Advertisement

ಪ್ರಭುತ್ವ- ಪ್ರಜಾಪ್ರಭುತ್ವದ ಸಮನ್ವಯಕಾರ ಅಬ್ದುಲ್ಲಾ ಸಾಹೇಬ್‌

02:34 AM Feb 25, 2021 | Team Udayavani |

ಗಾಂಧೀಜಿಯವರು ಮೊದಲ ಬಾರಿ (1920) ಅವಿಭಜಿತ ದ.ಕ. ಜಿಲ್ಲೆಗೆ ಬಂದು 100 ವರ್ಷಗಳು ಪೂರ್ಣಗೊಂಡಿದ್ದರೆ ಮೂರನೆಯ ಭೇಟಿ (1934)ಗೆ 86 ವರ್ಷಗಳು ಸಂದಿವೆ. ಇವೆರಡೂ ಬಾರಿ ಅವರನ್ನು ಸ್ವಾಗತಿಸಿದ್ದ ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರು ಜನಿಸಿ 140 ವರ್ಷಗಳು ಕಳೆದಿವೆ.

Advertisement

ಗಾಂಧೀಜಿಯವರು 1920, 1927, 1934ರಲ್ಲಿ ಕರ್ನಾಟಕ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ್ದರು. 1920ರ ಆಗಸ್ಟ್‌ 19ರಂದು ಮೊದಲ ಬಾರಿ ಬಂದಾಗ ಅಸಹಕಾರ ಚಳವಳಿಯ ಹಿನ್ನೆಲೆ ಇತ್ತು. ಆಗ ಅವರು ಮಾತನಾಡಿದ್ದು ಮಂಗಳೂರಿನ ಈಗಿನ ನೆಹರೂ ಮೈದಾನದಲ್ಲಿ. ಆಗ ಉಡುಪಿಗೆ ಬರುವ ಕಾರ್ಯಕ್ರಮ ಇತ್ತಾದರೂ ವೈಸರಾಯ್‌ಯಿಂದ ಕರೆ ಬಂದ ಕಾರಣ ವಾಪಸು ಹಿಂದಿರುಗಬೇಕಾಯಿತು. 1927ರಲ್ಲಿ ಬಂದಾಗ ಖಾದಿ ಪ್ರಚಾರ ಮುಖ್ಯ ಉದ್ದೇಶವಾಗಿತ್ತು. 1934ರಲ್ಲಿ ಬಂದಾಗ ದಲಿತೋದ್ಧಾರಕ್ಕಾಗಿ ಹಣ ಸಂಗ್ರಹ ನಡೆದಿತ್ತು. 1920ರಲ್ಲಿ ಮಂಗಳೂರಿಗೆ ಮತ್ತು 1934ರಲ್ಲಿ ಉಡುಪಿಗೆ ಬಂದಾಗ ಎರಡೂ ಸಂದರ್ಭ ಗಳಲ್ಲಿ ಗಾಂಧೀಜಿ ಅವರನ್ನು ಸ್ವಾಗತಿಸಿದವರು ಮತ್ತು ಸಾರ್ವಜನಿಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ದವರು ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬ್‌.

1934ರಲ್ಲಿ ಎರಡು ಹಂತಗಳಲ್ಲಿ ಗಾಂಧೀಜಿ ರಾಜ್ಯದಲ್ಲಿ ಪ್ರವಾಸ ಮಾಡಿದರು. ಜ. 4ರಿಂದ ಗೌರಿಬಿದನೂರು, ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು, ಮೈಸೂರು, ನಂಜನಗೂಡು, ಮಂಡ್ಯ, ಚೆನ್ನಪಟ್ಟಣ, ಬೆಂಗಳೂರು, ಜ. 7ರಿಂದ 19ರ ವರೆಗೆ ಬೆಂಗಳೂರು, ಅನಂತರ ಕೇರಳದ ಮಲಬಾರ್‌ ಪ್ರದೇಶ, ಫೆ. 23ರಂದು ಪೊನ್ನಂಪೇಟೆ, ವಿರಾಜಪೇಟೆ, ಫೆ. 24ರಂದು ಮಡಿಕೇರಿ ಮೂಲಕ ಸಂಪಾಜೆ, ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರಿಗೆ, ಫೆ. 25ರಂದು ಮೂಲ್ಕಿ, ಉಡುಪಿ, ಬ್ರಹ್ಮಾವರ, ಕುಂದಾಪುರಕ್ಕೆ, ಫೆ. 26 ಸೋಮವಾರ ಮೌನವ್ರತ ಆಚರಣೆ, ಫೆ. 27ರಂದು ದಯಾವತಿ ಹಡಗಿನಲ್ಲಿ ಕಾರವಾರ, ಫೆ. 28ರಂದು ಶಿರಸಿ, ಮಾ. 1 ಸಿದ್ದಾಪುರಕ್ಕೆ ಭೇಟಿ ಕೊಟ್ಟು ಹಾವೇ ರಿಗೆ ತೆರಳಿದರು. ಹಾವೇರಿಯಿಂದ ದಾವಣಗೆರೆ, ಹರಪನಹಳ್ಳಿ, ಸೊಂಡೂರು, ಬಳ್ಳಾರಿ, ಹೊಸಪೇಟೆ, ಗದಗ, ಹುಬ್ಬಳ್ಳಿ, ಹುಕ್ಕೇರಿ, ಬೆಳಗಾವಿ, ನಿಪ್ಪಾಣಿ, ತೊರವಿ ಮೂಲಕ ಬಿಜಾಪುರಕ್ಕೆ ತೆರಳಿ ಮಾ. 6ರಂದು ಹೈದರಾಬಾದಿಗೆ ನಿರ್ಗಮಿಸಿದರು.

ಹಾಜಿ ಅಬ್ದುಲ್ಲಾ ಅವರು ಗಾಂಧೀಜಿಯವರು ಕರೆ ನೀಡಿದಂತೆ ರಚನಾತ್ಮಕ ಕಾರ್ಯಗಳಲ್ಲಿ ಪಾಲ್ಗೊಂಡದ್ದು ಮಾತ್ರವಲ್ಲದೆ ಚಳವಳಿಗಾರರ ಎಲ್ಲ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡುವ ಜತೆಗೆ ಸರಕಾರದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ವಿಶೇಷ. 1917ರಲ್ಲಿ ಕುಂದಾಪುರ ತಾಲೂಕು ಬೋರ್ಡ್‌ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಸಾಹೇಬರು ಬಳಿಕ ಉಡುಪಿ ತಾಲೂಕು ಬೋರ್ಡ್‌ ಅಧ್ಯಕ್ಷರಾದರು. 1919ರಲ್ಲಿ ಭೂಮಾಲಕ ಮತದಾರ ಕ್ಷೇತ್ರ(ಪಶ್ಚಿಮ ಕರಾವಳಿ ಮತ್ತು ಊಟಿ ಪ್ರದೇಶವನ್ನು ಒಳಗೊಂಡ ನೀಲ್‌ಗಿರಿ ಪ್ರದೇಶ)ದ ಮದ್ರಾಸ್‌ ವಿಧಾನಸಭೆಯ ಸದಸ್ಯರಾಗಿ, ಬಳಿಕ ಪುನಾರಚಿತ ಕೌನ್ಸಿಲ್‌ನಲ್ಲಿ ಮುಸ್ಲಿಂ ಮೀಸಲಾತಿ ಕ್ಷೇತ್ರದ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಇವರು 1926ರಲ್ಲಿ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಆಗ ಕಾಸರಗೋಡಿನಿಂದ ಬೈಂದೂರು-ಶಿರೂರು ವರೆಗಿನ ಕರಾವಳಿ ಪ್ರದೇಶ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು.

ಈ ನಡುವೆ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಹಿಂದುಳಿದವರಿಗೆ ಶಿಕ್ಷಣ ಕೊಡಿಸುವಲ್ಲಿ ಮುತುವರ್ಜಿ ವಹಿಸಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ (ಈಗ ವಿ.ವಿ. ಕಾಲೇಜು) ಇಂಗ್ಲಿಷ್‌ ಮತ್ತು ಸಂಸ್ಕೃತದಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಎರಡು ಪುರಸ್ಕಾರಗಳನ್ನು ನೀಡಲು ದತ್ತಿ ನಿಧಿ ಇರಿಸಿದ್ದರು. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಒತ್ತು ನೀಡಲು ಮಂಗಳೂರಿನಲ್ಲಿ ಆಯೋಜಿಸಿದ ಕೃಷಿ ಮತ್ತು ಕೈಗಾರಿಕಾ ಪ್ರದರ್ಶನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಉಡುಪಿಯಲ್ಲಿ ಸ್ವಂತ ಕಾರನ್ನು ಮೊದಲ ಬಾರಿಗೆ ಹೊಂದಿದ ಕೀರ್ತಿ ಇವರಿಗೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಆದ್ಯತೆ ಕೊಟ್ಟಿದ್ದರು. ಆರೋಗ್ಯಕ್ಕೆ ಕೊಟ್ಟ ಆದ್ಯತೆಯ ದ್ಯೋತ ಕವಾಗಿ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇಂದಿಗೂ ಅವರ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಕರಾವಳಿ ಭಾಗದ ಅಭಿವೃದ್ಧಿಯ ಪರಿಕಲ್ಪನೆ ಅವ ರಿಗೆ ಇತ್ತು. ಹತ್ತನೆಯ ತರಗತಿವರೆಗೆ ಮಾತ್ರ ಓದಿಕೊಂಡಿದ್ದರೂ ಅಪಾರ ಓದಿನ ಪ್ರವೃತ್ತಿ ಇತ್ತು. ಹಿಂದೂಸ್ಥಾನೀ ಸಂಗೀತದಲ್ಲಿ ವಿಶೇಷ ಒಲವು ಇದ್ದ ಅವರು ಕಲಾವಿದರಿಗೆ ಆಧಾರವಾಗಿದ್ದರು.

Advertisement

1882ರಲ್ಲಿ ಜನಿಸಿದ ಹಾಜಿ ಅಬ್ದುಲ್ಲಾ ಅವರು 53 ವರ್ಷ ಬದುಕಿ 1935ರಲ್ಲಿ ನಿಧನ ಹೊಂದಿದರು. ಈ ಕಿರು ಅವಧಿಯಲ್ಲಿ ಅವರ ಸಾಧನೆ ಅಪಾರ. 1906ರಲ್ಲಿ ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಿಸಿ 1929ರ ವರೆಗೆ ಅದರ ಅಧ್ಯಕ್ಷರಾಗಿದ್ದರು. ಈ ನಡುವೆ ಮಹತ್ವದ ಜವಾಬ್ದಾರಿ ಇರುವಾಗ ಮತ್ತು ಹಜ್‌ ಯಾತ್ರೆಗೆ ಹೋದ ಸಂದರ್ಭದಲ್ಲಿಯೂ ಅಧ್ಯಕ್ಷತೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು.

ಚಿಕ್ಕ ಹೆಸರಿಗೆ ದೀರ್ಘ‌ ವಿಶೇಷಣಗಳು!
ಅಬ್ದುಲ್ಲಾ ಸಾಹೇಬರು ಕರಾವಳಿಯ ಇತಿಹಾಸದಲ್ಲಿ ಒಂದು ದಂತಕಥೆ ಎನಿಸಿದವರು. ಹೆಸರಿನಲ್ಲಿಯೂ ವೈಶಿಷ್ಟ್ಯವಿದೆ. ಅವರ ಹೆಸರು ಬಹಳ ದೀರ್ಘ‌. ಖಾನ್‌ ಬಹಾದ್ದೂರ್‌ ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್‌ ಸಾಹೇಬ್‌ ಬಹಾದ್ದೂರ್‌. ಇಷ್ಟು ದೀರ್ಘ‌ ಹೆಸರಿಗೆ ಕಾರಣ ಖಾನ್‌ ಬಹಾದ್ದೂರ್‌ ಮತ್ತು ಬಹಾದ್ದೂರ್‌ ವಿಶೇಷಣವನ್ನು ಬ್ರಿಟಿಷರು ಕೊಟ್ಟದ್ದು, ಖಾನ್‌ ಸಾಹೇಬ್‌ ಬಿರುದು 1909ರಲ್ಲಿಯೂ ಖಾನ್‌ ಬಹಾದ್ದೂರ್‌ 1920ರಲ್ಲಿಯೂ ಸಿಕ್ಕಿತ್ತು. ಅವರು ಎರಡು ಬಾರಿ ಹಜ್‌ ಯಾತ್ರೆ ಮಾಡಿದ ಕಾರಣ ಎರಡು ಬಾರಿ ಹಾಜಿ ಶಬ್ದದ ವಿಶೇಷಣವಿದೆ. ಅವರ ಮೂಲ ಹೆಸರು ಅಬ್ದುಲ್ಲಾ ಖಾಸಿಂ ಎಂದು ಮಾತ್ರ. ಸಾಹೇಬ್‌ ಎನ್ನುವುದು ಗೌರವ ಸೂಚಕ ಶಬ್ದ. ಅವರ ಸಹಿಯಲ್ಲಿಯೂ ಅಬ್ದುಲ್ಲಾ ಖಾಸಿಂ ಎಂದು ಮಾತ್ರ ಇದೆ ಎನ್ನುವುದನ್ನು ಉಡುಪಿಯ ಹಾಜಿ ಅಬ್ದುಲ್ಲಾ ಮೆಮೋರಿಯಲ್‌ ಕಾರ್ಪೊರೇಶನ್‌ ಬ್ಯಾಂಕ್‌ ಹೆರಿ ಟೇಜ್‌ ಮ್ಯೂಸಿಯಂ ಕ್ಯುರೇಟರ್‌ ಜಯಪ್ರಕಾಶ ರಾವ್‌ ಬೆಟ್ಟು ಮಾಡುತ್ತಾರೆ.
ಇಲ್ಲಿ ಒಂದು ಸಂದೇಹ ಬರುತ್ತದೆ. ಖಾನ್‌ ಬಹಾ ದ್ದೂರ್‌, ಬಹಾದ್ದೂರ್‌ ಎಂಬ 2 ವಿಶೇಷಣಗಳನ್ನು ಬ್ರಿಟಿಷರು ಕೊಟ್ಟದ್ದು.

ಗಾಂಧೀಜಿ ಅಸಹಕಾರ ಚಳವಳಿ ಯನ್ನು ಆರಂಭಿಸಿ ಇಂತಹ ಪ್ರಶಸ್ತಿಗಳನ್ನು ತ್ಯಾಗ ಮಾಡಲು ಕರೆ ನೀಡಿದ್ದರು. 1920ರ ಮಂಗಳೂರು ಭೇಟಿಯಲ್ಲಿಯೂ ಇದೇ ಕರೆ ಕೊಟ್ಟಿದ್ದರು. ಆದರೂ ಈ ಪದವಿ ವಿಶೇಷಣಗಳು ಈಗಲೂ ಅಬ್ದುಲ್ಲಾರ ಹಿಂದೆ ಮುಂದೆ ರಾರಾಜಿಸುತ್ತಿವೆಯಲ್ಲ? “ಕೆಲವು ವ್ಯಕ್ತಿಗಳು ಗೌರವ ಡಾಕ್ಟರೇಟ್‌ ಸಿಕ್ಕಿದರೂ “ಡಾ|’ ಎಂದು ಹಾಕಿಕೊಳ್ಳುವುದಿಲ್ಲ. ಇನ್ನಾರೋ ಹೆಸರು ಬರೆಯುವಾಗ ಇದನ್ನು ಹಾಕುತ್ತಾರೆ. ಇದೇ ರೀತಿ ಅಬ್ದುಲ್ಲಾರು ವಿಶೇಷಣಗಳನ್ನು ಬಳಸಿರುವುದು ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕ ಆಡಳಿತ ಮಂಡಳಿ ಪಟ್ಟಿಯಲ್ಲಿಯಾಗಲೀ ಇತರ ದಾಖಲೆಗಳಲ್ಲಾಗಲೀ ಕಂಡುಬರುವುದಿಲ್ಲ. ದಿ| ಎಂ.ವಿ.ಕಾಮತ್‌ ಬರೆದ “ಕಾರ್ಪೊರೇಶನ್‌ ಬ್ಯಾಂಕ್‌- ಎ ಕಾರ್ಪೊರೇಟ್‌ ಜರ್ನಿ’ ಪುಸ್ತಕದಲ್ಲಿಯೂ ಹೆಸರಿನ ಜತೆ ವಿಶೇಷಣಗಳು ಕಾಣುತ್ತಿಲ್ಲ’ ಎನ್ನುತ್ತಾರೆ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ
ಯು. ವಿನೀತ್‌ ರಾವ್‌.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next