Advertisement

 ಜಿಎಸ್‌ಬಿ ಸಾರಸ್ವತ ಕಲ್ಚರಲ್‌:ದಹಿಸರ್‌ ದಸರಾ- ದಾಂಡಿಯಾ ರಾಸ್‌

12:24 PM Sep 22, 2017 | Team Udayavani |

ಮುಂಬಯಿ: ದಶಮಾನೋತ್ಸವ ಸಂಭ್ರಮದಲ್ಲಿರುವ ಗೌಡ ಸಾರಸ್ವತ್‌ ಬ್ರಾಹ್ಮಣ್‌ ಸಭಾ ದಹಿಸರ್‌ ಬೊರಿವಲಿ ಸಂಸ್ಥೆಯ ವಾರ್ಷಿಕ ದಸರಾ ಮಹೋತ್ಸವವು ಗುರುವಾರ  ಆರಂಭಗೊಂಡಿತು.

Advertisement

ಕುಲಗುರು ದೈವಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು  ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ದಹಿಸರ್‌ ಪೂರ್ವದ ಎನ್‌.ಎಲ್‌. ಕಾಂಪ್ಲೆಕ್ಸ್‌ ನ ಸಾರಸ್ವತ ಕಲ್ಚರಲ್‌ ಆ್ಯಂಡ್‌ ರಿಕ್ರಿಯೇಷನ್‌ ಸೆಂಟರ್‌ ಮೈದಾನದಲ್ಲಿ ಸಜ್ಜುಗೊಳಿಸಲಾಗಿರುವ ಮಾಧವೇಂದ್ರ ಸಭಾಗೃಹದಲ್ಲಿನ ಭವ್ಯ ಅಲಂಕೃತ ಮಂಟಪದಲ್ಲಿ ಪುಷ್ಪಾಲಂಕೃತ,   ರಜತ ಪ್ರಭಾವಳಿ, ಸ್ವರ್ಣ ಮುಕುಟ, ವಜ್ರ, ಚಿನ್ನಾಭರಣದಿಂದ ಕಂಗೊಳಿಸುವ ಶ್ರೀ ಸರಸ್ವತಿ ದೇವಿಯನ್ನು ಬೆಳಗ್ಗೆ ಪ್ರತಿಷ್ಠಾನಗೊಳಿಸಿ ಅನಂತರ ಕನ್ಯಾಲಗ್ನದಲ್ಲಿ  ಪ್ರಾಣಪ್ರತಿಷ್ಠೆ ನಡೆಸುವ ಮುಖೇನ ದಶ ವಾರ್ಷಿಕ “ದಹಿಸರ್‌ ದಸರಾ’ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ವೇ| ಮೂ| ಲಕ್ಷ್ಮೀನಾರಾಯಣ ಭಟ್‌ ಇವರ ಪ್ರಧಾನ ಪೌರೋಹಿತ್ಯದಲ್ಲಿ ವೇ| ಮೂ| ಉಲ್ಲಾಸ್‌ ಭಟ್‌, ವೇದ ಮೂರ್ತಿ  ಮಂಜು ನಾಥ್‌ ಪುರಾಣಿಕ್‌, ವೇ| ಮೂ|   ಪ್ರಶಾಂತ್‌ ಪುರಾಣಿಕ್‌, ವೇ|ಮೂ| ವಿನಾಯಕ ಪುರಾಣಿಕ್‌ ಮತ್ತಿತರ ವಿದ್ವಾನರು ವಿವಿಧ ಪೂಜಾದಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು. ವಿವಿಧ ಭಜನ ಮಂಡಳಿಗಳು ಭಜನೆ ನಡೆಸಿದ್ದು, ಸಂಜೆ ಸುಧೀಂದ್ರ ನಗರ ಭಜನ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿತು.

ಈ ಸಂದರ್ಭದಲ್ಲಿ ಗೌಡ ಸಾರಸ್ವತ್‌ ಬ್ರಾಹ್ಮಣ್‌ ಸಭಾ ದಹಿಸರ್‌ ಬೊರಿವಲಿ ಸಂಸ್ಥೆಯ ಸಂಚಾಲಕರಾದ ಕುಂದಾಪುರ ಶ್ರೀನಿವಾಸ ಪ್ರಭು, ಜಿ. ಡಿ. ರಾವ್‌, ಸಿ. ಎಂ. ಎಸ್‌ ರಾವ್‌, ಶೋಭಾ ವಿ. ಕುಲ್ಕರ್ಣಿ, ಸುಗುಣಾ ಕೆ. ಕಾಮತ್‌, ಅಧ್ಯಕ್ಷ ಕೆ. ಆರ್‌. ಮಲ್ಯ, ಗೌರವ ಪ್ರಧಾನ  ಕಾರ್ಯದರ್ಶಿ ಎಂ.ಉದಯ ಪಡಿಯಾರ್‌, ಗೌರವ ಕೋಶಾಧಿಕಾರಿ ಮೋಹನ್‌ ಎ. ಕಾಮತ್‌,  ಜತೆ ಕಾರ್ಯದರ್ಶಿ ವಿನೋದ್‌ ಕೆ. ಪ್ರಭು ಹಾಗೂ  ಸೇವಾಕರ್ತರು  ಉಪಸ್ಥಿತರಿದ್ದರು.

ಸೆ. 22ರಂದು ಶುಕ್ರವಾರ ಅನ್ನಪೂರ್ಣೇಶ್ವರಿ ದೇವಿಗೆ ಬೆಳಗ್ಗೆ ಬಂಟ್ಸ್‌ ಸಂಘ ಜೋಗೇಶ್ವರಿ ದಹಿಸರ್‌ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಸೇವೆ ನಡೆಯಲಿದೆ. ಸಂಜೆ ದಹಿಸರ್‌ನ ವಿಟಮಿನ್‌ ಆರ್ಟ್‌ ಸಂಸ್ಥೆಯ ಅಕ್ಷಯ್‌ ಹೈರೆ ಮತ್ತು ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ದಶವಾರ್ಷಿಕವಾಗಿ ನಡೆಸ ಲ್ಪಡುವ ಈ ಶರನ್ನವರಾತ್ರಿ ಮಹೋತ್ಸವದಲ್ಲಿ ನಾಡಿನ ಸಮಸ್ತ ಭಕ್ತರು ಆಗಮಿಸಿ ಶ್ರೀಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಉತ್ಸವದ ಪ್ರಧಾನ ಸಂಘಟಕ, ಜತೆ ಕಾರ್ಯದರ್ಶಿ ಸಾಣೂರು ಮನೋಹರ್‌ ವಿ. ಕಾಮತ್‌ ಅವರು  ತಿಳಿಸಿದರು.

Advertisement

ನವರಾತ್ರಿ ದಿನಂಪ್ರತಿ ರಾತ್ರಿ 7ರಿಂದ 10ರಿಂದ ಗರ್ಭ, ದಾಂಡಿಯಾ ರಾಸ್‌ ನಡೆಯಲಿದೆ. ದಿನಂಪ್ರತಿ ಸುಮಾರು ನಾಲ್ಕೈದು ಸಾವಿರ ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ. ಸೆ. 28ರಂದು ಮಹಾಕಾಳಿ ದೇವಿಯ ಆರಾಧನೆಯ ದಿನ ಸಂಜೆ 6ರಿಂದ  ದೀಪೋತ್ಸವ ನಡೆಯಲಿದೆ. ದಶವಾರ್ಷಿಕ ದಹಿಸರ್‌ ದಸರೋತ್ಸವ ಆಚರಣೆಯಲ್ಲಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಇತರ ಮಂತ್ರಿಗಳು, ನಟನಟಿಯರು, ಶಿವಸೇನಾ ವರಿಷ್ಠ ಉದ್ಧಾವ್‌ ಠಾಕ್ರೆ, ಸಂಸದರು, ಗಣ್ಯಾಥಿ-ಗಣ್ಯರು ಆಗಮಿಸುವ ನಿರೀಕ್ಷೆಯಿದ್ದು, ಜತೆಗೆ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.

ಸೆ. 30ರಂದು ವಿಜಯದಶಮಿಯ ಶಾರದಾ ದೇವಿಗೆ ಪೂಜೆ ನೆರವೇರಿಸಿ   ಬೆಳಗ್ಗೆ  9ರಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ನಂತರ ಭಜನೆ. ಸಂಜೆ  4ರಿಂದ ಭಕ್ತರಿಂದ ಶ್ರೀ ದೇವಿಗೆ ಬಂದ ಸೀರೆಗಳ ಲಕ್ಕಿಡ್ರಾ  ಕಾರ್ಯಕ್ರಮ ನಡೆಯಲಿದೆ.  ಸಂಜೆ 5ರಿಂದ ವಿಸರ್ಜನ ಮೆರವಣಿಗೆ ನೆರವೇರಲಿದೆ ಎಂದು ನವರಾತ್ರಿ ಉತ್ಸವದ ಪ್ರಧಾನ ಸಂಘಟಕ, ಜಿ. ಎಸ್‌. ಬಿ. ಸಭಾದ ಜತೆ ಕಾರ್ಯದರ್ಶಿ ಸಾಣೂರು ಮನೋಹರ್‌ ಕಾಮತ್‌  ನುಡಿದರು.

 ಚಿತ್ರ- ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next