Advertisement

ಗೋವಾ ಮೂಲದ ಗಾಯಕ ಆತ್ಮಹತ್ಯೆ

12:28 PM Feb 19, 2018 | Team Udayavani |

ಬೆಂಗಳೂರು: ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದ ಗೋವಾ ಮೂಲದ ಗಾಯಕ ಸೃಜನ್‌ (26) ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲ ತಿಂಗಳುಗಳಿಂದ ಕೃಷ್ಣಾರೆಡ್ಡಿ ಲೇಔಟ್‌ನಲ್ಲಿ ಬಾಡಿಗೆ ರೂಂನಲ್ಲಿ ಸೃಜನ್‌ ಒಬ್ಬರೇ ವಾಸಿಸುತ್ತಿದ್ದರು.

Advertisement

ಕಳೆದ ಮೂರು ದಿನಗಳಿಂದ ರೂಂ ಬಳಿ ಸೃಜನ್‌ ಕಾಣಿಸಿಕೊಂಡಿರಲಿಲ್ಲ. ಶನಿವಾರ ಸಂಜೆ ಆತ ಉಳಿದುಕೊಂಡಿದ್ದ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಪಕ್ಕದ ಮನೆಯವರು ಕೋಣೆಯ ಬಾಗಿಲು ಒಡೆದು ಒಳಹೋದಾಗ ಸೃಜನ್‌ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ಗಾಯಕರಾಗಿದ್ದ ಸೃಜನ್‌, ಗೋವಾದಲ್ಲಿ ಸ್ಟೇಜ್‌ ಪ್ರೋಗ್ರಾಂ ನೀಡುತ್ತಿದ್ದರು. ಕನ್ನಡ ಗೊತ್ತಿದ್ದರಿಂದ ಇಲ್ಲಿಯೂ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದರು. ಇತ್ತೀಚೆಗೆ ಮಾನಸಿಕ ಒತ್ತಡಕ್ಕೆ ಒಳಗಾದಂತೆ ಕಂಡು ಬರುತ್ತಿದ್ದ ಆತ, ತಮ್ಮೊಂದಿಗೆ ಯಾವುದೇ ವಿಚಾರ ಹಂಚಿಕೊಂಡಿರಲಿಲ್ಲ ಎಂದು ಆತನ ಪೋಷಕರು ತಿಳಿಸಿದ್ದಾರೆ. ಅವಕಾಶಗಳ ಕೊರತೆಯಿಂದ ಖನ್ನತೆಗೆ ಒಳಗಾಗಿ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಸೃಜನ್‌ ಸಹೋದರ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಅರಕೆರೆಯಲ್ಲಿ ವಾಸವಿದ್ದಾರೆ. ಅವರು ನೀಡಿದ ದೂರಿನ ಅನ್ವಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next