Advertisement

ಮಹಾವಲಸೆ; ಇಲ್ಲಿಯವರೆಗೆ ಪಕ್ಷ ಬಿಟ್ಟವರು ಯಾರು? ಇವರು ಸದ್ಯ ಎಲ್ಲಿದ್ದಾರೆ? 

12:49 AM Aug 27, 2022 | Team Udayavani |

ಕಾಂಗ್ರೆಸ್‌ ಹಾದಿ ಎತ್ತ ಸಾಗುತ್ತಿದೆ? ಇದು ಕಾಂಗ್ರೆಸ್‌ನ ಜಿ23 ಸದಸ್ಯರ ಪ್ರಶ್ನೆಯಾಗಿತ್ತು. ಈ ಜಿ23ರಲ್ಲೇ ಇದ್ದ ಕೆಲವು ನಾಯಕರು ಈಗಾಗಲೇ ಪಕ್ಷ ಬಿಟ್ಟಿದ್ದಾರೆ. ಇವರ ಸಾಲಿಗೆ ಶುಕ್ರವಾರ ಗುಲಾಂ ನಬಿ ಆಜಾದ್‌ ಸೇರಿಕೊಂಡಿದ್ದಾರೆ. 2013ರಿಂದ ಇಲ್ಲಿಯವರೆಗೆ ಕಾಂಗ್ರೆಸ್‌ನ ಹಿರಿಯ ಮತ್ತು ಕಿರಿಯ ಸದಸ್ಯರು ಸೇರಿ ಸುಮಾರು 70 ಮಂದಿ ಪಕ್ಷ ತೊರೆದಿದ್ದಾರೆ. ಇವರಲ್ಲಿ ಕೆಲವರು ಬೇರೆ ಪಕ್ಷಗಳಲ್ಲಿ ಈಗಾಗಲೇ ಸ್ಥಾನಮಾನ ಕಂಡುಕೊಂಡಿದ್ದಾರೆ ಎಂಬುದು ವಿಶೇಷ. ಹಾಗಾದರೆ ಇಲ್ಲಿಯವರೆಗೆ ಪಕ್ಷ ಬಿಟ್ಟವರು ಯಾರು? ಇವರು ಸದ್ಯ ಎಲ್ಲಿದ್ದಾರೆ? ಈ ಕುರಿತ ಮಾಹಿತಿ ಇಲ್ಲಿದೆ.

Advertisement

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ತೀರಾ ಮುಜುಗರ ಎನ್ನಿಸುವಷ್ಟರ ಮಟ್ಟಿಗೆ ಸೋತಿತ್ತು. ಆಗ ಸೋನಿಯಾ ಗಾಂಧಿಯವರು ಅಧ್ಯಕ್ಷೆಯಾಗಿದ್ದರೆ, ರಾಹುಲ್‌ ಗಾಂಧಿಯವರು ಪಕ್ಷದ ಉಪಾಧ್ಯಕ್ಷರಾಗಿದ್ದು, ಇಡೀ ಚುನಾವಣೆ ಅವರ ನೇತೃತ್ವದಲ್ಲೇ ನಡೆದಿತ್ತು. ಆದರೆ ಆ ಸೋಲು ಪಕ್ಷದ ನಾಯಕರನ್ನು ಕಂಗೆಡಿಸಿತ್ತು.

ಅದರಲ್ಲೂ ಯುಪಿಎ-2 ಸರಕಾರದ ಅವಾಂತರಗಳು, ಯುಪಿಎ-1ರ ಹಗರಣಗಳಿಂದಾಗಿ ಪಕ್ಷದ ವರ್ಚಸ್ಸಿಗೂ ಭಾರೀ ಧಕ್ಕೆಯಾಗಿತ್ತು. ಅದೇ ವೇಳೆಗೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಗೆದ್ದ ಕಾರಣ ಪಕ್ಷಾಂತರ ಪರ್ವಗಳೂ ಆರಂಭವಾದವು. ಅಲ್ಲದೆ ಅಂದಿನ ಕಾಂಗ್ರೆಸ್‌ ಸೋಲು, ಪಕ್ಷದ ಕೆಳಗಿನ ಹಂತದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಅಭದ್ರತೆ ಸೃಷ್ಟಿಸಿದ್ದುದು ಸುಳ್ಳಲ್ಲ. ವಿಶ್ಲೇಷಕರ ಪ್ರಕಾರ ಅಂದು ಸೋತ ಅನಂತರ ಕಾಂಗ್ರೆಸ್‌ ಎಚ್ಚೆತ್ತುಕೊಳ್ಳಲೇ ಇಲ್ಲ. ಪಕ್ಷವನ್ನು ಗಟ್ಟಿಯಾಗಿ ಸಂಘಟನೆ ಮಾಡಲಿಲ್ಲ. ಅಲ್ಲದೆ 2019ರ ಲೋಕಸಭೆ ಚುನಾವಣೆ ವೇಳೆಗೆ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಈ ಚುನಾವಣೆಯಲ್ಲೂ ಕಾಂಗ್ರೆಸ್‌ ತನ್ನ ಬುಟ್ಟಿಗೆ ಒಂದಷ್ಟು ಹೆಚ್ಚು ಸೀಟು ಹಾಕಿಕೊಂಡಿತು ಎಂಬುದನ್ನು ಬಿಟ್ಟರೆ, ದೊಡ್ಡ ಸವಾಲು ನೀಡಲೇ ಇಲ್ಲ.

ಜಿ23 ಬಿಸಿ: ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಕಾಣೆಯಾಗಿದೆ, ಪಕ್ಷದ ಅಧ್ಯಕ್ಷರ ನೇಮಕಕ್ಕಾಗಿ ಚುನಾವಣೆ ನಡೆಯಬೇಕು; ಅಲ್ಲದೆ ರಾಜ್ಯಗಳ ಲ್ಲಿಯೂ ಚುನಾವಣೆ ನಡೆಯಲಿ ಎಂದು ಜಿ23 ನಾಯಕರ ಗುಂಪು ಪತ್ರಮುಖೇನ ಆಗ್ರಹಿಸಿತ್ತು. ಈ ಗುಂಪಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದವರೇ ಗುಲಾಂ ನಬಿ ಆಜಾದ್‌, ಕಪಿಲ್‌ ಸಿಬಲ್‌, ಆನಂದ್‌ ಶರ್ಮ ಅವರಂಥ ನಾಯಕರು. ಇವರ ಆಗ್ರಹದಿಂ ದಾಗಿಯೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಪಕ್ಷ ಸಜ್ಜಾಗುತ್ತಿದೆ.

ಇತರ ಪಕ್ಷಗಳಿಗೆ ವಲಸೆ
ಅಬ್ದುಲ್‌ ಗನಿ ವಾಕಿಲ್‌(ಜೆಕೆಪಿಸಿ-2015), ಜಯಂತಿ ನಟರಾಜನ್‌(2015-ಎಲ್ಲೂ ಇಲ್ಲ) ಅಜಿತ್‌ ಜೋಗಿ (ಹೊಸಪಕ್ಷ ಸ್ಥಾಪನೆ-2016), ಶಂಕರಸಿಂಗ್‌ ವಘೇಲಾ (ಎನ್‌ಸಿಪಿ-2017), ಅಶೋಕ್‌ ಚೌಧರಿ (ಜೆಡಿಯು-2018), ಊರ್ಮಿಳಾ ಮಾತೊಂಡ್ಕರ್‌ (ಶಿವಸೇನಾ-2019), ಪನಬಾಕಾ ಲಕ್ಷ್ಮೀ (ಟಿಡಿಪಿ-2019), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ-2019), ವಿ.ಎಂ.ಸುಧೀರನ್‌ (2021-ಎಲ್ಲೂ ಇಲ್ಲ) ಪಿ.ಸಿ.ಚಾಕೋ (ಎನ್‌ಸಿಪಿ-2021), ಅಮರೀಂದರ್‌ ಸಿಂಗ್‌ (ಹೊಸಪಕ್ಷ ಸ್ಥಾಪನೆ-2021), ಇಮ್ರಾನ್‌ ಮಸೂದ್‌ (ಎಸ್‌ಪಿ-2022), ಅಶ್ವನಿಕುಮಾರ್‌ (2022-ಎಲ್ಲೂ ಇಲ್ಲ), ಕಪಿಲ್‌ ಸಿಬಲ್‌ (ಎಸ್‌ಪಿ-2022), ಜೈವೀರ್‌ ಶರ್ಗಿಲ್‌(2022-ಎಲ್ಲೂ ಇಲ್ಲ), ಗುಲಾಂ ನಬಿ ಆಜಾದ್‌ (2022-ಎಲ್ಲೂ ಇಲ್ಲ).

Advertisement

ಬಿಜೆಪಿ ಸೇರಿದವರು
ರಾವ್‌ ಇಂದ್ರಜಿತ್‌ ಸಿಂಗ್‌(2013), ಡಿ. ಪುರುಂದರೇಶ್ವರಿ (2014), ಬೀರೇಂದರ್‌ ಸಿಂಗ್‌(2014), ಜಗದಾಂಬಿಕಾ ಪಾಲ್‌(2014), ಸತ್ಪಾಲ್‌ ಮಹಾರಾಜ್‌(2014), ಗಿರಿಧರ ಗಮಾಂಗ್‌(2015), ಹಿಮಾಂತ ಬಿಸ್ವಾ ಶರ್ಮ(2015), ರಿತು ಬಹುಗುಣ ಜೋಷಿ(2016), ವಿಜಯ ಬಹುಗುಣ (2016), ಎನ್‌. ಬಿರೇನ್‌ ಸಿಂಗ್‌ (2016), ಸುದೀಪ್‌ ರಾಯ್‌ ಬರ್ಮನ್‌(2016), ಪ್ರೇಮಾ ಖಂಡು (2016), ಹರೇಕ್‌ ಸಿಂಗ್‌ ರಾವತ್‌ (2016), ನಾರಾಯಣ ದತ್‌ ತಿವಾರಿ, ಯಶ್ಪಾಲ್‌ ಆರ್ಯ (2017), ರವಿ ಕಿಶನ್‌(2017), ಬರ್ಖಾ ಶುಕ್ಲಾ ಸಿಂಗ್‌(2017), ವಿಶ್ವಜಿತ್‌ ರಾಣೆ(2017), ಅಲೆಕ್ಸಾಂಡರ್‌ ಲಾಲೂ ಹೆಕ್‌(2018), ಯಂತುಂಗೋ ಪಠಾಣ್‌(2018), ಅಲ್ಪೇಶ್‌ ಠಾಕೂರ್‌(2019), ಕೃಪಾಶಂಕರ್‌ ಸಿಂಗ್‌(2019), ಎ.ಪಿ.ಅಬ್ದುಲ್‌ ಕುಟ್ಟಿ(2019), ರಾಧಾಕೃಷ್ಣ ವಿಕೇ ಪಾಟೀಲ್‌(2019), ಭುಭನೇಶ್ವರ ಕಲಿತಾ (2019), ಸಂಜಯ್‌ ಸಿಂಗ್‌(2019), ಎಸ್‌.ಎಂ.ಕೃಷ್ಣ (2019), ಟಾಮ್‌ ವಡಕ್ಕನ್‌(2019), ನಾರಾಯಣ ರಾಣೆ(2019), ಚಂದ್ರಕಾಂತ್‌ (2019), ಖುಷೂº ಸುಂದರ್‌(2020), ಜ್ಯೋತಿರಾಧಿತ್ಯ ಸಿಂಧಿಯಾ(2020), ಗೋವಿಂದದಾಸ್‌ ಕೊಂಟುಜಮ್‌(2021), ವಿಜಯನ್‌ ಥಾಮಸ್‌(2021), ಎ.ನಮಸ್ಸಿವಂ (2021), ಜಿತಿನ್‌ ಪ್ರಸಾದ(2021), ಆದಿತಿ ಸಿಂಗ್‌(2021), ರವಿ ಎಸ್‌ ನಾಯಕ್‌(2021), ಕಿಶೋರ್‌ ಉಪಾ ಧ್ಯಾಯ್‌(2022), ಆರ್‌ಪಿಎಲ್‌ ಸಿಂಗ್‌(2022), ಸುನೀಲ್‌ ಜಾಖಡ್‌(2022), ಹಾರ್ದಿಕ್‌ ಪಟೇಲ್‌(2022), ಕುಲ್ದೀಪ್‌ ಬಿಷ್ಣೋಯಿ (2022)ಕೊಮ್ಮಾತಿರೆಡ್ಡಿ ರಾಜ್‌ಗೊàಪಾಲ್‌ ರೆಡ್ಡಿ(2022).

ಹಿಮಾಂತ ಶರ್ಮ ಬಿಸ್ವಾ
ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಕಾಂಗ್ರೆಸ್‌ ನಾಯಕರಾಗಿದ್ದ ಇವರು ರಾಹುಲ್‌ ಗಾಂಧಿ ಜತೆ ವೈಮನಸ್ಸಿನ ಕಾರಣದಿಂದ ಪಕ್ಷ ಬಿಟ್ಟು ಬಿಜೆಪಿ ಸೇರಿದರು. ವಿಶೇಷವೆಂದರೆ, ಉತ್ತಮ ಸಂಘಟನ ಚಾತುರ್ಯ ಹೊಂದಿರುವ ಇವರಿಂದಾಗಿ ಈಶಾನ್ಯ ಭಾಗದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಈಗ ಅಸ್ಸಾಂನ ಮುಖ್ಯಮಂತ್ರಿಯಾಗಿಯೂ ಆಡಳಿತ ನಡೆಸುತ್ತಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿದ್ದ ಇವರನ್ನು ಕಡೆಗಣಿಸಲಾಗಿತ್ತು. ಕಮಲ್‌ನಾಥ್‌ ಅವರ ಜತೆಗಿನ ವಿರಸ ಮತ್ತು ಸ್ಥಳೀಯ ಭಾವ ನೆಗಳ ಬಗ್ಗೆ ಹೈಕಮಾಂಡ್‌ ಕಿವಿಕೊಡುತ್ತಿಲ್ಲ ಎಂಬ ಆರೋಪ ದಿಂದ ಬೇಸತ್ತು, ತಮ್ಮ ಬೆಂಬಲಿಗ ಶಾಸಕರ ಜತೆಗೆ ಬಿಜೆಪಿ ಸೇರಿದರು. ಈಗ ಕೇಂದ್ರದ ನರೇಂದ್ರ ಮೋದಿ ಸರಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೇಮಾ ಖಂಡು
ಈಶಾನ್ಯ ಭಾರತದ ಮತ್ತೂಂದು ರಾಜ್ಯವಾದ ಅರುಣಾಚಲ ಪ್ರದೇಶದ ಸಿಎಂ ಆಗಿದ್ದಾರೆ. 2016ರಲ್ಲಿ ಕಾಂಗ್ರೆಸ್‌ ತ್ಯಜಿಸಿ, ಬಿಜೆಪಿ ಸೇರಿದರು. ಇವರು ಕೂಡ ಸ್ಥಳೀಯ ಮಟ್ಟದಲ್ಲಿ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿ ಪಕ್ಷ ಬಿಟ್ಟರು.

ಜಿತಿನ್‌ ಪ್ರಸಾದ್‌
ಉತ್ತರ ಪ್ರದೇಶದ ಪ್ರಮುಖ ನಾಯಕರಾಗಿದ್ದ ಇವರು, ಗಾಂಧಿ ಕುಟುಂಬಕ್ಕೆ ತೀರಾ ಸನಿಹದಲ್ಲೇ ಇದ್ದರು. ಇವರನ್ನೂ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ಬಿಟ್ಟು, ಬಿಜೆಪಿ ಸೇರಿದರು. ಈಗ ಯೋಗಿ ಆದಿತ್ಯನಾಥ್‌ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಸುಶ್ಮಿತಾ ದೇವ್‌
ಕಾಂಗ್ರೆಸ್‌ನ ಪ್ರಮುಖ ಮಹಿಳಾ ನಾಯಕಿಯಾಗಿದ್ದ ಇವರು ಕೂಡ ಪಕ್ಷದಲ್ಲಿನ ಕಡೆಗಣನೆ ವಿರೋಧಿಸಿ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರಿದರು. ಈಗ ಈಶಾನ್ಯ ರಾಜ್ಯದಲ್ಲಿ ಟಿಎಂಸಿ ಬಲಪಡಿಸಲು ಓಡಾಡುತ್ತಿದ್ದಾರೆ.

ಅಮರೀಂದರ್‌ ಸಿಂಗ್‌
ಹೈಕಮಾಂಡ್‌ ತಮಗೆ ಅವಮಾನ ಮಾಡಿದೆ ಎಂದು ಆರೋಪಿಸಿ ಸಿಎಂ ಕುರ್ಚಿಯಿಂದ ಇಳಿದಿದ್ದ ಪಂಜಾಬ್‌ನ ನಾಯಕ ಅಮರೀಂದರ್‌ ಸಿಂಗ್‌, ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ತ್ಯಜಿಸಿ ಸ್ವಂತ ಪಕ್ಷ ಕಟ್ಟಿದರು. ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡರು.

ಹಾರ್ದಿಕ್‌ ಪಟೇಲ್‌
ಗುಜರಾತ್‌ನ ಪಾಟಿದಾರ್‌ ಸಮುದಾಯದ ಯುವನಾಯಕರಾಗಿದ್ದ ಇವರು ಆರಂಭದಿಂದಲೂ ಬಿಜೆಪಿಯನ್ನು ವಿರೋಧಿಸಿಕೊಂಡೇ ಬಂದಿದ್ದರು. ಆದರೆ ಪಕ್ಷದಲ್ಲಿ ತಮಗೆ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದು ಆರೋಪಿಸಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಾರೆ.

ಕಪಿಲ್‌ ಸಿಬಲ್‌
ಜಿ23 ಗುಂಪಿನ ಪ್ರಮುಖ ನಾಯಕರಾಗಿದ್ದ ಇವರು. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ ಸೇರಿದ್ದಾರೆ. ಅದೇ ಪಕ್ಷದಿಂದ ಈಗ ರಾಜ್ಯಸಭೆ ಸದಸ್ಯರಾಗಿದ್ದಾರೆ.

ಕುಲ್ದೀಪ್‌ ಬಿಷ್ಣೋಯಿ
ಹರಿಯಾಣದ ಪ್ರಮುಖ ಕಾಂಗ್ರೆಸ್‌ ನಾಯಕ. ಇವರೂ ಪಕ್ಷದ ಹೈಕಮಾಂಡ್‌ ಜತೆಗೆ ಮುಸುಕಿನ ಗುದ್ದಾಟ ಮಾಡಿಕೊಂಡು ಇತ್ತೀಚೆಗಷ್ಟೇ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದಾರೆ.

ಅಭಿಜಿತ್‌ ಮುಖರ್ಜಿ
ಕಾಂಗ್ರೆಸ್‌ನ ಪ್ರಮುಖ ನಾಯಕ ಮತ್ತು ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣವ್‌ ಮುಖರ್ಜಿ ಅವರ ಪುತ್ರ ಅಭಿಜಿತ್‌ ಮುಖರ್ಜಿ ಅವರೂ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಬೇಸತ್ತು ಪಕ್ಷ ತ್ಯಜಿಸಿದ್ದಾರೆ. ಸದ್ಯ ಟಿಎಂಸಿಯಲ್ಲಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಸೇರಿದವರು
ಜಿ.ಕೆ. ವಾಸನ್‌ (2014), ಮೌಸಮ್‌ ನೂರ್‌ (2019), ಅಭಿಜಿತ್‌ ಮುಖರ್ಜಿ (2021), ಸುಶ್ಮಿತಾ ದೇವ್‌(2021), ಲುಸಿನೋ ಫೆಲಾರಿಯೋ (2021), ಲಲಿತೇಶ್‌ ತ್ರಿಪಾಠಿ (2021), ಕೀರ್ತಿ ಆಜಾದ್‌ (2021), ಮುಕುಲ್‌ ಸಂಗ್ಮಾ (2021), ಶತ್ರುಘ್ನ ಸಿನ್ಹಾ (2022), ರಿಪಿನ್‌ ವೋರಾ (2022).

Advertisement

Udayavani is now on Telegram. Click here to join our channel and stay updated with the latest news.

Next