Advertisement

ಆತಂಕ ಸೃಷ್ಟಿಸಿದ ಗ್ರೆನೇಡ್‌ ಮಾದರಿ ವಸ್ತು!

01:19 AM Jun 01, 2019 | Lakshmi GovindaRaj |

ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಗ್ರೆನೇಡ್‌ ಮಾದರಿಯ ಸಂಶಯಾಸ್ಪದ ವಸ್ತುವೊಂದು ಪತ್ತೆಯಾಗಿ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.

Advertisement

ಶುಕ್ರವಾರ ಬೆಳಗ್ಗೆ 8.50 ರ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪಾಟ್ನಾ ಕಡೆ ತೆರಳಬೇಕಿದ್ದ ಪಾಟ್ನಾ (ಸಂಘಮಿತ್ರ)ಎಕ್ಸ್‌ಪ್ರೆಸ್‌ ರೈಲು ನಿಂತಿದ್ದ ಒಂದನೇ ಪ್ಲಾಟ್‌ಫಾರಂ ರೈಲ್ವೆ ಹಳಿ ಪಕ್ಕದಲ್ಲಿ ಗ್ರೆನೆಡ್‌ ಮಾದರಿಯ ವಸ್ತು, ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕಾಣಿಸಿಕೊಂಡಿದೆ.

ಆತಂಕಗೊಂಡ ಸಿಬ್ಬಂದಿ ಈ ವಿಷಯವನ್ನು ನಿಲ್ದಾಣದ ಮೆಲಧಿಕಾರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಆರ್‌ಪಿಎಫ್ ಅಧಿಕಾರಿಗಳು, ನಿಲ್ದಾಣದ ಬಾಂಬ್‌ ನಿಷ್ಕ್ರಿಯದಳ ಹಾಗೂ ಶ್ವಾನದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಆ ವಸ್ತುವನ್ನು ವಶಪಡಿಸಿಕೊಂಡು ಸುರಕ್ಷಿತವಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟರು.

ವಸ್ತು ಪತ್ತೆಯಾದ ಪ್ಲಾಟ್‌ಫಾರಂ 1ರ ಬಳಿ ನಿಂತಿದ್ದ ಪಾಟ್ನಾ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ, ರೈಲಿನ ಎಂಟೂ ಬೋಗಿಗಳನ್ನು ತಪಾಸಣೆ ನಡೆಸಲಾಯಿತು. ಜತೆಗೆ ನಿಲ್ದಾಣದಿಂದ ತೆರಳುವ ಎಲ್ಲಾ ರೈಲುಗಳನ್ನು ಕೆಲ ಸಮಯ ತಡೆದು, ಎಲ್ಲಾ ಪ್ಲಾಟ್‌ಫಾರಂಗಳನ್ನು ತಪಾಸಣೆ ನಡೆಸಲಾಯಿತು. ಪ್ರಾಥಮಿಕ ತನಿಖೆಯಿಂದ ಆ ವಸ್ತು ಗ್ರೆನೆಡ್‌ ಅಥವಾ ಯಾವುದೇ ಮಾದರಿಯ ಸ್ಫೋಟಕವಲ್ಲ ಎಂದು ಖಚಿತವಾದ ಬಳಿಕ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ನಿಲ್ದಾಣದಲ್ಲಿ ಆತಂಕದ ವಾತಾವರಣ: ಸಂಶಯಾಸ್ಪದ ಸ್ಫೋಟಕ ವಸ್ತು ಕಾಣಿಸಿಕೊಂಡಿದೆ ಎಂದು ತಿಳಿದ ಕೂಡಲೆ ನಿಲ್ದಾಣದ ಆರ್‌ಪಿಎಫ್ ಸಿಬ್ಬಂದಿ, ರೈಲ್ವೆ ಪೊಲೀಸರು ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಇದನ್ನು ಕಂಡು ನಿಲ್ದಾಣದ ಪ್ರವೇಶ ದ್ವಾರ ಹಾಗೂ ಪಾಟ್‌ಫಾರಂ 1ರ ಬಳಿ ಇದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಬಾಂಬ್‌ ಪತ್ತೆಯಾಗಿದೆಯಂತೆ ಎಂಬ ವಂದತಿ ಹಬ್ಬುತ್ತಿದ್ದಂತೆ ಕೆಲ ಪ್ರಯಾಣಿಕರು ನಿಲ್ದಾಣದಿಂದ ಹೊರಗೆ ಓಡಿ ಬಂದರು.

Advertisement

ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಆ ವಸ್ತುವನ್ನು ನಿಲ್ದಾಣದಿಂದ ಹೊರಗೆ ತಗೆದುಕೊಂಡು ಹೋಗಿ, ಪೊಲೀಸರು ಅದು ಸ್ಫೋಟಕವಲ್ಲ ಎಂದು ತಿಳಿಸಿದ ಬಳಿಕ ಪ್ರಯಾಣಿಕರ ಆತಂಕ ದೂರವಾಯಿತು. ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರ ವಿಳಂಬವಾಯಿತು. ಕೆಲ ಗಂಟೆಗಳ ನಂತರ ಮತ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಯತಾಸ್ಥಿತಿಗೆ ಮರಳಿತು.

ಸಂಶಯಾಸ್ಪದ ವಸ್ತು ಪತ್ತೆ ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್‌ ಮೋಹನ್‌, ರೈಲ್ವೆ ಐಜಿಪಿ ರೂಪಾ, ರೈಲ್ವೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್‌ ಗುಳೇದ್‌, ಡಿಸಿಪಿ ರವಿ ಡಿ. ಚನ್ನಣ್ಣವರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭದ್ರತೆ ಹೆಚ್ಚಳ: ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಕೂಡಲೆ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಯಿತು. ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ಕಂಡುಬಂದವರನ್ನು ತಪಾಸಣೆ ನಡೆಸಲಾಯಿತು. ನಿಲ್ದಾಣದ ಸುತ್ತಲು ಇರುವ ಅಂಗಡಿ, ಮಳಿಗೆಗಳನ್ನು ಪೊಲೀಸರು ತಪಾಸಣೆ ನಡೆಸಿದರು. ಜತೆಗೆ ಮೆಜೆಸ್ಟಿಕ್‌, ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ಹೆಚ್ಚಿಸಲಾಯಿತು. ಘಟನೆಯಿಂದ ಯಶವಂತಪುರ, ದಂಡು ರೈಲು ನಿಲ್ದಾಣ ಸೇರಿದಂತೆ ಮುಖ್ಯ ರೈಲು ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ನಿಲ್ದಾಣದಲ್ಲಿ ಸಂಶಯಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಬಾಂಬ್‌ ನಿಷ್ಕ್ರಿಯದಳ, ಶ್ವಾನದಳ ಕರೆಸಿ ತಪಾಸಣೆ ಮಾಡಲಾಯಿತು. ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಪ್ರಯಾಣಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಪತ್ತೆಯಾದ ವಸ್ತು ಯಾವುದು, ಅದನ್ನು ನಿಲ್ದಾಣಕ್ಕೆ ತಂದವರಾರು ಎಂದು ಶೀಘ್ರವೆ ಪತ್ತೆಹಚ್ಚಲಾಗುವುದು.
-ಅಲೋಕ್‌ ಮೋಹನ್‌, ರೈಲ್ವೆ ವಿಭಾಗದ ಎಡಿಜಿಪಿ

Advertisement

Udayavani is now on Telegram. Click here to join our channel and stay updated with the latest news.

Next