Advertisement

ಹೊಸ ವರ್ಷಾಚರಣೆಗೆ ಖಾಕಿ ಕಣ್ಗಾವಲು; ನಂದಿ ಬೆಟ್ಟದ ಸುತ್ತ ಮೂರು ದಿನ ನಿಷೇಧಾಜ್ಞೆ

01:06 PM Dec 31, 2021 | Team Udayavani |

ಬೆಂಗಳೂರು :ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೊಸ ವರ್ಷಾಚರಣೆಯ ಮೇಲೆ ಖಾಕಿ ಕಣ್ಗಾವಲು ಹಾಕಲಾಗಿದೆ. ಬೆಂಗಳೂರು ನಗರದಲ್ಲಿ ರಾತ್ರಿ ೧೦ ಗಂಟೆಯ ನಂತರ ಎಲ್ಲ ಬಾರ್‌, ಪಬ್‌ ಬಂದ್‌ ಮಾಡುವಂತೆ ಆದೇಶ ನೀಡಲಾಗಿದ್ದು, ಟಫ್‌ ರೂಲ್ಸ್‌ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವಂತೆ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಸೂಚನೆ ನೀಡಿದ್ದಾರೆ.

Advertisement

ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಹೊಸ ವರ್ಷಾಚರಣೆಗೆ ಸಾಂಪ್ರದಾಯಿಕವಾಗಿ ಜನ ಸೇರುತ್ತಿದ್ದ ಪ್ರದೇಶಗಳನ್ನು ಈ ವರ್ಷ ಮುಚ್ಚಲಾಗಿದೆ. ಎಲ್ಲ ಫ್ಲೈ ಓವರ್‌ಗಳನ್ನು ರಾತ್ರಿ 10ರ ನಂತರ ಬಂದ್‌ ಮಾಡಲಾಗುತ್ತದೆ. ಸಂಭ್ರಮಾಚರಣೆ ನೆಪದಲ್ಲಿ ಕುಡಿದು ಕುಪ್ಪಳಿಸುವವರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಯಲ್ಲಿದೆ ಎಂದು ನೆರೆಯ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರ ಉತ್ಸಾಹಕ್ಕೂ ಈಗ ಬೀಗ ಹಾಕಲಾಗಿದೆ. ನಂದಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಜ.3 ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಟ್ಟದ ಮೇಲಿನ ರೂಂ ಬುಕ್ಕಿಂಗ್‌ ರದ್ದುಗೊಳಿಸಲಾಗಿದೆ. ಅದೇ ರೀತಿ ಬೆಂಗಳೂರು ಹೊರ ವಲಯದ ರೆಸಾರ್ಟ್‌ಗಳಿಗೆ ರಾತ್ರಿ 10ರ ನಂತರ ಬಂದ್‌ ಮಾಡಲು ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಪಾರ್ಟಿ ಆಯೋಜಿಸಿದರೆ ಲೈಸೆನ್ಸ್‌ ರದ್ದು ಮಾಡುವುದಾಗಿ ತಾಕೀತು ಮಾಡಲಾಗಿದೆ. ಹೀಗಾಗಿ ಈ ವರ್ಷ ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಕಳೆ ಕಳೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next