Advertisement

ಜನರ ಕೆಲಸಕ್ಕೆ ಪ್ರಾಮುಖ್ಯತೆ ಕೊಡಿ: ಶಾಸಕ ಕೊಡ್ಗಿ

03:23 PM Jun 04, 2023 | Team Udayavani |

ಕುಂದಾಪುರ: ಪುರಸಭೆಗೆ ದೈನಂದಿನ ಕೆಲಸಗಳಿಗೆ ಜನ ಬರುತ್ತಾರೆ. ಅವರಿಗೆ ಯಾವುದೇ ಅಡಚಣೆಯಾಗದಂತೆ ಕೆಲಸ ನಿರ್ವಹಿಸುವುದು ಅಧಿಕಾರಿ ಗಳು ಹಾಗೂ ಸಿಬಂದಿ ಹೊಣೆಗಾರಿಕೆ. ಜನ ಬಂದಾಗ ಸೌಜನ್ಯದಿಂದ ನಡೆದುಕೊಂಡು, ಉತ್ತಮ ರೀತಿಯ ಕರ್ತವ್ಯ ನಿರ್ವಹಿಸಿ. ನಿಮ್ಮ ಹಾಗೂ ಜನರ ಬಾಂಧವ್ಯ ಒಳ್ಳೆಯದಿರಲಿ. ನಾನು ಸಹ ಜನರಿಂದ ಆಯ್ಕೆಯಾದವ. ಜನರ ಕೆಲಸಕ್ಕೆ ಪ್ರಾಮುಖ್ಯತೆ ಕೊಡುವ ಎಂದು ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಹೇಳಿದರು.

Advertisement

ಅವರು ಶನಿವಾರ ಪುರಸಭೆಯ ಸಭಾಂಗಣದಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಉಪ್ಪು ನೀರು ಕುಡಿಯಲು ಆಗುತ್ತಾ?
ಕಳೆದ 2-3 ದಿನಗಳಿಂದ ಪುರಸಭೆಗೆ ಪೂರೈಸುತ್ತಿರುವ ನೀರಿನಲ್ಲಿ ಉಪ್ಪಿನಾಂಶವಿದ್ದು, ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದ ಶಾಸಕರು, 4 ದಿನ ಜನ ಉಪ್ಪು ನೀರು ಕುಡಿಯಲು ಸಾಧ್ಯವಾ? ಈ ರೀತಿಯ ತಪ್ಪುಗಳು ಇನ್ನು ಮುಂದೆ ಆಗದಂತೆ ಎಚ್ಚರವಹಿಸಿ ಎಂದು ಎಚ್ಚರಿಸಿದರು.

ಇದಕ್ಕುತ್ತರಿಸಿದ ಜಲಸಿರಿ ಯೋಜನೆಯ ಅಧಿಕಾರಿಗಳು, ಗುಲ್ವಾಡಿ ವೆಂಟೆಡ್‌ ಡ್ಯಾಂನಲ್ಲಿ ನಮಗೆ ತಿಳಿಸದೇ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಗೇಟ್‌ ತೆಗೆದಿದ್ದರಿಂದ ಕೆಳಗಿನ ಉಪ್ಪು ನೀರು ಮೇಲೆ ಬಂದಿದೆ. ಇದರಿಂದ ಸಮಸ್ಯೆಯಾಗಿದೆ. ಸರಿಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ಉತ್ತರ ತರಿಸುವಂತೆ ಎಸಿಗೆ ಶಾಸಕರು ಸೂಚಿಸಿದರು.

4,200 ನಳ್ಳಿ ಸಂಪರ್ಕ
ಪುರಸಭೆಗೆ ನಿರಂತರ 24 ಗಂಟೆ ನೀರು ಪೂರೈಸುವ ಜಲಸಿರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌, ಟೆಂಡರ್‌ ಕರಾರಿನಂತೆ ನಳ್ಳಿ ಸಂಪರ್ಕ ಹೆಚ್ಚಾಗಿಲ್ಲ. ಯೋಜನೆ ಆರಂಭಕ್ಕೆ ಮೊದಲು 3,300 ಸಂಪರ್ಕವಿತ್ತು. ಈಗ ಅದು 4,200 ಆಗಿದೆ. ಜಲಸಿರಿಯವರಿಗೆ ಗುರಿಯಿದ್ದುದು 6,450. ಇದರಿಂದ ನೀರಿನ ತೆರಿಗೆ ಸಂಗ್ರಹ ನಿರೀಕ್ಷಿತವಾಗಿ ಆಗುತ್ತಿಲ್ಲ. 4.50 ಕೋ.ರೂ. ನಿರ್ವಹಣೆ ವೆಚ್ಚವಾಗುತ್ತಿದ್ದು, 1 ಕೋ.ರೂ. ಅಷ್ಟೆ ಆದಾಯ ಸಂಗ್ರಹವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೊರೆಯಾಗಬಹುದು ಎಂದರು. ಜಲಸಿರಿ ಅಧಿಕಾರಿಗಳು ಉತ್ತರಿಸಿ, ನಳ್ಳಿ ಸಂಪರ್ಕ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೆಲವು ಮನೆಗಳಲ್ಲಿ ಬಾವಿಗಳಿರುವುದರಿಂದ ಬೇಡ ಅನ್ನುತ್ತಿದ್ದಾರೆ. ಇದರಿಂದ ನಳ್ಳಿ ಸಂಪರ್ಕ ಹೆಚ್ಚಿಸಲು ಆಗುತ್ತಿಲ್ಲ. ಪುರಸಭೆಯಿಂದಲೂ ಇದಕ್ಕೆ ಸಹಕಾರ ಬೇಕಿದೆ ಎಂದರು.

Advertisement

ಸಮಸ್ಯೆ ಸರಿಪಡಿಸಿ
ಶಾಸಕರು ಮಾತನಾಡಿ, ಪುರಸಭೆ ಹಾಗೂ ಜಲಸಿರಿ ನಡುವೆ ಒಂದಷ್ಟು ಹೊಂದಾಣಿಕೆ ಕೊರತೆ ಇರುವುದು ಕಾಣುತ್ತಿದೆ. ಇದು ಪುರಸಭೆ ಹಿತದೃಷ್ಟಿಯಿಂದ ಒಳ್ಳೆಯ ದಲ್ಲ. ನಿಮ್ಮಲ್ಲಿರುವ ಗೊಂದಗಳನ್ನು ನಿವಾರಿಸಿ, ಪರಸ್ಪರ ಹೊಂದಾಣಿಕೆಯಿಂದ ಇರಿ. ಪುರಸಭೆಯಿಂದ ತಿಳಿಸುವ ನೀರಿನ ನಿರ್ವಹಣೆ ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಿ ಎಂದು ಸೂಚಿಸಿದರು. ಪುರಸಭೆ ಆಡಳಿತಾಧಿಕಾರಿ ಈ ಬಗ್ಗೆ ಸಭೆ ಕರೆದು ಇತ್ಯರ್ಥಪಡಿಸುವುದಾಗಿ ತಿಳಿಸಿದರು.

ಯುಜಿಡಿ ಕಾಮಗಾರಿ ಪ್ರಗತಿ ಬಗ್ಗೆ ಸಭೆಯಲ್ಲಿ ಶಾಸಕರು ಮಾಹಿತಿ ಕೇಳಿದ್ದು, ಉತ್ತರಿಸಿದ ಮುಖ್ಯಾಧಿಕಾರಿಗಳು, ಎಸ್ಟಿಪಿಗಾಗಿ ಹುಂಚಾರುಬೆಟ್ಟುವಿನಲ್ಲಿ 2 ಕೋ.ರೂ. ನೀಡಿ ಜಾಗ ಖರೀದಿಸಲಾಗಿದೆ. ಆದರೆ ಸ್ಥಳೀಯರ ವಿರೋಧದಿಂದ ವಿಳಂಬವಾಗಿದೆ ಎಂದರು. ಕಂದಾಯ ಇಲಾಖೆ ಹಾಗೂ ಪುರಸಭೆ ನಡುವ ಜಂಟಿ ಸಭೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದು ಎಸಿ ಹೇಳಿದರು.

ಕುಂದಾಪುರ ಎಸಿ, ಆಡಳಿತಾಧಿಕಾರಿ ರಶ್ಮಿ ಎಸ್‌.ಆರ್‌., ವಿವಿಧ ಇಲಾಖಾಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.

ಫ್ಲೈ ಓವರ್ ಅಡಿಯಲ್ಲಿ ಪಾರ್ಕಿಂಗ್‌?
ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ ಸಮಸ್ಯೆಯಿದ್ದು, ಇದಕ್ಕಾಗಿ ಪುರಸಭೆ ಎದುರಿನ ಎಸ್‌ಬಿಐ ಪಕ್ಕದ ಬಿಲ್ಡಿಂಗ್‌ ಅಂಡರ್‌ಗ್ರೌಂಡ್‌ನ‌ಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ರಿಕ್ಷಾ ನಿಲ್ದಾಣಗಳಿಗೆ ಸರಕಾರಿ ಜಾಗ ಗುರುತಿಸುವಂತೆ ತಹಶೀಲ್ದಾರ್‌ಗೆ ತಿಳಿಸಿದ್ದು, ಅವರು 11 ಕಡೆ ಜಾಗ ಗುರುತಿಸಿದ್ದು, ಅದರ ನಕ್ಷೆ ತಯಾರಿಸಲಾತ್ತಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಫ್ಲೈ ಓವರ್ ಕೆಳಗೆ ವಿಶಾಲ ಜಾಗವಿದ್ದು, ಅದನ್ನು ಪಾರ್ಕಿಂಗ್‌ಗಾಗಿ ಬಳಸಿಕೊಳ್ಳಲು ಹೆದ್ದಾರಿ ಪ್ರಾಧಿಕಾರ ಅನುಮತಿ ಕೊಡಿಸುವಂತೆ ಎಸಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next