Advertisement

ಉಭಯ ಜಿಲ್ಲೆಯಲ್ಲಿ 3,300 ಎಕರೆ ಸರಕಾರಿ ಭೂಮಿ ಒತ್ತುವರಿ ತೆರವು 

12:10 AM Jun 03, 2022 | Team Udayavani |

ಉಡುಪಿ: ಗೋಮಾಳ ಸಹಿತವಾಗಿ ಸರಕಾರಿ ಭೂಮಿ ಒತ್ತುವರಿ ತೆರವು ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಉಭಯ ಜಿಲ್ಲೆಗಳಲ್ಲಿ 3,300 ಎಕರೆಗೂ ಅಧಿಕ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.

Advertisement

ರಾಜ್ಯದಲ್ಲಿ ಒಟ್ಟು 62,72,812 ಎಕರೆ ಸರಕಾರಿ ಭೂಮಿಯಿದ್ದು, ಅದರಲ್ಲಿ 14,25,464 ಎಕರೆ ಒತ್ತುವರಿಯಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ ಮೂಲಕ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿ, ವಿಚಾರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ.

ಒತ್ತುವರಿ ಗುರುತಿಸಲು ಮತ್ತು ನಿಗಾವಣೆಗೆ ಸರಕಾರಿ ಜಮೀನು ಸಂರಕ್ಷಣ ಸಮಿತಿಯನ್ನು ಸರಕಾರ ಈಗಾಗಲೇ ನೇಮಿಸಿದೆ. ಸಮಿತಿಯ ಸಲಹೆಯನುಸಾರ ಸರಕಾರದ ಹಂತದಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿ ಸೂಚನೆ ಬರಲಿದೆ. ಅದರಂತೆ ಜಿಲ್ಲೆ, ತಾಲೂಕು ಹಂತದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಖಾಲಿ ಇರುವ ಸರಕಾರಿ ಜಮೀನುಗಳನ್ನು ಗುರುತಿಸಿ ನಾಮಫ‌ಲಕ ಅಳವಡಿಸುವುದು ಮತ್ತು ಆವಶ್ಯಕತೆ ಇರುವಲ್ಲಿ ತಂತಿ ಬೇಲಿ ಹಾಕುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉಭಯ ಜಿಲ್ಲೆಯ ಒತ್ತುವರಿ ಮಾಹಿತಿ:

ಉಡುಪಿ ಜಿಲ್ಲೆಯಲ್ಲಿ ಲಭ್ಯವಿರುವ 2,59,868 ಎಕರೆ ಸರಕಾರಿ ಭೂಮಿಯಲ್ಲಿ 1,11,499 ಎಕರೆ ಒತ್ತುವರಿಯಾಗಿದ್ದು, ಇದರಲ್ಲಿ 2021ರ ಡಿಸೆಂಬರ್‌ ಅಂತ್ಯಕ್ಕೆ 3512 ಎಕರೆ ಒತ್ತುವರಿ ತೆರವಿಗೆ ಬಾಕಿ ಉಳಿದೆ. ದಕ್ಷಿಣ ಕನ್ನಡದಲ್ಲಿ ಲಭ್ಯವಿರುವ 5,63,046 ಎಕರೆ ಸರಕಾರಿ ಭೂಮಿಯಲ್ಲಿ 64,521 ಎಕರೆ ಒತ್ತುವರಿಯಾಗಿದ್ದು, 2021ರ ಡಿಸೆಂಬರ್‌ ಅಂತ್ಯಕ್ಕೆ 13,218 ಎಕರೆ ಒತ್ತುವರಿ ತೆರವಿಗೆ ಬಾಕಿ ಉಳಿದಿದೆ. ಒಟ್ಟಾರೆಯಾಗಿ ಉಭಯ ಜಿಲ್ಲೆಗಳ 16,730 ಎಕರೆ ಒತ್ತುವರಿ ತೆರವಿಗೆ ಬಾಕಿಯಿದೆ. 2013ರಿಂದ ಈಚೆಗೆ ಎರಡು ಜಿಲ್ಲೆಗಲ್ಲಿ 3,300 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಉಳಿದಂತೆ 2013ರ ಮೊದಲು ತೆರವು ಪ್ರಕ್ರಿಯೆ ನಡೆದಿದೆ.

Advertisement

ಅಕ್ರಮ ಸಕ್ರಮ :

ಸರಕಾರಿ ಭೂಮಿಯನ್ನು ಹಲವು ವಿಧಗಳಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ. ನಿವೇಶನ ರಹಿತರು, ದಾಖಲೆ ಇಲ್ಲದೆ ಹಲವು ವರ್ಷಗಳಿಂದ ಮನೆ ಮಾಡಿಕೊಂಡು ಕುಟುಂಬ ಸಮೇತರಾಗಿ ವಾಸವಿರುವ ಕಡೆಗಳಲ್ಲಿ ಅವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತವಾಗಿ ವಿವಿಧ ಜಿಲ್ಲೆಗಳಲ್ಲಿ 94ಸಿ, 50-53ರ ಅಡಿಯಲ್ಲಿ ಹೆಚ್ಚು ಜಮೀನು ಒತ್ತುವರಿಯಾಗಿದೆ. ಕೆಲವೊಂದು ಪ್ರಕರಣಗಳು ಸದ್ಯ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಇಂತಹ ಅಕ್ರಮ ಸಕ್ರಮ ಪ್ರಕರಣಗಳಲ್ಲಿ ತೆರವುಗೊಳಿಸದೆ ಹಕ್ಕುಪತ್ರ ನೀಡಲಾಗುವುದು.

ಒತ್ತುವರಿ ತೆರವು ಕಾರ್ಯ ತಹಶೀಲ್ದಾರ್‌ ಹಂತದಲ್ಲಿ ನಡೆಯುತ್ತಿರುತ್ತದೆ. ಸ್ಥಳೀಯವಾಗಿ ಬಂದಿರುವ ದೂರುಗಳನ್ವಯ ಸರಕಾರಿ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಗೋಮಾಳ ಅಥವಾ ಸರಕಾರಿ ಜಮೀನು ಒತ್ತುವರಿಗೆ ಅವಕಾಶ ಇರುವುದಿಲ್ಲ. – ಕೂರ್ಮಾ ರಾವ್‌ ಎಂ.,  ಉಡುಪಿ ಜಿಲ್ಲಾಧಿಕಾರಿ

 

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next