Advertisement

ನಂಜುಂಡಪ್ಪ ವರದಿ ಅನುಷ್ಠಾನದಲ್ಲಿನ ಬೆಳವಣಿಗೆ ಬಗ್ಗೆ ನಿರ್ಲಕ್ಷ್ಯ

08:30 AM Dec 17, 2018 | Karthik A |

ಬೆಳಗಾವಿ: ಆರ್ಥಿಕ ತಜ್ಞ ಡಾ. ಡಿ. ಎಂ. ನಂಜುಂಡಪ್ಪ ಅವರ ವರದಿ ಮಂಡನೆಯಾಗಿ 18 ವರ್ಷ ಕಳೆದಿದ್ದು, ರಾಜ್ಯ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ವರದಿಯ ಅನುಷ್ಠಾನದಲ್ಲಿ ಆಗಿರುವ ಬೆಳವಣಿಗೆಯ ಬಗ್ಗೆ ವಾಸ್ತವ ಚಿತ್ರಣ ತಿಳಿದುಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಧಾರವಾಡದ ಸಿಎಂಡಿಆರ್‌ ಸಂಸ್ಥೆ ಮಾಡಿರುವ ವರದಿಯನ್ನೂ ಪಡೆದುಕೊಂಡು ನೋಡುವ ಪ್ರಯತ್ನ ಮಾಡಿಲ್ಲ.

Advertisement

ಡಾ.ನಂಜುಂಡಪ್ಪ ವರದಿ ಆಧಾರದಲ್ಲಿ ರಾಜ್ಯದ 114 ತಾಲೂಕುಗಳಲ್ಲಿ 2000 ನೇ ವರ್ಷದಿಂದ 2015ರವರೆಗೆ ಅಗಿರುವ ಬದಲಾವಣೆಗಳು, ತಾಲೂಕುಗಳಲ್ಲಿ ಆಗಿರುವ ಅಭಿವೃದ್ದಿ ಸೂಚ್ಯಂಕದಲ್ಲಿನ ಬದಲಾವಣೆಗಳ ಬಗ್ಗೆ ಸಿಎಂಡಿಆರ್‌ ಸಂಸ್ಥೆ 2015ರಲ್ಲಿ ಸಮಗ್ರ ವರದಿ ಸಿದ್ಧಪಡಿಸಿದ್ದು, ವರದಿಯನ್ನು ರಾಜ್ಯ ಸರ್ಕಾರಕ್ಕೂ ಕಳುಹಿಸಿಕೊಟ್ಟಿದೆ. ಸಿಎಂಡಿಆರ್‌ ಸಂಸ್ಥೆ ನಡೆಸಿರುವ ಸಮೀಕ್ಷೆಯ ವರದಿ ‘ಉದಯವಾಣಿ’ಗೆ ಲಭ್ಯವಾಗಿದೆ.

ಈ ವರದಿಯ ಪ್ರಕಾರ ನಂಜುಂಡಪ್ಪ ವರದಿ ಅನ್ವಯ 2000ನೇ ವರ್ಷದಲ್ಲಿ ಅತ್ಯಂತ ಹಿಂದುಳಿದ 39 ತಾಲೂಕುಗಳ ಸಂಖ್ಯೆ 2015ರಲ್ಲಿ 24 ಕ್ಕೆ ಇಳಿದಿದೆ. ಅತಿ ಹಿಂದುಳಿದ ತಾಲೂಕುಗಳ ಸಂಖ್ಯೆ 40ರಿಂದ 32ಕ್ಕೆ ಇಳಿದಿದೆ. ಹಿಂದುಳಿದ ತಾಲೂಕುಗಳ ಸಂಖ್ಯೆ 35 ರಿಂದ 41 ಕ್ಕೆ ಏರಿಕೆಯಾಗಿದ್ದು, 6 ತಾಲೂಕುಗಳು ಹೊಸದಾಗಿ ಸೇರ್ಪಡೆಯಾಗಿವೆ. ರಾಜ್ಯದ ಹಿಂದುಳಿದ 114 ತಾಲೂಕುಗಳಲ್ಲಿ 17 ತಾಲೂಕುಗಳು ಅಭಿವೃದ್ಧಿ ಹೊಂದಿದ್ದು, 97 ತಾಲೂಕುಗಳು ಇನ್ನೂ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿವೆ. ಒಟ್ಟಾರೆ ರಾಜ್ಯದ 175 ತಾಲೂಕುಗಳಲ್ಲಿ 2000ನೇ ವರ್ಷದಿಂದ 61 ತಾಲೂಕುಗಳು ಅಭಿವೃದ್ಧಿ ಹೊಂದಿದ್ದು, 2015ಕ್ಕೆ ಅವುಗಳ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. 2000ನೇ ವರ್ಷದಿಂದ 2015 ರವರೆಗೆ ಶೇ. 10 ತಾಲೂಕುಗಳಷ್ಟೇ ಅಭಿವೃದ್ಧಿಯಾಗಿರುವುದು ಬೆಳಕಿಗೆ ಬಂದಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಬೆಳಗಾವಿ ವಿಭಾಗದಲ್ಲಿ ಅಭಿವೃದಿಟಛಿ ಸೂಚ್ಯಂಕ ಏರಿಕೆಯಾಗಿದೆ. ಹೈ-ಕದ ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳ ಅಭಿವೃದಿಟಛಿಯಲ್ಲಿ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ದಕ್ಷಿಣ ಕರ್ನಾಟಕದ ಶೇ.53ರಷ್ಟು ಅಭಿವೃದ್ಧಿ ಕಂಡು ಬಂದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಶೇ. 35ರಷ್ಟು ಇರುತ್ತದೆ.

ನಂಜುಂಡಪ್ಪ ವರದಿ ಅನ್ವಯ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಅಭಿವೃದ್ಧಿ ಹೊಂದಿದ ತಾಲೂಕುಗಳು, ಹಿಂದುಳಿದ ತಾಲೂಕು, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ತಾಲೂಕುಗಳೆಂದು ವಿಂಗಡಿಸಲಾಗಿತ್ತು. 114 ಹಿಂದುಳಿದ ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ಗುರುತಿಸಿ 8 ವರ್ಷಗಳಲ್ಲಿ ಪ್ರತಿ ವರ್ಷ 2000 ಕೋಟಿ ರೂ. ವಿಶೇಷ ಅನುದಾನ ಸೇರಿ 31 ಸಾವಿರ ಕೋಟಿ ರೂ. ಖರ್ಚು ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು.


ಸಮೀಕ್ಷೆಯಲ್ಲಿ ಕಂಡು ಬಂದಿದ್ದು

– ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ ಹೇಳಿಕೊಳ್ಳುವ ಬದಲಾವಣೆ ಕಂಡು ಬಂದಿಲ್ಲ.

Advertisement

– ದಕ್ಷಿಣ ಕರ್ನಾಟಕದಲ್ಲಿ ಅಭಿವೃದ್ಧಿಯ ಸೂಚ್ಯಂಕ ಕಂಡು ಬಂದಿದ್ದು, ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಅಭಿವೃದ್ಧಿ ಲಕ್ಷಣಗಳು ಕಂಡು ಬಂದಿವೆ.

– ಅಭಿವೃದ್ಧಿ ಕೃಷಿ ಹವಾಮಾನ ವಲಯದ ಆಧಾರದಲ್ಲಿ ಬೆಳವಣಿಗೆಯಾಗುತ್ತದೆ.

– ಹೈ-ಕರ್ನಾಟಕ ಭಾಗದ ತಾಲೂಕುಗಳು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿಯೇ ಮುಂದುವರಿದಿವೆ.

– ಆಗ್ನೇಯ ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಒಣ ಪ್ರದೇಶ ಹೊಂದಿದ್ದರೂ, ಬೆಂಗಳೂರಿನ ನಗರೀಕರಣದ ಪ್ರಭಾವದಿಂದ ಅಭಿವೃದ್ಧಿ ಸೂಚ್ಯಂಕ ಹೆಚ್ಚಳ ಕಂಡು ಬಂದಿದೆ.

– ಹೈ.ಕ. ಭಾಗದಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ.

– ಹೈ.ಕ ಭಾಗದಲ್ಲಿ ಸಾಮಾನ್ಯ ಯೋಜನೆಗಳ ಅನುದಾನವನ್ನೇ ವಿಶೇಷ ಅನುದಾನದ ಹೆಸರಿನಲ್ಲಿ ತೋರಿಸುವುದು.

ಸಿಎಂಡಿಆರ್‌ ಶಿಫಾರಸುಗಳು
ಡಾ.ಡಿ.ಎಂ ನಂಜುಂಡಪ್ಪ ವರದಿ ಆಧಾರದಲ್ಲಿಯೇ 15 ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಹಾಗೂ ಅನುಷ್ಠಾನದಲ್ಲಿ ಆಗುತ್ತಿರುವ ಲೋಪದೋಷಗಳು ಮತ್ತು ರಾಜಕೀಯ ಇಚ್ಛಾಶಕ್ತಿ ಆಧಾರದಲ್ಲಿ ಸಿಎಂಡಿಆರ್‌ ಸಂಸ್ಥೆ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿ, ಕೆಲವು ಶಿಫಾರಸುಗಳನ್ನು ಮಾಡಿದೆ.

– ನಂಜುಂಡಪ್ಪ ವರದಿ ಆಧಾರದಲ್ಲಿ ಬಿಡುಗಡೆಯಾಗುವ ಹಣ ಎಸ್‌ಸಿಪಿ – ಟಿಎಸ್‌ಪಿ ಕಾಯ್ದೆ ಮಾದರಿಯಲ್ಲಿ ಕಡ್ಡಾಯವಾಗಿ ಬಳಕೆ ಮಾಡುವುದು. ಮುಂದಿನ ವರ್ಷಕ್ಕೆ ಹಣ ಕ್ಯಾರಿ ಫಾರ್ವಡ್‌ ಮಾಡಬೇಕು.

– ನಂಜುಂಡಪ್ಪ ವರದಿ ಅನುಷ್ಠಾನ ಪ್ರಗತಿ ಮೌಲ್ಯಮಾಪನ ಮಾಡುವ ಪ್ರತ್ಯೇಕ ಸಂಸ್ಥೆ ಆರಂಭಿಸಬೇಕು.

– ಪ್ರತಿ ವರ್ಷ ಅಭಿವೃದ್ಧಿಯಲ್ಲಾಗುವ ಬದಲಾವಣೆಯನ್ನು ತಾಲೂಕುವಾರು ಸಮೀಕ್ಷೆ ಮಾಡಿ ವರದಿ ಪಡೆಯಬೇಕು.

– ಯೋಜನೆಗಳನ್ನು ರೂಪಿಸುವಾಗ ತಜ್ಞರನ್ನು ಬಳಸಿಕೊಳ್ಳಬೇಕು.

– ಕಂದಾಯ ವಿಭಾಗಳನ್ನು 4 ರಿಂದ ಕೃಷಿ ವಲಯಗಳ ಆಧಾರದಲ್ಲಿ 10 ಕ್ಕೆ ಹೆಚ್ಚಳ ಮಾಡಬೇಕು.

– 4 ಕಂದಾಯ ವಿಭಾಗಗಳಲ್ಲಿ ಸಿನಿಮಾ, ವಾಣಿಜ್ಯ ಮಂಡಳಿ ಕಚೇರಿಗಳನ್ನು ತೆರೆಯಬೇಕು.

ನಂಜುಂಡಪ್ಪ ಇನ್‌ಸ್ಟಿಟ್ಯೂಟ್‌ ಆಫ್ ರೀಜನಲ್‌ ಇಂಬ್ಯಾಲನ್ಸ್‌ ಹೆಸರಿನಲ್ಲಿ ಸರ್ಕಾರ ಸಂಸ್ಥೆ ತೆರೆದು, ಆ ಸಂಸ್ಥೆ ಪ್ರತಿ ವರ್ಷ ವರದಿ ಅನುಷ್ಠಾನದಲ್ಲಾಗುವ ಬದಲಾವಣೆಗಳ ಆಧಾರದಲ್ಲಿ ಯೋಜನೆಗಳನ್ನು ಬದಲಾಯಿಸಿಬೇಕು. ಬದಲಿಗೆ ಪ್ರತಿ ವರ್ಷ ಹಣ ಬಿಡುಗಡೆ ಮಾಡುವುದರಿಂದ ಯಾವುದೇ ಅಭಿವೃದ್ಧಿ ಕಾಣುವುದಿಲ್ಲ.
— ಡಾ. ಸಿದ್ದಲಿಂಗಸ್ವಾಮಿ, ಸಿಎಂಡಿಆರ್‌ ಪ್ರಾಧ್ಯಾಪಕ

ತಾಲೂಕುಗಳ ಅಭಿವೃದ್ಧಿಯಲ್ಲಿ ಆಗಿರುವ ಬದಲಾವಣೆ
ಅತ್ಯಂತ ಹಿಂದುಳಿದ ತಾಲೂಕುಗಳಿಂದ ಹಿಂದುಳಿದ ತಾಲೂಕುಗಳಾಗಿರುವುದು: ಬೀಳಗಿ, ಸಿಂಧನೂರು, ಹೊಸದುರ್ಗ, ಶಿರಾ, ಗುಬ್ಬಿ, ಕುಣಿಗಲ್‌ ಹಾಗೂ ಮಾಗಡಿ.(7 ತಾಲೂಕುಗಳು)

– ಅತ್ಯಂತ ಹಿಂದುಳಿದ ತಾಲೂಕುಗಳಿಂದ ಅತಿ ಹಿಂದುಳಿದ ತಾಲೂಕುಗಳು: ಭಾಲ್ಕಿ, ಚನ್ನಗಿರಿ, ಪಾವಗಡ, ಮಧುಗಿರಿ, ಚಾಮರಾಜನಗರ, ಚಿತ್ತಾಪುರ, ಬಾಗೇಪಲ್ಲಿ ಹಾಗೂ ಕನಕಪುರ (8 ತಾಲೂಕುಗಳು)

– ಅತಿ ಹಿಂದುಳಿದ ತಾಲೂಕುಗಳಿಂದ ಹಿಂದುಳಿದ ತಾಲೂಕುಗಳು: ಹುನಗುಂದ, ಮಧುಗಿರಿ, ಭಟ್ಕಳ, ಹಿರೇಕೆರೂರು, ಹಗರಿಬೊಮ್ಮನಹಳ್ಳಿ, ಸಿರಗುಪ್ಪ, ಜಗಳೂರು, ಕಡೂರು, ಚಿಕ್ಕನಾಯಕನಹಳ್ಳಿ, ತುರುವೆಕೆರೆ, ಕೆ. ಆರ್‌.ಪೇಟೆ, ಮಳವಳ್ಳಿ, ಅರಕಲಗೂಡು, ಟಿ. ನರಸೀಪುರ, ಮುಳಬಾಗಿಲು ಹಾಗೂ ಗೌರಿಬಿದನೂರು (16ತಾಲೂಕುಗಳು)

– ಹಿಂದುಳಿದ ತಾಲೂಕುಗಳಿಂದ ಅಭಿವೃದ್ದಿ ತಾಲೂಕುಗಳು: ರಾಯಬಾಗ, ವಿಜಯಪುರ, ನವಲಗುಂದ, ಅಂಕೋಲಾ, ಸಿದ್ದಾಪುರ, ಹಾವೇರಿ, ಬ್ಯಾಡಗಿ, ಆನೇಕಲ್‌, ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರು, ಹೊಳೆನರಸೀಪುರ, ಚನ್ನರಾಯಪಟ್ಟಣ, ಶ್ರೀನಿವಾಸಪುರ, ಮಾಲೂರು, ಬಂಗಾರಪೇಟೆ ಹಾಗೂ ಚನ್ನಪಟ್ಟಣ (18 ತಾಲೂಕುಗಳು)

– ಹಿಂದುಳಿದ ತಾಲೂಕುಗಳಿಂದ ಅತಿ ಹಿಂದುಳಿದ: ಹಾನಗಲ್‌, ಪಿರಿಯಾಪಟ್ಟಣ (2 ತಾಲೂಕುಗಳು)

– ಅಭಿವೃದ್ದಿ ಹೊಂದಿದ ತಾಲೂಕುಗಳಿಂದ ಹಿಂದುಳಿದ: ಖಾನಾಪುರ, ಬೀದರ್‌ ಮತ್ತು ಆಲೂರು (3 ತಾಲೂಕುಗಳು)

Advertisement

Udayavani is now on Telegram. Click here to join our channel and stay updated with the latest news.

Next