Advertisement

ಗೂಂಡಾ ಆಳ್ವಿಕೆ, ಭ್ರಷ್ಟಾಚಾರ ನಡೆದಿರುವುದು ಬಿಜೆಪಿ ಶಾಸಕರ ಅವಧಿಯಲ್ಲಿ: ಅಶೋಕ್‌ ರೈ

07:09 PM May 04, 2023 | Team Udayavani |

ಪುತ್ತೂರು: ಬಿಜೆಪಿ ಪಕ್ಷವು ತನ್ನ ಸೋಲಿನ ಭೀತಿಯಿಂದ ಪುತ್ತೂರಿನಲ್ಲಿ ಕಾಂಗ್ರೆಸ್‌ ಶಾಸಕರ ಅವಧಿಯಲ್ಲಿ ಗೂಂಡಾ ಪ್ರವೃತ್ತಿ ಇತ್ತು ಅನ್ನುವ ಹೇಳಿಕೆ ನೀಡಿದೆ. ಆದರೆ ಪುತ್ತೂರು ಕ್ಷೇತ್ರದಲ್ಲಿ ಗೂಂಡಾ ಆಳ್ವಿಕೆ, ವ್ಯಾಪಕ ಭ್ರಷ್ಟಾಚಾರ, ಅಕ್ರಮ ವ್ಯವಹಾರ, ಕಮಿಷನ್‌ ದಂಧೆ ನಡೆದಿದ್ದರೆ ಅದು ಕೆಲ ಬಿಜೆಪಿ ಶಾಸಕರ ಅವಧಿಯಲ್ಲಿ ಅನ್ನುವ ಸತ್ಯ ಮತದಾರರಿಗೆ ತಿಳಿದಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ತಿರುಗೇಟು ನೀಡಿದ್ದಾರೆ.

Advertisement

ಪುತ್ತೂರಿನ ವಿವಿಧ ಭಾಗಗಳಲ್ಲಿ ಪ್ರಚಾರ ಕಾರ್ಯ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಎಂದಿಗೂ ಗೂಂಡಾ ಆಳ್ವಿಕೆ ನಡೆಸಿಲ್ಲ. ಆದರೆ ಬಿಜೆಪಿ ಧರ್ಮ-ಧರ್ಮ, ಜಾತಿ-ಜಾತಿಗಳ ನಡುವೆ ಕಂದಕ ಸೃಷಿಸುವ ಆಡಳಿತ ನಡೆಸಿದೆ. ಗ್ರಾ.ಪಂ.ನಿಂದ ಉನ್ನತ್ತ ಸ್ತರದ ತನಕ ಆಡಳಿತ ಹೊಂದಿದ್ದರೂ ಬಿಜೆಪಿ ಪುತ್ತೂರಿಗೆ ನಯಾಪೈಸೆಯ ಕೊಡುಗೆಯನ್ನು ನೀಡಿಲ್ಲ ಎಂದು ಅಶೋಕ್‌ ರೈ ಟೀಕಿಸಿದರು.

ಐಟಿ ದಾಳಿ ಹುನ್ನಾರ: ಕಣ್ಣೀರಿಟ್ಟ ಅಶೋಕ್‌ ರೈ
ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜನರು ಅಪಾರ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಕಂಡು ಬಿಜೆಪಿ ಐಟಿ ದಾಳಿ ನಡೆಸಿ ನನ್ನನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ. ನಾನು ಅತ್ಯಂತ ಪ್ರಾಮಾಣಿಕನಾಗಿ ಉದ್ಯಮ ಮಾಡುತ್ತಿದ್ದು ಎಲ್ಲ ತೆರಿಗೆಗಳನ್ನು ಪಾವತಿಸಿದ್ದೇನೆ. ಗಳಿಸಿದ ಆದಾಯದ ಒಂದಂಶವನ್ನು ಬಡವರ ಸೇವೆಗೆ ಮೀಸಲಿಟ್ಟಿದ್ದೇನೆ. ಆದರೆ ಬಿಜೆಪಿಯು ಸೋಲಿನ ಭಯದಿಂದ ನಿರಂತರವಾಗಿ ನನ್ನ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ತನ್ನ ಮೇಲೆ ಮಾಡುತ್ತಿರುವ ಹುನ್ನಾರ ನೆನೆದು ಅಶೋಕ್‌ ರೈ ಕಣ್ಣೀರಿಟ್ಟರು.

ದೇವರೇ ತೀರ್ಮಾನಿಸುತ್ತಾನೆ..!
ನಾನು ಕೆಲವರಿಗೆ ಹಣ ಕೊಡಲು ಬಾಕಿ ಇದೆ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಪ್ರಸಾರ ಮಾಡುತ್ತಿರುವವರ ವಿರುದ್ಧ ಮಂಗಳೂರಿನ ಕದ್ರಿ ಠಾಣೆಗೆ ದೂರು ನೀಡಿದ್ದೇನೆ. ಮಾನನಷ್ಟ ಮುಖದ್ದಮೆಯನ್ನು ದಾಖಲಿಸಿದ್ದೇನೆ. ಯಾವುದೇ ದಾಖಲೆಗಳಿಲ್ಲದೆ ಈ ರೀತಿ ವಿಡಿಯೋ ಮಾಡಿ ಹರಿಯಬಿಟ್ಟರೆ ಜನರು ನಂಬುವುದಿಲ್ಲ. ದಾಖಲೆಗಳಿದ್ದರೆ ದೂರು ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಅಶೋಕ್‌ ರೈ, ಅಪಪ್ರಚಾರದಲ್ಲಿ ನಿರತರಾಗಿರುವವರನ್ನು ಮಹಾಲಿಂಗೇಶ್ವರ ಮತ್ತು ಮಹಿಷಮರ್ದಿನಿ ನೋಡಿಕೊಳ್ಳುತ್ತಾರೆ ಎಂದು ಅಶೋಕ್‌ ರೈ ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯು ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಎಂ. ಎಸ್‌. ಮಹಮ್ಮದ್‌, ದೇಜಪ್ಪ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next