Advertisement

ಉಡುಪಿ: ಜೆನರಿಕ್‌ ಔಷಧ ಮಳಿಗೆ, ಇ-ಆಸ್ಪತ್ರೆ ಆರಂಭ

11:24 AM Mar 14, 2017 | Team Udayavani |

ಉಡುಪಿ: ಸಮಾಜದ ಎಲ್ಲ ವರ್ಗದ ಜನರಿಗೆ ಸಹಾಯವಾಗುವಂತೆ ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ದರದಲ್ಲಿ ಜೆನರಿಕ್‌ ಮಳಿಗೆ ಆರಂಭಿಸಲಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರಿಗೂ ಅನುಕೂಲವಾಗುವಂತೆ ಸಮರ್ಪಕ ಆರೋಗ್ಯ ಸೇವೆ ಕಡಿಮೆ ದರಧಿದಲ್ಲಿ ಸಿಗುವಂತಾಗಲು ಈ ಔಷಧ ಮಳಿಗೆ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಸೋಮವಾರ ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಹಿಂದುಸ್ತಾನ್‌ ಲೀವರ್‌ ಲಿಮಿಟೆಡ್‌ (ಎಚ್‌ಎಲ್‌ಎಲ್‌) ಕಂಪೆನಿ ಸಹಯೋಗದೊಂದಿಗೆ ಜನಸಂಜೀವಿನಿ (ಜೆನರಿಕ್‌) ಔಷಧ ಮಳಿಗೆಗೆ ಚಾಲನೆ ನೀಡಿ ಮಾತನಾಡಿದರು.

ವದಂತಿಗಳಿಗೆ ಕಿವಿಗೊಡಬೇಡಿ
ಕಡಿಮೆ ಬೆಲೆಯಲ್ಲಿ ಔಷಧ ಸಿಗುತ್ತದೆ ಎಂದು ಅದರ ಗುಣಮಟ್ಟದ ಬಗ್ಗೆ ಜನರು ಯಾವುದೇ ಅನುಮಾನ ಪಡುವುದು ಬೇಡ. ಯಾವುದೇ ರೀತಿಯ ವದಂತಿಗೆ ಕಿವಿಗೊಡಬೇಡಿ. ಉತ್ತಮ ಗುಣಮಟ್ಟದ ಔಷಧಗಳನ್ನೇ ಮಾರಾಟ ಮಾಡಲಾಗುವುದು. ಶೇ. 90ರಷ್ಟು ಕಡಿಮೆ ಬೆಲೆಯಲ್ಲಿ ಬಿಪಿ, ಮಧುಮೇಹ, ಡಯಾಬಿಟಿಸ್‌ ಹೀಗೆ ಎಲ್ಲ ವಿಧದ ಔಷಧಗಳು ಸಿಗಲಿವೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧ ನೀಡುವ ಯೋಜನೆ ಇದಾಗಿದ್ದು, ಯಾರೂ ಕೂಡ ಈ ಬಗ್ಗೆ ಅಪಪ್ರಚಾರ ಮಾಡುವುದು ಬೇಡ. ಕಡಿಮೆ ಬೆಲೆಯಲ್ಲಿ ಆರೋಗ್ಯ ಸೇವೆ ಕೊಡುವುದು ಸರಕಾರದ ಉದ್ದೇಶ. ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಚಿವರು ಮನವಿ ಮಾಡಿಕೊಂಡರು. 

13 ಗಂಟೆಗಳ ಸೇವೆ
ಜನಸಂಜೀವಿನಿ-ಜೆನರಿಕ್‌ ಔಷಧ ಮಳಿಗೆ ಬೆಳಗ್ಗೆ 8ರಿಂದ ರಾತ್ರಿ 9ರ ವರೆಗೆ ಒಟ್ಟು 13 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಜನರ ಬೇಡಿಕೆ, ಸಹಕಾರ ನೋಡಿಕೊಂಡು ಮುಂದಿನ ದಿನಗಳಲ್ಲಿ 24 ಗಂಟೆಗಳ ಕಾಲ ಈ ಸೇವೆ ಒದಗಿಸಲಾಗುವುದು. ಕೆಲ ಔಷಧ ಲಭ್ಯವಿಲ್ಲದಿದ್ದರೂ ಪ್ರತಿದಿನ ಅದನ್ನು ಬೇಡಿಕೆಗೆ ಅನುಗುಣವಾಗಿ ತರಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಇದರ ಸಹಭಾಗಿತ್ವ ವಹಿಸಿಕೊಂಡಿರುವ ಎಚ್‌ಎಲ್‌ಎಲ್‌ ಕಂಪೆನಿಯ ಮಣಿ ಮಿತ್ತಲ್‌ ಹೇಳಿದರು. 

ಡಯಾಬಿಟೀಸ್‌ಗೆ ಗ್ರಾಮಾರ್‌-ಎಂ ಮಾತ್ರೆಗೆ 95 ರೂ. ಬೆಲೆಯಿದ್ದು, ಕೇವಲ 18 ರೂ.ಗೆ ಸಿಗಲಿದೆ. ಬಿಪಿ ಮಾತ್ರೆ ಟೆಲ್ಮಾ-40 ಬೆಲೆ 64 ರೂ. ಆಗಿದ್ದು, 13 ರೂ.ಗೆ ಸಿಗಲಿದೆ. ಕ್ಯಾಲ್ಸಿಯಂಗೆ ಜೆಮ್ಸ್‌ಸನೋ 10 ಮಾತ್ರೆಗೆ 125 ರೂ. ಇದ್ದು, ಅದು ಕೇವಲ 9 ರೂ.ಗೆ ಸಿಗಲಿದೆ. ಅದರ ಜತೆಗೆ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಸರ್ಜಿಕಲ್‌ ಪರಿಕರಗಳು ಸಿಗಲಿವೆ. 

Advertisement

ಬ್ರಹ್ಮಾವರದಲ್ಲಿ  ಮೆಡಿಕಲ್‌ ಕಾಲೇಜು
ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಲಿದೆ. ಅದಕ್ಕಾಗಿ ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಇರುವ 150 ಎಕರೆ ಪ್ರದೇಶದಲ್ಲಿ 25 ಎಕರೆ ಮೆಡಿಕಲ್‌ ಕಾಲೇಜಿಗೆ ಜಾಗ ಕಾದಿರಿಸಲಾಗಿದೆ. ಈ ಬಜೆಟ್‌ನಲ್ಲಿ ಹಿಂದೆ ಮಂಜೂರಾದ ಮೆಡಿಕಲ್‌ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಸಿಎಂ ಹೇಳಿರುವುದರಿಂದ ಮುಂದಿನ ಬಜೆಟ್‌ನಲ್ಲಿ ಉಡುಪಿಯಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಇನ್ನು ಉಪ್ಪೂರಿನಲ್ಲಿ 40 ಕೋ.ರೂ. ವೆಚ್ಚದಲ್ಲಿ ಜಿಟಿಡಿಸಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು. 
ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ಸ್ವಾಗತಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರೋಹಿಣಿ ವಂದಿಸಿದರು.

ರಾಜ್ಯದ ಮೊದಲ ಸರಕಾರಿ ಇ-ಆಸ್ಪತ್ರೆಗೆ ಚಾಲನೆ
ಅಜ್ಜರಕಾಡಿನ ಸರಕಾರಿ ಜಿಲ್ಲಾಸ್ಪತ್ರೆ ರಾಜ್ಯದ ಮೊದಲ ಸರಕಾರಿ ಇ-ಆಸ್ಪತ್ರೆಯಾಗಿ ಸೋಮವಾರ ಮಾರ್ಪಾಡಾಗಿದ್ದು, ಸಚಿವ ಪ್ರಮೋದ್‌ ಮಧ್ವರಾಜ್‌ ಚಾಲನೆ ನೀಡಿದರು. ಆಧಾರ್‌ ಕಾರ್ಡ್‌, ಫೋನ್‌ ನಂಬರ್‌, ಬಿಪಿಎಲ್‌ ಪಡಿತರ ಸಂಖ್ಯೆಯನ್ನು ಈ ಜಿಲ್ಲಾಸ್ಪತ್ರೆಯಲ್ಲಿ ನೋಂದಣಿ ಮಾಡಿದರೆ 6 ಡಿಜಿಟ್‌ ನಂಬರ್‌ ಕೊಡುತ್ತಾರೆ. ಇದರಿಂದ ಮುಂದೆ ಈ ಆಸ್ಪತ್ರೆ ಅಥವಾ ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಈ ನಂಬರ್‌ ನೀಡಿದರೆ ಸಾಕು ಅವರ ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಸಾರ್ವಜನಿಕರಿಗೆ, ರೋಗಿಗಳಿಗೆ ಯಾವುದೇ ರೀತಿಯ ಗೊಂದಲ, ತೊಂದರೆ ಉಂಟಾಗದಂತೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಆಸ್ಪತ್ರೆಗಳಲ್ಲಿ ಲಭ್ಯವಿರುವ ಒಟ್ಟು 16 
ವಿಭಾಗಗಳಲ್ಲಿ ಮೊದಲಿಗೆ 3 ವಿಭಾಗಗಳಲ್ಲಿ ಆನ್‌ಲೈನ್‌ ಸೇವೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಳರೋಗಿ ವಿಭಾಗ, ಹೊರರೋಗಿ ವಿಭಾಗ, ಬಿಲ್ಲಿಂಗ್‌ ವಿಭಾಗ ಸಂಪೂರ್ಣ ಪೇಪರ್‌ಲೆಸ್‌ ಆಗಲಿದೆ.

ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೆ: ಪ್ರಮೋದ್‌
ಇದುವರೆಗೆ ಉಡುಪಿ ಅಜ್ಜರಕಾಡಿನ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿದ್ದು, ಈಗ ಅದು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆ ಹೊಂದಿದೆ. ಇದರಿಂದ ವೈದ್ಯರು, ನರ್ಸ್‌ಗಳ ಸಂಖ್ಯೆ ಹೆಚ್ಚಳವಾಗಲಿದೆ. ಇದುವರೆಗೆ 124 ಇದ್ದ ಬೆಡ್‌ಗಳ ಸಂಖ್ಯೆ 250ಕ್ಕೆ ಏರಿಸಲಾಗಿದ್ದು, ಸದ್ಯ 190 ಬೆಡ್‌ಗಳಿವೆ. 27 ವೈದ್ಯರ ಅಗತ್ಯವಿದ್ದು, ಈಗಾಗಲೇ 26 ವೈದ್ಯರ ನೇಮಕಾತಿ ಮಾಡಲಾಗಿದೆ. ಅದೇ ರೀತಿ 16 ನರ್ಸ್‌ಗಳಿದ್ದು, 50ಕ್ಕೆ ಏರಿಸುವ ಅವಕಾಶವಿದೆ. ಅಲ್ಲದೆ ಉತ್ತಮ ಸೌಲಭ್ಯ, ಹೆಚ್ಚುವರಿ ಅನುದಾನ ಕೂಡ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next