Advertisement

ದೇಶಪ್ರೇಮಿ, ಭಿಕ್ಷಾಟನೆ ಕುಲುಮೆಯಲ್ಲಿ ಬೆಂದು ದಂತಕಥೆಯಾದ ಘಂಟಸಾಲ!

09:37 AM Jan 10, 2019 | Sharanya Alva |

ಕನ್ನಡ ,ಬಾಲಿವುಡ್, ತಮಿಳು ಸೇರಿದಂತೆ ಚಿತ್ರರಂಗದಲ್ಲಿ ಅದೆಷ್ಟು ಅದ್ಭುತ ಕಂಠಸಿರಿಯ ಹಿನ್ನೆಲೆ ಗಾಯಕರನ್ನು ಕಂಡಿಲ್ಲ. ಮರೆಯಾದ ಅಂತಹ ಮಹಾನ್ ಗಾಯಕರೂ ಇಂದಿಗೂ ನಮ್ಮ ನಡುವೆ ಅವರ ಹಾಡುಗಳಿಂದಾಗಿ ಜೀವಂತವಾಗಿದ್ದಾರೆ. ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಗಾನಗಂಧರ್ವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೆಂಕಟೇಶ್ವರ ರಾವ್ ಅಲಿಯಾಸ್ ಘಂಟಸಾಲ ಅವರ ಹಾಡನ್ನು ಕೇಳಿದ್ದೀರಾ? ಕೇಳಿದ್ದರೆ ಅವರನ್ನು ಮರೆಯಲು ಸಾಧ್ಯವೇ?

Advertisement

1955ರಲ್ಲಿ ತೆರೆಕಂಡಿದ್ದ ಯರಗುಡಿಪಾಟಿ ವರದಾ ರಾವ್ ಅವರ ನಿರ್ದೇಶನದ ಭಾಗ್ಯಚಕ್ರ ಸಿನಿಮಾದಲ್ಲಿ “ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ” ಇವರು ಹಾಡಿದ ಮೊದಲ ಕನ್ನಡ ಚಿತ್ರಗೀತೆಯಾಗಿದೆ. ಬಳಿಕ ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ(ವೀರಕೇಸರಿ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ(ಸತ್ಯಹರಿಶ್ಚಂದ್ರ), ಶಿವಶಂಕರಿ ಶಿವಾನಂದನ ಲಹರಿ, ಮೆಲ್ಲುಸಿರೇ ಸವಿ ಗಾನ, ಎದೆ ಝಲ್ಲನೆ ಹೂವಿನ ಬಾಣ(ವೀರಕೇಸರಿ) ಓಹಿಲೇಶ್ವರ ಸಿನಿಮಾದ ಈ ದೇಹದಿಂದ ದೂರನಾದೆ ಏಕೆ ಆತ್ಮನೆ..ಹೀಗೆ ಘಂಟಸಾಲ ಅವರ ಕಂಠಸಿರಿಯಲ್ಲಿ ನಮ್ಮನ್ನು ಇಂದಿಗೂ ಕಾಡುವ ಹಾಡುಗಳು ಹತ್ತು ಹಲವು!

8 ಭಾಷೆಯಲ್ಲೂ ಘಂಟಸಾಲ ಕಂಠಸಿರಿ ಮೊಳಗಿತ್ತು!

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಂಟು ಭಾಷೆಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡುವ ಮೂಲಕ ಘಂಟಸಾಲ ಜನಾನುರಾಗಿಯಾಗಿದ್ದರು. 1950-60ರ ದಶಕದಲ್ಲಿ ತಿರುಮಲ ತಿರುಪತಿಯ ಬೆಟ್ಟದಲ್ಲಿ ಅನುರಣಿಸುತ್ತಿದ್ದದ್ದು ಘಂಟಸಾಲ ಅವರ ಶುಶ್ರಾವ್ಯ ಹಾಡು! ತಿರುಮಲ ತಿರುಪತಿ ದೇವಸ್ಥಾನದಲ್ಲಿ ಘಂಟಸಾಲ ಆಸ್ಥಾನ ಗಾಯಕರಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಅವರದ್ದು. ಭಗವದ್ಗೀತೆ ಸೇರಿದಂತೆ ಹಲವಾರು ಹಾಡುಗಳನ್ನು ಖಾಸಗಿ ಆಲ್ಬಂನಲ್ಲಿ ರೆಕಾರ್ಡ್ ಮಾಡಲಾಗಿತ್ತು.

Advertisement

ಭಿಕ್ಷೆ ಬೇಡಿ ಗಾನಗಂಧರ್ವ ಪಟ್ಟವೇರಿದ್ದ ಘಂಟಸಾಲ !

ಹಿಂದುಗಳಿಗೆ ತಿರುಮಲ ವೆಂಕಟೇಶ್ವರ ದೇವರು..ಅದೇ ರೀತಿ ದೇವರ ಹೆಸರನ್ನೇ ಇಟ್ಟುಕೊಂಡಿದ್ದ ವೆಂಕಟೇಶ್ವರ ರಾವ್ ಅಲಿಯಾಸ್ ಘಂಟಸಾಲ! ತೆಲುಗು ಮಾತನಾಡುವ ಸಂಗೀತ ಪ್ರಿಯರು, ಅದರಲ್ಲೂ ಈಗಿನ ಹೊಸ ಪೀಳಿಗೆಯ ಹಿನ್ನೆಲೆ ಗಾಯಕರು, ಸಂಗೀತಗಾರರಿಗೆ ಘಂಟಸಾಲ ಸಂಗೀತದ ದೇವರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಸಂಗೀತ ಲೋಕವನ್ನಾಳಿದ್ದ ಘಂಟಸಾಲ ಇಷ್ಟೆಲ್ಲಾ ಹೆಸರು ಸಂಪಾದಿಸಲು ಪಟ್ಟ ಪಾಡು ಹೇಗಿತ್ತು ಗೊತ್ತಾ?

ವೆಂಕಟೇಶ್ವರ ರಾವ್ ಅವರ ಜೀವನಗಾಥೆ ಯಾವುದೇ ಕಾದಂಬರಿಗಿಂತ ಹೆಚ್ಚು ರೋಚಕವಾಗಿದೆ. 1922ರಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡಾ ತಾಲೂಕಿನ ಚೌಟಪಲ್ಲಿ ಗ್ರಾಮದಲ್ಲಿ ಜನಿಸಿದ್ದರು. ಆದರೆ ಚೌಟಪಲ್ಲಿಗೂ, ಸಮೀಪದ ಘಂಟಸಾಲ ಎಂಬ ಊರಿಗೂ ಯಾವುದೇ ಸಂಬಂಧವಿಲ್ಲವಂತೆ. ಹಿರಿಯರು ಇದ್ದರು ಎಂಬ ಕಾರಣಕ್ಕೆ ಘಂಟಸಾಲ ಎಂಬ ಹೆಸರನ್ನು ಇಟ್ಟಿದ್ದರಂತೆ. ತಂದೆ ಸೂರ್ಯನಾರಾಯಣ ರಾವ್ ಕೂಡಾ ಪ್ರಸಿದ್ಧ ಗಾಯಕರಾಗಿದ್ದರು. ಎಳೆವೆಯಲ್ಲಿಯೇ ವೆಂಕಟೇಶ್ವರ ಅವರು ತಂದೆ ಜೊತೆ ಹಾಡುವ ಅವಕಾಶ ಸಿಕ್ಕಿತ್ತು. ಇದರಿಂದಾಗಿ ಅವರ ಸಂಗೀತಾಸಕ್ತಿಗೆ ಪ್ರೋತ್ಸಾಹ ಸಿಕ್ಕಂತಾಗಿತ್ತು. ಆದರೆ ವಿಧಿ ವಿಪರ್ಯಾಸ ವೆಂಕಟೇಶ್ವರ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡುಬಿಟ್ಟಿದ್ದರು! ತದನಂತರ ಚಿಕ್ಕಪ್ಪನ ಜೊತೆ ವೆಂಕಟೇಶ್ವರ ದಿನ ಕಳೆಯತೊಡಗಿದ್ದರು.

ಏತನ್ಮಧ್ಯೆ ಪುಟ್ಟ ಬಾಲಕ ವೆಂಕಟೇಶ್ವರನಿಗೆ ಸಂಗೀತದ ಮೇಲಿನ ಅದಮ್ಯ ಪ್ರೀತಿ, ಆಸಕ್ತಿ ದಿನೇ, ದಿನೇ ಹೆಚ್ಚಾಗತೊಡಗಿತ್ತು. ತಾನು ಸಂಗೀತಗಾರನಾಗಲೇಬೇಕೆಂಬ ಹಠಕ್ಕೆ ಬಿದ್ದ ವೆಂಕಟೇಶ್ವರ 11ನೇ ವಯಸ್ಸಿಗೆ ಚಿಕ್ಕಪ್ಪನ ಮನೆಯಿಂದ ಓಡಿ ಹೋಗಿಬಿಟ್ಟಿದ್ದರು. ನೇರ ವಿಜಯನಗರಂಗೆ ಬಂದಿದ್ದ ಅವರು ಮಹಾರಾಜ ಸಂಗೀತ ಮತ್ತು ನೃತ್ಯಕಲಾ ಕಾಲೇಜಿಗೆ ಸೇರಿಕೊಂಡುಬಿಟ್ಟಿದ್ದರಂತೆ!

ಅಂದ ಹಾಗೆ ಕೈಯಲ್ಲಿ ಕಾಸಿಲ್ಲದೆ ಬದುಕೋದು ಹೇಗೆ? ಸಂಗೀತ ಶಾಲೆಗೆ ಫೀಸ್ ಕಟ್ಟುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಬೀದಿಯಲ್ಲಿ ಸಂಗೀತ ಹೇಳುತ್ತ ಭಿಕ್ಷೆ ಬೇಡುತ್ತಾ, ವಾರಾನ್ನ, ಭಿಕ್ಷಾನ್ನಗಳ ಮೊರೆ ಹೋಗಿದ್ದರಂತೆ! ಇಂತಹ ಕಷ್ಟದ ನಡುವೆಯೂ ಸಂಗೀತ ಕಲಿಯುವುದನ್ನು ಘಂಟಸಾಲ ಮುಂದುವರಿಸಿದ್ದರು! ಕೊನೆಗೆ ಪ್ರಾಂಶುಪಾಲರಾದ ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರನ್ನು ಭೇಟಿ ಮಾಡುವಲ್ಲಿ ಯಶಸ್ವಿಯಾಗಿಬಿಟ್ಟಿದ್ದರು. ತದನಂತರ ಸಂಗೀತ ಕಾಲೇಜಿಗೆ ಪ್ರವೇಶ ಪಡೆದಿದ್ದರಂತೆ! ಕಾಲೇಜಿನಲ್ಲಿ ಸಂಗೀತ ವಿದ್ವಾನ್ ಪದವಿ ಪಡೆದ ನಂತರ ಘಂಟಸಾಲ ಅವರಿಗೆ ಕೆಲಕಾಲ ಆಕಾಶವಾಣಿಯಲ್ಲಿ ಹಾಡುವ ಅವಕಾಶ ದೊರಕಿತ್ತು. ಆಲ್ ಇಂಡಿಯಾ ರೇಡಿಯೋ ಮೂಲಕ ಅವರು ಅದಾಗಲೇ ಜನಮನ ಗೆದ್ದುಬಿಟ್ಟಿದ್ದರು. ಆದರೆ ಎಚ್ ಎಂವಿ ಸಂಸ್ಥೆ ಘಂಟಸಾಲ ಅವರ ಧ್ವನಿ ಸರಿಯಿಲ್ಲ ಎಂದು ಹೇಳಿ ತಿರಸ್ಕರಿಸಿತ್ತು!

ಬದುಕಿನ ಜಂಜಾಟಗಳ ನಡುವೆಯೇ 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಗೆ ಧುಮುಕಿದ್ದರು. ಬ್ರಿಟಿಷರ ಕೈಗೆ ಸೆರೆ ಸಿಕ್ಕ ಯುವಕ ಘಂಟಸಾಲ ಅವರು ಬಳ್ಳಾರಿಯ(ಅಂದು ಆಂಧ್ರಪ್ರದೇಶದ ಭಾಗವಾಗಿತ್ತು) ಜೈಲಿನಲ್ಲಿ 18 ತಿಂಗಳು ಕಾಲ ಜೈಲುವಾಸ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಘಂಟಸಾಲ ಅವರ ಬದುಕಿನಲ್ಲೊಂದು ತಿರುವು ಸಿಕ್ಕಂತಾಗಿತ್ತು. ಹೌದು ಆ ಕಾಲದ ಖ್ಯಾತ ಗಾಯಕ ಸಾಮುದ್ರಾಲಾ ರಾಘವಾಚಾರ್ಯ ಅವರು ಘಂಟಸಾಲ ಅವರ ಸಂಗೀತದ ಮಾಧುರ್ಯ, ಪ್ರತಿಭೆಯನ್ನು ಗುರುತಿಸಿ ಸಿನಿಮಾ ರಂಗಕ್ಕೆ ಪರಿಚಯಿಸಿಕೊಟ್ಟಿದ್ದರು! ಅದಕ್ಕೆ ಕಾರಣವಾಗಿದ್ದು ಪತ್ನಿ ಸಾವಿತ್ರಿ, ಯಾಕೆಂದರೆ ಸಾಮುದ್ರಲಾ ಅವರ ಊರು ಪೆಡಾಪುಲಿವಾರ್ರೂ.(ಘಂಟಸಾಲ, ಸಾವಿತ್ರಿ ದಂಪತಿಗೆ ನಾಲ್ಕು ಹೆಣ್ಣು, ನಾಲ್ಕು ಗಂಡು ಮಕ್ಕಳು).

ಆರಂಭದಲ್ಲಿ ಕೋರಸ್ ಗಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಘಂಟಸಾಲ ಅವರು  1949ರಲ್ಲಿ ಎನ್ ಟಿ ರಾಮರಾವ್ ಅವರ ಪ್ರಥಮ ಚಿತ್ರ ಮನ ದೇಶಂ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಘಂಟಸಾಲ ಗುರುತಿಸಿಕೊಂಡಿದ್ದರು. ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ 1970ರವರೆಗೂ ಅವರು ಯಶಸ್ವಿನ ತುತ್ತತುದಿಯಲ್ಲೇ ಇದ್ದರು. ಪಾತಾಳ ಭೈರವಿ, ಮಾಯಾ ಬಜಾರ್, ಲವ ಕುಶ, ಪಾಂಡವ ವನವಾಸಂ, ರಹಸ್ಯಂ, ಗುಂಡಮ್ಮ ಕಥಾ, ಪರಮಾನಂದಯ್ಯ ಶಿಷ್ಯಾಲು ಕಥಾ, ಪೆಲ್ಲಿ ಚೇಸಿ ಚೂಡು ಸೇರಿದಂತೆ ಹಲವು ತೆಲುಗು ಸಿನಿಮಾಗಳ ಹಾಡು ಇಂದಿಗೂ ಜನಪ್ರಿಯವಾಗಿದೆ. 1950ರಿಂದ 1960ರವರೆಗೆ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಘಂಟಸಾಲ ಅವರ ಅಮೋಘ ಕಂಠಸಿರಿಯನ್ನು ಕೇಳುವ ಭಾಗ್ಯ ಸಿಕ್ಕಿತ್ತು. 1961ರಲ್ಲಿ ಬಿಡುಗಡೆಯಾಗಿದ್ದ ಜಗದೇಕ ವೀರನ ಕಥೆ ಸಿನಿಮಾದ ಶಿವ ಶಂಕರಿ ಹಾಡನ್ನು ಹಿಂದೂಸ್ತಾನಿ ಶೈಲಿ ಮತ್ತು ಶುದ್ಧ ಕರ್ನಾಟಕ ಶೈಲಿಯಲ್ಲಿ ಹಾಡುವುದು ಸವಾಲಿನ ಕೆಲಸವಾಗಿತ್ತಂತೆ..ಆದರೆ ಘಂಟಸಾಲ ಅವರು ಒಂದೇ ಟೇಕ್ ನಲ್ಲಿ ಎರಡೂ ಪದ್ಧತಿಗಳಲ್ಲಿ ಹಾಡುವ ಮೂಲಕ ತಮ್ಮ ಪಾಂಡಿತ್ಯವನ್ನು ಜಗಜ್ಜಾಹೀರು ಮಾಡಿದ ಸಂಗೀತ ಕ್ಷೇತ್ರದ ಮಾಂತ್ರಿಕ ಅವರು!

ಘಂಟಸಾಲ ಅವರು ವಿನಾಯಕ ಚಾವಿಟಿ(ವಾತಾಪಿ ಗಣಪತೀಂ ಬಜೆ), ಜಗದೇಕವೀರನ ಕಥೆ(ಶಿವ ಶಂಕರಿ), ಅನಾರ್ಕಲಿ(ರಾಜಶೇಖರ) ಎಂಬ ಮೂರು ಸಿನಿಮಾಗಳನ್ನು ನಿರ್ಮಿಸಿ ಅದರಲ್ಲಿ ಹಾಡಿದ್ದ ಹಾಡುಗಳು ಇಂದಿಗೂ ಸೂಪರ್ ಹಿಟ್ ಆಗಿದೆ! ಸುಮಾರು ಮೂರು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ ಘಂಟಸಾಲ ಅವರು ಹಲವಾರು ಆವಿಷ್ಕಾರ ಮತ್ತು ಸಂಗೀತದ ಬೆಳವಣಿಗೆಗೆ ಕಾರಣಿಭೂತರಾಗಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ತುಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮ ಸಂಗೀತದ ಧಾರೆಯನ್ನು ಹರಿಸಿದ ಧೀಮಂತ ಘಂಟಸಾಲ ಅವರು ಅಮೆರಿಕ, ಯುಕೆ, ಜರ್ಮನಿ ಮತ್ತು ಮಧ್ಯ ಏಷ್ಯಾಗಳಲ್ಲಿಯೂ ತಮ್ಮ ಕಂಚಿನ ಕಂಠದ ಹಾಡಿನ ಮೂಲಕ ಛಾಪನ್ನು ಮೂಡಿಸಿದ್ದರು. ಅವೆಲ್ಲಕ್ಕಿಂತ ಘಂಟಸಾಲ ಅವರ ದೊಡ್ಡ ಗುಣ ಎಂಬಂತೆ ಯಾವುದೇ ಉಡುಗೊರೆಯನ್ನು ಅವರಿಗೆ ಕೊಟ್ಟರೆ ಕೂಡಲೇ ಅದನ್ನು ದಾನ ಮಾಡಿ ಬಿಡೋದು!

ಈ ಎಲ್ಲಾ ಸಂಭ್ರಮದ ನಡುವೆ 51ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ವೆಂಕಟೇಶ್ವರ ರಾವ್ ಅಲಿಯಾಸ್ ಘಂಟಸಾಲ ಅವರು ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 1974ರ ಫೆಬ್ರುವರಿ 11ರಂದು ಹೃದಯಾಘಾತದಿಂದ ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದರು. ಆದರೆ ಸಾಯುವ ಮುನ್ನಾ ದಿನ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಭದ್ರಾಚಲ ರಾಮದಾಸು ವೈಭವಂ ಎಂಬ ಸಾಕ್ಷ್ಯಚಿತ್ರಕ್ಕಾಗಿ ತಮ್ಮ ಕೊನೆಯ ಹಾಡನ್ನು ಹಾಡಿದ್ದರು! ಇಂದಿಗೂ ಘಂಟಸಾಲ ಅವರ ಹಾಡು ಸ್ಮೃತಿಪಟಲದಲ್ಲಿ ಗುಂಯ್ ಗುಡುತ್ತಿದೆ!

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next