Advertisement

ಗುಂಡ್ಲುಪೇಟೆಯಲ್ಲಿ ಗೆಲುವು ನನ್ನದೇ: ಕಾಂಗ್ರೆಸ್‌ನ ಗೀತಾ ವಿಶ್ವಾಸ

12:59 PM Apr 11, 2017 | Team Udayavani |

ಮೈಸೂರು: ಕ್ಷೇತ್ರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಸಾಬೀತು ಮಾಡಿದ್ದು, ಉಪ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಗೀತಾ ಮಹದೇವಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮೈಸೂರಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ಕ್ಷೇತ್ರದೆಲ್ಲೆಡೆ ನಡೆಸಿದ ಪ್ರಚಾರದ ಸಂದರ್ಭ ದಲ್ಲಿ ಎಲ್ಲಾ ಕಡೆಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಇದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗಲಿದೆ.

ಪ್ರಚಾರದ ಸಂದರ್ಭದಲ್ಲಿ ತಾವು ಹೋದಲ್ಲೆಲ್ಲಾ ಜನರು ಹೆಚ್ಚಿನ ಪ್ರೀತಿ ತೋರಿಸಿದ್ದು, ಮತದಾನದ ದಿನದಂದು ಮತ ಹಾಕುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ. ಆದ್ದರಿಂದ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. ಹೊಸ ಅನುಭವ: ಉಪ ಚುನಾವಣೆಯ ಹಿನ್ನೆಲೆ ಕ್ಷೇತ್ರದೆಲ್ಲೆಡೆ ನಿರಂತರ ಪ್ರಚಾರ ನಡೆಸಿದ್ದು, ಹೊಸ ಅನುಭವ ನೀಡಿದೆ.

ತಮ್ಮ ಯಜಮಾನರು ಇದ್ದಾಗ ಎಂದಿಗೂ ಚುನಾವಣಾ ಪ್ರಚಾರ ಮಾಡಿರಲಿಲ್ಲ. ಎಲ್ಲೆಡೆ ತೆರಳಿ ಪ್ರಚಾರ ನಡೆಸುವುದೇ ಚುನಾವಣೆಯ ಅತ್ಯಂತ ಕಷ್ಟಕರವಾದ ಪ್ರಕ್ರಿಯೆಯಾಗಿದೆ. ಪ್ರಚಾರ ಕಾರ್ಯದ ನಂತರ ನಡೆಯುವುದು ಪರೀಕ್ಷೆಯಾಗಿದ್ದು, ಇದು ಮುಗಿದರೆ ಫ‌ಲಿತಾಂಶ ಬಂದ ಹಾಗೆ ಎಂದು ಗೀತಾ ಮಹದೇವಪ್ರಸಾದ್‌ ಹೇಳಿದರು.

ಮೊಮ್ಮಗನೊಂದಿಗೆ ಆಟವಾಡಿದ ಗೀತಾ
ಕಳೆದ ಕೆಲವು ದಿನಗಳಿಂದ ರಂಗೇರಿಸಿದ್ದ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ಅತ್ಯಂತ ಒತ್ತಡದಲ್ಲಿದ್ದ ಗುಂಡ್ಲುಪೇಟೆ ಕಾಂಗ್ರೆಸ್‌ ಅಭ‌Âರ್ಥಿ ಡಾ. ಗೀತಾ ಮಹದೇವಪ್ರಸಾದ್‌, ಚುನಾವಣೆ ಮುಗಿದ ಹಿನ್ನೆಲೆ ಸೋಮವಾರ ಇಡೀ ದಿನ ಕುಟುಂಬಸ್ಥರೊಂದಿಗೆ ಕಾಲಕಳೆದರು.

Advertisement

ಕುವೆಂಪುನಗರದ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ ಗೀತಾ, ಮೊಮ್ಮಗ ಇಷ್ಟಾರ್ಥ್ ಜತೆಗೆ ಆಟವಾಡುತ್ತಾ, ಸೊಸೆ ವಿದ್ಯಾಗಣೇಶ್‌ ಅವರೊಂದಿಗೆ ಮಾತುಕತೆ ನಡೆಸುತ್ತಾ ಚುನಾವಣೆಯ ಆಯಾಸ ಹಾಗೂ ಒತ್ತಡಗಳನ್ನು ಮರೆತರು.

Advertisement

Udayavani is now on Telegram. Click here to join our channel and stay updated with the latest news.

Next