Advertisement

ಮುಂಬಯಿಯಲ್ಲಿ ಗರುಡ ಗರ್ವಭಂಗ 

06:00 AM Aug 10, 2018 | |

ಕರ್ನಾಟಕ ಜಾನಪದ ಪರಿಷತ್‌ ಮಹಾರಾಷ್ಟ್ರ ಘಟಕ ಮತ್ತು ಮುಲುಂಡ್‌ ಪ್ರಂಡ್ಸ್‌ (ರಿ.) ಇವರ ಜಂಟಿ ಆಯೋಜನೆಯಲ್ಲಿ ಗರುಡ ಗರ್ವ ಭಂಗ ಯಕ್ಷಗಾನ ತಾಳಮದ್ದಳೆ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇವರ ತಾಯ್ನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮುಲುಂಡ್‌ನ‌ಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು.

Advertisement

ಶ್ರೀಕೃಷ್ಣ ಅರ್ಥಧಾರಿಯಾದ ಹರೀಶ್‌ ಭಟ್‌ ಬೊಳಂತಿಮೊಗರು ಅರ್ಥವನ್ನು ಉಪಕಥೆ ನೀತಿಕಥೆ ಉದಾಹರಣೆಗಳ ಮೂಲಕ ವ್ಯಾಖ್ಯಾನಿಸಿದರು. ನಾರದರ ಪಾತ್ರವನ್ನು ನಿರ್ವಹಿಸಿದ ಯುವ ಅರ್ಥದಾರಿ ಅವಿನಾಶ್‌ ಶೆಟ್ಟಿ ಉಬರಡ್ಕ ಉತ್ತಮ ಮಾತುಗಾರಿಕೆಯಿಂದ ರಂಜಿಸಿದರು. ನಡು ನಡುವೆ ವರ್ತಮಾನ ಕಾಲಘಟ್ಟದ ರಾಜಕೀಯ ನಡಾವಳಿಗಳನ್ನು ಪ್ರಸಂಗಕ್ಕೆ ಹೊಂದುವಂತೆ ಉದಾಹರಣೆಗಳ ಮೂಲಕ ಅಣುಕು ನುಡಿಗಾಳಾಗಿ ಆಡಿನಗು ಮೂಡಿಸಿದರು. ಹನುಮಂತನ ಪಾತ್ರ ನಿರ್ವಹಣೆ ಮಾಡಿದ ದಿನೇಶ್‌ ಶೆಟ್ಟಿ ಕಾವಳಕಟ್ಟೆ ಅವರು ಭಕ್ತಿ ರಸ, ಕರುಣಾ ರಸಗಳಲ್ಲಿ ಪಾತ್ರದ ಅರ್ಥವನ್ನು ಅರ್ಥಗರ್ಭಿತ ಪದಪುಂಜಗಳ ಜೋಡಿಸಿ, ಸಂಭಾಷಣೆಗಳ ಮಾಲೆ ಕಟ್ಟಿ ವಾಗ್ಝರಿಯಿಂದ ರಂಜಿಸಿದರು. ಗರ್ವಭಂಗಕ್ಕೆ ಒಳ ಪಡುವ ಪ್ರಸಂಗದ ಕೇಂದ್ರ ಪಾತ್ರಗಳಾದ ಬಲರಾಮನ ಪಾತ್ರವನ್ನು ಶ್ಯಾಮ್‌ ಭಟ್‌ ಪಕಳಕುಂಜ, ಗರುಡನ ಪಾತ್ರವನ್ನು ಜಯ ಪ್ರಕಾಶ್‌ ಶೆಟ್ಟಿ ಪೆರ್ಮುದೆ ಶ್ರೋತೃಗಳಿಗೆ ‘ಅಹಂಭಾವ- ಗರ್ವಭಾವ’ ಸಲ್ಲದು ಎನ್ನುವ ಅಮೃತಾರ್ಥದ ಪುರಾಣದ “ಗರುಡ ಗರ್ವಭಂಗ’ ಕಥಾನಕವನ್ನು ಮುಂಬಯಿ ಕನ್ನಡಿಗರಿಗೆ ಉಣಬಡಿಸಿದರು. 

 ತೆಂಕುತಿಟ್ಟಿನಲ್ಲಿ ಪ್ರಸಿದ್ಧಿಯ ಪಥದಡೆ ಸಾಗುತ್ತಿರುವ ಗಾನಕೋಗಿಲೆ ಕು| ಕಾವ್ಯಾಶ್ರೀ ಅಜೇರು ಅವರ ಭಾಗವತಿಕೆಯು ನವರಸ ಭಾವ ಅಭಿವ್ಯಕ್ತಿಯಿಂದ ತಲೆತೂಗುವಂತೆ ಮೂಡಿ ಬಂದಿತು. ಚಂಡೆಯಲ್ಲಿ ಶ್ರೀಪತಿ ನಾಯಕ್‌, ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು ಸಹಕರಿಸಿದರು.

ತಾರಾನಾಥ್‌ ಮೇಸ್ತ ಶಿರೂರು 

Advertisement

Udayavani is now on Telegram. Click here to join our channel and stay updated with the latest news.

Next