲ್‌) ಸೋಲುವುದು ಖಚಿತ. ಮುಂದೆ ಜೆಡಿಎಸ್‌ನ್ನು ಬಿಜೆಪಿ ಜತೆ ವಿಲೀನ ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next