Advertisement

ದಿವ್ಯಾಂಗರಿಗೆ ಅನುಕಂಪಕ್ಕಿಂತ ಅವಕಾಶ ಕೊಡಿ

09:10 PM Dec 28, 2019 | Lakshmi GovindaRaj |

ಮಧುಗಿರಿ: ದಿವ್ಯಾಂಗರ ಕುರಿತು ಅನುಕಂಪ ವ್ಯಕ್ತಪಡಿಸದೆ ಎಲ್ಲ ರೀತಿಯ ಅವಕಾಶ ಕಲ್ಪಿಸುವುದು ಸರ್ಕಾರ ಹಾಗೂ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಪಂ, ಸಿಡಿಪಿಒ ಕಚೇರಿ, ದಿವ್ಯಾಂಗರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ವೇದಿಕೆ, ವಿವೇಕಾನಂದ ದಿವ್ಯಾಂಗರ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ನಡೆದ ವಿಶ್ವ ದಿವ್ಯಾಂಗರ ದಿನಾಚರಣೆ-2019 ಉದ್ಘಾಟಿಸಿ ಮಾತನಾಡಿದರು.

Advertisement

ಅಂಗವೈಕಲ್ಯವಿದ್ದರೂ ಜ್ಞಾನದ ಸಂಪತ್ತಿಗೆ ಯಾವುದೇ ಕೊರತೆಯಿಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಕೀಳರಿಮೆ ತೊರೆದು ಸಾಧನೆಗೆ ಮುಂದಾದರೆ ಯಶಸ್ಸು ನಿಮ್ಮದಾಗಲಿದೆ. ಇಂದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ವಿವಿಧ ಉನ್ನತ ಹುದ್ದೆ ದಿವ್ಯಾಂಗ ವಿದ್ಯಾವಂತರು ಅಲಂಕರಿಸಿದ್ದಾರೆ. ಇದಕ್ಕೆ ಕಾರಣ ವಿದ್ಯೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ವಿದ್ಯೆ ಸಕಲವನ್ನೂ ನೀಡುತ್ತದೆ.

ಸಮಾನ ಮಾಶಾಸನ, ಶೇ.5ರ ಅನುದಾನ ಪರಿಣಾಮಕಾರಿ ಅನುಷ್ಠಾನ, 1900 ಅಧಿನಿಯಮದಂತೆ ದಿವ್ಯಾಂಗರಿಗೆ ನೀಡುವ ಸಕಲ ಯೋಜನೆ ಲಾಭ ಕೊಡಿಸಲು ಸದನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದ ಶಾಸಕರು, ಮಾಶಾಸನವು ಆರೇಳು ತಿಂಗಳಿಂದ ಬಂದಿಲ್ಲ. ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಹಾಗೂ ಇಒಗೆ ಸೂಚಿಸಿದರು.

ಶಿಕ್ಷಣದಿಂದ ಉತ್ತಮ ಬದುಕು: ಜಿಪಂ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಅಂಗವೈಕಲ್ಯ ಶಾಪವಲ್ಲ. ಈ ಸಮಸ್ಯೆ ಕಲಿಕೆಗೆ ಅಡ್ಡಿಯಾಗದು. ಶಿಕ್ಷಣ ಉತ್ತಮ ಬದುಕು ಕಟ್ಟಿಕೊಡಲಿದ್ದು, ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರ ನೀಡುತ್ತಿದ್ದ ಶೇ.3ರಷ್ಟಿದ್ದ ಅನುದಾನ ಶೇ.5ಕ್ಕೆ ಏರಿಕೆಯಾಗಿದೆ. ಈ ಯೋಜನೆ ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಬದುಕು ನಿಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತುಮುಲ್‌ ಮಾಜಿ ಅಧ್ಯಕ್ಚ ಹಾಗೂ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಮಾತನಾಡಿ, ಯಾವುದೇ ಸರ್ಕಾರಿ ಅಧಿಕಾರಿಗಳು ದಿವ್ಯಾಂಗರ ಕೆಲಸಗಳಿಗೆ ಅಲೆದಾಡಿಸದೆ ಸಹಾಯ ಮಾಡಬೇಕು. ಅವರಿಗೆ ಮೀಸಲಿಟ್ಟ ಅನುದಾನ ಲೋಪವಾಗದೆ ಅವರ ಕಲ್ಯಾಣಕ್ಕೆ ಉಪಯೋಗಿಸಬೇಕು ಎಂದು ಹೇಳಿದರು.

Advertisement

ಕಾನೂನು ನೆರವು ನೀಡಿ: ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಮಾತನಾಡಿ, ಅಂಗವೈಕಲ್ಯ ನಿವಾರಣೆ ಹಾಗೂ ಈ ಸಮುದಾಯದ ಅಭಿವೃದ್ಧಿಗೆ 1900 ಅಧಿನಿಯಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ನಮಗೆ ನೀಡುವ ಸೌಲಭ್ಯ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ನಮ್ಮ ಮೇಲೆ ನಡೆಯುವ ದೌರ್ಜನ್ಯಕ್ಕೆ ಕಾನೂನಿನ ನೆರವು ನೀಡಬೇಕು. ತಾರತಮ್ಯ ಮಾಡದೆ ಸಮಾನ ಮಾಸಾಶನ ನೀಡಬೇಕು.

21 ವಿವಿಧ ಅಂಗವಿಕಲತೆಯಿದ್ದು, ಇದನ್ನು ಸಮರ್ಥವಾಗಿ ಗುರುತಿಸುವ ಅಧಿಕಾರಿಗಳ ನೇಮಿಸಬೇಕು. ಮುಖ್ಯವಾಗಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ದಿವ್ಯಾಂಗರಿದ್ದು, ನಮಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ಶೇ.5ರ ಅನುದಾನ ಸಮರ್ಪಕವಾಗಿ ಖರ್ಚು ಮಾಡದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು. ಹೋರಾದ ಫ‌ಲವಾಗಿ ಜಿಲ್ಲೆಯ 177 ದಿವ್ಯಾಂಗರು ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದ್ದರಿಂದ ನಾವೆಲ್ಲ ಒಗ್ಗಟ್ಟಾಗಿದ್ದರಷ್ಟೇ ಸರ್ಕಾರದ ಸೌಲಭ್ಯಗಳು ದೊರಕಲಿದ್ದು, ಸಾಧನೆಗೆ ಸಹಕಾರಿ ಎಂದು ತಿಳಿಸಿದರು. ತಹಶೀಲ್ದಾರ್‌ ನಂದೀಶ್‌, ಇಒ ದೊಡ್ಡಸಿದ್ದಯ್ಯ, ಸಿಡಿಪಿಒ ಟಿ.ಆರ್‌.ಸ್ವಾಮಿ, ತಾಲೂಕು ಅಂಗವಿಕಲ ಚೇತನರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ರಾಜಣ್ಣ, ಜ್ಞಾನಭಾರತಿ ಅಂಗವಿಕಲ ಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ಶಾರದಾ, ಜಿಲ್ಲಾ ಅಂಗವಿಕಲ ಮಕ್ಕಳ ಕಲ್ಯಾಣಾಧಿಕಾರಿ ರಮೇಶ್‌, ಮುಖಂಡರಾದ ಗುಂಡಗಲ್ಲು ಶಿವಣ್ಣ, ಜಯರಾಂ, ಗೋಪಾಲ್‌, ಕೂರ‌್ಲಪ್ಪ, ನರಸಿಂಹಮೂರ್ತಿ ಇತರರು ಇದ್ದರು.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನಿನ ಸ್ಪಷ್ಟತೆ ಕೇಂದ್ರ ಸರ್ಕಾರ ತಿಳಿಸಬೇಕು. ಗೊಂದಲದಿಂದ ಹಲವು ಪ್ರಾಣಹಾನಿಯಾಗಿದೆ. ಇದಕ್ಕೆ ಸರ್ಕಾರವೇ ಕಾರಣವಾಗಿದ್ದು, ಅಲ್ಪಸಂಖ್ಯಾತರು ಭಯಪಡಬೇಕಿಲ್ಲ. ಕಾನೂನಿಗೆ ಜೆಡಿಎಸ್‌ ವಿರೋಧವಿದೆ. ಪಕ್ಷ ದೇಶದ ಅಲ್ಪಸಂಖ್ಯಾತರ ಪರವಾಗಿದ್ದು, ಅನ್ಯಾಯವಾಗಲು ಬಿಡುವುದಿಲ್ಲ.
-ಎಂ.ವಿ.ವೀರಭದ್ರಯ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next