Advertisement

ರಾಜ್ಯದಲ್ಲಿ ಜನಾದೇಶ ಇಲ್ಲದ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ: ಎಚ್.ಸಿ.ಮಹದೇವಪ್ಪ

11:14 AM Jul 26, 2021 | Team Udayavani |

ವಿಜಯಪುರ: ಕೇಂದ್ರದಲ್ಲಿ ಜನಾದೇಶದ ಬಿಜೆಪಿ ಸರ್ಕಾರ ಏಳು ವರ್ಷ ಪೂರೈಸಿದೆ. ಆದರೆ ರಾಜ್ಯದಲ್ಲಿ ಜನಮನ್ನಣೆ ಇಲ್ಲದೇ ಶಾಸಕರನ್ನು ಖರೀದಿಸಿ ಜನಾದೇಶ ಇಲ್ಲದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎರಡು ವರ್ಷಗಳ ಹಿಂದೆ ಬಾಂಬೆ‌ ಶಾಸಕರಿಂದ ರಚನೆಯಾದ ಯಡಿಯೂರಪ್ಪ ನೇತೃತ್ವದಲ್ಲಿ ನೈತಿಕತೆ ಇಲ್ಲದ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ‌ ಅಧಿಕಾರಕ್ಕೆ ಬಂದಿದೆ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಎಚ್.ಸಿ. ಮಹದೇವಪ್ಪ ಟೀಕಿಸಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರ, ರಾಜ್ಯದಲ್ಲಿ ಸಂವಿಧಾನ ವಿರೋಧಿ ಸರ್ಕಾರ ರಚಿಸಿದ್ದರಿಂದ ಜನಪರ ಕಾರ್ಯಕ್ರಮ ನೀಡಲು ಸಾಧ್ಯವಾಗುತ್ತಿಲ್ಲ. ಜನಾದೇಶವೇ ಇಲ್ಲದ ಬಿಜೆಪಿ ಹಣಬಲ, ಜಾತಿಬಲ, ತೋಳ್ಬಲದಂಥ ಅಸ್ತ್ರಗಳನ್ನು ಬಳಸಿಕೊಂಡು ಸರ್ಕಾರ ಹಾಗೂ ಮುಖ್ಯಮಂತ್ರಿ ಹುದ್ದೆಯ ಘನತೆಯನ್ನೇ ಕಳೆದಿದೆ ಎಂದು ಕುಟುಕಿದರು.

ರಾಜ್ಯದಲ್ಲಿ ಕಳೆದ ವರ್ಷದ ಪ್ರವಾಹ ಸಂತ್ರಸ್ತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಬಜೆಟ್‌ನಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಬಳಸದೇ ವಂಚಿಸಿದ್ದೇ ಈ ಸರ್ಕಾರದ ಸಾಧನೆ ಎಂದು ದೂರಿದರು.

ದೇಶದಲ್ಲಿ ಜನರ ಪ್ರತಿಕ್ರಿಯೆಗೂ ಅವಕಾಶ ನೀಡದೇ ಅವೈಜ್ಞಾನಿಕ ರೀತಿಯಲ್ಲಿ ಶಿಕ್ಷಣ ನೂತನ ನೀತಿ ಅನುಷ್ಠಾನಕ್ಕೆ ಮುಂದಾಗಿದೆ. ಇದು ಭವಿಷ್ಯದ ಭಾರತದ ಶೈಕ್ಷಣಿಕ ವ್ಯವಸ್ಥೆಗೆ ಬರೆ ಎಳೆಯುವ ಹಾಗೂ ಉಳ್ಳವರು ಮಾತ್ರ ಶಿಕ್ಷಣ ಪಡೆಯುವ ದುಸ್ಥಿತಿ ನಿರ್ಮಿಸಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ:ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

Advertisement

ಸಾಂಕ್ರಾಮಿಕ ರೋಗ ತಜ್ಞರ ಸಲಹೆ, ಅಧ್ಯಯನ ಪಡೆಯದೇ ಅವೈಜ್ಞಾನಿಕ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂಬಂಥ ಕರೆಗಳ ಮೂಲಕ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಸ್ಥಿತಿ ಗಂಭೀರ ಪರಿಣಾಮ ಬೀರಲು ಕಾರಣವಾಯಿತು ಎಂದು ದೂರಿದರು.

ಕೋವಿಡ್ ಲಾಕಡೌನ್, ಸೀಲಡೌನ್ ಹೆಸರಿನಲ್ಲಿ ಬಡವರು, ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಎರಡನೇ ಅಲೆಯ ಸಿದ್ಧತೆಯಲ್ಲೂ ವಿಫಲವಾಗಿದ್ದರಿಂದ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿ ವರ್ತನೆಯಿಂದ ದೇಶದಲ್ಲಿ ಜನತೆ ಆರ್ಥಿಕ ಸಂಕಷ್ಟ ಅನುಭವಿಸುವಂತೆ ಆಯ್ತು ಎಂದು ಟೀಕಿಸಿದರು. ಕೋವಿಡ್ ಸಂಭವನೀಯ ಮೂರನೇ ಅಲೆಯ ಬಗ್ಗೆ ಸರ್ಕಾರ ಇನ್ನಾದರೂ ಗಂಭೀರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರ‌ ಸರ್ಕಾರದ ನೋಟು ಅಮಾನ್ಯೀಕರಣದಂಥ ಅವೈಜ್ಞಾನಿಕ ನಿರ್ಧಾರದಿಂದ ದೇಶದಲ್ಲಿ ಜನಸಾಮಾನ್ಯರ ಕೊಳ್ಳುವ ಶಕ್ತಿಯೇ ಇಲ್ಲವಾಯಿತು. ಅಧಿಕಾರಕ್ಕೆ ಬಂದರೆ ದೇಶದ ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ನೀಡುವ ಭರವಸೆ ಹುಸಿಯಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ದೇವರಾಜ ಅರಸು ಸರ್ಕಾರ ಕರ್ನಾಟಕದಲ್ಲಿ ಉಳುವವನೇ ಒಡೆಯ ಕಾನೂನು ಜಾರಿಗೆ ತಂದ ದೇಶದ ಮೊದಲ ರಾಜ್ಯ. ಆದರೆ ದೇಶದ ಜನ‌ ಕೋವಿಡ್ ಲಾಕ್ ಡೌನ್ ಸಂಕಷ್ಟದಲ್ಲಿ ಇದ್ದಾಗ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿಕೊಂಡು ಹಣವಂತರು ಬೇಕಾಬಿಟ್ಟಿಯಾಗಿ ರೈತರ ಜಮೀನು ಕೊಳ್ಳುವ ಕಾನೂನು‌ ತಿದ್ದುಪಡಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ಕೃಷಿಯ ಬೆನ್ನೆಲುಬು ಮುರಿಯುವ ಕೆಲಸ ಮಾಡಿದ್ದಾರೆ. ಇಂಥ ಕ್ರಮಗಳನ್ನೇ ಇವರು ಪ್ರಜಾಪ್ರಭುತ್ವ ನಡೆ ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚಂದ್ರಶೇಖರ ಕೊಡಬಾಗಿ, ಸುನಿಲ ಉಕ್ಕಲಿ, ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ಸುರೇಶ ಘೊಣಸಗಿ, ರಾಜು ಆಲಗೂರ, ಸಂಗಪ್ಪ ಚಲವಾದಿ, ಬಸವರಾಜ ಬಾದಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next