Advertisement

“ಸೇನೆ’ಸೇರಲು ಗ್ಲೋಬಲ್‌ ಅಕಾಡೆಮಿ ನೆರವು

06:13 PM Sep 27, 2021 | Team Udayavani |

ಬೀದರ: ಭಾರತೀಯ ಸೇನೆಯಲ್ಲಿ ಸೇರಿ ದೇಶ ಸೇವೆ ಮಾಡಬೇಕೆಂಬುದು ಯುವ ಸಮೂಹದ ಕನಸಾಗಿರುತ್ತದೆ. ಆದರೆ, ಅವರಿಗೆ ಸೂಕ್ತ ತರಬೇತಿ ಕೊರತೆ ಇರುತ್ತದೆ. ಅಂಥ ಆಸಕ್ತರಿಗಾಗಿ ಗ್ಲೋಬಲ್‌ ಸೈನಿಕ ಅಕಾಡೆಮಿ ಸಶಸ್ತ್ರ ಮತ್ತು ಅರೆಸೇನಾ ಪಡೆಗಳ ಪೂರ್ವ ಸಿದ್ಧತಾ ತರಬೇತಿ ಆಯೋಜಿಸಿ ಕನಸು ನನಸಾಗಿಸಲು ಪ್ರೇರೇಪಿಸುತ್ತಿದೆ.

Advertisement

ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ದಿಸೆಯಲ್ಲಿ ಗ್ಲೋಬಲ್‌ ಸೈನಿಕ್‌ ಅಕಾಡೆಮಿ ಅಧ್ಯಕ್ಷ ಕರ್ನಲ್‌ ಶರಣಪ್ಪ ಸಿಕೇನಪುರೆ ಮಹತ್ತರ ಕಾರ್ಯಕ್ಕೆ ಮುನ್ನಡಿ ಬರೆದಿದ್ದಾರೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಬೀದರ ಸೇರಿದಂತೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಆ. 15ರಿಂದ ಮೂರು ತಿಂಗಳ ಸೇನಾ ಭರ್ತಿ ಸಂಬಂಧ ಪೂರ್ವ ಸಿದ್ಧತಾ ತರಬೇತಿ ಶಿಬಿರ ಸಂಘಟಿಸಲಾಗಿದ್ದು, ಕರ್ನಲ್‌ ನೇತೃತ್ವದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ.

ಬೆನಕನಳ್ಳಿ ರಸ್ತೆಯಲ್ಲಿ ಇರುವ ಅಕಾಡೆಮಿ ಯಲ್ಲಿ ತರಬೇತಿ ನಡೆಯುತ್ತಿದೆ. ಕ.ಕ ಭಾಗದ 1,200 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬೀದರ ಜತೆಗೆ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 18 ರಿಂದ 23 ವರ್ಷದ ಒಳಗಿನ 250 ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ. ಇದರಲ್ಲಿ 225 ಬಾಲಕರ ಜತೆಗೆ 25 ಬಾಲಕಿಯರು ಸೇರಿದ್ದು  ವಿಶೇಷ. ಈ ಅಭ್ಯರ್ಥಿಗಳಿಗಾಗಿ ಕಲ್ಯಾಣ ಕರ್ನಾಟಕ ಸಂಘ ಉಚಿತ ಊಟ, ವಸತಿ ವ್ಯವಸ್ಥೆ ಮಾಡಿದೆ.

ದೈಹಿಕ ಸಾಮರ್ಥ್ಯ ಮತ್ತು ಸೇನೆ ಸೇರಲು ಬೇಕಾದ ಅಗತ್ಯ ತರಬೇತಿ ಕೊರತೆಯಿಂದ ಕ.ಕ ಪ್ರದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಆಯ್ಕೆ ಆಗುವುದು ಕಡಿಮೆ. ಅದರಲ್ಲಿ ಒಬ್ಬರೂ ಯುವತಿಯರು ಸೇರಿಲ್ಲ. ಇದನ್ನು ಮನಗಂಡ ಗ್ಲೋಬಲ್‌ ಸೈನಿಕ ಅಕಾಡೆಮಿ ಕಲ್ಯಾಣ ಕರ್ನಾಟಕ ಸಂಘದ ಸಹಕಾರದೊಂದಿಗೆ ತರಬೇತಿ ಹಮ್ಮಿಕೊಂಡಿದೆ.

ತರಬೇತಿಗೆ ವಿಶೇಷ ತಂಡ
ಶಿಬಿರದಲ್ಲಿ ಅಭ್ಯರ್ಥಿಗಳಿಗೆ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿ, ವ್ಯಕ್ತಿತ್ವ ವಿಕಸನ, ನ್ಪೋಕನ್‌ ಇಂಗ್ಲಿಷ್‌, ಅಂತಾರಾಷ್ಟ್ರೀಯ ಸಂಬಂಧಗಳು ಸೇರಿದಂತೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬೀದರನ ಕರ್ನಲ್‌ ಶರಣಪ್ಪ ಸಿಕೇನಪುರೆ ನೇತೃತ್ವದ ನಿವೃತ್ತ ಸೇನಾ ಅಧಿಕಾರಿಗಳು, ಎನ್‌ಐಎಸ್‌ ಅರ್ಹ ತರಬೇತಿದಾರರು, ವಿಷಯ ತಜ್ಞರನ್ನು ಒಳಗೊಂಡ ತಂಡ ನಿತ್ಯ ಬೆಳಗ್ಗೆ 6 ರಿಂದ ಸಾಯಂಕಾಲ 5:30ರ ವರೆಗೆ ತರಬೇತಿ ನೀಡುತ್ತಿದೆ. ದೈಹಿಕ ಸಾಮರ್ಥ್ಯ ವೃದ್ಧಿಗೆ ನ್ಯೂಟ್ರೇಶನ್‌ ಆಹಾರ ನೀಡಲಾಗುತ್ತಿದೆ.

Advertisement

ಬಹುತೇಕ ಪಾಲಕರು ತಮ್ಮ ಮಕ್ಕಳು ವೈದ್ಯ, ಎಂಜಿನಿಯರ್‌ ಆಗಬೇಕು ಎಂದು ಬಯಸುತ್ತಾರೆ. ಆದರೆ, ಸೇನೆಯಲ್ಲೂ ಬಹಳಷ್ಟು ಉದ್ಯೋಗ ಅವಕಾಶ, ಆಕರ್ಷಕ ಸಂಬಳ, ಪಿಂಚಣಿ ಸೇರಿ ವಿವಿಧ ಸೌಲಭ್ಯಗಳು ಇರುವ ಬಗ್ಗೆ ಹೆಚ್ಚಿನ ಜನರಿಗೆ ತಿಳಿವಳಿಕೆ ಇಲ್ಲ. ಜತೆಗೆ ಯುವಕರಲ್ಲಿ ಸೂಕ್ತ ತರಬೇತಿ ಕೊರತೆಯೂ ಇದೆ. ಹಾಗಾಗಿ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಯುವಕರನ್ನು ಸೇನಾ ಭರ್ತಿಗೆ ಅಣಿಗೊಳಿಸುವ ಪ್ರಯತ್ನ ನಡೆದಿದೆ.
ಕರ್ನಲ್‌ ಶರಣಪ್ಪ ಸಿಕೇನಪುರೆ,
ಅಧ್ಯಕ್ಷರು, ಗ್ಲೋಬಲ್‌ ಸೈನಿಕ್‌ ಅಕಾಡೆಮಿ

ಕ.ಕ ಭಾಗದಲ್ಲಿ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಕಲೆ, ಸಂಸ್ಕೃತಿಗೆ ಉತ್ತೇಜನ ಹಾಗೂ ಯುವ ಸಬಲೀಕರಣಕ್ಕಾಗಿ ಕಲ್ಯಾಣ ಕರ್ನಾಟಕ ಸಂಘ ನಿರಂತರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈಗ ವಿಶೇಷವಾಗಿ ಸೇನಾ ಭರ್ತಿಗೆ ಅಗತ್ಯ ಪೂರ್ವ ಸಿದ್ಧತೆಗಾಗಿ ಸಂಘದ ಸಹಯೋಗದಲ್ಲಿ ಗ್ಲೋಬಲ್‌ ಸೈನಿಕ ಅಕಾಡೆಮಿಯಿಂದ ಅಭ್ಯರ್ಥಿಗಳಿಗಾಗಿ ತರಬೇತಿ
ನಡೆಸಲಾಗುತ್ತಿದೆ.
ರೇವಣಸಿದ್ದಪ್ಪ ಜಲಾದೆ,
ನಿರ್ದೇಶಕರು, ಕ.ಕ ಸಂಘ, ಬೀದರ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next