Advertisement

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

12:09 AM Sep 10, 2024 | Team Udayavani |

ಮನುಷ್ಯ ಜೀವ ಅಮೂಲ್ಯವಾದದ್ದು. ಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿವರೆಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳನ್ನು ಪ್ರತೀ ದಿನ ನೋಡುತ್ತಿದ್ದೇವೆ. ಹಾಗಾಗಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಈ ಆಲೋಚನೆಯಿಟ್ಟುಕೊಂಡು ಜಾಗತಿಕವಾಗಿ ಆತ್ಮಹತ್ಯೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಪ್ರತೀವರ್ಷ ಸೆ.10ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ.

Advertisement

ಈ ವರ್ಷದ ಧ್ಯೇಯ
ಪ್ರತೀ ಎರಡು ವರ್ಷಗಳಿಗೆ ಅನ್ವಯವಾಗುವಂತೆ ನಿರ್ದಿಷ್ಟ ಧ್ಯೇಯದೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸುತ್ತದೆ. 2024-2026ರ ವರೆಗೆ “ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಯನ್ನು ಮಾತನಾಡಿಸುವುದು, ಅವರ ದುಃಖದಲ್ಲಿ ನಾವು ಭಾಗಿಯಾಗೋಣ ಈ ಮೂಲಕ ಆತನನ್ನು ಅಪಾಯದಿಂದ ಪಾರು ಮಾಡೋಣ ಎಂಬ ಉದ್ದೇಶ ಹೊಂದಿದೆ.

ಪ್ರಪಂಚದ ಪರಿಸ್ಥಿತಿ ಹೇಗಿದೆ ?
ವಿಶ್ವದಲ್ಲಿ ಪ್ರತೀ ವರ್ಷ 7 ಲಕ್ಷಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಶರಣಾದರೆ, ಇದರ 20 ಪಟ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಹಲವರು ಇದರ ಕುರಿತು ಅಲೋಚಿಸುತ್ತಾರೆ. 1 ಲಕ್ಷದಲ್ಲಿ 10.9ರಷ್ಟು ಜನರು ಆತ್ಮಹತ್ಯೆಗೆ ಒಳಾಗಾದರೆ, ಅದರಲ್ಲಿ ಶೇ.73ರಷ್ಟು ಮಧ್ಯಮ ವರ್ಗ ಹಾಗೂ ಆರ್ಥಿಕ ಹಿಂದುಳಿದವರು ಇದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಭಾರತದ ಕಥೆ ಏನು ?
ಭಾರತದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ 2022ರ ಅಂಕಿ-ಅಂಶಗಳ ಪ್ರಕಾರ, ವಾರ್ಷಿಕವಾಗಿ 1.7 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 1.21ಲಕ್ಷ ಪುರುಷರು ಮತ್ತು 44 ಸಾವಿರ ಮಹಿಳೆಯರಿದ್ದಾರೆ. ಶೇ.58ರಷ್ಟು ನೇಣಿಗೆ, ಶೇ.25ರಷ್ಟು ವಿಷ ಸೇವನೆಯಿಂದ, ಶೇ.5ರಷ್ಟು ನೀರಲ್ಲಿ ಮುಳುಗುವ ಮತ್ತು ಶೇ.2.8ರಷ್ಟು ಅಪಘಾತಗಳ ಮೂಲಕ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ 18 ರಿಂದ 45 ವಯೋಮಾನದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆಘಾತಕಾರಿ ಸಂಗತಿ.

2024ರ ವರದಿಯಲ್ಲೇನಿದೆ ?
ಇತ್ತೀಚೆಗೆ ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ “ವಿದ್ಯಾರ್ಥಿ ಆತ್ಮಹತ್ಯೆ ಎಂಬ ಸಾಂಕ್ರಾಮಿಕ ರೋಗ’ ವರದಿಯಲ್ಲಿ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗಳು ಭಾರತದ ವಾರ್ಷಿಕ ಜನಸಂಖ್ಯಾ ಬೆಳವಣಿಗೆ ದರವನ್ನು ಮೀರಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ. 2013ರಲ್ಲಿ 6,654 ಇದ್ದ ವಿದ್ಯಾರ್ಥಿ ಆತ್ಮಹತ್ಯೆ ಸಂಖ್ಯೆ, 10 ವರ್ಷಗಳ ಬಳಿಕ 2023ರ ಹೊತ್ತಿಗೆ 13,044ರ ವರೆಗೆ ಏರಿಕೆ ಕಂಡಿದೆ.

Advertisement

ತಜ್ಞರು ಏನು ಹೇಳುತ್ತಾರೆ ?
ಓರ್ವನ ಆತ್ಮಹತ್ಯೆ 125 ಜನರ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಇತ್ತೀಚಿನ ವರ್ಷಗಳಲ್ಲಿ 15 – 29 ವಯೋಮಾನದವರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ವಿದ್ಯಾರ್ಥಿ ಮತ್ತು ಯುವ ಜನಾಂಗದ ಕಾಲಘಟ್ಟ ಇದಾಗಿದ್ದು ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯ ಹಂತವಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ,ಖಿನ್ನತೆ ಮತ್ತು ಮಾನಸಿಕ ಸಮಸ್ಯೆಗಳು ಬಹುತೇಕ ಆತ್ಮಹತ್ಯೆಗೆ ಸಾಮಾನ್ಯ ಕಾರಣಗಳಾಗಿವೆಯಾದರೂ, ಪ್ರತಿಯೊಂದೂ ಆತ್ಮಹತ್ಯೆಗೆ ನಿರ್ದಿಷ್ಟವಾದ ಕಾರಣಗಳಿರುತ್ತವೆ ಎನ್ನುತ್ತಾರೆ ಉಡುಪಿ ಡಾ| ಎ.ವಿ ಬಾಳಿಗಾ ಮೆಮೋರಿಯಲ್‌ ಆಸ್ಪತ್ರೆಯ ಮನೋವೈದ್ಯರಾದ ಡಾ| ವಿರೂಪಾಕ್ಷ ದೇವರಮನೆ.

ಆತ್ಮಹತ್ಯೆ ಪ್ರವೃತ್ತಿಗೆ ಕಡಿವಾಣ ಹೇಗೆ?
-ಮನೆಯಲ್ಲಿ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಸೃಷ್ಟಿಸಬೇಕು.
-ಅಗತ್ಯ ಮಾರ್ಗದರ್ಶನ ಮತ್ತು ಸಲಹಾ ಕೇಂದ್ರಗಳನ್ನು ಶಾಲಾ-ಕಾಲೇಜು ಮಟ್ಟದಲ್ಲಿ ಸ್ಥಾಪಿಸಬೇಕು.
-ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವುದು.
-ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ
-ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕಾಳಜಿ
-ಪೋಷಕರಿಂದ ಮಕ್ಕಳೊಂದಿಗೆ ಕುಶಲೋಪರಿ ಮಾತುಗಳು

ವಿಶ್ವ ಆತ್ಮಹತ್ಯೆ ನಿಯಂತ್ರಣ
ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡದೇ, ಪ್ರತೀ ದಿನ ಈ ಕುರಿತಾದ ಚರ್ಚೆ, ನೊಂದವರೊಂದಿಗೆ ಮಾತು, ಮನೋಸ್ಥೈರ್ಯ ತುಂಬುವ ಕಾರ್ಯಗಳು ನಡೆಯಬೇಕು. ಅದೇ ರೀತಿ ಪೋಷಕರು, ಶಿಕ್ಷಕರು ಹಾಗೂ ಸಂಘ-ಸಂಸ್ಥೆಗಳ ಪಾತ್ರವು ಮುಖ್ಯವಾದದ್ದು.

- ವಿಜಯಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next