Advertisement

ಹಕ್ಕುಗಳನ್ನು ಅರಿತಾಗ ಮೋಸಕ್ಕೆ ಕಡಿವಾಣ

05:33 PM Mar 17, 2022 | Team Udayavani |

ಬಳ್ಳಾರಿ: ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಮೊದಲು ಅರಿತುಕೊಂಡಾಗ ಮಾತ್ರ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸತೀಶ ಜೆ.ಬಾಳಿ ಹೇಳಿದರು.

Advertisement

ನಗರದ ಬಿಡಿಎಎ ಫುಟ್ಬಾಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ಮೊದಲು ತಮ್ಮ ಹಕ್ಕುಗಳನ್ನು ಅರಿತುಕೊಳ್ಳುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಹಕರ ದಿನಾಚರಣೆಯು ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಲು ವಿಶೇಷ ವೇದಿಕೆಯಾಗಿದೆ ಎಂದರು. ಇತ್ತೀಚಿನ ದಿನಮಾನಗಳಲ್ಲಿ ಡಿಜಿಟಲ್‌ ಪೇಮೆಂಟ್‌ನ್ನು ಎಲ್ಲೆಡೆಯು ನಾವು ಕಾಣುತ್ತಿದ್ದೇವೆ. ಇಡೀ ಜಮಾನವೇ ಒಂದು ರೀತಿಯಲ್ಲಿ ಡಿಜಿಟಲ್‌ ಪೇಮೆಂಟ್‌ ಜಮಾನ ಆಗಿಬಿಟ್ಟಿದೆ. ತ್ವರಿತಗತಿಯಲ್ಲಿ ಹಣ ವರ್ಗಾವಣೆಗೆ ಈ ಡಿಜಿಟಲ್‌ ಪೇಮೆಂಟ್‌ ಎಷ್ಟು ಅನುಕೂಲಕರವೋ ಅಷ್ಟೇ ಇದರಿಂದ ಮೋಸಕ್ಕೆ ಒಳಗಾಗುವುದುಂಟು ಎಂದ ಅವರು, ಡಿಜಿಟಲ್‌ ಪೇಮೆಂಟ್‌ ಬಗ್ಗೆ ಮಾಹಿತಿ ಗೊತ್ತಿಲ್ಲದವರೂ ಯಾವುದೇ ಕಾರಣಕ್ಕೂ ಅದನ್ನು ಉಪಯೋಗಿಸಬಾರದು. ಕಾರಣ ತಮ್ಮ ಖಾತೆಯನ್ನು ಹ್ಯಾಕ್‌ ಮಾಡಿ ಹಣ ಲಪಟಾಯಿಸುವವರಿರುತ್ತಾರೆ. ಹಾಗಾಗಿ ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಮತ್ತು ತಮ್ಮ ಖಾತೆ ವಿವರಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್‌.ತಿಪ್ಪೇಸ್ವಾಮಿ ಮಾತನಾಡಿ, ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ, ಗ್ರಾಹಕರು ತಮಗಾಗುವ ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ಜಾಗತಿಕವಾಗಿ ಜಾಗೃತಿ ಮೂಡಿಸಲು ಈ ವಿಶ್ವ ಗ್ರಾಹಕರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಮತ್ತು ಅವರಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ ಎಂದು ವಿವರಿಸಿದ ಅವರು ಗ್ರಾಹಕರ ಹಕ್ಕುಗಳ ಕುರಿತು ಮತ್ತು ವಿಶ್ವ ಗ್ರಾಹಕರ ದಿನಾಚರಣೆಯ ಪ್ರಾಮುಖ್ಯತೆ ಕುರಿತು ಮಾಧ್ಯಮಗಳು ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

Advertisement

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಯರ್ರೇ ಗೌಡ ಮಾತನಾಡಿ, ಗ್ರಾಹಕರಿಗೆ ತಮ್ಮ ಹಕ್ಕುಗಳಿಗೆ ಧಕ್ಕೆ ಬಂದಾಗ ಸಂಬಂಧಿಸಿದ ಇಲಾಖೆಗೆ ಅಥವಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಕೊಡುವ ಕೆಲಸ ಮಾಡಬೇಕು. ಗ್ರಾಹಕರಿಗೆ ಅನ್ಯಾಯವೆಸಗಿದವರಿಗೆ ಶಿಕ್ಷೆ ಕೊಡಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗಬೇಕು ಅಂದಾಗ ಮಾತ್ರ ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಉದ್ದೇಶ ಈಡೇರಲು ಸಾಧ್ಯ ಎಂದರು. ‘ನ್ಯಾಯೋಚಿತ ಡಿಜಿಟಲ್‌ ಹಣಕಾಸು’ ವಿಷಯಕ್ಕೆ ಸಂಬಂಧಿ ಸಿದಂತೆ ಹಿರಿಯ ವಕೀಲ ಅಂಕಲಯ್ಯ ವಿಶೇಷ ಉಪನ್ಯಾಸ ನೀಡಿದರು.

ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿ. ಶ್ರೀಧರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸೋಮಶೇಖರಪ್ಪ ಕೆ.ಹಂದಿಗೋಳ, ಮಾರ್ಲಾ ಶಶಿಕಲಾ, ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕಿ ಅಮೃತಾ ಪಿ.ಚವ್ಹಾಣ, ಜಿಲ್ಲಾ ಪರಿವೀಕ್ಷಣ ಅಂಕಿತಾಧಿಕಾರಿ ಡಾ| ಎಂ.ಕೆ.ಶಮ್ಸುದ್ದೀನ್‌ ನಸೀರ್‌ ಸೇರಿದಂತೆ ಅನೇಕರು ಇದ್ದರು. ನ್ಯಾಯಬೆಲೆ ಅಂಗಡಿಗಳು ಕಾಮನ್‌ ಸರ್ವಿಸ್‌ ಸೆಂಟರ್‌ಗಳಾಗಿ ಪರಿವರ್ತಿಸಿ ಎಲ್ಲ ಸೌಲಭ್ಯಗಳು ಸದರಿ ಅಂಗಡಿಗಳ ಮುಖಾಂತರ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ರೇಶನ್‌ ಅಂಗಡಿಗಳ ಮಾಲೀಕರಿಗೆ ತರಬೇತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next