Advertisement

ಗೊಮ್ಮಟನ ನಾಡಾಗಿದೆ ಚಿರತೆಯ ಬೀಡು

09:21 PM Jan 28, 2020 | Lakshmi GovindaRaj |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಜೈನರ ಕಾಶಿ ಎಂದೇ ಪ್ರಸಿದ್ಧಿ ಪ್ರವಾಸಿ ತಾಣವಾಗಿರುವ ಶ್ರವಣಬೆಳಗೊಳದ ಇಂದ್ರಗಿರಿ ಹಾಗೂ ಚಂದ್ರಗಿರಿ ಬೆಟ್ಟದಲ್ಲಿ ಐದಾರು ಚಿರತೆಗಳು ಬೀಡು ಬಿಟ್ಟಿದ್ದು, ಪ್ರವಾಸಿಗರ ಹಾಗೂ ಸ್ಥಳಿಯ ನಿವಾಸಿಗಳಿಗೆ ಆತಂಕ ಸೃಷ್ಟಿಸಿದೆ.

Advertisement

ಭಯದಿಂದ ಬೆಟ್ಟ ಏರುವಂತಾಗಿದೆ: ಇಲ್ಲಿನ ಇಂದ್ರಗಿರಿ ಹಾಗೂ ಚಂದ್ರಗಿರಿ ಬೆಟ್ಟಗಳು ಪ್ರವಾಸಿಗರನ್ನು ಮಾತ್ರ ತನ್ನೆಡೆಗೆ ಆಕರ್ಷಿಸದೇ ಕಾಡು ಪ್ರಾಣಿಗಳನ್ನೂ ತನ್ನ ಮಡಿಲಲ್ಲಿ ಇಟ್ಟುಕೊಂಡು ಪೋಷಣೆ ಮಾಡುತ್ತಿದೆ. ಆದರೆ ಬೆಟ್ಟಕ್ಕೆ ಬರುವ ಪ್ರವಾಸಿಗರು ಏಕಶಿಲಾ ಮೂರ್ತಿ 58.8 ಅಡಿ ಎತ್ತರದ ವೈರಾಗ್ಯ ಮೂರ್ತಿಯನ್ನು ಭಯದಲ್ಲಿ ವೀಕ್ಷಣೆ ಮಾಡುವ ವಾತಾವರಣ ಸೃಷ್ಟಿಯಾಗಿದೆ.

ಚಿರತೆ ಇರುವ ವಿಡಿಯೋ ವೈರಲ್‌: ಈಗ್ಗೆ ಒಂದೆರಡು ದಿವಸದ ಹಿಂದ ಶ್ರವಣಬೆಳಗೊಳದ ಚಿಕ್ಕಬೆಟ್ಟ(ಚಂದ್ರಗಿರಿ)ಯಲ್ಲಿ ಎರಡು ಚಿರತೆಗಳು ಒಟ್ಟಿಗೆ ಸಂಚಾರ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದಲ್ಲದೇ ಚಿರತೆ ಬೆಟ್ಟದ ಮೇಲೆ ಸಂಚಾರ ಮಾಡುತ್ತಿರುವುದನ್ನು ಸ್ಥಳೀಯರು ಹಾಗೂ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಂಡಿದ್ದು, ಭಯದಿಂದ ಬೆಟ್ಟ ವೀಕ್ಷಣೆ ಮಾಡಿದಲ್ಲದೇ ಅವರೂ ಸಹ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದು ವೈರಲ್‌ ಮಾಡಿದ್ದಾರೆ.

ರಾತ್ರಿ ವೇಳೆ ಮನೆಯಿಂದ ಹೊರ ಬರುತ್ತಿಲ್ಲ: 2015ರ ಡಿಸೆಂಬರ್‌ ತಿಂಗಳಿನಲ್ಲಿ ಇದೇ ಬೆಟ್ಟದ ತುದಿಯಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಅಂದು ಅರಣ್ಯ ಇಲಾಖೆ ಸಹಾಯದಿಂದ ಸ್ಥಳೀಯ ಜನಪ್ರತಿನಿಧಿಗಳು ಬೋನ್‌ ಇಟ್ಟು ಚಿರತೆಗಳನ್ನು ಸೆರೆ ಹಿಡಿದಿದ್ದರು. ಐದು ವರ್ಷಗಳ ನಂತರ ಪುನಃ ಇದೇ ಸ್ಥಳದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ಶ್ರವಣಬೆಳಗೊಳ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ತಮ್ಮ ಮನೆಯಿಂದ ಹೊರಬರುತ್ತಿಲ್ಲ. ಹೊತ್ತು ಮುಳುಗುವ ಮುನ್ನ ಮನೆ ಸೇರಿಕೊಳ್ಳುತ್ತಿದ್ದಾರೆ.

ಬೆಟ್ಟಕ್ಕೆ ಹೋಗದ ಕುರಿಗಾಹಿಗಳು: ಶ್ರವಣಬೆಳಗೊಳ ಚಿಕ್ಕಬೆಟ್ಟದ ಸುತ್ತ ಮುತ್ತಲಿನ ಹಾಗೂ ಬೆಟ್ಟದ ಬುಡದಲ್ಲಿ ತಮ್ಮ ಮೇಕೆ, ಕುರಿ ಹಾಗೂ ರಾಸುಗಳನ್ನು ಮೇಯಿಸಲು ಹೋಗುತ್ತಾರೆ. ಆದರೆ ಚಿರತೆ ಕಾಣಿಸಿದ ದಿನದಿಂದ ರೈತರು ರಾಸುಗಳನ್ನು ಮೇಯಿಸಲು ಚಿಕ್ಕಬೆಟ್ಟದ ಸಮೀಪಕ್ಕೆ ಹೋಗುತ್ತಿಲ್ಲ. ಅದಕ್ಕೆ ಹೊಂದುಕೊಂಡಿರುವ ಮತ್ತೂಂದು ಗುಡ್ಡದಲ್ಲಿ ಭಯದಿಂದ ಮೇಕೆ, ಕುರಿ ಹಾಗೂ ರಾಸುಗಳನ್ನು ಮೇಯಿಸುತ್ತಿದ್ದಾರೆ.

Advertisement

ಯಾವಾಗ ಬರುತ್ತೆ ಬೋನು?: ಚಿರತೆ ಕಾಣಿಸಿಕೊಂಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ತನಗೆ ಏನು ತಿಳಿದಿಲ್ಲ ಎಂಬಂತೆ ವರ್ತಿಸುತ್ತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಈಗಾಗಲೆ ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಿತ್ತರವಾಗಿದ್ದರೂ ಇಲಾಖೆ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಲು ಮುಂದಾಗಿಲ್ಲ. ಚಿರತೆ ಸೆರೆ ಹಿಡಿಯಲು ಯಾವಾಗ ಬೋನು ತರುತ್ತಾರೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.

ಬೆಟ್ಟಕ್ಕೆ ಬರುವ ನಾಯಿಗಳೇ ಆಹಾರ: ಬೆಟ್ಟದಲ್ಲಿ ಬೀಡು ಬಿಟ್ಟಿರುವ ಚಿರತೆಗಳು ಆಹಾರಕ್ಕಾಗಿ ಶ್ರಮ ಪಡುತ್ತಿಲ್ಲ. ಬೆಟ್ಟವನ್ನು ಏರುವ ನಾಯಿಗಳು ಇದರ ಆಹಾರವಾಗಿವೆ. ಬೆಟ್ಟಕ್ಕೆ ಏರುವ ಪ್ರವಾಸಿಗಳು ಆಹಾರವನ್ನು ತೆಗೆದುಕೊಂಡು ಹೋಗಿ ಬೆಟ್ಟದ ಮೇಲೆ ಸೇವಿಸಿ ಹೆಚ್ಚಾಗಿದ್ದನ್ನು ಅಲ್ಲಿ ಬಿಸಾಡುತ್ತಾರೆ. ಇದನ್ನು ತಿನ್ನಲು ನಾಯಿಗಳು ನಿತ್ಯವೂ ಬೆಟ್ಟ ಏರುತ್ತವೆ. ಹೀಗೆ ಬೆಟ್ಟ ಏರುವ ನಾಯಿಗಳು ಬಿಸಿಲ ತಾಪಕ್ಕೆ ಬಂಡೆ ಸಂದಿ, ಮರದ ನೆರಳಲ್ಲಿ ಮಲಗುತ್ತವೆ. ಇಂತಹ ನಾಯಿಗಳು ಈಗ ಚಿರತೆಯ ಆಹಾರವಾಗಿವೆ. ನಾಯಿಗಳು ಬೆಟ್ಟವನ್ನು ಏರುವುದನ್ನು ನಿಲ್ಲಿಸಿದಲ್ಲಿ ಚಿರತೆ ಬೆಟ್ಟದಿಂದ ಕೆಳಗೆ ಬರಬಹುದು ಎಂಬ ಅಭಿಪ್ರಾಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಪ್ರೇಮಿಗಳಿಂದ ಹಿಡಿಶಾಪ: ಚಿರತೆಗಳು ಬೆಟ್ಟದಲ್ಲಿ ಬಂದು ನೆಲೆಸಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಮಾತ್ರ ಚಿರತೆಗೆ ಶಾಪ ಹಾಕುತ್ತಿಲ್ಲ, ಪ್ರೇಮಿಗಲೂ ಹಿಡಿಶಾಪ ಹಾಕುತ್ತಿದ್ದಾರೆ. ಶ್ರವಣಬೆಳಗೊಳದಲ್ಲಿನ ಚಿಕ್ಕಬೆಟ್ಟಕ್ಕೆ ಹಿರೀಸಾವೆ, ಚನ್ನರಾಯಪಟ್ಟಣ, ಕಿಕ್ಕೇರಿ, ಕದಬಳ್ಳಿ, ಕೆ.ಆರ್‌.ಪೇಟೆ, ನಾಗಮಂಗಲ ಹೀಗೆ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೇಮಿಗಳು ಸಾಕಷ್ಟು ಮಂದಿ ನಿತ್ಯವೂ ಆಗಮಿಸಿ ಬೆಟ್ಟದಲ್ಲಿ ಕಾಲ ಕಳೆಯುತ್ತಿದ್ದರು. ಈಗ ಚಿರತೆ ಇರುವ ವಿಷಯ ತಿಳಿದ ಮೇಲೆ ಬೆಟ್ಟಕ್ಕೆ ಬರುವ ಪ್ರೇಮಿಗಳ ಸಂಖ್ಯೆ ಕಡಿಮೆಯಾಗಿದ್ದು, ಪ್ರೇಮಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರೇಮಿಗಳು ಮೇಲುಕೋಟೆಗೆ ಶಿಪ್ಟ್: ಚಿರತೆ ಚಿಕ್ಕಬೆಟ್ಟದಲ್ಲಿ ಸಂಚಾರ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಮೇಲೆ ಪ್ರೇಮಿಗಳು ಶ್ರವಣಬೆಳಗೊಳದಿಂದ ಇಲ್ಲಿಗೆ ಸಮೀಪದಲ್ಲಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಹಾಗೂ ಕೆರೆತಣ್ಣೂರು ಪ್ರವಾಸಿ ತಾಣಕ್ಕೆ ಶಿಪ್ಟ್ ಆಗಿದ್ದಾರೆ.

ಚಿಕ್ಕಬೆಟ್ಟದಲ್ಲಿ ಎರಡು ಚಿರತೆ ವಾಸವಾಗಿರುವುದನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಇವುಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗುವುದು. ಈ ಹಿಂದೆಯೂ ಬೆಟ್ಟದಲ್ಲಿದ್ದ ಎರಡು ಚಿರತೆಗಳನ್ನು ಅರಣ್ಯ ಇಲಾಖೆ ನೆರವಿನಿಂದ ಬೋನ್‌ ತರಿಸಿಟ್ಟು ಹಿಡಿಯಲಾಗಿತ್ತು.
-ವಾಸು, ಗ್ರಾಮ ಪಂಚಾಯಿತಿ ಸದಸ್ಯ

ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿನ ಶಿವನ ದೇವಾಲಯದ ಸಮೀಪದಲ್ಲಿ ಬೋನು ಇಡಲಾಗಿದೆ. ಬೇಸಿಗೆ ಆಗಿರುವುದರಿಂದ ಚಿರತೆಗಳು ಬೆಟ್ಟದಲ್ಲಿ ವಾಸವಾಗಿವೆ. ಮಳೆ ಬಂದ ಮೇಲೆ ಚಿರತೆಗಳು ಇಲ್ಲಿಂದ ಹೊರಕ್ಕೆ ಹೋಗಲಿವೆ. ಐದು ವರ್ಷದ ಹಿಂದೆ ವಿಂದ್ಯಗಿರಿ ತಪ್ಪಿನಲ್ಲಿನ ನೀರು ಸರಬರಾಜು ಟ್ಯಾಂಕ್‌ ಬಳಿ ಬೋನು ಇಟ್ಟು ಎರಡು ಚಿರತೆ ಹಿಡಿದು ಅಭಯಾರಣ್ಯಕ್ಕೆ ಬಿಡಲಾಗಿತ್ತು.
-ಹೇಮಂತಕುಮಾರ, ವಲಯ ಅರಣ್ಯಾಧಿಕಾರಿ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next