Advertisement

ಭಕ್ತರ ಮನೆಗೆ ಬರಲು ಸಿದ್ಧನಾಗುತ್ತಿದ್ದಾನೆ ಗೌರಿಪುತ್ರ..!

03:15 PM Aug 05, 2017 | |

ದಾವಣಗೆರೆ: ಇನ್ನೇನು 3 ವಾರ ಕಳೆದರೆ ಎಲ್ಲರ ಮನೇಲಿ ಗಣೇಶ ಪೀಠಸ್ಥನಾಗುತ್ತಾನೆ. ಗೌರಿಪುತ್ರ, ಈಶ್ವರ ತನಯ, ಏಕದಂತ, ಗಜಮುಖ, ವಿಘ್ನ ನಿವಾರಕ ವಿನಾಯಕ ಮನೆ, ಬೀದಿಗಳಲ್ಲಿ ಆಸೀನನಾಗಲಿದ್ದಾನೆ.

Advertisement

ಪಾರ್ವತಿ ಸುತನ ಮರು ಹುಟ್ಟಿನ ನಂತರ ಭೂಮಿಗೆ ಬಂದು ಕೈಲಾಸಕ್ಕೆ ವಾಪಸ್ಸಾಗುತ್ತಾನೆ ಎಂಬ ನಂಬಿಕೆ ಇಟ್ಟುಕೊಂಡಿರುವ ಹಿಂದುಗಳು ಭಾದ್ರಪದ ಮಾಸದ ಚೌತಿಯ ದಿನ ತಮ್ಮ ಮನೆಯಲ್ಲಿ ಮಣ್ಣಿನ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿ, ಭಕ್ಷ ನೈವೇದ್ಯ ಅರ್ಪಿಸುತ್ತಾರೆ. ಈ
ಚತುರ್ಥಿ ಇತ್ತೀಚಿಗೆ ಹಿಂದುಗಳ ಪಾಲಿನ ಅತಿ ದೊಡ್ಡ ಹಬ್ಬ. ಈ ಬಾರಿ ಆ. 25ರಂದು ಗಣೇಶ ಚತುರ್ಥಿ. ಸತತ ಬರದ ಬವಣೆ ಮಧ್ಯೆಯೂ ಗಣೇಶೋತ್ಸವಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿವೆ. ಬೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ನಗರದ ಹಲವು ಕಡೆ ಈಗಾಗಲೇ ವೇದಿಕೆ ಸಿದ್ಧತಾ ಕಾರ್ಯಕ್ರಮ ಆರಂಭಗೊಂಡಿವೆ.

ಇನ್ನು ಗಣೇಶ ಮೂರ್ತಿ ತಯಾರಕರು ಒಂದು ತಿಂಗಳಿನಿಂದ ಮಣ್ಣಿನೊಂದಿಗೆ ಕಸರತ್ತು ಆರಂಭಿಸಿದ್ದಾರೆ. ಅನೇಕ ಕಡೆಗಳಲ್ಲಿ ಈಗಾಗಲೇ ಮೂರ್ತಿಗಳು ಸಿದ್ಧಗೊಂಡಿದ್ದು, ಬಣ್ಣ ಲೇಪನದ ಕೆಲಸ ಮಾತ್ರ ಬಾಕಿ ಉಳಿದಿದೆ. ಇನ್ನು ಉಳಿದ ಸಿದ್ಧತೆಗಳು ಸಹ ಸಮಾನಂತರವಾಗಿ ನಡೆದಿವೆ. ಗಣೇಶ ಚತುರ್ಥಿಗೆ ಬೇಕಾದ ಎಲ್ಲಾ ಸಾಮಗ್ರಿಗಳು ಮಾರುಕಟ್ಟೆಯಲ್ಲಿನ ಅಂಗಡಿಗಳಲ್ಲಿ ರಾರಾಜಿಸುತ್ತಿವೆ. ಪ್ಲಾಸ್ಟಿಕ್‌ ಹೂ, ಸಣ್ಣ ಸಣ್ಣ ಎಲೆಕ್ಟಿಕ್‌ ದೀಪ, ಅಲಕಾಂರಿಕ ದೀಪ, ಬಣ್ಣದ ಕಾಗದ, ಕೃತಕ ಮಾವು ಮುಂತಾದ ಸಾಮಗ್ರಿಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ವಿನೋಬ ನಗರ 2ನೇ ಮೇನ್‌, ತೊಗಟವೀರ ಕಲ್ಯಾಣ ಮಂಟಪ, ಚೇತನ ಹೋಟೆಲ್‌ ರಸ್ತೆ ಸೇರಿದಂತೆ ಸಾರ್ವಜನಿಕರ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಜಾಗಗಳ ಸಿದ್ಧತಾ ಕಾರ್ಯ ಆರಂಭಗೊಂಡಿವೆ. ತರೇಹವಾರಿ ರೂಪದ ದೈತ್ಯ ಮೂರ್ತಿಗಳ ನಿರ್ಮಾಣ ಸಹ ನಡೆದಿದೆ.

ಪಿಒಪಿ ಮೂರ್ತಿಗಳ ಹಾವಳಿ
ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌) ಗಣೇಶ ಮೂರ್ತಿ ಮಾರಾಟ ಮಾಡದಂತೆ ಹಾಗೂ ಪರಿಸರ ಸ್ನೇಹಿ ಗಣಪ ಮೂರ್ತಿ ಪ್ರತಿಷ್ಠಾಪಿಸುವಂತೆ ಪ್ರತಿ ವರ್ಷವೂ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಪಾಲಿಕೆಯವರು ಪ್ರಕಟಣೆ ನೀಡಿ ಎಚ್ಚರಿಸುತ್ತಾರೆ. ಆದರೂ ಪಿಒಪಿ ಗಣಪನ ಹಾವಳಿ ನಿಲ್ಲಿಸಲಾಗಿಲ್ಲ. ಪಿಒಪಿ ಮೂರ್ತಿಗಳಿಂದ ಪರಿಸರ ಹಾನಿ ಅಧಿಕವಾಗಲಿದೆ ಎಂಬುದು ಗೊತ್ತಿದ್ದರೂ ಅವುಗಳ ಒಲವು ಮಾತ್ರ ಇನ್ನೂ ಕಡಿಮೆ ಆಗಿಲ್ಲ.

ಬೇಕಿದೆ 16 ಸಾವಿರ ಮೂರ್ತಿಗಳು
ದಾವಣಗೆರೆ ನಗರದಲ್ಲಿ ಗಣೇಶ ಚತುರ್ಥಿಗೆ ಸುಮಾರು 16 ಸಾವಿರ ಗಣೇಶ ಮೂರ್ತಿಗಳು ಬೇಕು ಎಂಬ ಅಂದಾಜಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಪ್ರಮಾಣವೇ 15 ಸಾವಿರ ಇದ್ದು, ಸಾರ್ವಜನಿಕ ಗಣೇಶ ಮೂರ್ತಿಗಳು ಸೇರಿ ಇದು 16 ಸಾವಿರ ಆಗಬಹುದು ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ದೇವರಮನಿ ಗಿರೀಶ್‌ ಅಭಿಪ್ರಾಯ ಪಡುತ್ತಾರೆ. ಇನ್ನು ಅಕ್ಕಪಕ್ಕದ ಹಳ್ಳಿಯ ಜನರು ನಗಕ್ಕೆ ಬಂದು ಖರೀದಿಸುವ ಗಣೇಶ ಮೂರ್ತಿಗಳ ಲೆಕ್ಕೆ ನೂರರಲ್ಲಿ ಮಾತ್ರ ಇದೆ ಅಂತಾರೆ. ನಮ್ಮ ನಗರದಲ್ಲಿಯೇ ಇಷ್ಟು ಮೂರ್ತಿ ತಯಾರಿಸುವ ಶಿಲ್ಪಿಗಳಿದ್ದಾರೆ. ಆದರೂ ಕೊನೆ ಕ್ಷಣದಲ್ಲಿ ನಮ್ಮ ನಗರಕ್ಕೆ ಪಿಒಪಿ ಗಣೇಶ ಮೂರ್ತಿಗಳು ಬರುವುದು ಬೇಸರದ ಸಂಗತಿ ಎಂದು ಅವರು ಹೇಳುತ್ತಾರೆ.

Advertisement

ಮೂರ್ತಿ ತಯಾರಿ ಹೀಗಿರುತ್ತೆ….
ಗಣೇಶ ಚತುರ್ಥಿಗೆ ಭಕ್ತರು ತರುವ ಗಣೇಶ ಮೂರ್ತಿ ತಯಾರಿಕೆ ಹಿಂದೆ ಅಪಾರ ಪರಿಶ್ರಮ ಇದೆ. ಮಣ್ಣಿನ ಗಣೇಶ ಮೂರ್ತಿ ತಯಾರಕರು ಜನವರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಆಗ ಮಣ್ಣಿನ ಸಂಗ್ರಹ ಮಾಡಲಾಗುತ್ತದೆ. ದಾವಣಗೆರೆಯಲ್ಲಿನ ಶಿಲ್ಪಿಗಳು ರಾಣಿಬೆನ್ನೂರು, ಹಾವೇರಿ, ಗದಗ ಮುಂತಾದ ಭಾಗಗಳಲ್ಲಿ ಮಣ್ಣು ಸಂಗ್ರಹಿಸುತ್ತಾರೆ. ಗಣೇಶ ಮೂರ್ತಿ ತಯಾರಾಗುವುದು ಜೇಡಿ ಮಣ್ಣಿನಿಂದ. ಕೆರೆಯಲ್ಲಿನ ಜೇಡಿಮಣ್ಣು ಸಂಗ್ರಹಿಸಿ, ಅದನ್ನು ಕಾಲ ಕಾಲಕ್ಕೆ ಹದ ಮಾಡುತ್ತಾ ಇಡಲಾಗುವುದು. ಇನ್ನೇನು ಗಣೇಶ ಚತುರ್ಥಿಗೆ ಒಂದು ತಿಂಗಳು ಇದೆ ಎಂದಾಗ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಸಂಗ್ರಹಿಸಿದ ಜೇಡಿ ಮಣ್ಣನ್ನು ಒಂದು ದಿನದ ಕಾಲ ನೆನೆಸಿ ಇಡುತ್ತಾರೆ. ಮಾರನೆಯ ದಿನ ಹರಳೆ ಸೇರಿಸಿ ಹದಮಿಶ್ರಿತ ಮಾಡಿ ಕುಟ್ಟಲಾಗುತ್ತದೆ. ಹೀಗೆ ಕುಟ್ಟಿ ಹದ ಮಾಡಿದ ಮಣ್ಣಿನಿಂದ ಮೂರ್ತಿ ತಯಾರಿಸಲಾಗುತ್ತದೆ.

ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next