Advertisement

ಗುರುಮಠಕಲ್‌ ಕ್ಷೇತದ ಅಭಿವೃದ್ಧಿಗೆ ಬದ್ಧ: ಜಾಧವ

02:12 PM Oct 11, 2021 | Team Udayavani |

ಸೈದಾಪುರ: ಗುರುಮಠಕಲ್‌ ಮತಕ್ಷೇತ್ರದ ಜನರು ವಲಸೆ ಹೋಗುವುದನ್ನು ನಿಲ್ಲಿಸುವ ಉದ್ದೇಶದಿಂದ ಬೃಹತ್‌ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಕ್ಷೇತ್ರದ ಜನರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಕಲಬುರ್ಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಸತತ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.

ನಂತರ ಮಾತನಾಡಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು, ಗುರುಮಠಕಲ್‌ ಮತಕ್ಷೇತ್ರದ ಜನರ ಆಶೀರ್ವಾದದಿಂದ ಅನೇಕ ಶೈಕ್ಷಣಿಕ ಯೋಜನೆಗಳು ತರಲು ಪ್ರಯತ್ನಿಸಿದ್ದೇನೆ. ಈ ಭಾಗದ ಜನ ಗುಳೆ ಹೋಗುವುದನ್ನು ತಪ್ಪಿಸಲು ಕೈಗಾರಿಕಾ ವಲಯ ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ ಎಂದರು.

ತಾಪಂ ಮಾಜಿ ಸದಸ್ಯ ಚಂದಪ್ಪ ಕಾವಲಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ಶರಣಗೌಡ ಕಾಳೆಬೆಳಗುಂದಿ, ಮರೆಪ್ಪ ಕಟ್ಟಿಮನಿ, ಶರಣಪ್ಪಗೌಡ ಬಾಲಚೇಡ, ಶ್ರೀದೇವಿ ಶೆಟ್ಟಿಹಳ್ಳಿ, ಭೀಮಣ್ಣ ಮಡಿವಾಳಕರ್‌, ಮಲ್ಲೇಶ ಅಮರೇಶ ನಾಯಕ, ಶಿವುಕುಮಾರ ಮುನಗಾಲ, ರಾಕೇಶ ಕೋರೆ, ಲಕ್ಷ್ಮಣ ನಾಯಕ ಓಬಳಾಪುರ, ಮಶೇಪ್ಪ, ಬಸ್ಸು ಬಳಿಚಕ್ರ, ಬಸ್ಸು ಹಿರೇನೂರು, ಬಸವಂತ ಬೆಳಗುಂದಿ, ರಮೇಶ ಭೀಮನಳ್ಳಿ, ಪಕ್ಷದ ಕಾರ್ಯಕರ್ತರು, ಪ್ರಮುಖ ಮುಖಂಡರು, ಯುವಕರು ಇದ್ದರು.

ಕ್ಷಮೆಯಾಚಿಸಿದ ಚಿಂಚನಸೂರು

Advertisement

ಗುರುಮಠಕಲ್‌ ಕ್ಷೇತ್ರದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಬಂದಳ್ಳಿ ಗ್ರಾಮದ ಹತ್ತಿರ ಏಕಲವ್ಯ ಶಾಲೆ ಸ್ಥಾಪಿಸಲು ತಾನು ಶ್ರಮಪಟ್ಟಿದ್ದೇನೆ. ಆದರೆ ತನ್ನ ಗಮನಕ್ಕೆ ತಾರದೇ ಶಾಲೆ ಉದ್ಘಾಟನೆ ಮಾಡುವುದು ಎಷ್ಟು ಸರಿ ಎಂದು ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದೇನೆ. ಅದನ್ನು ಪುರಸ್ಕರಿಸಿ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಆದರೆ ನಾಯಕ ಸಮುದಾಯದ ಯುವಕರು ತಪ್ಪು ಗ್ರಹಿಸಿಕೊಂಡಿದ್ದಾರೆ. ಎಲ್ಲ ಸಮುದಾಯದ ಜನರನ್ನು ಸಹೋದರತೆಯಿಂದ ಕಾಣುವ ವ್ಯಕ್ತಿ ನಾನು. ಆದ್ದರಿಂದ ನಿಮ್ಮ ಮನಸ್ಸಿಗೆ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ನಾಯಕ ಸಮುದಾಯದವರಲ್ಲಿ ಕೇಳಿಕೊಂಡರು.

ಸಂಸದರ ವಾಹನ ತಡೆದು ಆಕ್ರೋಶ

ಕಾರ್ಯಕರ್ತರ ಸಭೆಗೆ ಆಗಮಿಸಿದ ಕಲಬುರ್ಗಿ ಸಂಸದ ಜಾಧವ ಕೇವಲ ಭಾಷಣ ಮಾಡಿ, ಕೆಲ ಮನವಿ ಪತ್ರ ಸ್ವೀಕರಿಸಿದರು. ಆದರೆ ಬಿಜೆಪಿ ಕಾರ್ಯಕರ್ತರು ತಮ್ಮ ಸಮಸ್ಯೆಗೆ ಪರಿಹಾರ ಹೇಳಿ ಎಂದು ಕೇಳಿಕೊಂಡರು. ಆದರೆ ಇದ್ಯಾವುದಕ್ಕೆ ಕಿವಿಗೊಡದೆ ವಾಹನ ಹತ್ತಿ ಹೊರಡಲು ತಯಾರಾದರು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಸಂಸದರ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next