Advertisement

ಮ್ಯೂಸಿಯಂ ವೀಕ್ಷಿಸಿ ಖುಷಿಪಟ್ಟ ರಾಜ್ಯಪಾಲ

02:54 PM Apr 13, 2022 | Team Udayavani |

ಬಳ್ಳಾರಿ: ನಗರದ ಸಾಂಸ್ಕೃತಿಕ ಸಮುತ್ಛಯ ಆವರಣದಲ್ಲಿರುವ ರಾಬರ್ತ್‌ ಬ್ರೂಸ್‌ಫೂತ್‌ ಮ್ಯೂಸಿಯಂಗೆ ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಮಂಗಳವಾರ ಭೇಟಿ ನೀಡಿ ಪ್ರಾಗೈತಿಹಾಸಿಕ ಕಾಲದ ನೆಲೆಗಳು ಮತ್ತು ಆ ಸಂದರ್ಭದಲ್ಲಿನ ಅಪೂರ್ವ ವಸ್ತುಗಳನ್ನು ವೀಕ್ಷಿಸಿದರು.

Advertisement

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮ್ಯೂಸಿಯಂಗೆ ಭೇಟಿ ನೀಡಿ ಮ್ಯೂಸಿಯಂನಲ್ಲಿರುವ ಅಪೂರ್ವ ಪ್ರಾಗೈತಿಹಾಸಿಕ ಕಾಲದ ವಸ್ತುಗಳು ಮತ್ತು ಆ ಸಂದರ್ಭದಲ್ಲಿನ ಮಾಹಿತಿಗಳನ್ನು ತಿಳಿದುಕೊಂಡರು.

ಖ್ಯಾತ ಸಂಶೋಧಕರು ಹಾಗೂ ಮ್ಯೂಸಿಯಂ ಸಮಿತಿ ಸಹ-ಅಧ್ಯಕ್ಷ ಪ್ರೊ.ರವಿ ಕೋರಿಶೆಟ್ಟರ್‌ ಅವರು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರಿಗೆ ಮ್ಯೂಸಿಯಂನಲ್ಲಿರುವ ಸಂಪೂರ್ಣ ಮಾಹಿತಿ ಮತ್ತು ಮ್ಯೂಸಿಯಂ ಸ್ಥಾಪಿಸಿದ ಉದ್ದೇಶ ಹಾಗೂ ಜಿಲ್ಲಾಡಳಿತ ಸಹಕಾರವನ್ನು ಅವರು ವಿವರಿಸಿದರು.

ಜಿಲ್ಲೆಯ ಕೆಲವು ಪ್ರದೇಶಗಳು ಪ್ರಾಗೈತಿಹಾಸಿಕ ಕಾಲದ ನೆಲೆಗಳಾಗಿದ್ದವು. ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳು ಇದರಲ್ಲಿವೆ. ಸಂಗನಕಲ್ಲು ಗ್ರಾಮದ ಬಳಿಯ ಬೆಟ್ಟಗಳು ಪ್ರಾಚೀನ ಮಾನವನ ವಾಸದ ಕುರುಹುಗಳನ್ನು ಹೊಂದಿವೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿರುವ ಬೆಟ್ಟಗಳು ಐದು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೇಳುತ್ತವೆ. ಈ ಬೆಟ್ಟಗಳಲ್ಲಿ ನವಶಿಲಾಯುಗದಿಂದ ಕಬ್ಬಿಣದ ಯುಗದವರೆಗಿನ ಮನುಷ್ಯ ನೆಲೆಯ ಅವಶೇಷಗಳಿವೆ. ಶಿಲಾ ಉಪಕರಣಗಳು, ಮಡಕೆಗಳು, ಉತ್ಪನದ ವೇಳೆ ದೊರೆತ ಇತ್ಯಾದಿ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿಡಲಾಗಿದೆ ಎಂದು ಸಂಶೋಧಕ ಪ್ರೊ| ರವಿ ಕೋರಿಶೆಟ್ಟರ್‌ ಅವರು ರಾಜ್ಯಪಾಲರಿಗೆ ವಿವರಿಸಿದರು.

ಮ್ಯೂಜಿಯಂ ಕೆಳಮಹಡಿಯಲ್ಲಿರುವ ಮಾನವನ ಜೈವಿಕ, ಸಾಂಸ್ಕೃತಿಕ ವಿಕಸನ ಹಾಗೂ ಆದಿಮಾನವ ಮೂಲ ನೆಲೆಯಾದ ಆಫ್ರಿಕಾದಿಂದ ಜಗತ್ತಿನ ಇತರ ಭೂ ಭಾಗಕ್ಕೆ ವಲಸೆ ಹೋದ ಎಂಬುದರ ಮಾಹಿತಿ, ಆದಿ ಮಾನವನ ವಿಕಸನದ ವಿವಿಧ ಹಂತಗಳ ಬುರುಡೆ ಮಾದರಿಯ ಪ್ರತಿರೂಪಗಳು,ಭಾರತದ ಪ್ರಾಚೀನತೆ, ಸಾಂಸ್ಕೃತಿಕ ಬೆಳವಣಿಗೆ, ಶಿಲಾಯುಗದ ವಿವಿಧ ಹಂತಗಳು ಹಾಗೂ ಕೃಷಿ ಜೀವನದ ಆರಂಭದವರೆಗಿನ ಬೆಳವಣಿಗೆಗಳ ಇತಿಹಾಸ, ಉತ್ತರ ಕರ್ನಾಟಕ ಹಾಗೂ ಆಂಧ್ರದ ರಾಯಲಸೀಮಾ ಭಾಗದಲ್ಲಿ ದೊರೆತಿರುವ ಪ್ರಾಗೈತಿಕಹಾಸದ ವಸ್ತುಗಳು ಬಗ್ಗೆ ಅವರು ವಿವರಣೆ ನೀಡಿದರು.

Advertisement

ದೇಶದಲ್ಲಿ ಆದಿಮಾನವನ ನೆಲೆಗಳನ್ನು ಗುರುತಿಸಿದ ಮೊದಲ ವ್ಯಕ್ತಿ ರಾಬರ್ತ್‌ ಬ್ರೂಸ್‌ ಫೂತ್‌ ಆಗಿದ್ದಾರೆ. ಸಂಗನಕಲ್ಲು ನವಶಿಲಾಯುಗದ ಕುರಿತು ಅಧ್ಯಯನ ಮಾಡಿದ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಪೂರ್ವ ಶಿಲಾಯುಗದ ಸ್ಥಳಗಳನ್ನು ಗುರುತಿಸಿದ, ಹಸುವಿನ ಸಗಣಿಯ ರಾಶಿಯಿಂದ ಸುಟ್ಟು ನಿರ್ಮಿಸಲಾಗಿರುವ ಬೂದಿ ದಿಬ್ಬಗಳು ನವಶಿಲಾಯುಗದ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಮೊದಲ ವ್ಯಕ್ತಿಯೂ ರಾಬರ್ತ್‌ ಬ್ರೂಸ್‌ಫೂತ್‌. ಈ ಹಿನ್ನೆಲೆಯಲ್ಲಿ ರಾಬರ್ತ್‌ ಬ್ರೂಸ್‌ಫೂತ್‌ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಎಂದು ಹೆಸರಿಡಲಾಗಿದೆ ಎಂದು ಮ್ಯೂಜಿಯಂ ಸಮಿತಿ ಸಹ ಅಧ್ಯಕ್ಷ ಹಾಗೂ ಹಿರಿಯ ಸಂಶೋಧಕ ಪ್ರೊ| ಕೋರಿಶೆಟ್ಟರ್‌ ಅವರು ವಿವರಿಸಿದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಇಡೀ ಮ್ಯೂಸಿಯಂ ಅನ್ನು ವೀಕ್ಷಿಸಿ ಮತ್ತು ಮಾಹಿತಿ ತಿಳಿದುಕೊಂಡು ಸಂತಸಪಟ್ಟರು. ಈ ಮ್ಯೂಸಿಯಂನ ಒಂದೊಂದು ಅಂಶಗಳನ್ನು ತಿಳಿದುಕೊಳ್ಳಬೇಕೆಂದರೇ ಕನಿಷ್ಠ ಮೂರುಗಂಟೆಗಳಾದರೂ ಬೇಕು ಎಂದರು. ಬಿಡುವು ಮಾಡಿಕೊಂಡು ಇನ್ನೊಮ್ಮೆ ಭೇಟಿ ನೀಡುವಂತೆ ಮ್ಯೂಸಿಯಂ ಸಮಿತಿ ಸದಸ್ಯರು ಮನವಿ ಮಾಡಿದಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರಾಬರ್ತ್‌ ಬ್ರೂಸ್‌ ಫೂತ್‌ ಮ್ಯೂಸಿಯಂ ವೆಬ್‌ಸೈಟ್‌ನ್ನು ರಾಜ್ಯಪಾಲರು ಲೋಕಾರ್ಪಣೆಗೊಳಿಸಿದರು. ನಂತರ ಮ್ಯೂಸಿಯಂ ಮುಂಭಾಗದಲ್ಲಿರುವ ಅಶೋಕನ ಶಿಲಾಶಾಸನವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮ್ಯೂಸಿಯಂ ವತಿಯಿಂದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ರಾಜ್ಯಪಾಲರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿ ಕಾರಿ ಪವನಕುಮಾರ್‌ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್‌, ಜಿಪಂ ಸಿಇಒ ಜೆ.ಲಿಂಗಮೂರ್ತಿ, ಎಡಿಸಿ ಪಿ.ಎಸ್‌. ಮಂಜುನಾಥ, ಮ್ಯೂಸಿಯಂ ಸಮಿತಿ ಸದಸ್ಯರಾದ ಸಂತೋಷ ಮಾರ್ಟಿನ್‌, ಎಂ.ಅಹಿರಾಜ್, ಸಂಶೋಧನಾ ಸಂಯೋಜಕಿ ಸಂಜನಾ ರಂಜನ್‌, ಮ್ಯೂಸಿಯಂ ಸಿಬ್ಬಂದಿ ಗೌರಿ, ಸಮಿತಿ ಸದಸ್ಯ ಕಾರ್ಯದರ್ಶಿ ಸಿದ್ದಲಿಂಗೇಶ ರಂಗಣ್ಣನವರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next