Advertisement

ನೀರಿನ ಬಗ್ಗೆಯ ಚರ್ಚೆಯಲ್ಲಿ ಒಂದಾದ ಆಡಳಿತ-ವಿಪಕ್ಷ ಸದಸ್ಯರು !

12:09 PM Apr 28, 2017 | |

ಕಾಪು: ಕಾಪು ಪುರಸಭೆಯ ಎಪ್ರಿಲ್‌ ತಿಂಗಳ ಸಾಮಾನ್ಯ ಸಭೆಯ ಒಟ್ಟು ಅವಧಿಯ ಹೆಚ್ಚಿನ ಸಮಯದಲ್ಲಿ ನೀರು, ಪೈಪ್‌ಲೈನ್‌, ಕೆರೆ ಅಭಿವೃದ್ಧಿ ಇತ್ಯಾದಿ ವಿಚಾರಗಳ ಬಗ್ಗೆಯೇ ವಿಸ್ತÅತ ಚರ್ಚೆ ನಡೆಯಿತು. 

Advertisement

ಕಾಪು ಪಡು, ಮೂಳೂರು ಹಾಗೂ ಮಲ್ಲಾರಿನಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂದು ಸದಸ್ಯರು ದೂರಿದ್ದು, ಈ ಸಂದರ್ಭ ನಡೆದ ಚರ್ಚೆಯಲ್ಲಿ ಆಡಳಿತ – ವಿಪಕ್ಷ ಸದಸ್ಯರು ಒಂದಾಗಿ ಧ್ವನಿಗೂಡಿಸಿದ್ದು ಇಂದಿನ ಸಭೆಯ ವಿಶೇಷತೆಯಾಗಿದೆ.

ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಉಪಸ್ಥಿತಿ ಮತ್ತು ಪುರಸಭಾಧ್ಯಕ್ಷೆ  ಸೌಮ್ಯಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಅರುಣ್‌ ಶೆಟ್ಟಿ ಪಾದೂರು, ಕಿರಣ್‌ ಆಳ್ವ, ಇಮ್ರಾನ್‌, ಮಮತಾ, ಶಾಂಭವಿ ಕುಲಾಲ್‌, ಅಬ್ದುಲ್‌ ಹಮೀದ್‌, ಶಾಬು ಸಾಹೇಬ್‌, ನಾಗೇಶ್‌ ಸುವರ್ಣ, ಲಕ್ಷ್ಮೀಶ ತಂತ್ರಿ ಮೊದಲಾದವರು ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯ ಇರುವ ಬಗ್ಗೆ ದೂರಿದರು.

ಈ ಸಂದರ್ಭ ಮಾತನಾಡಿದ ಶಾಸಕ ವಿನಯ ಕುಮಾರ್‌ ಸೊರಕೆ, ಕುಡಿಯುವ ನೀರಿನ ತುರ್ತು ಪೂರೈಕೆಗೆ 33 ಲಕ್ಷ ರೂ. ಮಂಜೂರಾಗಿದೆ. ಅಧಿಕಾರಿಗಳು ಯಾವುದೇ ಕಾರಣ ನೀಡದೆ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ನೀರಿನ ಸಮಸ್ಯೆಯಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯಾಧಿಧಿಕಾರಿಗೆ ಸೂಚನೆ ನೀಡಿದರು.

ಪುರಸಭಾ ಸದಸ್ಯ ಇಮ್ರಾನ್‌ ಅವರು ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿದ ಕುಟುಂಬವೊಂದಕ್ಕೆ ವಿದ್ಯುತ್‌ ಸಂಪರ್ಕಕ್ಕಾಗಿ ಎಲ್ಲ ದಾಖಲೆಗಳಿದ್ದರೂ, ಆರ್‌ಟಿಸಿ ಇಲ್ಲದೆ ನಿರಾಪೇಕ್ಷಣಾ ಪತ್ರ ನೀಡಲು ಸಾಧ್ಯವಿಲ್ಲ ಎಂಬ ಪುರಸಭೆ ಮುಖ್ಯಾಧಿಧಿಕಾರಿ ಹೇಳಿದ್ದಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.
ಇದರಿಂದ ಗರಂ ಆದ ಶಾಸಕ ಸೊರಕೆ, ಅಧಿಕಾರಿಗಳು ಸದಸ್ಯರು ಹೇಳಿದ ಕೆಲಸವನ್ನು ಮಾಡಬೇಕು. ಕಾನೂನು ಬದಿಗಿಟ್ಟು, ಮಾನವೀಯತೆ ಮೆರೆದು ಕೌನ್ಸಿಲ್‌ ನಿರ್ಣಯದಂತೆ ಕೆಲಸ ಮಾಡುವಂತೆ ಕರೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ರಾಯಪ್ಪ, ನಾನು ಕಾನೂನು ಮೀರಿ ಯಾವುದೇ ಕೆಲಸ ಮಾಡುವುದಿಲ್ಲ. ಇದರಿಂದಾಗಿ ಯಾವುದೇ ತೊಂದರೆ ಬಂದರೂ ಎದುರಿಸಲು ಸಿದ್ಧ ಎಂದರು. ಮತ್ತೆ ಪ್ರತಿಕ್ರಿಯೆ ನೀಡಿದ ಶಾಸಕ ಸೊರಕೆ,  ಈ ಬಗ್ಗೆ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಯವರಲ್ಲಿ ನಾನು ಮಾತನಾಡುತ್ತೇನೆ. ನೀವು ಜನರಿಗೆ ಉಪಕಾರವಾಗುವಂತೆ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು.

Advertisement

ಅಧಿಕಾರಿಗಳು ಪುರಸಭೆಯ ಕೌನ್ಸಿಲ್‌ ಸಭೆಯ ನಿರ್ಣಯದಂತೆ ಕೆಲಸ ಮಾಡಬೇಕು. ತಮ್ಮ ಇಷ್ಟದಂತೆ ಕೆಲಸ ಮಾಡುವುದು, ಕೌನ್ಸಿಲ್‌ನ ನಿರ್ಣಯಕ್ಕೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ಕೌನ್ಸಿಲ್‌ನ ಬಗ್ಗೆ ಸದಸ್ಯರಿಗೆ ಮತ್ತು ಜನರಿಗೆ ವಿಶ್ವಾಸ ಇಲ್ಲವಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಜಾಗೃತೆ ವಹಿಸದಿದ್ದಲ್ಲಿ ಕಠಿನ ಕ್ರಮವನ್ನು ಎದುರಿಸಲು ಸಿದ್ಧರಾಗಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯಾವ ಮಾನದಂಡದಡಿ 
ಕೆರೆ ಅಭಿವೃದ್ಧಿ 

ಪುರಸಭಾ ವ್ಯಾಪ್ತಿ ಯಲ್ಲಿ ಕೆರೆಗಳ ಅಭಿವೃದ್ಧಿಗೆ ಯಾವ ಆಧಾರದಲ್ಲಿ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಮಲ್ಲಾರಿನಲ್ಲಿ 3 ಸರಕಾರಿ ಹಾಗೂ ಕೆಲವೊಂದು ಪರಂಬೋಕು ಕೆರೆಗಳಿದ್ದರೂ, ಒಂದೂ ಕೆರೆಯನ್ನು ಅಭಿವೃದ್ಧಿಗೆ ಆಯ್ಕೆ  ಮಾಡಲಾಗಿಲ್ಲ. ಕೆಲ ಪರಂಬೋಕು ಕೆರಗಳನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೆ ಈಗ ಅಭಿವೃದ್ಧಿಪಡಿಸುತ್ತಿರುವ ಕೆರೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ಇದೆ. ಕಾಮಗಾರಿ ಗುಣಮಟ್ಟ ಪರಿಶೀಲನಾ ಸಮಿತಿ ರಚನೆ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ವಿಪಕ್ಷ ಪಕ್ಷದ ನಾಯಕ ಅರುಣ್‌ ಶೆಟ್ಟಿ ಪಾದೂರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಸೊರಕೆ, ಕಾಪು ಪುರಸಭಾ ವ್ಯಾಪ್ತಿಯಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ ಸುಮಾರು 20 ಕೆರೆಗಳನ್ನು ನೀರಿನ ಆಶ್ರಯಕ್ಕಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ಈಗಾಗಲೇ 5 ಕೋ. ರೂ. ಅನುದಾನ ಬಿಡುಗಡೆಯಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಪರಿಶೀಲನಾ ಸಮಿತಿಯನ್ನು ರಚಿಸ ಲಾಗಿದೆ.  ಸಮಿತಿಯ ನೇತƒತ್ವದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಕ್ರಮ ಕೈಗೊಳ್ಳಬೇಕು. ಕಾಮಗಾರಿಗಳ ಬಗ್ಗೆ ಇರುವ ತಾಂತ್ರಿಕ ಗೊಂದಲಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.

ಬೀದಿ ನಾಯಿಗಳನ್ನು
ನಿಯಂತ್ರಿಸುವಂತೆ ಆಗ್ರಹ 

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಮೀರಿ ಬೀದಿ ನಾಯಿಗಳಿವೆ. ಅದರಲ್ಲೂ ಕಲ್ಯಾ ವಾರ್ಡ್‌ನಲ್ಲಿ ನೂರಾರು ಬೀದಿ ನಾಯಿಗಳಿವೆ. ಪುರಸಭಾ ವ್ಯಾಪ್ತಿಯಲ್ಲಿ ಸ್ವತ್ಛತೆಯ ಪರಿಣಾಮ ನಾಯಿಗಳಿಗೆ ತಿನ್ನಲು ಏನು ಸಿಗುತ್ತಿಲ್ಲ. ಇದರಿಂದಾಗಿ ಬೀದಿ ನಾಯಿಗಳು ಮುಂದೆ ಬೀದಿ ಬದಿ ಆಡುವ ಮಕ್ಕಳ ಮೇಲೆ ದಾಳಿ ಮಾಡುವ ಭೀತಿಯಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಾವು ಕಠಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸದಸ್ಯ ಲಕ್ಷ್ಮೀಶ ತಂತ್ರಿ ಆಗ್ರಹಿಸಿದರು.

ಬೀದಿ ನಾಯಿಗಳ ಸಂತಾನ ಹರಣಕ್ಕೆ ಬಜೆಟ್‌ನಲ್ಲಿ ಮೊತ್ತವನ್ನು ತೆಗೆದಿರಿಸಲಾಗಿದೆ. ಮಳೆಗಾಲಕ್ಕೆ ಮುಂಚೆ ಟೆಂಡರ್‌ ಕರೆದು ನಾಯಿಗಳ ಸಂತಾನ ಹರಣ ಮಾಡಲು ಕ್ರಮ ಕೈಗೊಳ್ಳುವುದಾಗಿ ರಾಯಪ್ಪ ತಿಳಿಸಿದರು.

ಚುನಾಯಿತ – ನಾಮನಿರ್ದೇಶಿತ ಸದಸ್ಯರ ನಡುವೆ ಜಟಾಪಟಿ 
ಪುರಸಭಾ ಚುನಾಯಿತ ಸದಸ್ಯನ ನೆಲೆಯಲ್ಲಿ ಕಾಮಗಾರಿ ನೋಡಲು ತೆರಳಿದ್ದಾಗ ನಾಮ ನಿರ್ದೇಶಿತ ಸದಸ್ಯರು ನನಗೆ ಬೈಯ್ದಿದ್ದು, ಮತ್ತೋರ್ವ ಸದಸ್ಯರ ಮನೆ ಮಂದಿಯೂ ಜೋರು ಮಾಡಿರುತ್ತಾರೆ. ಹಾಗಾದಲ್ಲಿ ಜನರಿಂದ ಆಯ್ಕೆಯಾದ ನಮಗೆ ಯಾವುದೇ ಅಧಿಕಾರ ಇಲ್ಲವೇ? ಎನ್ನುವುದನ್ನು ಸಭೆಯಲ್ಲಿ ಸ್ಪಷ್ಟಪಡಿಸುವಂತೆ ಸದಸ್ಯ ಅನಿಲ್‌ ಕುಮಾರ್‌ ಮುಖ್ಯಾಧಿಕಾರಿಯವರನ್ನು ಒತ್ತಾಯಿಸಿದರು.

ಇದಕ್ಕೆ ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಸ್ಪಷ್ಟನೆ ನೀಡಿ, ಜನರಿಂದ ಆಯ್ಕೆಯಾದವರಿಗೆ ಅಧಿಕಾರ ಇದ್ದು, ನಾಮನಿರ್ದೇಶಿತ ಸದಸ್ಯರಿಗೆ ಸಲಹೆ ಸೂಚನೆ ನೀಡುವ ಎಲ್ಲ ಹಕ್ಕುಗಳು ಇರುತ್ತದೆ. ಯಾವುದೇ ಕಾರಣಕ್ಕೂ ಘರ್ಷಣೆಗೆ ಅವಕಾಶವಿಲ್ಲ. ನಾವೆಲ್ಲರೂ ಒಂದಾಗಿ ಸಹೋದರ ಭಾವನೆಯೊಂದಿಗೆ ಕಾರ್ಯ ನಿರ್ವಹಿಸೋಣ ಎಂದರು. ಉಪಾಧ್ಯಕ್ಷ ಕೆ. ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್‌ ಮೂಳೂರು, ಪುರಸಭಾ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ತೆರಿಗೆ ಹೆಚ್ಚಳಕ್ಕೆ ಸದಸ್ಯರಿಂದ  ಆಕ್ಷೇಪ 
ಮನೆ ತೆರಿಗೆ ಹೆಚ್ಚಳವಾಗಿರುವ ಬಗ್ಗೆ ಸದಸ್ಯ ಅಮೀರುದೀªನ್‌ ಸಭೆಯ ಗಮನಕ್ಕೆ ತಂದಿದ್ದು, ಪುರಸಭೆ ರಚನೆಯಾದ ಕೆಲ ವರ್ಷಗಳ ಅವಧಿಗೆ ತೆರಿಗೆ ಏರಿಕೆಯಾಗುವುದಿಲ್ಲ ಎಂದು ಆರಂಭದಲ್ಲಿ ಹೇಳಿರುವ ಮಾತು ಹುಸಿಯಾಗುತ್ತಿದೆ. ಇದರಿಂದಾಗಿ ಜನರು ಆಕ್ರೋಶಿತರಾಗಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಸದಸ್ಯರ ಗಮನಕ್ಕೆ ತಾರದೇ ಮುಂದುವರಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next