Advertisement

ದ್ರಾಕ್ಷಿ ಉತ್ಪಾದನೆಯಲ್ಲಿ ಪಾರುಪತ್ಯ

05:29 PM Feb 21, 2021 | Team Udayavani |

ವಿಜಯಪುರ: ರಾಜ್ಯದ ಒಟ್ಟು ದ್ರಾಕ್ಷಿ ಉತ್ಪಾದನೆಯಲ್ಲಿ ಅರ್ಧ ಪ್ರದೇಶದಲ್ಲಿ ಹಾಗೂ ಆರ್ಧಕ್ಕಿಂತ ಹೆಚ್ಚು ಹಾಗೂ ರಫ್ತು ಗುಣಮಟ್ಟದ ದ್ರಾಕ್ಷಿ ಉತ್ಪಾದಿಸುವ ವಿಜಯಪುರ ಜಿಲ್ಲೆಯಲ್ಲಿ ರಾಸಾಯನಿಕ ಬಳಕೆ ಮಿತಿ ಮೀರಿದೆ. ಆದರೆ ಈಚೆಗೆ ವಿದೇಶಿ ಮಾರುಕಟ್ಟೆಯಲ್ಲಿ ಸಾವಯವ ಉತ್ಪಾದನೆಯ ಹಸಿ-ಒಣ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವ ಕಾರಣ ರಾಸಾಯನಿಕದಿಂದ ವಿಷಮುಕ್ತ ದ್ರಾಕ್ಷಿ ಬೆಳೆಯಲು ಒತ್ತು ಕೊಡುತ್ತಿದ್ದಾರೆ.

Advertisement

ಕರುನಾಡಲ್ಲಿ ಬಹುತೇಕ ಜಿಲ್ಲೆಗಳ ಬೆಳೆಯುವ ಕೃಷಿ-ತೋಟಗಾರಿಕೆ ಬೆಳೆಗಳ ಕಾರಣದಿಂದಾಗಿ ಆಯಾ ಜಿಲ್ಲೆಗಳನ್ನು ನಾಡು, ಕಣಜ ಎಂದೆಲ್ಲ ಗುರುತಿಸುವುದು ಸಾಮಾನ್ಯ. ಆದರೆ ರಾಜ್ಯದ ಒಟ್ಟು ದ್ರಾಕ್ಷಿ ಉತ್ಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚು ದ್ರಾಕ್ಷಿ ಬೆಳೆ ಪ್ರದೇಶ ಹಾಗೂ ಉತ್ಪಾದನೆ ಇದ್ದರೂ ವಿಜಯಪುರ ಜಿಲ್ಲೆ ದ್ರಾಕ್ಷಿ ನಾಡು, ಭತ್ತದ ಕಣಜ ಎಂದು ಗುರುತಿಸಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ.

ಸುಮಾರು 60 ವರ್ಷಗಳ ಹಿಂದೆ ವಿಜಯಪುರ ಬಳಿ ರೈತರೊಬ್ಬರು ಮೊಟ್ಟ ಮೊದಲು ಬೆಳೆದ ದ್ರಾಕ್ಷಿಯನ್ನು ತಿಕೋಟ ತಾಲೂಕಿನ ಕನಮಡಿಯ ರುದ್ರುಮುತ್ಯಾ ತಮ್ಮ ಉಳುಮೆಗೆ ಯೋಗ್ಯವಲ್ಲದ ಮಡ್ಡಿ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಆರಂಭಿಸಿದರು. ಜತೆಗೆ ಬಳಕೆಗೆ ಯೋಗ್ಯವಲ್ಲದ ಜಮೀನಿನಲ್ಲಿ ಅತ್ಯ ಧಿಕ ಹಾಗೂ ಉತ್ಕೃಷ್ಟ ಗುಣಮಟ್ಟದಲ್ಲಿ ಬೆಳೆದು ತೋರಿಸಿದರು.

ಅಲ್ಲಿಂದ ಜಿಲ್ಲೆಯಲ್ಲಿ ವೇಸ್ಟ್‌ಲ್ಯಾಂಡ್‌ ಎಂದು ಉಳುಮೆ ಮಾಡದೇ ಬಿಟ್ಟಿದ್ದ ಭೂಮಿಯಲ್ಲಿ ದ್ರಾಕ್ಷಿ ಬೆಳೆಯ ಕ್ರಾಂತಿಯೇ ಆರಂಭಗೊಂಡಿದೆ. ಪರಿಣಾಮ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್‌, ಬೆಳಗಾವಿ  ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್‌, ಬಾಗಲಕೋಟೆ ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ ಹಾಗೂ ಕೊಪ್ಪಳ, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿ ಸುಮಾರು 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ.  ಆದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ದ್ರಾಕ್ಷಿ ಬೆಳೆಯಲ್ಲೇ ವಿಜಯಪುರ ಜಿಲ್ಲೆಯ ದ್ರಾಕ್ಷಿ ಗುಣಮಟ್ಟದಲ್ಲಿ ಅತ್ಯಂತ ಉತ್ಕೃಷ್ಟ ಹಾಗೂ ರಫ್ತು ಗುಣಮಟ್ಟದಲ್ಲಿ ಇದೆ.

ಇತರೆ ಜಿಲ್ಲೆಗಳಲ್ಲಿ ಹೆಕ್ಟೇರ್‌ಗೆ ಸರಾಸರಿ 30-35 ಟನ್‌ ಇಳುವರಿ ಬಂದರೆ, ವಿಜಯಪುರ ಜಿಲ್ಲೆಯಲ್ಲಿ 40-45  ಟನ್‌ ದ್ರಾಕ್ಷಿ ಉತ್ಪಾದನೆ ಇದೆ. ಕೆಲವು ರೈತರು 50 ಟನ್‌ ವರೆಗೆ ದ್ರಾಕ್ಷಿ ಉತ್ಪಾದನೆ ಮಾಡಿದ ದಾಖಲೆಯೂ ಇದೆ. ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ ಪ್ರದೇಶದಲ್ಲಿ ಬೀಜ ರಹಿತ ದ್ರಾಕ್ಷಿ ಬೆಳೆಯುತ್ತಿದ್ದು, ಇದರಲ್ಲಿ ಶೇ.80ರಷ್ಟು ಪ್ರದೇಶದ ಬೆಳೆ ಒಣದ್ರಾಕ್ಷಿ ಮಾಡಲಾಗುತ್ತದೆ. ಶೇ.10ರಷ್ಟು ವೈನ್‌ ತಯಾರಿಕೆ ಹಾಗೂ ಉಳಿದದ್ದು ಹಸಿ ದ್ರಾಕ್ಷಿಯಾಗಿ ಮಾರಾಟವಾಗುತ್ತದೆ. ಆದರೆ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಬೆಳೆಗೆ ಬಳಸುತ್ತಿರುವ ರಾಸಾಯನಿಕ, ಕ್ರಿಮಿನಾಶಕ ಅತ್ಯಂತ ಗರಿಷ್ಠ ಹಾಗೂ ಅವೈಜ್ಞಾನಿಕ ಪ್ರಮಾಣದಲ್ಲಿದೆ. ಹೀಗಾಗಿ ಸ್ಥಳೀಯವಾಗಿ ಇದನ್ನು ಬಲ್ಲದವರು ದ್ರಾಕ್ಷಿ ಸೇವನೆಗೆ ಹಿಂದೇಟು ಹಾಕು ಮಟ್ಟಿಗೆ ದ್ರಾಕ್ಷಿಗೆ ರಸಾಯನಯುಕ್ತವಾಗಿದೆ. ಇದರ ಹೊರತಾಗಿಯೂ ಏನೆಲ್ಲ ಸಂಕಷ್ಟಗಳ ಮಧ್ಯೆ ಜನರಲ್ಲಿ ಜಾಗೃತಿ ಮೂಡಿಸಿ, ಸಾವಯವದಲ್ಲಿ ಹಲವು ರೈತರು ಸಂಕಷ್ಟಗಳನ್ನು ಮೀರಿಯೂ ಸಮಾಜ ಸ್ವಾಸ್ಥ Âವನ್ನು ಗಮನದಲ್ಲಿ ಇರಿಸಿಕೊಂಡು ದ್ರಾಕ್ಷಿ ಬೆಳೆಯಲು ಮುಂದಾ ಗಿದ್ದಾರೆ. ವಿದೇಶದಲ್ಲಿ ರಾಸಾಯನಿಕದ ವಿಷಮುಕ್ತ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಇದ್ದರೂ ರೈತರಿಗೆ ಮಾರುಕಟ್ಟೆ ಹಾಗೂ ವೈಜ್ಞಾನಿಕ ಬೆಲೆಯ ಭರವಸೆ ನೀಡುವಲ್ಲಿ ಸರ್ಕಾರ ಕನಿಷ್ಟ ಕಾರ್ಯವನ್ನು ಮಾಡಿಲ್ಲ.

Advertisement

ಇನ್ನು ಇಲ್ಲಿ ಬೆಳೆಯುವ ಒಣದ್ರಾಕ್ಷಿಗೆ ಮೌಲ್ಯ ವರ್ಧನೆ, ಶೈತ್ಯಾಗಾರ, ಗರಿಷ್ಠ ಬೆಲೆ ನೀಡುವ ಮಾರುಕಟ್ಟೆ ಇಲ್ಲವಾಗಿದೆ. ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಸೇರಿ ಕೇವಲ ಮೂರೇ ಜಿಲ್ಲೆಗಳಲ್ಲಿ 5 ಲಕ್ಷ ಟನ್‌ ದ್ರಾಕ್ಷಿ ಉತ್ಪಾದಿಸುತ್ತಿದ್ದು, ಇದರಲ್ಲಿ 3.20 ಲಕ್ಷ ಟನ್‌ ಒಣದ್ರಾಕ್ಷಿ ಮಾಡಲಾಗುತ್ತದೆ. ಇಷ್ಟಿದ್ದರೂ ಈ ಮೂರು ಜಿಲ್ಲೆಗಳಲ್ಲಿ ಕೇವಲ 30 ಸಾವಿರ ಟನ್‌ ಒಣದ್ರಾಕ್ಷಿ ದಾಸ್ತಾನು ಶೈತ್ಯಾಗಾರಗಳಿವೆ. ರೈತರು ದಾಸ್ತಾನು ಮಾಡಲು ಪರದಾಡುತ್ತಿದ್ದು, ಸಣ್ಣ ರೈತರು ಪ್ರತಿ ಕೆ.ಜಿ ಒಣದ್ರಾಕ್ಷಿಯನ್ನು 100ಕ್ಕೂ ಕಡಿಮೆ ಬೆಲೆಗೆ ಮಾರುವ ಸ್ಥಿತಿ ಬಂದಿದೆ. ಪರಿಣಾಮ ಸುಮಾರು 50 ಸಾವಿರ ಟನ್‌ ಒಣದ್ರಾಕ್ಷಿ ಅಗ್ಗದ ದರಕ್ಕೆ ಬಿಕರಿಯಾಗುತ್ತಿದೆ. ಇನ್ನು ರಾಜ್ಯದಲ್ಲಿ ಉತ್ಪಾದನೆಯಾಗುವ ಒಣದ್ರಾಕ್ಷಿಗೆ ವಿಜಯಪುರ ಹೊರತಾಗಿ ಕರ್ನಾಟಕದಲ್ಲಿ ಎಲ್ಲಿಯೂ ಮಾರುಕಟ್ಟೆ ಇಲ್ಲ. ಪರಿಣಾಮ ಇಲ್ಲಿ ಉತ್ಪಾದಿಸುವ ಒಣದ್ರಾಕ್ಷಿಯಲ್ಲಿ ಶೇ.85 ರಷ್ಟು ಮಹಾರಾಷ್ಟ್ರದ ತಾಸಗಾಂವ, ಸಾಂಗ್ಲಿ, ಪಂಢರಪುರ, ಸೊಲ್ಲಾಪುರ ಮಾರುಕಟ್ಟೆಗೆ ಹೋಗಿ ನೆರೆ ರಾಜ್ಯದ ಪಾಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಉತ್ಪಾದಿಸುವ ಒಣದ್ರಾಕ್ಷಿಗೆ ಅನ್ಯ ರಾಜ್ಯಗಳ ಮೂಲಕ ಯುರೋಪ್‌ ದೇಶಗಳು, ಗಲ್ಫ್  ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದ್ದು, ಅಲ್ಲಿನ ಬ್ರಾಂಡಿಂಗ್‌ ಮಾಡಿ ಮಾರಾಟ ಮಾಡಲಾಗುತ್ತಿದೆ. ಆದರೆ ರಾಜ್ಯದಲ್ಲೇ ಉತ್ಪಾದನೆ ಆಗುವ ನಮ್ಮದೇ ದ್ರಾಕ್ಷಿಗೆ 60 ವರ್ಷ ಕಳೆದರೂ ಬ್ರ್ಯಾಂಡಿಂಗ್‌ ಮಾಡುವತ್ತ ಸರ್ಕಾರ ಗಮನ ಹರಿಸಿಲ್ಲ.

ನಾಸಿಕ್‌ನ ಸಹ್ಯಾದ್ರಿ, ಮಿರಜ್‌ದ ಚಾಂದ್‌ ಸೇರಿದಂತೆ ಮುಂಬೈನ ಮಹೇಂದ್ರ ಸಂಸ್ಥೆಗಳು ಇಲ್ಲಿನ ದ್ರಾಕ್ಷಿಗೆ ಮುಗಿಬಿದ್ದು ಖರೀದಿಸಿದರೂ ರೈತರ ಪರಿಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿಲ್ಲ. ಪರಿಣಾಮ ಪ್ರಕೃತಿ ವಿಕೋಪದಿಂದಾದ ಹಾನಿಗೆ ಸಿಕ್ಕು ಕಳೆದ ಎರಡು ದಶಕಗಳಿಂದ ಸಾಲದ ಸುಳಿಗೆ ಸಿಕ್ಕು ನರಳುತ್ತಿದ್ದಾನೆ. ಹೀಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ದ್ರಾಕ್ಷಿ ಬೆಳೆಗಾರರ 71 ಸಾವಿರ ಖಾತೆಗಳಲ್ಲಿ ಅಸಲು ಬಡ್ಡಿ, ಚಕ್ರಬಡ್ಡಿ ಅಂತೆಲ್ಲ 1,342.72 ಕೋಟಿ ರೂ. ಸಾಲ ಬೆಳೆಯುತ್ತಲೇ ಇದೆ. ದ್ರಾಕ್ಷಿ ಬೆಳೆಗಾರನ ಕೈ ಹಿಡಿಯಲು ಯಾವ ಸರ್ಕಾರಗಳೂ ನೆರವಿಗೆ ಬಂದಿಲ್ಲ.

ಕನಿಷ್ಠ ರಾಜ್ಯದಲ್ಲಿ ತೋಟಗಾರಿಕೆಯ ಹಲವು ಬೆಳೆಗಳಿಗೆ ರಕ್ಷಣೆ ನೀಡಲು ಹಾಗೂ ಉತ್ಪಾದಕರ ಹಿತ ರಕ್ಷಣೆಗೆ ಇರುವ ಮಂಡಳಿಗಳಂತೆ ದ್ರಾಕ್ಷಿ ಬೆಳೆಗಾರರ ಹಿತ ರಕ್ಷಣೆಗಾಗಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಎಂಬ ಬೇಡಿಕೆಗೂ ಸರ್ಕಾರ ಕಿವಿಗೊಟ್ಟಿಲ್ಲ. ಸರ್ಕಾರ ಇನ್ನಾದರೂ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ಅಭಿವೃದ್ಧಿ ಮಂಡಳಿ, ಬ್ರ್ಯಾಂಡಿಂಗ್‌ ಹಾಗೂ ಸಾಲಮನ್ನಾದಂಥ ಯೋಜನೆಗಳ ಮೂಲಕ ನೆರವಿಗೆ ಬರಬೇಕು. ಬಸವನಾಡಿನಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದರೆ ವಿದೇಶಿ ಮಾರುಕಟ್ಟೆಯಲ್ಲಿ ವಿಜಯಪುರ ಉತ್ಕೃಷ್ಟ ದ್ರಾಕ್ಷಿ ಬೆಳೆ ಮೂಲಕ ದೇಶಕ್ಕೂ ವಿದೇಶಿ ವಿನಿಮಯವೂ ಹೆಚ್ಚಲಿದೆ.

Advertisement

Udayavani is now on Telegram. Click here to join our channel and stay updated with the latest news.

Next