Advertisement

ದೇವರಾಯರ ಸಿರಿಸಂಪತ್ತು, ಭತ್ತದ ತಳಿರಕ್ಷಣೆ ತಪಸ್ಸು

05:04 PM Apr 16, 2018 | |

“ನನ್ನಷ್ಟು ಶ್ರೀಮಂತ ಯಾರೂ ಇಲ್ಲ. ಯಾಕಂದ್ರೆ ನನ್ನ ಉಗ್ರಾಣ ತುಂಬಿದೆ. ಭತ್ತದ ಗೋಣಿಗಳಿಂದ. ಅದೆಲ್ಲ ನಾನೇ ಬೆಳೆದ ಭತ್ತ. ಅದ್ರಿಂದ ಅಕ್ಕಿ ಮಾಡಿ ವರ್ಷಗಟ್ಟಲೆ ಊಟ ಮಾಡಬಹುದು. ಇಂತಹ ಶ್ರೀಮಂತಿಕೆ ಯಾರಿಗುಂಟು ಹೇಳಿ’ ಎಂದು ಆ ಹಿರಿಯ ಕೃಷಿಕ ಸವಾಲೆಸೆದಾಗ ನಾನು ನಿರುತ್ತರ. ಅವರೇ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಬಿ. ಕೆ. ದೇವರಾವ್‌ (72). ಒಂದೆರಡಲ್ಲ, 154 ದೇಸಿ ಭತ್ತದ ತಳಿಗಳನ್ನು ಸಂರಕ್ಷಿಸಿದ ಮಹಾನ್‌ ಸಾಧಕ. ಆ ಸಾಧನೆಗಾಗಿಯೇ ಅಹ್ಮದಾಬಾದಿನ ಸೃಷ್ಟಿ ಫೌಂಡೇಷನಿನಿಂದ ಅವರಿಗೆ 2017ರ ರಾಷ್ಟ್ರಮಟ್ಟದ ಸೃಷ್ಟಿ ಸಮ್ಮಾನ ದೊರಕಿದೆ.

Advertisement

ಅದು ಅವರ ದೇಸಿ ತಳಿಸಂರಕ್ಷಣೆಯ 50 ವರ್ಷಗಳ ತಪಸ್ಸಿಗೆ ಸಂದ ಗೌರವ. ಪಿಯುಸಿ ಶಿಕ್ಷಣ ಮುಗಿಸಿದ ದೇವರಾಯರು ಆ ಕಾಲದಲ್ಲಿ ಸುಲಭವಾಗಿ ಯಾವುದಾದರೂ ಉದ್ಯೋಗಕ್ಕೆ ಸೇರಿಕೊಳ್ಳ ಬಹುದಾಗಿತ್ತು. ಆದರೆ, ಯಾರದೋ ಕೈಕೆಳಗೆ ಕೆಲಸ ಮಾಡುವುದು ಅವರ ಜಾಯಮಾನಕ್ಕೆ ಒಗ್ಗಲಿಲ್ಲ. ಅಪ್ಪಟ ಸ್ವಾಭಿಮಾನಿ ದೇವರಾಯರನ್ನು ಕೈಬೀಸಿ ಕರೆದದ್ದು ಅವರ ತಂದೆಯವರ 20 ಎಕರೆ ಜಮೀನು. ಅಲ್ಲಿ ಭತ್ತ ಬೆಳೆಯಲು ಶುರು ಮಾಡಿದಾಗ ದೇವರಾಯರಿಗೆ 20 ವರ್ಷ ವಯಸ್ಸಿನ ಏರು ಜವ್ವನ. ಕಳೆದ ಐವತ್ತು ವರುಷಗಳ ಉದ್ದಕ್ಕೂ ಒಂದು ತಪಸ್ಸಿನಂತೆ ಆ ಕಾಯಕ ಮುಂದುವರಿಸಿಕೊಂಡು ಬಂದದ್ದೇ ಅವರ ಸಾಧನೆ.

ಪ್ರತಿ ವರ್ಷ 154 ವಿವಿಧ ಭತ್ತದ ತಳಿಗಳನ್ನು ಪುಟ್ಟಪುಟ್ಟ ತಾಕುಗಳಲ್ಲಿ ತಾವೇ ಬಿತ್ತಿ ಬೆಳೆಯುತ್ತಾರೆ ದೇವರಾಯರು. ಮಾತಾಡುತ್ತಾ ಗತಕಾಲಕ್ಕೆ ಜಾರುವ ದೇವರಾಯರು, ಅಂದಿನ ದಿನಗಳನ್ನು ಹೀಗೆ ನೆನೆಯುತ್ತಾರೆ- “ವರ್ಷದಲ್ಲಿ ನಾಲ್ಕು ಭತ್ತದ ಬೆಳೆ ಬೆಳೆದದ್ದೂ ಇದೆ.  ಏಣಿಲು, ಪಟ್ಲ, ಸುಗ್ಗಿ ಮತ್ತು ಕೊಳಕೆ. ಏಣಿಲು ಮಳೆಗಾಲದ ಬೆಳೆಯಾದರೆ, ಕೊಳಕೆ ಬೇಸಿಗೆಯ ಬೆಳೆ. ಇವೆರಡರ ನಡುವೆ, ಏಣಿಲು ಕಟಾವಿನ ದಿನ ಹತ್ತಿರ ಬರುತ್ತಿದ್ದಂತೆ ಪಟ್ಲ ಬೆಳೆಗೆ ಬೀಜ ಬಿತ್ತುತ್ತಿದ್ದೆ  ಆಗಸ್ಟ್‌ ತಿಂಗಳಿನಲ್ಲಿ. ಪಟ್ಲ ಬೆಳೆಗೆ ಬಂಬುಚ್ಚಿ (ಕೀಟ) ಕಾಟ. ನಮ್ಮ ಬಯಲಿನ ಎಲ್ಲಾ ಬಂಬುಚ್ಚಿಗಳೂ ನಮ್ಮ ಗದ್ದೆಗೆ ಬಂದರೆ ಏನಾದೀತು ಹೇಳಿ. ಯಾಕಂದ್ರೆ ಆಗ ನಮ್ಮ ಗದ್ದೆಯಲ್ಲಿ ಮಾತ್ರ ಭತ್ತದ ಬೆಳೆ. ನನಗೆ ಬಂಬುಚ್ಚಿ ಕಾಟದಿಂದ ಸಾಕಾಗಿ ಹೋಯ್ತು. ಕೊನೆಗೆ ಪಟ್ಲ ಬೆಳೆ ಮಾಡೋದನ್ನೇ ಬಿಟ್ಟು ಬಿಟ್ಟೆ.’

ನೀವು ಭತ್ತದ ಬೆಳೆಗೆ ರಾಸಾಯನಿಕ ಗೊಬ್ಬರ ಹಾಕಲೇ ಇಲ್ಲವೇ? ಎಂಬ ನನ್ನ ಪ್ರಶ್ನೆಗೆ ದೇವರಾಯರ ಉತ್ತರ: ಹಾಕಿದ್ದೆ ಮಾರಾಯರೇ. ಸುಮಾರು ಹತ್ತು ವರ್ಷ ಯೂರಿಯಾ, ಡಿಎಪಿ ಭತ್ತದ ಗದ್ದೆಗೆ ಹಾಕಿದ್ದೆ. ಫ‌ಸಲೂ ಚೆನ್ನಾಗಿತ್ತು. ಆಗ 1989ರಲ್ಲಿ ಫ‌ರ್ಟಿಲೈಸರ್‌ ಹಾಕೋದನ್ನು ಒಮ್ಮೆಲೇ ನಿಲ್ಲಿಸಿ ಬಿಟ್ಟೆ. ಹಾಗೆ ಮಾಡಿದ್ದರಿಂದ, ಮಣ್ಣಿನಲ್ಲಿ ಪೋಷಕಾಂಶ ಒಮ್ಮೆಲೇ ಕಡಿಮೆಯಾಗಿ, ಸಸಿಗಳಿಗೆ ಷಾಕ್‌. ಆ ವರ್ಷ ಭತ್ತದ ಫ‌ಸಲು ಅರ್ಧಕ್ಕರ್ಧ ಕಡಿಮೆ ಆಯ್ತು. ಆದರೆ ನಾನು ಮತ್ತೆ ಗದ್ದೆಗೆ ರಾಸಾಯನಿಕ ಗೊಬ್ಬರ ಹಾಕಲೇ ಇಲ್ಲ. ಅದಾಗಿ ಎರಡು ವರ್ಷದಲ್ಲಿ ನನ್ನ ಜಮೀನಿನ ಮಣ್ಣು ಸುಧಾರಿಸಿತು; ಫ‌ಸಲೂ ಹೆಚ್ಚಾಯಿತು.’

“ನಮ್ಮ ಜಮೀನಿನಲ್ಲಿ ಭತ್ತದ ಬೇಸಾಯಕ್ಕೆ ಬೇಕಾದಷ್ಟು ನೀರುಂಟು, ಬೆಟ್ಟದಿಂದ ಇಳಿದು ಬರುವ ತೊರೆಯಿಂದ. ವರ್ಷವಿಡೀ ಆ ನೀರು ಹರಿದು ಬರ್ತಾ ಇರ್ತದೆ. ಹಿರಿಯರಿಂದ ಬಂದ ಜಮೀನಿದೆ. ಒಳ್ಳೇ ಭತ್ತದ ಬೀಜಗಳುಂಟು. ಮತ್ತೆ ಭತ್ತ ಬೆಳೆಸಲಿಕ್ಕೆ ಏನು ಕಷ್ಟವಿದೆ? ಎಂದು ಕೇಳುತ್ತಾರೆ ಭತ್ತದ ಕೃಷಿಯಿಂದಲೇ ಬದುಕು ಕಟ್ಟಿಕೊಂಡ ದೇವರಾಯರು. ಅದೇ ಉಸಿರಿನಲ್ಲಿ ಅವರು ಪ್ರಶ್ನಿಸುತ್ತಾರೆ; ಆದರೂ ಈಗ ಬಹಳ ಜನ ಭತ್ತ ಬೆಳೆಯೋದನ್ನು ನಿಲ್ಲಿಸಿದ್ದಾರೆ. ಭತ್ತದ ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ. ಹೆಚ್ಚಿನವರು ಭತ್ತದ ಗದ್ದೆಗಳಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಅಡಿಕೆಯನ್ನು ಅನ್ನದ ಹಾಗೆ ಉಣ್ಣಲಿಕ್ಕೆ ಆಗ್ತದಾ? ಅವರೆಲ್ಲ ಈಗ ಎಲ್ಲಿಯೋ ಬೆಳೆದ ಭತ್ತದ ಅಕ್ಕಿಯ ಅನ್ನ ಉಣ್ಣುತ್ತಾರೆ. ಅವರಿಗೇನು ಗೊತ್ತು, ನಮ್ಮ ಅಕ್ಕಿ ನಾವೇ ಬೆಳೆದು ಅದನ್ನು ಉಣ್ಣುವ ಸುಖ?’

Advertisement

ಸರಳ ಬದುಕು ಎಂದರೇನೆಂದು ದೇವರಾಯರನ್ನು ನೋಡಿ ಕಲಿಯಬೇಕು. ಅವರು ಬರಿಗಾಲಿನಲ್ಲೇ ನಡೆಯುವವರು; ಚಪ್ಪಲಿ ಹಾಕಿಕೊಳ್ಳೋದೇ ಇಲ್ಲ. ನಡೆಯುವಾಗ ನಮ್ಮ ಪಾದಗಳು ಮಣ್ಣಿಗೆ ತಾಗುತ್ತಿರುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅವರ ನಂಬಿಕೆ. ಪಂಚೆ ಮತ್ತು ಷರಟು (ಅಥವಾ ಹೆಗಲಿಗೆ ಶಲ್ಯ) ಅವರ ಸರಳ ಉಡುಪು. “ನನ್ನ ಅಕ್ಕಿ ನಾನೇ ಬೆಳೀತೇನೆ. ನನ್ನ ತರಕಾರಿ ನಾನೇ ಬೆಳೀತೇನೆ. ಸೌತೆ, ಬೆಂಡೆ, ಬದನೆ, ಬಸಳೆ, ಕುಂಬಳಕಾಯಿ ಎಲ್ಲವೂ ನಮ್ಮ ತೋಟದಲ್ಲಿ ಉಂಟು. ಮಧ್ಯಾಹ್ನ ನನ್ನದು ಗಂಜಿಯೂಟ. ಊಟಕ್ಕೆ ಏನಾದರೂ ತರಕಾರಿ ಇದ್ದರಾಯಿತು. ಚೆನ್ನಾಗಿ ಬದುಕಲಿಕ್ಕೆ ಇನ್ನೇನು ಬೇಕು?’ ಎಂಬ ಅವರ ನೇರ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. 

ಬೆಳಗ್ಗೆ ಐದು ಗಂಟೆಗೆ ಏಳುವುದು ದೇವರಾಯರ ಅಭ್ಯಾಸ. ಆ ಮುಂಜಾವಿನಲ್ಲಿ ಅರ್ಧ ತಾಸು ಯೋಗಾಸನ ಅವರ ದಿನನಿತ್ಯದ ಸಾಧನೆ. ಅದರಿಂದಾಗಿಯೇ ಅವರ ನಡಿಗೆಯ ವೇಗ ಹಾಗೂ ಕೆಲಸದ ಚುರುಕು ಸರಿಗಟ್ಟಲು ಯುವಕರಿಗೂ ಕಷ್ಟ. ಯೋಗಾಸನದ ನಂತರ ದೇವರ ಪೂಜೆ. ಅಲ್ಲಿಯವರೆಗೆ ಒಂದು ತೊಟ್ಟು ನೀರನ್ನೂ ಅವರು ಕುಡಿಯೋದಿಲ್ಲ. ಅನಂತರ ಜಮೀನಿನತ್ತ ನಡೆಯುವ ದೇವರಾಯರದು ದಿನವಿಡೀ ಬಿಡುವಿಲ್ಲದ ಕೃಷಿಕಾಯಕ. “ಹಾಗಾಗಿಯೇ ನನಗೆ ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುತ್ತದೆ’ ಎನ್ನುವಾಗ ಅವರ ಮುಖದಲ್ಲಿ ಸಂತೃಪ್ತ ನಗು.

ಯಾರಾದರೂ ಬಂದು ಯಾವುದೋ ಭತ್ತದ ತಳಿಯ ಬೀಜ ಕೇಳಿದರೆ, ಒಂದು ಮುಷ್ಟಿ ಬೀಜ ಕೊಡುವ ದೇವರಾಯರು, ಅದಕ್ಕೆ ಹಣ ಪಡೆಯೋದಿಲ್ಲ. ಬದಲಾಗಿ ಇದನ್ನು ಬಿತ್ತಿ ಬೆಳೆದು ಎರಡು ಮುಷ್ಠಿ ಬೀಜ ತಂದು ಕೊಡಿ ಎಂದು ಷರತ್ತು ಹಾಕುತ್ತಾರೆ. ದೇವರಾಯರ ಭತ್ತದ ತಳಿರಕ್ಷಣೆಯ ಮಹಾನ್‌ ಕಾಯಕದಲ್ಲಿ ಬೆಂಬಲಕ್ಕೆ ನಿಂತವರು ಅವರ ಪತ್ನಿ ಶಾರದಾ, ಮಗಳು ಮತ್ತು ಮಗ ಪರಮೇಶ್ವರ ರಾವ್‌. ಇಂಜಿನಿಯರಿಂಗ್‌ ಕಲಿತಿರುವ ಪರಮೇಶ್ವರ ರಾನ್‌, ತಮ್ಮ ಉದ್ಯೋಗ ತೊರೆದು ಬಂದು ನೆಲೆಸಿದ್ದು ಹಳ್ಳಿಯಲ್ಲಿ. ತಂದೆಯವರ ಎಲ್ಲ ಕೆಲಸಗಳಿಗೂ ಇವರ ಒತ್ತಾಸೆ.

ತಮ್ಮ ಜಮೀನಿನ ಎಲ್ಲ ಮರಗಳನ್ನೂ ಹಾಗೆಯೇ ಉಳಿಸಿಕೊಂಡಿದ್ದಾರೆ ದೇವರಾಯರು. ನನ್ನಲ್ಲಿ 22 ಜಾತಿಯ ಮಾವಿನ ಮರಗಳುಂಟು. ಬೇಸಗೆಯಲ್ಲಿ ನಮಗೆ ಬೇಕಾದಷ್ಟು ಮಾವಿನ ಹಣ್ಣು. ಹಳೆಯ ಹಲಸಿನ ಮರಗಳಿಂದ ನೂರಾರು ಹಲಸಿನ ಹಣ್ಣುಸಿಗುತ್ತದೆ.  ಇದಕ್ಕಿಂತ ದೊಡ ಸಂಭ್ರಮ ಏನುಂಟು? ಎಂಬ ದೇವರಾಯರ ಪ್ರಶ್ನೆಗೆ ಉತ್ತರವಿದೆಯೇ? ಮುಂದಿನ ತಲೆಮಾರುಗಳಿಗಾಗಿ ಭತ್ತದ ತಳಿಗಳ ಸಂರಕ್ಷಣೆ ದೇವರಾಯರ ಬದುಕಿನ ತಪಸ್ಸು. ಇದು ಯಾವುದೇ ವಿಶ್ವವಿದ್ಯಾಲಯ ಮಾಡಲಾಗದ ಮಹತ್‌ಕಾರ್ಯ. ಎಲ್ಲ ಆಮಿಷಗಳನ್ನು ಮೀರಿ ನಿಂತು, ಭತ್ತದ ಕೃಷಿಯಲ್ಲೇ ಖುಷಿ ಕಂಡುಕೊಂಡ ಸಂತ ದೇವರಾಯರು. ಮಿತ್ತಬಾಗಿಲಿನ ಅವರ ಕರ್ಮಭೂಮಿಯಲ್ಲಿ ಅವರೊಂದಿಗೆ ಹೆಜ್ಜೆ ಹಾಕುವಾಗ, ನಮಗೆ ಹೆಜ್ಜೆಹೆಜ್ಜೆಗೂ ಅನ್ನದಾತರೊಬ್ಬರ ಬದುಕಿನ ದರ್ಶನ. ಆ ಉದಾತ್ತ ಬದುಕಿಗೆ, ಮಹಾನ್‌ ತಪಸ್ಸಿಗೆ ನಮೋ. 

* ಅಡ್ಡೂರು ಕೃಷ್ಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next