Advertisement

ಲಾಕ್‌ಡೌನ್‌ ಸಮಯದಲ್ಲಿ ತೋಡು ದುರಸ್ತಿ: ಹತ್ತಾರು ವರ್ಷಗಳ ನೆರೆ ಸಮಸ್ಯೆಗೆ ಪರಿಹಾರ

10:55 AM May 13, 2020 | mahesh |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಮೂಡುಗಿಳಿಯಾರು ಬಂಕನಕೆರೆ ಸಂಪರ್ಕಿಸುವ ತೋಡಿನಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ಪ್ರತಿವರ್ಷ ಹತ್ತಾರು ಎಕ್ರೆ ಕೃಷಿಭೂಮಿ ನೆರೆಗೆ ಆಹುತಿಯಾಗುತಿತ್ತು ಹಾಗೂ ಇದರಿಂದಾಗಿ ಸುತ್ತಲಿನ ಕೃಷಿಭೂಮಿ ಹಡಿಲು ಹಾಕಲಾಗಿತ್ತು. ಪ್ರಸ್ತುತ ಲಾಕ್‌ಡೌನ್‌ ಸಂದರ್ಭವನ್ನು ಬಳಸಿಕೊಂಡ ಸ್ಥಳೀಯರು ಉದ್ಯೋಗ ಖಾತರಿ ಯೋಜನೆಯ ಮೂಲಕ ತೋಡಿನ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದು ದಶಕಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಯನ್ನು ಗುರುತಿಸಿ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಉಪಾಧ್ಯಕ್ಷ ರಾಜಾರಾಮ್‌ ಶೆಟ್ಟಿ, ಸದಸ್ಯೆ ವಿಶಾಲಾ ಹಾಗೂ ಕೋಟ ವ್ಯಾವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತಿಮ್ಮ ಪೂಜಾರಿ ಮುಂತಾದವರ ಉಸ್ತುವಾರಿಯಲ್ಲಿ, ಪಿಡಿಒ ಸುರೇಶ್‌ ಅವರ ವಿಶೇಷ ಕಾಳಜಿ ಮೂಲಕ ಅನದಾನ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯ ಅವರ ವಿಶೇಷ ಕಾಳಜಿಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದ್ದಾರೆ. ಕಾರ್ಮಿಕರಿಗೆ ಗ್ರಾಮದ ಕೆಲವು ದಾನಿಗಳು ಉಪಾಹಾರ ಮುಂತಾದ ವ್ಯವಸ್ಥೆಗಳನ್ನು ನೀಡುತ್ತಿದ್ದು ಎಲ್ಲರೂ ಲವ-ಲವಿಕೆಯಿಂದ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ.

ಅನುದಾನಕ್ಕೆ ಬೇಡಿಕೆ
ಸುಮಾರು 4ಕಿ.ಮೀ. ವ್ಯಾಪ್ತಿಯ ಈ ತೋಡನ್ನು 3 ಲಕ್ಷ ರೂ. ಅನುದಾನ ಬಳಸಿ ದುರಸ್ತಿಗೆ ಮುಂದಾಗಿದ್ದು, ಸ್ಥಳೀಯ 40 ಮಂದಿ ಪ್ರತಿದಿನ ಕಾಮಗಾರಿಯಲ್ಲಿ ತೊಡಗಿದ್ದಾರೆ. ಈಗಾಗಲೇ ಅರ್ಧದಷ್ಟು ಕೆಲಸ ಮುಗಿಸಿದ್ದು ಮಳೆಗಾಲ ಆರಂಭವಾಗುವ ತನಕ ಕಾಮಗಾರಿ ಮುಂದುವರಿಯಲಿದೆ ಮತ್ತು ಹೆಚ್ಚುವರಿ ಅನುದಾನಕ್ಕೂ ಬೇಡಿಕೆ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next